ಇಮ್ರಾನ್ ಖಾನ್ ಗೆ ಅಜರುದ್ದೀನ್ ನೀಡಿದ ಎಚ್ಚರಿಕೆ ಸಂದೇಶ
ಹೈದರಾಬಾದ್, ಜುಲೈ 29: ಪಾಕಿಸ್ತಾನದ ಮಾಜಿ ಕ್ರಿಕೆಟ್ ನಾಯಕ ಇಮ್ರಾನ್ ಖಾನ್ ಅವರು ಪಾಕಿಸ್ತಾನ ಮುಂದಿನ ಪ್ರಧಾನಿಯಾಗುವ ಕಾಲ ಸನ್ನಿಹಿತವಾಗಿದೆ.
ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರಿಕ್-ಇ-ಇನ್ಸಾಫ್(ಪಿಟಿಐ) ಪಕ್ಷ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ ಹೊಂದಿಸುವ ಯತ್ನದಲ್ಲಿದೆ. ಪಾಕಿಸ್ತಾನದ ಸಂಭಾವ್ಯ ಪ್ರಧಾನಿಯಾಗಿರುವ ಇಮ್ರಾನ್ ಅವರಿಗೆ ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಕಾಂಗ್ರೆಸ್ ಮುಖಂಡ ಮೊಹಮ್ಮದ್ ಅಜರುದ್ದೀನ್ ಅವರು ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ.
ಖಾನ್ ಚುನಾವಣೆಯಲ್ಲೇ ಯಶಸ್ಸು ಸಾಧಿಸುತ್ತಿದ್ದಂತೆಯೇ ಕ್ರಿಕೆಟ್ ಲೋಕದ ಅನೇಕ ದಿಗ್ಗಜರು ಅಭಿನಂದನೆ ಸಲ್ಲಿಸಿ ತಮ್ಮದೇ ಸಲಹೆಗಳನ್ನು ನೀಡ ತೊಡಗಿದ್ದಾರೆ. ಇದೀಗ ಖಾನ್ ಸಮಕಾಲೀನರಾದ ಅಝರುದ್ದೀನ್ ರಾಷ್ಟ್ರ ಮತ್ತು ಕ್ರಿಕೆಟ್ ತಂಡವನ್ನು ಮುನ್ನಡೆಸುವುದರಲ್ಲಿ ಬಹುದೊಡ್ಡ ವ್ಯತ್ಯಾಸವಿದೆ ಎಂದು ಸಲಹೆ ನೀಡಿದ್ದಾರೆ.
ಪಾಕ್ ಕ್ರಿಕೆಟ್ ತಂಡದ ನಾಯಕರಾಗಿ ಖಾನ್ ಅನೇಕ ಬಾರಿ ಮೈದಾನದಲ್ಲಿ ಧನಾತ್ಮಕ, ದಿಟ್ಟ ಹಾಗೂ ವೈಯ್ಯಕ್ತಿಕ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಪಾಕ್ ಪ್ರಧಾನಿಯಾದ ನಂತರ ಅಂತಹ ನಿರ್ಧಾರಗಳನ್ನು ಮಾತ್ರ ಖಾನ್ ತೆಗೆದುಕೊಳ್ಳಬೇಕು ಎಂದು ಅಝರುದ್ದೀನ್ ಅಭಿಪ್ರಾಯಪಟ್ಟಿದ್ದಾರೆ.
ರಾಷ್ಟ್ರ ಮುನ್ನಡೆ ಹಾಗೂ ಕ್ರಿಕೆಟ್ ತಂಡ ಮುನ್ನಡೆ ಎಂಬುದು ಎರಡು ವಿಭಿನ್ನ ವಿಷಯಗಳು. ಖಾನ್ ಏನು ಮಾಡುತ್ತಾರೆ ಎಂಬುದನ್ನು ನಾವು ನೋಡಬೇಕಾಗಿದೆ ಎಂದು ಹೇಳಿದ್ದಾರೆ.
ಖಾನ್ ಪ್ರಧಾನಿಯಾಗಿ ಇಂಡೋ-ಪಾಕ್ ಸಂಬಂಧದ ಬಗ್ಗೆ ಮಾತನಾಡಲು ಅವಕಾಶ ಸಿಕ್ಕರೆ, ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಪಾಕ್ನೊಳಗೆ ಅನೇಕ ಸಮಸ್ಯೆಗಳಿವೆ. ಮೊದಲು ಅದನ್ನು ತಿಳಿದುಕೊಂಡು ಬಗೆಹರಿಸಲಿ. ಆನಂತರ ಇತರೆ ಸಮಸ್ಯೆಗಳ ಕಡೆ ನೋಡಲಿ ಎಂಬ ಮಾತನ್ನಾಡಿದ್ದಾರೆ.
ಕ್ರೀಡಾ ಲೋಕದಲ್ಲಿ ಉಭಯ ನಾಯಕರು ತಮ್ಮ ತಂಡಗಳನ್ನು ಅನೇಕ ಸಂದರ್ಭಗಳಲ್ಲಿ ಮುನ್ನಡೆಸಿದ್ದಾರೆ. 1992ರಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ತಂಡವನ್ನು ಭಾರತ ಬಗ್ಗುಬಡಿತ್ತು. ಆದರೆ, ಪಾಕಿಸ್ತಾನವು ಕಪ್ ಗೆಲ್ಲಲು ಇಮ್ರಾನ್ ನೆರವಾದರು. ಈ ವೇಳೆ ಈ ಇಬ್ಬರು ದಿಗ್ಗಜರು ತಮ್ಮ ತಂಡಗಳನ್ನು ಮುನ್ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು. (ಪಿಟಿಐ)