110 ರೈತರನ್ನು ಗುಂಡು ಹಾರಿಸಿ ಕೊಲೆ ಮಾಡಿದ ಪಾಪಿ ಉಗ್ರರು
ನೈಜೀರಿಯಾದಲ್ಲಿ ಬೊಕೊ ಹರಾಮಿಗಳು ಮತ್ತೆ ಬಾಲ ಬಿಚ್ಚಿದ್ದಾರೆ. ಈ ಬಾರಿ ಭತ್ತ ಕಟಾವು ಮಾಡುತ್ತಿದ್ದ ರೈತರನ್ನ ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ನೈಜೀರಿಯಾದಲ್ಲಿ ದಿನದಿಂದ ದಿನಕ್ಕೆ ಉಗ್ರರ ಉಪಟಳ ಹೆಚ್ಚುತ್ತಿದೆ. ಉತ್ತರ ಬೊರ್ನೊ ರಾಜ್ಯದ ರಾಜಧಾನಿ ಮೈಡುಗುರಿಯ ಗರಿನ್-ಕ್ವಾಶೆಬೆ ಗದ್ದೆಯಲ್ಲಿ ರೈತರು ಭತ್ತ ಕಟಾವು ಮಾಡುತ್ತಿದ್ದಾಗ ಉಗ್ರರು ಸುತ್ತುವರಿದು ಗುಂಡಿನ ದಾಳಿ ನಡೆಸಿದ್ದಾರೆ.
ನೈಜೀರಿಯಾದಲ್ಲಿ ಹಿಡಿತ ಸಾಧಿಸಲು ಬೊಕೊ ಹರಾಮ್ ಉಗ್ರರು ಎಂತಹ ಹೀನ ಕೃತ್ಯಕ್ಕೂ ಹಿಂಜರಿಯುತ್ತಿಲ್ಲ. ಆದರೆ ಇವರನ್ನು ನಿಯಂತ್ರಿಸಲು ನೈಜೀರಿಯಾ ಸರ್ಕಾರ ಹಾಗೂ ಸೇನೆಗೆ ಸಾಧ್ಯವಾಗುತ್ತಿಲ್ಲ. ಸ್ಥಳೀಯ ಯುವಕರನ್ನು ಬ್ರೈನ್ ವಾಶ್ ಮಾಡಿ ಉಗ್ರ ಸಂಘಟನೆಗಳಿಗೆ ಸೇರಿಸುವ ಕಿರಾತಕರು, ನಂತರ ಅವರಿಂದಲೇ ಮುಗ್ಧರನ್ನು ಹತ್ಯೆ ಮಾಡುತ್ತಿದ್ದಾರೆ.
ಈ ರೀತಿ ಬೊಕೊ ಹರಾಮಿ ದಾಳಿಗೆ ಲಕ್ಷಾಂತರ ಹೆಣಗಳು ಬಿದ್ದಿವೆ. ಹಲವು ವರ್ಷಗಳಿಂದ ಬೊಕೊ ಹರಾಮ್ ಉಗ್ರರು ಹಾಗೂ ನೈಜೀರಿಯಾ ಪಡೆಗಳ ನಡುವೆ ಆಂತರಿಕ ಯುದ್ಧ ನಡೆಯುತ್ತಲೇ ಇದೆ. ಆದರೆ ಉಗ್ರರನ್ನು ಹೆಡೆಮುರಿ ಕಟ್ಟಲು ನೈಜೀರಿಯಾ ಸೇನೆಗೆ ಸಾಧ್ಯವಾಗುತ್ತಿಲ್ಲ.
ಬೈಕ್ನಲ್ಲಿ ಎಂಟ್ರಿ, ದಿಢೀರ್ ಫೈರಿಂಗ್
ಬೊಕೊ ಹರಾಮಿಗಳು ರೈತರನ್ನು ಕೊಂದು ಹಾಕಿದ ದೃಶ್ಯ ಅದೆಷ್ಟು ಭಯಾನಕವಾಗಿತ್ತು ಎಂದರೆ, ಗದ್ದೆಗಳಲ್ಲಿ ಬೆವರು ಸುರಿಸಿ ದುಡಿಯುತ್ತಿದ್ದ ಶ್ರಮಜೀವಿಗಳ ದೇಹವನ್ನ ಛಿದ್ರ ಛಿದ್ರ ಮಾಡಿಬಿಟ್ಟಿದ್ದಾರೆ. ಹತ್ತಾರು ಬೈಕ್ಗಳಲ್ಲಿ ದಿಢೀರ್ ಗದ್ದೆಗಳಿಗೆ ಎಂಟ್ರಿಕೊಟ್ಟ ರಾಕ್ಷಸ ಉಗ್ರರು, ರೈತರ ಮೇಲೆ ಇದ್ದಕ್ಕಿದ್ದಂತೆ ಫೈರಿಂಗ್ ಮಾಡಿದ್ದಾರೆ. ಅಲ್ಲಿ ಏನಾಗುತ್ತಿದೆ ಎಂಬುದು ತಿಳಿಯುವ ಮೊದಲೇ ನೂರಾರು ರೈತರ ಪ್ರಾಣಪಕ್ಷಿ ಹಾರಿಹೋಗಿದೆ. ಮೃತಪಟ್ಟಿರುವ ರೈತರನ್ನು ಹೊರತುಪಡಿಸಿ ಇನ್ನೂ ಹಲವರ ಸ್ಥಿತಿ ಚಿಂತಾಜನಕವಾಗಿದ್ದು ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಹೀಗಾಗಿ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ. ಹತ್ಯೆ ಮಾಡುವಾಗ ಮಹಿಳೆಯರು, ಮಕ್ಕಳ ಮುಖ ನೋಡದ ಬೊಕೊ ಹರಾಮಿಗಳು ಎಲ್ಲರನ್ನೂ ಎಳೆದಾಡಿ ಕೊಲೆ ಮಾಡಿದ್ದಾರೆ.
ರೈತರ ಮೇಲೆ ಸೇಡು ಏಕೆ..?
ಉಗ್ರರು ಹೀಗೆ ರೈತರ ಮೇಲೆ ದಿಢೀರ್ ದಾಳಿ ನಡೆಸಲು ಕಾರಣವೇನು ಎಂಬುದನ್ನ ಸ್ಥಳೀಯ ಜನಪ್ರತಿನಿಧಿ ಒಬ್ಬರು ಬಿಡಿಸಿ ಹೇಳಿದ್ದಾರೆ. ಅಷ್ಟಕ್ಕೂ ಈ ಬೊಕೊ ಹರಾಮಿ ಗುಂಪಿಗೆ ಸೇರಿದ ಉಗ್ರನನ್ನು ಸ್ಥಳೀಯ ರೈತರು ಸೇನೆಗೆ ಒಪ್ಪಿಸಿದ್ದರಂತೆ. ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ಬೊಕೊ ಹರಾಮ್ ರಾಕ್ಷಸರು ದಿಢೀರ್ ಅಂತಾ ದಾಳಿ ನಡೆಸಿದ್ದಾರೆ. ರೈತರನ್ನ ಅವರ ಗದ್ದೆಯಲ್ಲೇ ಅಟ್ಟಾಡಿಸಿಕೊಂಡು ಗುಂಡಿಟ್ಟು ಭೀಕರವಾಗಿ ಕೊಲೆಗೈದಿದ್ದಾರೆ. ಏನೂ ಅರಿಯದ ಮುಗ್ಧ ಮಕ್ಕಳು ಕೂಡ ಪಾಪಿ ಉಗ್ರರ ಕೃತ್ಯಕ್ಕೆ ಬಲಿಯಾಗಿದ್ದಾರೆ.
Recommended Video
ಉಗ್ರರನ್ನು ಕಂಡು ಓಡಿದ ಸ್ಥಳೀಯರು
ಗದ್ದೆಗಳಲ್ಲಿ ರೈತರನ್ನು ಹತ್ಯೆ ಮಾಡುವುದಕ್ಕೂ ಮೊದಲು ಉಗ್ರರು ಗನ್ ಹಿಡಿದು ಬರುತ್ತಿರುವುದನ್ನು ನೋಡಿದ ಸ್ಥಳೀಯರು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಹೀಗಾಗಿ ಭಾರಿ ಪ್ರಮಾಣದ ಜೀವಹಾನಿ ತಪ್ಪಿದೆ. ಹೀಗೆ ನೋಡ ನೋಡುತ್ತಿದ್ದಂತೆ ಭತ್ತದ ಗದ್ದೆಗೆ ನುಗ್ಗಿ ನೇರಾನೇರ ರೈತರನ್ನ ಸಾಮೂಹಿಕವಾಗಿ ಕೊಲೆ ಮಾಡಿ ಅಲ್ಲಿಂದ ಉಗ್ರರು ಕಾಲ್ಕಿತ್ತಿದ್ದಾರೆ. ನೂರಾರು ಹೆಣಗಳು ಬೀಳುತ್ತಿದ್ದಂತೆ ಕೇಕೆ ಹಾಕಿರುವ ರಾಕ್ಷಸರು, ರಕ್ತದ ಮಡುವಿನಲ್ಲೇ ನಡೆದು ಸಾಗಿದ್ದಾರೆ. ಇಂತಹದ್ದೊಂದು ಭಯಾನಕ ಘಟನೆಯನ್ನು ನಮ್ಮ ಬದುಕಿನಲ್ಲೇ ಕಂಡಿಲ್ಲ ಎಂದು ಸ್ಥಳೀಯರು ಘಟನೆಯ ಕ್ರೌರ್ಯವನ್ನ ಬಿಡಿಸಿ ಹೇಳಿದ್ದಾರೆ. ನೈಜೀರಿಯಾ ಸರ್ಕಾರ ಉಗ್ರರ ಈ ಕೃತ್ಯವನ್ನ ಗಂಭೀರವಾಗಿ ಪರಿಗಣಿಸಿದ್ದು, ರೈತರ ಮೇಲಿನ ದಾಳಿಯಲ್ಲಿ ಭಾಗಿಯಾಗಿದ್ದ ರಾಕ್ಷಸರ ತಲೆ ತೆಗೆಯಲು ಆಜ್ಞೆ ಹೊರಡಿಸಿದೆ.