ನಡು ರಸ್ತೆಯಲ್ಲೇ ರಕ್ತಪಾತ, ಮ್ಯಾನ್ಮಾರ್ ಹಿಂಸಾಚಾರಕ್ಕೆ ಕೊನೆಯಿಲ್ಲ?
ಅಲ್ಲಿ ಮನುಷ್ಯರಿಗೂ ಕೋಳಿಗಳಿಗೂ ವ್ಯತ್ಯಾಸವೇ ಇಲ್ಲ. ಸ್ವಲ್ಪ ಹೆಚ್ಚು ಕಡಿಮೆ ಮಾತನಾಡಿದರೂ ಅಲ್ಲಿ ಜೀವ ಉಳಿಸಿಕೊಳ್ಳಲು ಆಗೋದೆ ಇಲ್ಲ. ಕಂಡ ಕಂಡವರನ್ನು ಕೋಳಿಗಳಂತೆ ಕೊಂದು ಹಾಕುತ್ತಿದ್ದಾರೆ ಅಲ್ಲಿನ ಕ್ರೂರ ಸರ್ವಾಧಿಕಾರಿಗಳು. ಅಂದಹಾಗೆ ನಾವು ವಿವರಿಸುತ್ತಿರುವುದು ಮ್ಯಾನ್ಮಾರ್ ಪರಿಸ್ಥಿತಿಯನ್ನು. ಫೆಬ್ರವರಿ 1ರಂದು ದಂಗೆ ಎದ್ದಿದ್ದ ಮ್ಯಾನ್ಮಾರ್ ಮಿಲಿಟರಿ, ದೇಶವನ್ನೇ ಅಲುಗಾಡಿಸಿದೆ.
ಸೇನಾಡಳಿತ ವಿರೋಧಿಸಿ ಎಲ್ಲೆಂದರಲ್ಲಿ ಕಿಚ್ಚು ಹೊತ್ತಿದೆ. ಆದರೆ ಪ್ರತಿಭಟನೆ ಕಿಚ್ಚು ಆರಿಸಲು ಮ್ಯಾನ್ಮಾರ್ ಮಿಲಿಟರಿ ಹಿಂಸೆ ಹಾದಿ ತುಳಿದಿದೆ. ಅಲ್ಲಿನ ಸೇನೆ ಈವರೆಗೂ 350 ಜನರನ್ನು ಹುಡುಕಿ ಹುಡುಕಿ ಕೊಂದು ಹಾಕಿದೆ. ನಿನ್ನೆ ಒಂದೇ ದಿನ ಸುಮಾರು 100 ಜನರು ಸೇನೆಯ ಗುಂಡಿಗೆ ಬಲಿಯಾಗಿದ್ದಾರೆ. ಮ್ಯಾನ್ಮಾರ್ನಲ್ಲಿ ಕ್ಷಣಕ್ಷಣಕ್ಕೂ ಹಿಂಸೆ ಹೆಚ್ಚುತ್ತಿರುವುದು ತೀವ್ರ ಆತಂಕ ಸೃಷ್ಟಿಸಿದೆ.
ಮ್ಯಾನ್ಮಾರ್ ನಿರಾಶ್ರಿತರ ಬಗ್ಗೆ ಪ್ರಧಾನಿಗೆ ಮಿಜೋರಾಂ ಸಿಎಂ ಮನವಿ
ಜಗತ್ತಿನ ಬಲಿಷ್ಠ ರಾಷ್ಟ್ರಗಳು ಕೂಡ ಇದನ್ನು ಧೈರ್ಯವಾಗಿ ಪ್ರಶ್ನೆ ಮಾಡಿ, ಮಧ್ಯಪ್ರವೇಶ ಮಾಡುತ್ತಿಲ್ಲ. ಹೀಗಾಗಿ ಮ್ಯಾನ್ಮಾರ್ನಲ್ಲಿ ಸರ್ವಾಧಿಕಾರಿ ಆಡಳಿತ ಮುಂದುವರಿದಿದೆ. ಜೀವ ಉಳಿಸಿಕೊಳ್ಳಲು ಜನ ಮನೆಬಿಟ್ಟು ಹೊರಗೆ ಹೋಗದಂತಹ ಸ್ಥಿತಿ ನಿರ್ಮಾಣವಾಗಿದೆ.
350ಕ್ಕೂ ಹೆಚ್ಚು ಹೋರಾಟಗಾರರು ಬಲಿ..?
ಈಗಾಗಲೇ ಪ್ರತಿಭಟನೆ ನಡೆಸುತ್ತಿದ್ದ ಸುಮಾರು 350ಕ್ಕೂ ಹೆಚ್ಚು ಜನರನ್ನು ಮ್ಯಾನ್ಮಾರ್ ಸೇನೆ ಬಲಿಪಡೆದಿರುವ ಆರೋಪವಿದೆ. ಹೀಗಾಗಿ ನಾಗರಿಕರನ್ನ ಕೊಂದು ಹಾಕಿರುವ ಮ್ಯಾನ್ಮಾರ್ ಸೇನೆ ವಿರುದ್ಧ ಜಗತ್ತಿನಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪ್ರಜಾಪ್ರಭುತ್ವವಾದಿ ರಾಷ್ಟ್ರಗಳು ಮ್ಯಾನ್ಮಾರ್ ಮಿಲಿಟರಿ ಕ್ರಮವನ್ನು ಟೀಕಿಸಿವೆ. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಅಲ್ಲಿನ ಸೇನಾಧಿಕಾರಿಗಳು, ಪ್ರತಿಭಟನೆ ನಡೆಸುತ್ತಿರುವ ಜನರ ನಿಯಂತ್ರಣ ಹಾಗೂ ಹೋರಾಟಗಾರನ್ನು ಚದುರಿಸಲು ಬಲಪ್ರಯೋಗ ಮಾಡುತ್ತಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಹಲವರು ಸಾವು, ಬದುಕಿನ ಮಧ್ಯೆ ಹೋರಾಡುತ್ತಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕ ಆವರಿಸಿದೆ.
ಪೊಲೀಸರನ್ನು ವಾಪಸ್ ಕಳಿಸಿ..!
ಕೆಲ ದಿನಗಳ ಹಿಂದೆ ಭಾರತಕ್ಕೆ ಓಡಿ ಬಂದಿರುವ ಮ್ಯಾನ್ಮಾರ್ ಪೊಲೀಸರನ್ನು ವಶಕ್ಕೆ ನೀಡಿ ಎಂದು ಒತ್ತಾಯಿಸಿ ಮ್ಯಾನ್ಮಾರ್ ಪತ್ರ ಬರೆದಿತ್ತು. ಉಭಯ ರಾಷ್ಟ್ರಗಳ ಸಂಬಂಧ ಮುಂದುವರಿಯಲು ಪೊಲೀಸ್ ಅಧಿಕಾರಿಗಳನ್ನು ಮ್ಯಾನ್ಮಾರ್ಗೆ ಹಸ್ತಾಂತರಿಸಿ ಅಂತಾ ಮಿಜೋರಾಂ ರಾಜ್ಯದ ಚಂಪೈ ಜಿಲ್ಲೆಯ ಉಪ ಆಯುಕ್ತೆಗೆ ಮ್ಯಾನ್ಮಾರ್ನ ಅಧಿಕಾರಿಗಳು ಪತ್ರ ಬರೆದಿದ್ದರು. ಪತ್ರ ಬರೆದ ಕೆಲವೇ ದಿನದಲ್ಲಿ ಆಘಾತಕಾರಿ ಅಂಶ ಬಯಲಾಗಿದೆ. ಭಾರತಕ್ಕೆ ಓಡಿ ಬಂದಿರುವ ಮ್ಯಾನ್ಮಾರ್ ಪೊಲೀಸರು ಅಲ್ಲಿನ ಭಯಾನಕ ಸ್ಥಿತಿಯನ್ನ ಬಿಡಿಸಿಟ್ಟಿದ್ದಾರೆ. ಮ್ಯಾನ್ಮಾರ್ ಜನರ ಸದ್ಯದ ಪರಿಸ್ಥಿತಿ ಹಾಗೂ ಹಿಂಸೆಯ ಬಗ್ಗೆ ಎಳೆ ಎಳೆಯಾಗಿ ವಿವರಿಸಿದ್ದಾರೆ.
ಮತ್ತೊಂದು ಉತ್ತರ ಕೊರಿಯಾ ಆಗುತ್ತಾ ಮ್ಯಾನ್ಮಾರ್, ಪ್ರಜೆಗಳಲ್ಲಿ ಆತಂಕ..!
ಚುನಾವಣೆಯಲ್ಲಿ ಅಕ್ರಮ ನಡೆದಿತ್ತಾ..?
ಮ್ಯಾನ್ಮಾರ್ನಲ್ಲಿ 2020ರ ನವೆಂಬರ್ನಲ್ಲಿ ಚುನಾವಣೆ ನಡೆದಿತ್ತು. 75 ವರ್ಷದ ಸೂಕಿ ನೇತೃತ್ವದಲ್ಲಿ ಅವರ ಪಕ್ಷ ಭರ್ಜರಿ ಗೆಲುವು ಸಾಧಿಸಿತ್ತು. ಚುನಾವಣೆಯಲ್ಲಿ ಮ್ಯಾನ್ಮಾರ್ ಸಂಸತ್ತಿನ 642 ಸ್ಥಾನಗಳ ಪೈಕಿ ಸೂಕಿ ನೇತೃತ್ವದ ಎನ್ಎಲ್ಡಿ ಪಕ್ಷ 396 ಸ್ಥಾನ ಪಡೆದಿತ್ತು. ಅಂದಹಾಗೆ ಪ್ರಜಾಪ್ರಭುತ್ವದ ಪರ ಗಟ್ಟಿಯಾಗಿ ನಿಂತು ಹೋರಾಟ ನಡೆಸಿದ್ದವರು ಆಂಗ್ ಸಾನ್ ಸೂಕಿ. ಮ್ಯಾನ್ಮಾರ್ನಲ್ಲಿ ಮಿಲಿಟರಿ ಆಡಳಿತ ವಿರುದ್ಧ ಸತತ ಹೋರಾಟ ನಡೆಸಿದ್ದ ಸೂಕಿಗೆ ಇದೀಗ ಹಿನ್ನಡೆಯಾಗಿದೆ. ಸೂಕಿ ಬಂಧನ ಹಲವು ಅನುಮಾನಗಳಿಗೂ ಕಾರಣವಾಗಿದೆ.
ಗಲ್ಲಿಗೂ ನುಗ್ಗಿದೆ ಮ್ಯಾನ್ಮಾರ್ ಸೇನೆ..!
ಸೇನಾ ಕ್ರಾಂತಿ ಪರ ಹಾಗೂ ವಿರುದ್ಧವಾಗಿ ಹೋರಾಟಗಳು ಭುಗಿಲೆದ್ದಿರುವುದು ಮ್ಯಾನ್ಮಾರ್ನ ತತ್ತರಿಸುವಂತೆ ಮಾಡಿದೆ. ಆದರೆ ಇದನ್ನ ನೋಡಿ ತಣ್ಣಗೆ ಕೂರೋಕೆ ಮ್ಯಾನ್ಮಾರ್ ಈಗ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉಳಿದಿಲ್ಲ. ಮೇಲಾಗಿ ಅಲ್ಲೊಂದು ಸರ್ಕಾರವೇ ಇಲ್ಲ. ಎಲ್ಲವನ್ನೂ ಸೇನಾಧಿಕಾರಿಗಳು ಬಿಗಿ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ. ಹೀಗಾಗಿ ಪ್ರತಿಭಟನೆ ಮತ್ತು ಹೋರಾಟ ಹತ್ತಿಕ್ಕಲು ಮ್ಯಾನ್ಮಾರ್ನ ಸೇನೆ ಗಲ್ಲಿ ಗಲ್ಲಿಗಳಿಗೂ ಎಂಟ್ರಿ ಕೊಟ್ಟಿದೆ. ಭಾರಿ ಪ್ರಮಾಣದ ಯುದ್ಧ ಪರಿಕರಗಳನ್ನ ತೋರಿಸಿ ಜನರನ್ನ ಬೆದರಿಸುವ ತಂತ್ರ ಅನುಸರಿಸುತ್ತಿದೆ. ಆದರೂ ಜನ ಭಯಪಡದೆ ಹೋರಾಟಕ್ಕೆ ಸಾಥ್ ನೀಡುತ್ತಿದ್ದಾರೆ.