ಝಾಕೀರ್ ನಾಯ್ಕ್ ಗಡಿಪಾರಿಗೆ ಮೋದಿ ಕೇಳಿಯೇ ಇಲ್ಲ: ಮಲೇಷ್ಯಾ ಪ್ರಧಾನಿ
ಕ್ವಾಲಾಲಂಪುರ, ಸೆಪ್ಟೆಂಬರ್ 17: ವಿವಾದಿತ ಇಸ್ಲಾಂ ಧರ್ಮ ಪ್ರಚಾರ ಝಾಕೀರ್ ನಾಯ್ಕ್ ನನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತು ಭಾರತದ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ ಎಂಬ ವರದಿಗಳನ್ನು ಮಲೇಷ್ಯಾ ಪ್ರಧಾನಿ ಮಹತಿರ್ ಮೊಹಮ್ಮದ್ ಮಂಗಳವಾರ ತಳ್ಳಿಹಾಕಿದ್ದಾರೆ.
'ಹೆಚ್ಚಿನ ದೇಶಗಳೇನೂ ಆತನ ಗಡಿಪಾರಿಗೆ ಕೇಳಿಕೊಂಡಿಲ್ಲ. ಭಾರತ ಈ ಬಗ್ಗೆ ಒತ್ತಾಯ ಮಾಡಿಲ್ಲ. ನಾನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಆ ವ್ಯಕ್ತಿ ಭಾರತಕ್ಕೆ ಬೇಕಾಗಿದ್ದಾನೆ ಎಂದು ನನಗೆ ತಿಳಿಸಿಲ್ಲ. ಈ ವ್ಯಕ್ತಿ ಭಾರತಕ್ಕೆ ತೊಂದರೆ ನೀಡಿರಬಹುದು' ಎಂದು ಮಹತಿರ್ ಅವರು ರೇಡಿಯೋ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಜಾಕೀರ್ ನಾಯ್ಕ್ ಗಡಿಪಾರಿಗೆ ಮಲೇಷ್ಯಾ ನಕಾರ, ಭಾರತಕ್ಕೆ ಹಿನ್ನಡೆ
ಈ ತಿಂಗಳ ಆರಂಭದಲ್ಲಿ ರಷ್ಯಾದ ಫಾರ್ ಈಸ್ಟರ್ನ್ ನಗರದಲ್ಲಿ ನಡೆದ ಐದನೇ ಈಸ್ಟ್ ಎಕನಾಮಿಕ್ ಫೋರಂನ ಸಂದರ್ಭದಲ್ಲಿ ಮೋದಿ ಅವರು ಮೊಹಮ್ಮದ್ ಮಹತಿರ್ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಇಬ್ಬರೂ ನಾಯಕರು ಝಾಕೀರ್ ನಾಯ್ಕ್ನ ಗಡಿಪಾರಿನ ಸಂಬಂಧ ಮಾತುಕತೆ ನಡೆಸಿದ್ದಾರೆ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ತಿಳಿಸಿದ್ದರು.
'ಝಾಕೀರ್ ನಾಯ್ಕ್ನ ಗಡಿಪಾರಿನ ಬಗ್ಗೆ ಪ್ರಧಾನಿ ಮೋದಿ ಅವರು ಪ್ರಸ್ತಾಪಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ಕಚೇರಿಗಳು ಸಂಪರ್ಕದಲ್ಲಿ ಇರುವಂತೆ ಮತ್ತು ಇದು ನಮಗೆ ಮಹತ್ವದ ವಿಚಾರವಾಗಿದೆ ಎಂಬ ಬಗ್ಗೆ ಉಭಯ ದೇಶಗಳು ನಿರ್ಧರಿಸಿವೆ' ಎಂದು ಹೇಳಿದ್ದರು.
ಹಿಂದಿನ ಸರ್ಕಾರ ಝಾಕೀರ್ ನಾಯ್ಕ್ಗೆ ಕಾಯಂ ಪೌರತ್ವ ನೀಡಿತ್ತು. ಈಗ ಆತನನ್ನು ಒಂದು ಸ್ಥಳಕ್ಕೆ ಕಳುಹಿಸಲು ಸರ್ಕಾರ ಪ್ರಯತ್ನ ನಡೆಸುತ್ತಿದೆ. ಮಲೇಷ್ಯಾದಲ್ಲಿ ಸಾರ್ವಜನಿಕವಾಗಿ ಮಾತನಾಡಲು ಆತನಿಗೆ ಅವಕಾಶ ನೀಡುವುದಿಲ್ಲ ಎಂದು ಮಹತಿರ್ ತಿಳಿಸಿದ್ದಾರೆ.
ಮನಿಲಾಂಡ್ರಿಂಗ್ ಕೇಸ್ : ಜಾಕೀರ್ ನಾಯ್ಕ್ ವಿರುದ್ಧ ತನಿಖೆ ತೀವ್ರ
'ಆತ ನಮ್ಮ ದೇಶದ ಪ್ರಜೆಯಲ್ಲ. ಆತನಿಗೆ ಪೌರತ್ವ ನೀಡಲಾಗಿದೆ. ಹಿಂದಿನ ಸರ್ಕಾರ ಆತನಿಗೆ ಈ ಮಾನ್ಯತೆ ನೀಡಿದೆ. ಕಾಯಂ ಪೌರತ್ವ ನೀಡಿದೆ ಎಂಬಮಾತ್ರಕ್ಕೆ ಆತ ಈ ದೇಶದ ವ್ಯವಸ್ಥೆ ಮತ್ತು ರಾಜಕೀಯದ ಕುರಿತು ಮಾತನಾಡಲು ಅವಕಾಶವಿದೆ ಎಂದಲ್ಲ. ಆತ ಅದನ್ನು ಉಲ್ಲಂಘನೆ ಮಾಡಿದ್ದಾನೆ. ಆತನಿಗೆ ಮಾತನಾಡಲು ಅವಕಾಶ ನೀಡುವುದಿಲ್ಲ' ಎಂದು ಹೇಳಿದ್ದಾರೆ.
ಮುಂಬೈನಲ್ಲಿ ಜನಿಸಿದ ಝಾಕೀರ್ ನಾಯ್ಕ್, ಇಸ್ಲಾಂ ಧರ್ಮದ ಪ್ರವಚನದ ವೇಳೆ ಉಗ್ರವಾದ ಹಾಗೂ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ವಿವಾದ ಸೃಷ್ಟಿಸಿದ್ದ. ಭಯೋತ್ಪಾದನೆಗೆ ಕುಮ್ಮಕ್ಕು ನೀಡುವಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ 'ಪೀಸ್ ಟಿವಿ'ಯನ್ನು ಸ್ಥಾಪಿಸಿದ್ದ ಆತನ ಮೇಲೆ ಭಯೋತ್ಪಾದನೆಯ ಗಂಭೀರ ಪ್ರಕರಣಗಳಿವೆ.
ಇಸ್ಲಾಂ ಧರ್ಮಪ್ರಚಾರಕ ಜಾಕೀರ್ ನಾಯ್ಕ್ ಗೆ ಸೇರಿದ ಆಸ್ತಿ ಮತ್ತೊಮ್ಮೆ ವಶ
ಭಾರತದಿಂದ ಪರಾರಿಯಾಗಿರುವ ಆತ, 2017ರಿಂದ ಮಲೇಷ್ಯಾದಲ್ಲಿ ನೆಲೆಸಿದ್ದಾನೆ. ಅಲ್ಲಿಯೂ ಆತ ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದನ್ನು ಮುಂದುವರಿಸಿದ್ದ. ಆಗಸ್ಟ್ 3ರಂದು ಮಾತನಾಡಿದ್ದ ನಾಯ್ಕ್, 'ಭಾರತದಲ್ಲಿನ ಅಲ್ಪಸಂಖ್ಯಾತ ಮುಸ್ಲಿಮರಿಗಿಂತ 100 ಪಟ್ಟು ಹಕ್ಕುಗಳನ್ನು ಮಲೇಷ್ಯಾದ ಹಿಂದೂಗಳು ಪಡೆಯುತ್ತಿದ್ದಾರೆ. ಆದರೂ ಮಲೇಷ್ಯಾ ಪ್ರಧಾನಿಗಿಂತ ಭಾರತದ ಪ್ರಧಾನಿಯನ್ನು ಬೆಂಬಲಿಸುತ್ತಾರೆ' ಎಂದು ಹೇಳಿದ್ದ.
ಬಳಿಕ ರಾಷ್ಟ್ರೀಯ ಭದ್ರತೆಯ ಹಿತಾಸಕ್ತಿಯಿಂದ ಆತ ಯಾವುದೇ ರಾಜ್ಯದಲ್ಲಿಯೂ ಭಾಷಣ ಮಾಡದಂತೆ ನಿಷೇಧ ಹೇರಲಾಗಿದೆ.