ದುಬೈನಲ್ಲಿ ಭಾರತೀಯರ ಉದ್ದೇಶಿಸಿ ಮೋದಿ ಪ್ರಖರ ಭಾಷಣ
ಅಬುಧಾಬಿ, ಆಗಸ್ಟ್ 17 : "ಭಾಯಿಯೋ ಔರ್ ಬೆಹೆನೋ, ಭಾರತ ಕಳೆದ 40 ವರ್ಷಗಳಿಂದ ಭಯೋತ್ಪಾದನೆಗೆ ಬಲಿಯಾಗುತ್ತಿದೆ. ಭಯೋತ್ಪಾದನೆಯನ್ನು ಬೆಂಬಲಿಸುವವರು ಒಂದೆಡೆಯಾದರೆ, ಮಾನವೀಯತೆಯನ್ನು ಬೆಂಬಲಿಸುವವರು ಒಂದಾಗಿದ್ದೇವೆ. ಭಯೋತ್ಪಾದನೆ ನಿರ್ನಾಮ ಮಾಡುವ ಘಳಿಗೆ ಬಂದುಬಿಟ್ಟಿದೆ" ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ದುಬೈನಲ್ಲಿ ಸಾರಿದ್ದಾರೆ.
ಯುನೈಟೆಡ್ ಅರಬ್ ಎಮಿರೇಟ್ಸ್ ಭೇಟಿಯ ಸಂದರ್ಭದಲ್ಲಿ ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ 50 ಸಾವಿರ ಭಾರತೀಯರನ್ನು ಉದ್ದೇಶಿಸಿ ಪ್ರಖರವಾದ ಭಾಷಣ ಮಾಡಿದ ನರೇಂದ್ರ ಮೋದಿ, ಕಿವಿಗಡಚಿಕ್ಕುವ ಚಪ್ಪಾಳೆಗಳ ನಡುವೆ ಭಯೋತ್ಪಾದನೆಯ ವಿರುದ್ಧ ತಮ್ಮ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.
ಉಗ್ರರ ವಿರುದ್ಧ ಭಾರತದ ಹೋರಾಟ ಅಚಲ. ನಮ್ಮ ಹೋರಾಟಕ್ಕೆ ಯುಎಇ ಬೆಂಬಲಿಸಿದೆ. ಅಲ್ಲದೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಪರ್ಮನಂಟ್ ಸ್ಥಾನ ಸಿಗಬೇಕೆಂಬ ಮಾತಿಗೂ ಯುಎಇ ಬೆಂಬಲಿಸಿದೆ. ಇದು ಭಯೋತ್ಪಾದನೆಯನ್ನು ಬೆಂಬಲಿಸುತ್ತಿರುವ ದೇಶಕ್ಕೆ ಕಟ್ಟೆಚ್ಚರಿಕೆ ಎಂದು ಅವರು ಸೋಮವಾರ ಮಾಡಿದ ಭಾಷಣದಲ್ಲಿ ಘೋಷಿಸಿದರು.
ಕ್ರಿಕೆಟ್ ಮೈದಾನದಲ್ಲಿ ಅವರು ಮಾಡಿದ ಭಾಷಣದ ಮುಖ್ಯಾಂಶ
* ಯಾವುದೇ ದೇಶದ ರಾಜಕಾರಣಿ ಅಥವಾ ಪ್ರಮುಖ ವ್ಯಕ್ತಿ ಮೋದಿಯೊಂದಿಗೆ ಕೈಜೋಡಿಸುವಾಗ ಅವರು ಅವರ ಕೈಕುಲುಕುವಾಗ ಅವರು ನರೇಂದ್ರ ಮೋದಿಯ ಮುಖ ನೋಡುವುದಿಲ್ಲ, ಬದಲಾಗಿ 125 ಕೋಟಿ ಭಾರತೀಯರ ಮುಖವನ್ನು ಕಾಣುತ್ತಾರೆ.
* ಇದು ನೂರು ಕಾಲು ಕೋಟಿ ಭಾರತೀಯರಿಗೆ ಇತರ ರಾಷ್ಟ್ರಗಳು ನೀಡುತ್ತಿರುವ ಸನ್ಮಾನ. ಭಾರತ ಇಂದು ಅತ್ಯಂತ ವೇಗವಾಗಿ ಆರ್ಥಿಕವಾಗಿ ಬೆಳೆಯುತ್ತಿರುವ ದೇಶವಾಗಿದೆ.
* ಯುಎಇಯ ಕ್ರೌನ್ ಪ್ರಿನ್ಸ್ ಭಾರತದಲ್ಲಿ 4.5 ಲಕ್ಷ ಕೋಟಿ ರು.ಯಷ್ಟು ಬಂಡವಾಳವನ್ನು ಹೂಡಿಕೆ ಮಾಡಲಿದ್ದಾರೆ. ಭಾರತದ ಮೇಲೆ ನಂಬಿಕೆ ಇಲ್ಲದೆ ಇದನ್ನು ಅವರು ಮಾಡುತ್ತಾರೆಯೆ?
* 34 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಅಬುಧಾಬಿಗೆ ಬಂದಿದ್ದಾರೆ. ನನ್ನ ಪೂರ್ವಜರು ಒಳ್ಳೆಯ ಕೆಲಸ ಮಾಡಲು ನನಗೆ ಬಿಟ್ಟು ಹೋಗಿದ್ದಾರೆ.
* ಯುಎಇಯ ಎಲ್ಲ ಭಾರತೀಯರಿಗೆ ನಾನು ತಲೆ ಬಾಗಿಸುತ್ತೇನೆ. ಇಷ್ಟು ವರ್ಷಗಳ ನಂತರ ಬಂದಿದ್ದಕ್ಕೆ ಯಾರೂ ಸಿಟ್ಟಿಗೆದ್ದಿಲ್ಲ, ಎಲ್ಲರೂ ನನಗೆ ಪ್ರೀತಿ ನೀಡಿದ್ದಾರೆ. ಇಡೀ ವಿಶ್ವವೇ ಇದನ್ನು ನೋಡುತ್ತಿದೆ.
* ಕ್ರೌನ್ ಪ್ರಿನ್ಸ್ ತನ್ನ ಎಲ್ಲ ಐದೂ ಸಹೋದರರೊಂದಿಗೆ ನನ್ನನ್ನು ಬರಮಾಡಿಕೊಂಡಿದ್ದಾರೆ. ಇದಕ್ಕಿಂತ ಹೆಚ್ಚಿನದೇನನ್ನು ನಾನು ನಿರೀಕ್ಷಿಸಲಿ?
* ಅಟಲ್ ಬಿಹಾರಿ ಸುರಕ್ಷಾ ಯೋಜನೆಯನ್ನು ನಿಮ್ಮ ಸಹೋದರಿಗೆ ಉಡುಗೊರೆಯಾಗಿ ಈ ರಕ್ಷಬಂಧನದ ಸಂದರ್ಭದಲ್ಲಿ ನೀಡಿರಿ. ವರ್ಷಕ್ಕೆ ನೀಡುವ 600 ರು.ನಿಂದ ಆಕೆಗೆ 2 ಲಕ್ಷ ರು. ರಕ್ಷಣೆ ಸಿಗಲಿದೆ.