ಮ್ಯಾನ್ಮಾರ್ ಪಚ್ಚೆ ಗಣಿಯಲ್ಲಿ ದುರಂತ; 54 ಮಂದಿ ಸಾವನ್ನಪ್ಪಿದ ಶಂಕೆ
ಯಾಂಗೂನ್ (ಮ್ಯಾನ್ಮಾರ್), ಏಪ್ರಿಲ್ 23: ಉತ್ತರ ಮ್ಯಾನ್ಮಾರ್ ನ ಕಚಿನ್ ನಲ್ಲಿ ಭೂ ಕುಸಿತವಾಗಿ, ಪಚ್ಚೆ ಗಣಿ ಕಾರ್ಮಿಕರು ಐವತ್ನಾಲ್ಕು ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಕಾರ್ಮಿಕರು ಮಲಗಿದ್ದ ವೇಳೆ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪಚ್ಚೆ ಕಲ್ಲಿನ ಗಣಿಗಾರಿಕೆಯು ಬಹಳ ಅಪಾಯಕಾರಿ ಆಗಿದ್ದು, ಇತ್ತೀಚಿನ ಕಾಲದಲ್ಲಿ ನಡೆದ ಭೀಕರ ದುರಂತ ಇದಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮಣ್ಣಿನಲ್ಲಿ ಐವತ್ನಾಲ್ಕು ಮಂದಿ ನಾಪತ್ತೆಯಾಗಿದ್ದಾರೆ ಎಂದು ಕಚಿನ್ ನ ಸಂಬಂಧಪಟ್ಟ ಪೊಲೀಸ್ ಠಾಣೆಯ ಕರ್ತವ್ಯಾಧಿಕಾರಿ ತಿಳಿಸಿದ್ದಾರೆ. ಈಗ ನಾಪತ್ತೆ ಆಗಿರುವವರ ಪೈಕಿ ಯಾರು ಕೂಡ ಬದುಕುವ ಸಾಧ್ಯತೆಗಳು ಇಲ್ಲ ಎಂದು ಅವರು ತಿಳಿಸಿದ್ದಾರೆ. ಸೋಮವಾರ ರಾತ್ರಿ ಈ ಘಟನೆ ಸಂಭವಿಸಿದೆ. ಇಲ್ಲಿ ಕೆಲಸ ಮಾಡುವ ಕಾರ್ಮಿಕರು ಪ್ರತಿ ವರ್ಷ ಬಿಲಿಯನ್ ಡಾಲರ್ ಮೌಲ್ಯದ ಪಚ್ಚೆ ಕಲ್ಲುಗಳನ್ನು ಬಹಳ ಕ್ಲಿಷ್ಟಕರ ಸನ್ನಿವೇಶದಲ್ಲಿ ಹೊರ ತೆಗೆಯುತ್ತಾರೆ.
ಮಂಗಳವಾರ ಬೆಳಗ್ಗೆಯಿಂದ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ಆದರೆ ಅಧಿಕಾರಿಗಳು ಹೇಳುವ ಪ್ರಕಾರ ಯಾರೊಬ್ಬರು ಬದುಕಿರುವ ಸಾಧ್ಯತೆಗಳಿಲ್ಲ. ಐದು ಎಕರೆ ವ್ಯಾಪ್ತಿಯಲ್ಲಿರುವ ಈ ಗಣಿಯ ಆಳ ನೂರು ಅಡಿಯಷ್ಟಿದೆ. ಮಧ್ಯಾಹ್ನದ ಹೊತ್ತಿಗೆ ಮೂರು ಶವಗಳನ್ನು ಹೊರ ತೆಗೆಯಲಾಗಿದೆ ಎಂದು ಸಂಸದ ಟಿನ್ ಸೋ ತಿಳಿಸಿದ್ದಾರೆ.
ನಮಗೆ ಭರವಸೆ ಇಲ್ಲ. ಏಕೆಂದರೆ ಮಣ್ಣಿನ ಅಡಿಯಲ್ಲಿ ಸಿಲುಕಿಕೊಂಡಿರುವುದರಿಂದ ಹೊರತರುವುದು ಕಷ್ಟ ಎಂದು ಗಣಿಗಾರಿಕೆ ನಡೆಸುತ್ತಿರುವ ಕಂಪೆನಿಯೊಂದರ ಮೇಲುಸ್ತುವಾರಿ ವಹಿಸಿರುವವರು ತಿಳಿಸಿದ್ದಾರೆ. ಪಚ್ಚೆ ಕಲ್ಲಿನ ಗಣಿಗಾರಿಕೆ ಪ್ರದೇಶದಲ್ಲಿ ಭೂ ಕುಸಿತ ಸಾಮಾನ್ಯ. ಒಂದೇ ಸಲಕ್ಕೆ ನೂರಾರು ಮಂದಿ ಸಾವನ್ನಪ್ಪುತ್ತಾರೆ. ಕಳೆದ ವರ್ಷ ಇದೇ ಸ್ಥಳದಲ್ಲಿ ಸಾವನ್ನಪ್ಪಿದ್ದರು. ಇನ್ನು ನಾಲ್ಕು ವರ್ಷದ ಹಿಂದೆ ನೂರಿಪ್ಪತ್ತು ಮಂದಿ ಮೃತಪಟ್ಟಿದ್ದರು.
ಗಣಿಗಾರಿಕೆಯಲ್ಲಿ ಉಪ ಉತ್ಪನ್ನವಾದ ಮಣ್ಣಿನಂಥ ತ್ಯಾಜ್ಯವೊಂದು ಕುಸಿದು ಅನಾಹುತ ಸಂಭವಿಸಿತ್ತು.