3ನೇ ವರ್ಲ್ಡ್ ವಾರ್ಗೆ ವೇದಿಕೆ ಸಿದ್ಧ? ಹೋರಾಟಗಾರರ ಹತ್ಯೆಗೆ ಕಂಡಲ್ಲಿ ಗುಂಡು!
ಮ್ಯಾನ್ಮಾರ್ ಮಿಲಿಟರಿ ಮತ್ತೊಮ್ಮೆ ರಕ್ತದೋಕುಳಿ ಆಡಿದೆ. ಸೇನಾ ದಂಗೆ ವಿರೋಧಿಸಿ ಹೋರಾಟ ನಡೆಸುತ್ತಿದ್ದ ಪ್ರಜೆಗಳ ಸೇನೆ ಮೇಲೆ ಗುಂಡಿನ ದಾಳಿ ನಡೆಸಿದ್ದು, ಮತ್ತೆ 50ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಈ ಮೂಲಕ ಮ್ಯಾನ್ಮಾರ್ನ ಹೋರಾಟದಲ್ಲಿ ಮೃತಪಟ್ಟವರ ಸಂಖ್ಯೆ 150ರ ಗಡಿ ದಾಟಿದೆ.
ಫೆಬ್ರವರಿ 1ರಂದು ಮ್ಯಾನ್ಮಾರ್ ಸೇನೆ ಪ್ರಧಾನಿ ಸೂಕಿ ನಿವಾಸಕ್ಕೆ ನುಗ್ಗಿತ್ತು. ಬಳಿಕ ಪ್ರಧಾನಿ ಆಂಗ್ ಸಾನ್ ಸೂಕಿ ಸೇರಿದಂತೆ ಸೂಕಿ ಸಂಪುಟದ ಸಚಿವರು ಮತ್ತು ಸಂಸದರನ್ನು ಗೃಹ ಬಂಧನದಲ್ಲಿ ಇರಿಸಿತ್ತು. ಹೀಗೆ ಮ್ಯಾನ್ಮಾರ್ ಸೇನೆ ಹಿಡಿತಕ್ಕೆ ಸಿಕ್ಕ ನಂತರ ಮ್ಯಾನ್ಮಾರ್ ಅಕ್ಷರಶಃ ನರಕವಾಗಿದ್ದು, ಪ್ರತಿಭಟನೆಗಳು ಭುಗಿಲೆದ್ದಿವೆ.
'ಸಾಯುವವರೆಗೂ ಶೂಟ್ ಮಾಡಿ': ಹೇಗಿತ್ತು ಗೊತ್ತಾ ಅಲ್ಲಿ ಸೇನೆಯ ದೌರ್ಜನ್ಯ..?
ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರು ಕೂಡ ಸೇನಾಧಿಕಾರಿಗಳ ಆಜ್ಞೆ ಮೇರೆಗೆ ಶಾಂತಿ ಕದಡುವ ಪ್ರಯತ್ನ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ವಿಶ್ವದಾದ್ಯಂತ ಮ್ಯಾನ್ಮಾರ್ ಮಿಲಿಟರಿ ಕ್ರಮಕ್ಕೆ ಆಕ್ಷೇಪ ವ್ಯಕ್ತವಾಗುತ್ತಿದ್ದು, ವಿಶ್ವಸಂಸ್ಥೆ ಕೂಡ ಈ ಬಗ್ಗೆ ಎಚ್ಚರಿಕೆ ರವಾನಿಸಿದೆ. ಆದರೆ ಸದ್ಯ ಮ್ಯಾನ್ಮಾರ್ ಸೇನಾಧಿಕಾರಿಗಳು ಯಾರ ಮಾತನ್ನೂ ಕೇಳುವ ಸೌಜನ್ಯ ತೋರುತ್ತಿಲ್ಲ.
ಪ್ರಜಾಪ್ರಭುತ್ವ ವಾದಿ ರಾಷ್ಟ್ರಗಳ ಕಳವಳ
ಮ್ಯಾನ್ಮಾರ್ನಲ್ಲಿ ಸೇನಾ ಹಿಂಸೆ ಎದುರಾದ ಬೆನ್ನಲ್ಲೇ ಪ್ರಜಾಪ್ರಭುತ್ವವಾದಿ ರಾಷ್ಟ್ರಗಳು ಕಳವಳ ವ್ಯಕ್ತಪಡಿಸಿವೆ. ಹಠಾತ್ ಬೆಳವಣಿಗೆ ಬಗ್ಗೆ ಭಾರತ, ಅಮೆರಿಕ ಹಾಗೂ ಆಸ್ಟ್ರೇಲಿಯಾ ಸೇರಿದಂತೆ ಹಲವು ರಾಷ್ಟ್ರಗಳು ಆತಂಕ ವ್ಯಕ್ತಪಡಿಸಿವೆ. ಮತ್ತೊಂದ್ಕಡೆ ಸಂಪರ್ಕ ಸಾಧನಗಳನ್ನು ಬಂದ್ ಮಾಡಲಾಗಿದ್ದು, ವಾಕ್ ಸ್ವಾತಂತ್ರ್ಯಕ್ಕೆ ಮಿಲಿಟರಿ ಬ್ರೇಕ್ ಹಾಕಿದೆ. ಈ ಮೂಲಕ ಮ್ಯಾನ್ಮಾರ್ನ ಸಂಪೂರ್ಣ ಹಿಡಿತಕ್ಕೆ ತೆಗೆದುಕೊಂಡಿದೆ ಸೇನೆ. ಜನರು ಅತ್ತಿತ್ತ ಓಡಾಡಲು ಕೂಡ ಭಯಪಡುವ ವಾತಾವರಣ ನಿರ್ಮಾಣವಾಗಿದೆ. ಈಗಾಗಲೇ ಹಲವು ಹೋರಾಟಗಾರರು ಮ್ಯಾನ್ಮಾರ್ ಪ್ರಜೆಗಳಿಗೆ ಬೆಂಬಲ ಘೋಷಿಸಿದ್ದಾರೆ.
3ನೇ ಮಹಾಯುದ್ಧಕ್ಕೆ ಪ್ರೇರೇಪಣೆ..?
ಈಗಾಗಲೇ ಜಗತ್ತು ಇಬ್ಭಾಗವಾಗಿ ಹೋಗಿದೆ. ಒಂದು ಕಡೆ ಪ್ರಜಾಪ್ರಭುತ್ವದ ಹೆಸರಲ್ಲಿ ದೈತ್ಯ ಶ್ರೀಮಂತ ರಾಷ್ಟ್ರ ಬಣ ಒಗ್ಗೂಡಿದೆ. ಇನ್ನೊಂದು ಕಡೆ ಚೀನಾ ಸಾರಥ್ಯದಲ್ಲಿ ಮತ್ತೊಂದು ಬಣ ಎಲ್ಲಾ ಪರಿಸ್ಥಿತಿಗೂ ಸಿದ್ಧವಾಗಿದೆ. ಆದರೆ ಇದೇ ಹೊತ್ತಲ್ಲಿ ಬೆಂಕಿಗೆ ತುಪ್ಪ ಸುರಿಯುವಂತೆ ಮ್ಯಾನ್ಮಾರ್ನಲ್ಲಿ ಸೇನೆ ದಂಗೆ ಎದ್ದಿದೆ. ಇದರ ಹಿಂದೆ ಚೀನಾ ಕೈವಾಡ ಇದೆ ಅಂತಾ ಪ್ರಜಾಪ್ರಭುತ್ವವಾದಿ ರಾಷ್ಟ್ರಗಳು ಹಾಗೂ ಚಿಂತಕರು ಆರೋಪ ಮಾಡುತ್ತಿದ್ದಾರೆ. ಇದೀಗ ಮ್ಯಾನ್ಮಾರ್ ಸೇನೆ 38 ಜನರನ್ನು ಕೊಂದು ಹಾಕಿದೆ. ಕೆಲ ದಿನಗಳ ಹಿಂದೆ 18 ಜನರನ್ನು ಹತ್ಯೆಗೈದು ಅಟ್ಟಹಾಸ ಮೆರೆದಿತ್ತು. ಘಟನೆಯನ್ನ ಅಮೆರಿಕ ಸೇರಿದಂತೆ ವಿಶ್ವದ ಬಲಾಢ್ಯ ರಾಷ್ಟ್ರಗಳು ಖಂಡಿಸಿದ್ದು, ಮುಂದೆ ಇದು 3ನೇ ಮಹಾಯುದ್ಧದ ತಿರುವು ಪಡೆಯಬಹುದಾ ಎಂಬ ಆತಂಕ ಮನೆಮಾಡಿದೆ.
ಭಾರತದಲ್ಲಿ ಮ್ಯಾನ್ಮಾರ್ ನಿರಾಶ್ರಿತರ ಸಂಖ್ಯೆ ಹೆಚ್ಚಳ ನಿರೀಕ್ಷೆ
ಗಲ್ಲಿಗೂ ನುಗ್ಗಿದೆ ಮ್ಯಾನ್ಮಾರ್ ಸೇನೆ..!
ಸೇನಾ ಕ್ರಾಂತಿ ಪರ ಹಾಗೂ ವಿರುದ್ಧವಾಗಿ ಹೋರಾಟಗಳು ಭುಗಿಲೆದ್ದಿರುವುದು ಮ್ಯಾನ್ಮಾರ್ನ ತತ್ತರಿಸುವಂತೆ ಮಾಡಿದೆ. ಆದರೆ ಇದನ್ನ ನೋಡಿ ತಣ್ಣಗೆ ಕೂರೋಕೆ ಮ್ಯಾನ್ಮಾರ್ ಈಗ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉಳಿದಿಲ್ಲ. ಮೇಲಾಗಿ ಅಲ್ಲೊಂದು ಸರ್ಕಾರವೇ ಇಲ್ಲ. ಎಲ್ಲವನ್ನೂ ಸೇನಾಧಿಕಾರಿಗಳು ಬಿಗಿ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ. ಹೀಗಾಗಿ ಪ್ರತಿಭಟನೆ ಮತ್ತು ಹೋರಾಟ ಹತ್ತಿಕ್ಕಲು ಮ್ಯಾನ್ಮಾರ್ನ ಸೇನೆ ಗಲ್ಲಿ ಗಲ್ಲಿಗಳಿಗೂ ಎಂಟ್ರಿ ಕೊಟ್ಟಿದೆ. ಭಾರಿ ಪ್ರಮಾಣದ ಯುದ್ಧ ಪರಿಕರಗಳನ್ನು ತೋರಿಸಿ ಜನರನ್ನು ಬೆದರಿಸುವ ತಂತ್ರ ಅನುಸರಿಸುತ್ತಿದೆ. ಆದರೂ ಜನ ಭಯಪಡದೆ ಹೋರಾಟಕ್ಕೆ ಸಾಥ್ ನೀಡುತ್ತಿದ್ದಾರೆ.
ಚೀನಾ ಕೈವಾಡ ಸಾಧ್ಯವೇ ಇಲ್ಲ..!
ಮ್ಯಾನ್ಮಾರ್ ಸೇನಾ ದಂಗೆ ಸ್ವಯಂಪ್ರೇರಿತವಾಗಿದ್ದು, ಯಾರದ್ದೇ ಕೈವಾಡ ಇಲ್ಲ ಎನ್ನುತ್ತಿದ್ದಾರೆ ತಜ್ಞರು. ಸದ್ಯದ ಸ್ಥಿತಿಯಲ್ಲಿ ಚೀನಾ ಮ್ಯಾನ್ಮಾರ್ ವಿಚಾರವಾಗಿ ಮೂಗು ತೂರಿಸಲು ಸಾಧ್ಯವಿಲ್ಲ. ಈಗಾಗಲೇ ಚೀನಾ ವಿರುದ್ಧ ಅಕ್ಕಪಕ್ಕದ ರಾಷ್ಟ್ರಗಳು ಕೋಪಗೊಂಡಿವೆ. ಇಂತಹ ಸಂದರ್ಭದಲ್ಲಿ ಚೀನಾ ಮ್ಯಾನ್ಮಾರ್ ವಿಚಾರಕ್ಕೆ ಕೈಹಾಕುವ ಸಾಹಸ ಮಾಡುವುದಿಲ್ಲ ಎನ್ನುತ್ತಿದ್ದಾರೆ ತಜ್ಞರು. ಇದು ಆತಂರಿಕವಾಗಿ ಮೂಡಿದ ಅಸಮಾಧಾನದ ಫಲ. ಆದರೆ ಮ್ಯಾನ್ಮಾರ್ ಪ್ರಜೆಗಳಿಗೆ ತಪ್ಪು ಸಂದೇಶ ನೀಡಲಾಗುತ್ತಿದೆ ಎಂದು ತಜ್ಞರು ಅಭಿಪ್ರಾಯ ಹೊರಹಾಕಿದ್ದಾರೆ. ತನ್ನ ಬಗ್ಗೆ ಇಷ್ಟೆಲ್ಲಾ ಆರೋಪ ಕೇಳಿಬರುತ್ತಿದ್ದರೂ ಚೀನಾ ಮಾತ್ರ ಪ್ರತಿಕ್ರಿಯೆ ನೀಡಿಲ್ಲ.
ಮಿಲಿಟರಿ ಆಡಳಿತ ಶುರು..!
ಮ್ಯಾನ್ಮಾರ್ನಲ್ಲಿ 2020ರಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮ ನಡೆದಿದ್ದರೂ ಅದನ್ನ ತಡೆಯಲು ಚುನಾವಣಾ ಆಯೋಗ ವಿಫಲವಾಗಿದೆ ಎಂದು ಆರೋಪಿಸಲಾಗಿತ್ತು. ಈ ಕಾರಣಕ್ಕಾಗಿ ಮ್ಯಾನ್ಮಾರ್ ಮಿಲಿಟರಿ ತುರ್ತು ಪರಿಸ್ಥಿತಿ ಹೇರಿದೆ. ದೇಶದಲ್ಲಿ ಮಿಲಿಟರಿ 1 ವರ್ಷದವರೆಗೂ ತುರ್ತು ಪರಿಸ್ಥಿತಿ ಘೋಷಿಸಿ ಹಂಗಾಮಿ ಅಧ್ಯಕ್ಷರನ್ನೂ ನೇಮಿಸಿದೆ. ಮತ್ತೊಂದ್ಕಡೆ ದೇಶದ ಸಂವಹನ ಸಾಧನಗಳನ್ನೂ ಕಂಟ್ರೋಲ್ಗೆ ತೆಗೆದುಕೊಂಡಿದೆ ಸೇನೆ. ಫೋನ್ ಕಾಲ್ ಹೋಗುತ್ತಿಲ್ಲ, ಇಂಟರ್ನೆಟ್ ಸಂಪರ್ಕ ಕೂಡ ಬಂದ್ ಆಗಿದೆ. ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಪರಿಸ್ಥಿತಿ ಅತಿಸೂಕ್ಷ್ಮವಾಗಿದೆ.
ಚುನಾವಣೆಯಲ್ಲಿ ಅಕ್ರಮ ನಡೆದಿತ್ತಾ..?
ಮ್ಯಾನ್ಮಾರ್ನಲ್ಲಿ 2020ರ ನವೆಂಬರ್ನಲ್ಲಿ ಚುನಾವಣೆ ನಡೆದಿತ್ತು. 75 ವರ್ಷದ ಸೂಕಿ ನೇತೃತ್ವದಲ್ಲಿ ಅವರ ಪಕ್ಷ ಭರ್ಜರಿ ಗೆಲುವು ಸಾಧಿಸಿತ್ತು. ಚುನಾವಣೆಯಲ್ಲಿ ಮ್ಯಾನ್ಮಾರ್ ಸಂಸತ್ತಿನ 642 ಸ್ಥಾನಗಳ ಪೈಕಿ ಸೂಕಿ ನೇತೃತ್ವದ ಎನ್ಎಲ್ಡಿ ಪಕ್ಷ 396 ಸ್ಥಾನ ಪಡೆದಿತ್ತು. ಅಂದ ಹಾಗೆ ಪ್ರಜಾಪ್ರಭುತ್ವದ ಪರ ಗಟ್ಟಿಯಾಗಿ ನಿಂತು ಹೋರಾಟ ನಡೆಸಿದ್ದವರು ಆಂಗ್ ಸಾನ್ ಸೂಕಿ. ಮ್ಯಾನ್ಮಾರ್ನಲ್ಲಿ ಮಿಲಿಟರಿ ಆಡಳಿತ ವಿರುದ್ಧ ಸತತ ಹೋರಾಟ ನಡೆಸಿದ್ದ ಸೂಕಿಗೆ ಇದೀಗ ಹಿನ್ನಡೆಯಾಗಿದೆ. ಸೂಕಿ ಬಂಧನ ಹಲವು ಅನುಮಾನಗಳಿಗೂ ಕಾರಣವಾಗಿದೆ.