ಟೆಕ್ಕಿ ಪ್ರಭಾ ಅರುಣ್ ಕುಮಾರ್ ಮೃತದೇಹ ಬೆಂಗಳೂರಿಗೆ
ಬೆಂಗಳೂರು, ಮಾ. 14: ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಟೆಕ್ಕಿ ಪ್ರಭಾ ಅರುಣ್ ಕುಮಾರ್ ಅವರ ಮೃತದೇಹ ಮಾರ್ಚ್ 14 ರಂದು ಭಾರತಕ್ಕೆ ಬರಲಿದೆ. ಮಾರ್ಚ್ 15 ರಂದು ಬೆಂಗಳೂರಿನ ವಿಜಯನಗರದ ಬಾಪೂಜಿ ಲೇಔಟ್ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಅದೇ ದಿನ ಸಂಜೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು ಎಂದು ಕುಟುಂಬ ತಿಳಿಸಿದೆ.
ಹತ್ಯೆ ನಡೆದು ವಾರವೇ ಕಳೆದಿದ್ದರೂ ದುಷ್ಕರ್ಮಿಗಳ ಪತ್ತೆಯಾಗಿಲ್ಲ. ಪತಿ ಮತ್ತು ಕುಟುಂಬದವರು ಭಾರವಾದ ಮನಸ್ಸಿನಿಂದಲೇ ಅಂತ್ಯಸಂಸ್ಕಾರ ಮಾಡಬೇಕಿದೆ.[ಸಿಡ್ನಿಯಲ್ಲಿ ಬೆಂಗಳೂರಿನ ಮಹಿಳಾ ಟೆಕ್ಕಿ ಹತ್ಯೆ]
ಟೆಕ್ಕಿ ಪ್ರಭಾ ಅರುಣ್ ಕುಮಾರ್ ಅವರನ್ನು ದುಷ್ಕರ್ಮಿಗಳು ಆಸ್ಟ್ರೇಲಿಯಾದಲ್ಲಿ ಮಾರ್ಚ್ 7 ರಂದು ಅವರ ಮನೆ ಸಮೀಪವೇ ಚಾಕುವಿನಿಂದ ಇರಿದು ಕೊಂದಿದ್ದರು. ಮನೆಯ ಸಮೀಪವಿರುವ ಪರಮಟ್ಟಾ ಪಾರ್ಕಿಗೆ ತೆರಳಿದ್ದ ಪ್ರಭಾ ತಮ್ಮ ಪತಿ ಅರುಣ್ ಅವರ ಜೊತೆ ಮಾತನಾಡುತ್ತಿದ್ದ ವೇಳೆಯೇ ಹಲ್ಲೆಗೊಳಲಾಗಿದ್ದರು. 'ತಮ್ಮನ್ನು ಯಾರೋ ಹಿಂಬಾಲಿಸುತ್ತಿದ್ದಾರೆ' ಎಂದು ಸಂದೇಶ ರವಾನಿಸಿದ್ದರು.[ಪ್ರಭಾ ಹತ್ಯೆ ಇನ್ನು ನಿಗೂಢ]
ಮನೆಗೆ ಹಿಂದಿರುಗುತ್ತಿದ್ದ ಪ್ರಭಾ ಶಾರ್ಟ್ ಕಟ್ ಬಳಸಿದ್ದೇ ಅವರ ಪ್ರಾಣಕ್ಕೆ ಕುತ್ತಾಗಿತ್ತು. ದಾಳಿ ನಡೆಸಿದ್ದ ದುಷ್ಕರ್ಮಿಗಳು ಪ್ರಭಾ ಅವರನ್ನು ಹತ್ಯೆ ಮಾಡಿದ್ದರು. ಇದಾದ ನಂತರ ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಮೂಲದವರ ಭದ್ರತೆ ಬಗ್ಗೆಯೂ ಪ್ರಶ್ನೆ ಎದುರಾಗಿತ್ತು. ಆರೋಪಿಗಳನ್ನು ಪತ್ತೆ ಹಚ್ಚುತ್ತೇವೆ ಎಂದು ಪೊಲೀಸರು ತಿಳಿಸಿದ್ದರೂ ಇಲ್ಲಿಯವರೆಗೆ ಯಾವ ಮಾಹಿತಿ ಸಿಕ್ಕಿಲ್ಲ.
ಸಿಸಿಟಿವಿಯಲ್ಲಿ ಪ್ರಭಾ ಅವರು ನಡೆದುಕೊಂಡು ಬರುತ್ತಿರುವ ದೃಶ್ಯವೂ ದಾಖಲಾಗಿತ್ತು. ಆದರೆ ಅವರನ್ನು ಯಾರು ಹಿಂಬಾಲಿಸುತ್ತಿದ್ದರು? ಎಂಬ ಮಾಹಿತಿ ಇನ್ನುವರೆಗೆ ಸಿಕ್ಕಿಲ್ಲ. ಪೊಲೀಸರು ಈಗಾಗಲೇ 10ಕ್ಕೂ ಅಧಿಕ ಜನರನ್ನು ವಿಚಾರಣೆಗೆ ಒಳಪಡಿಸಿದರೂ ಯಾವ ಪ್ರಯೋಜನವೂ ಆಗಿಲ್ಲ.