ಸೇನಾ ಕ್ರಾಂತಿಯ ನಡುವೆಯೂ ತನ್ನ ವೃತ್ತಿ ಮರೆಯದ ಶಿಕ್ಷಕಿ..!
ಒಂದು ಕಡೆ ಮ್ಯಾನ್ಮಾರ್ನಲ್ಲಿ ಸೇನಾ ಕ್ರಾಂತಿ ಮೊಳಗಿರುವಾಗಲೇ ರಾಜಕೀಯ ಅರಾಜಕತೆಯ ಕಾರ್ಮೋಡ ಆವರಿಸಿದೆ. ಆದರೆ ಈ ಹೊತ್ತಲ್ಲೇ ಏರೋಬಿಕ್ಸ್ ಶಿಕ್ಷಕಿಯ ವಿಡಿಯೋ ವೈರಲ್ ಆಗುತ್ತಿದೆ. ಹೌದು, ಇಡೀ ಮ್ಯಾನ್ಮಾರ್ ವ್ಯವಸ್ಥೆಯನ್ನೇ ತನ್ನ ಕಂಟ್ರೋಲ್ಗೆ ತೆಗೆದುಕೊಳ್ಳುತ್ತಿರುವ ಅಲ್ಲಿನ ಸೇನೆ ಸಂಸತ್ತನ್ನು ಕೂಡ ವಶಕ್ಕೆ ಪಡೆದಿದೆ.
ಹೀಗೆ ಮ್ಯಾನ್ಮಾರ್ ಸಂಸತ್ತಿಗೆ ಸೇನಾ ವಾಹನಗಳು ಲಗ್ಗೆ ಇಡುವಾಗ ಏರೋಬಿಕ್ಸ್ ಶಿಕ್ಷಕಿ ಖಿಂಗ್ ಹ್ನಿನ್ ವಾಯ್ ಏನೂ ಅರಿಯದವರಂತೆ ತಮ್ಮ ದೈನಂದಿನ ತರಬೇತಿಯಲ್ಲಿ ನಿರತರಾಗಿರುವ ಈ ವಿಡಿಯೋ ಇಂಟರ್ನೆಟ್ನಲ್ಲಿ ಹವಾ ಎಬ್ಬಿಸಿದೆ.
ದಿಢೀರ್ ಸೇನಾ ಕ್ರಾಂತಿ, ಸೂಕಿ ಅರೆಸ್ಟ್, ಚೀನಿ ಗ್ಯಾಂಗ್ ಕೈವಾಡ..?
ಈಗಾಗಲೇ ಮ್ಯಾನ್ಮಾರ್ ಪ್ರಧಾನಿ ಮತ್ತು ನೊಬೆಲ್ ಶಾಂತಿ ಪುರಸ್ಕೃತೆ ಆಂಗ್ ಸಾನ್ ಸೂಕಿಯೂ ಸೇರಿದಂತೆ ಹಲವು ಪ್ರಮುಖ ನಾಯಕರನ್ನ ಮ್ಯಾನ್ಮಾರ್ ಸೇನೆ ಗೃಹಬಂಧನದಲ್ಲಿ ಇರಿಸಿದೆ. ಈ ನಡುವೆ ಅಲ್ಲಿನ ಮೊಬೈಲ್, ಇಂಟರ್ನೆಟ್ ಸಂಪರ್ಕವು ಕೂಡ ಬಂದ್ ಆಗಿದೆ.
ರೊಹಿಂಗ್ಯಾ ನಿರಾಶ್ರಿತರಿಗೆ ಹೊಸ ಜಾಗ ಹುಡುಕಿದ ಬಾಂಗ್ಲಾದೇಶ
ಜನ ಜೀವನ ಅಸ್ತವ್ಯಸ್ತಗೊಂಡಿದೆ. ಆದರೆ ಇದ್ಯಾವುದೂ ತನ್ನ ಮೇಲೆ ಪರಿಣಾಮ ಬೀರಿಲ್ಲ ಎಂಬಂತೆ ಏರೋಬಿಕ್ಸ್ ಶಿಕ್ಷಕಿ ತನ್ನ ಕಾರ್ಯದಲ್ಲಿ ಮಗ್ನರಾಗಿರುವ ವಿಡಿಯೋ ಜಗತ್ತಿನ ಗಮನ ಸೆಳೆಯುತ್ತಿದೆ.
ನಿತ್ಯ ಇದೇ ಸ್ಥಳದಲ್ಲಿ ತರಬೇತಿ..!
ಅಂದಹಾಗೆ ಖಿಂಗ್ ಹ್ನಿನ್ ವಾಯ್ ನಿತ್ಯ ಇದೇ ಜಾಗದಲ್ಲಿ ಏರೋಬಿಕ್ಸ್ ತರಬೇತಿ ನೀಡುತ್ತಾರಂತೆ. ಹೀಗಾಗಿ ಮ್ಯಾನ್ಮಾರ್ನಲ್ಲಿ ಸೇನಾ ಕ್ರಾಂತಿ ನಡೆಯುವಾಗಲೂ ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ತಮ್ಮ ಕೆಲಸದಲ್ಲಿ ಖಿಂಗ್ ಹ್ನಿನ್ ವಾಯ್ ನಿರತರಾಗಿದ್ದರು. ಮತ್ತೊಂದ್ಕಡೆ ಏರೋಬಿಕ್ಸ್ ಶಿಕ್ಷಕಿಯ ಈ ಧೈರ್ಯವನ್ನ ಮೆಚ್ಚಿರುವ ವಿಶ್ವದ ಕೋಟ್ಯಂತರ ಮಂದಿ, ಖಿಂಗ್ ಹ್ನಿನ್ ವಾಯ್ ಧೈರ್ಯ ಹಾಗೂ ವೃತ್ತಿಪರತೆ ಬಗ್ಗೆ ಮೆಚ್ಚುಗೆಯ ಮಾತುಗಳನ್ನ ಆಡಿದ್ದಾರೆ. ಮತ್ತೊಂದ್ಕಡೆ ಈ ವಿಡಿಯೋ ಹತ್ತಾರು ಕೋಟಿ ವೀವ್ಸ್ ಗಿಟ್ಟಿಸಿ ವೈರಲ್ ಆಗಿದೆ.
ಮಿಲಿಟರಿ ಆಡಳಿತ ಶುರು..!
ಮ್ಯಾನ್ಮಾರ್ನಲ್ಲಿ 2020ರಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮ ನಡೆದಿದ್ದರೂ ಅದನ್ನ ತಡೆಯಲು ಚುನಾವಣಾ ಆಯೋಗ ವಿಫಲವಾಗಿದೆ ಎಂದು ಆರೋಪಿಸಲಾಗಿತ್ತು. ಈ ಕಾರಣಕ್ಕಾಗಿ ಮ್ಯಾನ್ಮಾರ್ ಮಿಲಿಟರಿ ತುರ್ತು ಪರಿಸ್ಥಿತಿ ಹೇರಿದೆ. ದೇಶದಲ್ಲಿ ಮಿಲಿಟರಿ 1 ವರ್ಷದವರೆಗೂ ತುರ್ತು ಪರಿಸ್ಥಿತಿ ಘೋಷಿಸಿ ಹಂಗಾಮಿ ಅಧ್ಯಕ್ಷರನ್ನೂ ನೇಮಿಸಿದೆ. ಮತ್ತೊಂದ್ಕಡೆ ದೇಶದ ಸಂವಹನ ಸಾಧನಗಳನ್ನೂ ಕಂಟ್ರೋಲ್ಗೆ ತೆಗೆದುಕೊಂಡಿದೆ ಸೇನೆ. ಫೋನ್ ಕಾಲ್ ಹೋಗುತ್ತಿಲ್ಲ, ಇಂಟರ್ನೆಟ್ ಸಂಪರ್ಕ ಕೂಡ ಬಂದ್ ಆಗಿದೆ. ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಪರಿಸ್ಥಿತಿ ಅತಿಸೂಕ್ಷ್ಮವಾಗಿದೆ.
‘ಡ್ರ್ಯಾಗನ್ ಚೀನಿ’ ಗ್ಯಾಂಗ್ ಕೈವಾಡ..?
ಇಂತಹದ್ದೊಂದು ಅನುಮಾನ ಎಲ್ಲರನ್ನೂ ಕಾಡುತ್ತಿದೆ. ಏಕೆಂದರೆ ಚೀನಾ ಜೊತೆಗೆ ಮ್ಯಾನ್ಮಾರ್ ಸುಮಾರು 2 ಸಾವಿರ ಕಿಲೋ ಮೀಟರ್ಗೂ ಹೆಚ್ಚು ವಿಸ್ತಿರ್ಣದ ಗಡಿ ಹಂಚಿಕೊಂಡಿದೆ. ಸದ್ಯದ ಪರಿಸ್ಥಿತಿಯಲ್ಲಿ ಚೀನಾ ತನ್ನ ಅಕ್ಕಪಕ್ಕದ ದೇಶಗಳ ಮೇಲೆ ನಿಯಂತ್ರಣ ಸಾಧಿಸಲು ಕುತಂತ್ರ ಬುದ್ಧಿ ಬಳಸುತ್ತಿದೆ. ನೇಪಾಳದಲ್ಲೂ ಹೀಗೆ ಮಾಡಿದೆ ಚೀನಾ. ಇದೀಗ ಮ್ಯಾನ್ಮಾರ್ ಸೇನಾ ಕ್ರಾಂತಿಗೂ ಚೀನಾ ಬೆಂಬಲ ಇರಬಹುದು ಎಂಬ ಅನುಮಾನ ಎಲ್ಲರನ್ನೂ ಕಾಡುತ್ತಿದೆ. ಏಕೆಂದರೆ ಮ್ಯಾನ್ಮಾರ್ ಪ್ರಜಾಪ್ರಭುತ್ವ ತತ್ವ ಅಳವಡಿಸಿಕೊಂಡಿರುವ ದೇಶ. ಆದರೆ ಮಾವೋವಾದಿ ಕಮ್ಯೂನಿಸ್ಟ್ ಸಿದ್ಧಾಂತದ ಚೀನಾಗೆ ಇದು ಬಿಲ್ಕುಲ್ ಇಷ್ಟವಿಲ್ಲ.
ರೊಹಿಂಗ್ಯಾ ಮುಸ್ಲೀಮರ ನರಮೇಧ
ಮ್ಯಾನ್ಮಾರ್ ಕಳೆದ ಹಲವು ವರ್ಷಗಳಿಂದಲೂ ಜಗತ್ತಿನಾದ್ಯಂತ ಸುದ್ದಿಯಲ್ಲಿದೆ. ಮ್ಯಾನ್ಮಾರ್ನಲ್ಲಿ ಲಕ್ಷಾಂತರ ರೊಹಿಂಗ್ಯಾ ಮುಸ್ಲೀಮರ ನರಮೇಧ ನಡೆದಿದೆ. ಹತ್ತಾರು ಲಕ್ಷ ರೊಹಿಂಗ್ಯಾ ಮುಸ್ಲೀಮರು ದೇಶ ಬಿಟ್ಟು ಹೊರ ಬಂದಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿ ಸೃಷ್ಟಿಗೆ ಮ್ಯಾನ್ಮಾರ್ ಪ್ರಧಾನಿ ಆಂಗ್ ಸಾನ್ ಸೂಕಿ ಕಾರಣ ಎಂದು ಆರೋಪಿಸಲಾಗಿತ್ತು. ಮಿಲಿಟರಿ ಬಲ ಬಳಸಿ ಅಮಾಯಕರನ್ನ ಹತ್ಯೆ ಮಾಡಿರುವ ಆರೋಪ ಸೂಕಿ ಮೇಲಿದೆ. ಈ ಮಧ್ಯೆ ಮ್ಯಾನ್ಮಾರ್ ಸೇನೆ ಆಂಗ್ ಸಾನ್ ಸೂಕಿ ವಿರುದ್ಧವೇ ತಿರುಗಿಬಿದ್ದಿರುವುದು ಆಶ್ಚರ್ಯ ಮೂಡಿಸಿದೆ.
ಚುನಾವಣೆಯಲ್ಲಿ ಅಕ್ರಮ ನಡೆದಿತ್ತಾ..?
ಮ್ಯಾನ್ಮಾರ್ನಲ್ಲಿ 2020ರ ನವೆಂಬರ್ನಲ್ಲಿ ಚುನಾವಣೆ ನಡೆದಿತ್ತು. 75 ವರ್ಷದ ಸೂಕಿ ನೇತೃತ್ವದಲ್ಲಿ ಅವರ ಪಕ್ಷ ಭರ್ಜರಿ ಗೆಲುವು ಸಾಧಿಸಿತ್ತು. ಚುನಾವಣೆಯಲ್ಲಿ ಮ್ಯಾನ್ಮಾರ್ ಸಂಸತ್ತಿನ 642 ಸ್ಥಾನಗಳ ಪೈಕಿ ಸೂಕಿ ನೇತೃತ್ವದ ಎನ್ಎಲ್ಡಿ ಪಕ್ಷ 396 ಸ್ಥಾನ ಪಡೆದಿತ್ತು. ಅಂದಹಾಗೆ ಪ್ರಜಾಪ್ರಭುತ್ವದ ಪರ ಗಟ್ಟಿಯಾಗಿ ನಿಂತು ಹೋರಾಟ ನಡೆಸಿದ್ದವರು ಆಂಗ್ ಸಾನ್ ಸೂಕಿ. ಮ್ಯಾನ್ಮಾರ್ನಲ್ಲಿ ಮಿಲಿಟರಿ ಆಡಳಿತ ವಿರುದ್ಧ ಸತತ ಹೋರಾಟ ನಡೆಸಿದ್ದ ಸೂಕಿಗೆ ಇದೀಗ ಹಿನ್ನಡೆಯಾಗಿದೆ. ಸೂಕಿ ಬಂಧನ ಹಲವು ಅನುಮಾನಗಳಿಗೂ ಕಾರಣವಾಗಿದೆ.
|
ಪ್ರಜಾಪ್ರಭುತ್ವ ವಾದಿ ರಾಷ್ಟ್ರಗಳ ಕಳವಳ
ಮ್ಯಾನ್ಮಾರ್ನಲ್ಲಿ ಸೇನಾ ಕ್ರಾಂತಿ ಎದುರಾದ ಬೆನ್ನಲ್ಲೇ ಪ್ರಜಾಪ್ರಭುತ್ವ ವಾದಿ ರಾಷ್ಟ್ರಗಳು ಕಳವಳ ವ್ಯಕ್ತಪಡಿಸಿವೆ. ಹಠಾತ್ ಬೆಳವಣಿಗೆ ಬಗ್ಗೆ ಭಾರತ, ಅಮೆರಿಕ ಹಾಗೂ ಆಸ್ಟ್ರೇಲಿಯಾ ಸೇರಿದಂತೆ ಹಲವು ರಾಷ್ಟ್ರಗಳು ಆತಂಕ ವ್ಯಕ್ತಪಡಿಸಿವೆ. ಮತ್ತೊಂದ್ಕಡೆ ಸಂಪರ್ಕ ಸಾಧನಗಳನ್ನ ಬಂದ್ ಮಾಡಲಾಗಿದ್ದು, ವಾಕ್ ಸ್ವಾತಂತ್ರ್ಯಕ್ಕೆ ಮಿಲಿಟರಿ ಬ್ರೇಕ್ ಹಾಕಿದೆ. ಈ ಮೂಲಕ ಮ್ಯಾನ್ಮಾರ್ನ ಸಂಪೂರ್ಣ ಹಿಡಿತಕ್ಕೆ ತೆಗೆದುಕೊಳ್ಳಲು ಸೇನೆ ಮುಂದಾಗಿದೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ. ಈ ವಿಚಾರದಲ್ಲಿ ಚೀನಾ ಪರೋಕ್ಷ ಕೈವಾಡ ಅಲ್ಲಗಳೆಯುವಂತಿಲ್ಲ.