ಶ್.. ಉಸಿರು ಎತ್ತಿದ್ರೆ ಮರ್ಡರ್! 550 ಜನರನ್ನು ಕೊಂದ ಸರ್ವಾಧಿಕಾರಿಗಳು!
ಪ್ರತಿಭಟನೆ ನಡೆಸುವವರ ವಿರುದ್ಧ ಅಲ್ಲಿನ ಸರ್ವಾಧಿಕಾರಿಗಳು ಉಗ್ರರೂಪ ತಾಳಿದ್ದಾರೆ. ಕಂಡ ಕಂಡವರನ್ನು ಗುಂಡಿಟ್ಟು ಕೊಲೆ ಮಾಡಿಸುತ್ತಿದ್ದಾರೆ. ಅಂದಹಾಗೆ ಇದು ಮ್ಯಾನ್ಮಾರ್ನ ಚಿತ್ರಣ. ಈವರೆಗೂ ಮ್ಯಾನ್ಮಾರ್ನ ಮಿಲಿಟರಿ ಅಧಿಕಾರಿಗಳು 550ಕ್ಕೂ ಹೆಚ್ಚು ಜನರನ್ನು ಕೊಂದು ಹಾಕಿದ್ದಾರೆ.
ವಿಶ್ವಸಂಸ್ಥೆ ಹಾಗೂ ಅಮೆರಿಕದ ಎಚ್ಚರಿಕೆ ನಡುವೆಯೂ ಅಲ್ಲಿ ಹಿಂಸಾಚಾರ ನಿಂತಿಲ್ಲ. ಮ್ಯಾನ್ಮಾರ್ನಲ್ಲಿ ಕ್ಷಣಕ್ಷಣಕ್ಕೂ ಹಿಂಸೆ ಹೆಚ್ಚುತ್ತಿರುವುದು ತೀವ್ರ ಆತಂಕ ಸೃಷ್ಟಿಸಿದೆ. ಫೆಬ್ರವರಿ 1ರಂದು ದಂಗೆ ಎದ್ದ ಮ್ಯಾನ್ಮಾರ್ ಮಿಲಿಟರಿ ದೇಶವನ್ನೇ ಅಲುಗಾಡಿಸಿದೆ. ಸೇನಾಡಳಿತ ವಿರೋಧಿಸಿ ಎಲ್ಲೆಂದರಲ್ಲಿ ಕಿಚ್ಚು ಹೊತ್ತಿದೆ. ಕೆಲ ದಿನಗಳ ಹಿಂದೆ ಮ್ಯಾನ್ಮಾರ್ನ ಸೇನಾಧಿಕಾರಿಗಳ ವಿರುದ್ಧ ಮಾತನಾಡಿದ್ದ ಅಮೆರಿಕ ಅಧ್ಯಕ್ಷ ಬೈಡನ್, ಇದೇ ರೀತಿ ಹಿಂಸಾಚಾರ ಮುಂದುವರಿಸಿದರೆ ಪರಿಸ್ಥಿತಿ ನೆಟ್ಟಗಿರಲ್ಲ ಎಂದು ವಾರ್ನಿಂಗ್ ಕೊಟ್ಟಿದ್ದರು.
ದೇಶ ಇದ್ದರೂ ಇವರೆಲ್ಲಾ ಅನಾಥ: ನಿಲ್ಲಲು ಸೂರು ಇಲ್ಲ, ತಿನ್ನಲು ಅನ್ನವಿಲ್ಲ
ಆದರೆ ಇದಕ್ಕೆಲ್ಲಾ ಮ್ಯಾನ್ಮಾರ್ ಸೇನಾಧಿಕಾರಿಗಳು ಬಗ್ಗುವಂತೆ ಕಾಣುತ್ತಿಲ್ಲ. ನಾಗರಿಕರ ಮೇಲೆ ಹಿಂಸೆ ಮುಂದುವರಿಸಿದ್ದಾರೆ. ಈವರೆಗೂ ಸತ್ತವರ ಸಂಖ್ಯೆ 550ನ್ನು ಮೀರಿದ್ದು, ನಾಪತ್ತೆಯಾದವರ ಸಂಖ್ಯೆ ಇನ್ನೂ ದೃಢವಾಗಿಲ್ಲ. ಮತ್ತೊಂದ್ಕಡೆ ಮ್ಯಾನ್ಮಾರ್ ಜನರು ಜೀವ ಉಳಿಸಿಕೊಳ್ಳಲು ನೆರೆಯ ದೇಶಗಳಿಗೆ ಪಲಾಯನ ಮಾಡು ದುರಂತ ಪರಿಸ್ಥಿತಿ ಎದುರಾಗಿದೆ.
3ನೇ ಮಹಾಯುದ್ಧಕ್ಕೆ ರಣಕಹಳೆ..?
ಜಗತ್ತಿನಲ್ಲಿ ಕಮ್ಯುನಿಸ್ಟ್ ರಾಷ್ಟ್ರಗಳಿಗೂ, ಅಮೆರಿಕದ ನಾಯಕರಿಗೂ ಜಿದ್ದು ಇದ್ದೇ ಇದೆ. ಅದರಲ್ಲೂ ಮಿಲಿಟರಿ ಆಡಳಿತ ಶುರುವಾಯಿತು ಅಂದರೆ ಸಾಕು, ಅಮೆರಿಕ ಏನಾದರೂ ಒಂದು ಕ್ಯಾತೆ ತೆಗೆದು ಅಲ್ಲಿಗೆ ನುಗ್ಗಿಬಿಡುತ್ತೆ ಎಂಬ ಆರೋಪ ಇದೆ. ಹೀಗೆ ಮ್ಯಾನ್ಮಾರ್ ಮೇಲೂ ಅಮೆರಿಕ ಸೇನೆ ದಾಳಿ ನಡೆಸುವ ಮಾತುಗಳನ್ನು ತಳ್ಳಿ ಹಾಕಲು ಸಾಧ್ಯವಿಲ್ಲ. ಅಕಸ್ಮಾತ್ ಹೀಗೆ ದಾಳಿ ನಡೆದಿದ್ದೇ ಆದರೆ ಪರಿಸ್ಥಿತಿ ಭಯಾನಕವಾಗಲಿದೆ. ಮ್ಯಾನ್ಮಾರ್ ಪಕ್ಕದಲ್ಲೇ ಕೂತಿರುವ ಅಮೆರಿಕ ಪಾಲಿನ ಶತ್ರು ಚೀನಾ ತಿರುಗಿ ಬೀಳಬಹುದು. ಆಗ ಈ ಕೋಳಿ ಜಗಳ 3ನೇ ಮಹಾಯುದ್ಧಕ್ಕೆ ಆಹ್ವಾನ ನೀಡಿದಂತೆ ಆಗುತ್ತದೆ. ಏಕೆಂದರೆ ಈ ಮೊದಲು ನಡೆದಿರುವ ಮಹಾಯುದ್ಧಗಳು ಕೂಡ ಕೋಳಿ ಜಗಳದ ರೀತಿಯೇ ಆರಂಭವಾಗಿದ್ದವು ಎನ್ನುವುದನ್ನ ನೆನಪಿಡಬೇಕು.
ಮಿಲಿಟರಿ ಆಡಳಿತ ಶುರು..!
ಮ್ಯಾನ್ಮಾರ್ನಲ್ಲಿ 2020ರಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮ ನಡೆದಿದ್ದರೂ ಅದನ್ನ ತಡೆಯಲು ಚುನಾವಣಾ ಆಯೋಗ ವಿಫಲವಾಗಿದೆ ಎಂದು ಆರೋಪಿಸಲಾಗಿತ್ತು. ಈ ಕಾರಣಕ್ಕಾಗಿ ಮ್ಯಾನ್ಮಾರ್ ಮಿಲಿಟರಿ ತುರ್ತು ಪರಿಸ್ಥಿತಿ ಹೇರಿದೆ. ದೇಶದಲ್ಲಿ ಮಿಲಿಟರಿ 1 ವರ್ಷದವರೆಗೂ ತುರ್ತು ಪರಿಸ್ಥಿತಿ ಘೋಷಿಸಿ ಹಂಗಾಮಿ ಅಧ್ಯಕ್ಷರನ್ನೂ ನೇಮಿಸಿದೆ. ಮತ್ತೊಂದ್ಕಡೆ ದೇಶದ ಸಂವಹನ ಸಾಧನಗಳನ್ನೂ ಕಂಟ್ರೋಲ್ಗೆ ತೆಗೆದುಕೊಂಡಿದೆ ಸೇನೆ. ಫೋನ್ ಕಾಲ್ ಹೋಗುತ್ತಿಲ್ಲ, ಇಂಟರ್ನೆಟ್ ಸಂಪರ್ಕ ಕೂಡ ಬಂದ್ ಆಗಿದೆ. ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಪರಿಸ್ಥಿತಿ ಅತಿಸೂಕ್ಷ್ಮವಾಗಿದೆ. ಕಂಡ ಕಂಡಲ್ಲಿ ಗುಂಡಿಟ್ಟು ಜನರನ್ನ ಕೊಲೆ ಮಾಡುತ್ತಿದೆ ಮ್ಯಾನ್ಮಾರ್ ಸೇನೆ.
ಮತ್ತೊಂದು ಉತ್ತರ ಕೊರಿಯಾ ಆಗುತ್ತಾ ಮ್ಯಾನ್ಮಾರ್, ಪ್ರಜೆಗಳಲ್ಲಿ ಆತಂಕ..!
450ಕ್ಕೂ ಹೆಚ್ಚು ಹೋರಾಟಗಾರರು ಬಲಿ..?
ಈಗಾಗಲೇ ಪ್ರತಿಭಟನೆ ನಡೆಸುತ್ತಿದ್ದ ಸುಮಾರು 450ಕ್ಕೂ ಹೆಚ್ಚು ಜನರನ್ನು ಮ್ಯಾನ್ಮಾರ್ ಸೇನೆ ಬಲಿಪಡೆದಿರುವ ಆರೋಪವಿದೆ. ಹೀಗಾಗಿ ನಾಗರಿಕರನ್ನ ಕೊಂದು ಹಾಕಿರುವ ಮ್ಯಾನ್ಮಾರ್ ಸೇನೆ ವಿರುದ್ಧ ಜಗತ್ತಿನಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪ್ರಜಾಪ್ರಭುತ್ವವಾದಿ ರಾಷ್ಟ್ರಗಳು ಮ್ಯಾನ್ಮಾರ್ ಮಿಲಿಟರಿ ಕ್ರಮವನ್ನು ಟೀಕಿಸಿವೆ. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಅಲ್ಲಿನ ಸೇನಾಧಿಕಾರಿಗಳು, ಪ್ರತಿಭಟನೆ ನಡೆಸುತ್ತಿರುವ ಜನರ ನಿಯಂತ್ರಣ ಹಾಗೂ ಹೋರಾಟಗಾರನ್ನು ಚದುರಿಸಲು ಬಲಪ್ರಯೋಗ ಮಾಡುತ್ತಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಹಲವರು ಸಾವು, ಬದುಕಿನ ಮಧ್ಯೆ ಹೋರಾಡುತ್ತಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕ ಆವರಿಸಿದೆ.
ಗಲ್ಲಿಗೂ ನುಗ್ಗಿದೆ ಮ್ಯಾನ್ಮಾರ್ ಸೇನೆ..!
ಸೇನಾ ಕ್ರಾಂತಿ ಪರ ಹಾಗೂ ವಿರುದ್ಧವಾಗಿ ಹೋರಾಟಗಳು ಭುಗಿಲೆದ್ದಿರುವುದು ಮ್ಯಾನ್ಮಾರ್ನ ತತ್ತರಿಸುವಂತೆ ಮಾಡಿದೆ. ಆದರೆ ಇದನ್ನ ನೋಡಿ ತಣ್ಣಗೆ ಕೂರೋಕೆ ಮ್ಯಾನ್ಮಾರ್ ಈಗ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉಳಿದಿಲ್ಲ. ಮೇಲಾಗಿ ಅಲ್ಲೊಂದು ಸರ್ಕಾರವೇ ಇಲ್ಲ. ಎಲ್ಲವನ್ನೂ ಸೇನಾಧಿಕಾರಿಗಳು ಬಿಗಿ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ. ಹೀಗಾಗಿ ಪ್ರತಿಭಟನೆ ಮತ್ತು ಹೋರಾಟ ಹತ್ತಿಕ್ಕಲು ಮ್ಯಾನ್ಮಾರ್ನ ಸೇನೆ ಗಲ್ಲಿ ಗಲ್ಲಿಗಳಿಗೂ ಎಂಟ್ರಿ ಕೊಟ್ಟಿದೆ. ಭಾರಿ ಪ್ರಮಾಣದ ಯುದ್ಧ ಪರಿಕರಗಳನ್ನ ತೋರಿಸಿ ಜನರನ್ನ ಬೆದರಿಸುವ ತಂತ್ರ ಅನುಸರಿಸುತ್ತಿದೆ. ಆದರೂ ಜನ ಭಯಪಡದೆ ಹೋರಾಟಕ್ಕೆ ಸಾಥ್ ನೀಡುತ್ತಿದ್ದಾರೆ.
ಚುನಾವಣೆಯಲ್ಲಿ ಅಕ್ರಮ ನಡೆದಿತ್ತಾ..?
ಮ್ಯಾನ್ಮಾರ್ನಲ್ಲಿ 2020ರ ನವೆಂಬರ್ನಲ್ಲಿ ಚುನಾವಣೆ ನಡೆದಿತ್ತು. 75 ವರ್ಷದ ಸೂಕಿ ನೇತೃತ್ವದಲ್ಲಿ ಅವರ ಪಕ್ಷ ಭರ್ಜರಿ ಗೆಲುವು ಸಾಧಿಸಿತ್ತು. ಚುನಾವಣೆಯಲ್ಲಿ ಮ್ಯಾನ್ಮಾರ್ ಸಂಸತ್ತಿನ 642 ಸ್ಥಾನಗಳ ಪೈಕಿ ಸೂಕಿ ನೇತೃತ್ವದ ಎನ್ಎಲ್ಡಿ ಪಕ್ಷ 396 ಸ್ಥಾನ ಪಡೆದಿತ್ತು. ಅಂದಹಾಗೆ ಪ್ರಜಾಪ್ರಭುತ್ವದ ಪರ ಗಟ್ಟಿಯಾಗಿ ನಿಂತು ಹೋರಾಟ ನಡೆಸಿದ್ದವರು ಆಂಗ್ ಸಾನ್ ಸೂಕಿ. ಮ್ಯಾನ್ಮಾರ್ನಲ್ಲಿ ಮಿಲಿಟರಿ ಆಡಳಿತ ವಿರುದ್ಧ ಸತತ ಹೋರಾಟ ನಡೆಸಿದ್ದ ಸೂಕಿಗೆ ಇದೀಗ ಹಿನ್ನಡೆಯಾಗಿದೆ. ಸೂಕಿ ಬಂಧನ ಹಲವು ಅನುಮಾನಗಳಿಗೂ ಕಾರಣವಾಗಿದೆ.