ನಾಪತ್ತೆಯಾಗಿದ್ದ ನೇಪಾಳ ವಿಮಾನದ ಅವಶೇಷಗಳು ಪತ್ತೆ
ಕಠ್ಮಂಡು ಮೇ 29: ನಾಲ್ವರು ಭಾರತೀಯರು ಸೇರಿದಂತೆ 22 ಮಂದಿ ಪ್ರಯಾಣಿಕರಿದ್ದ ನಾಪತ್ತೆಯಾಗಿದ್ದ ನೇಪಾಳದ ಪ್ರಯಾಣಿಕ ವಿಮಾನದ ಅವಶೇಷಗಳು ಮುಸ್ತಾಂಗ್ ಜಿಲ್ಲೆಯ ಸನೋಸ್ವೇರ್ ನಲ್ಲಿ ಪತ್ತೆಯಾಗಿದೆ ಎಂದು ನೇಪಾಳ ಸೇನೆಯ ವಕ್ತಾರ ಬ್ರಿಗೇಡಿಯರ್ ಜನರಲ್ ನಾರಾಯಣ್ ಸಿಲ್ವಾಲ್ ಸೋಮವಾರ ಟ್ವೀಟ್ ಮಾಡಿದ್ದಾರೆ.
ನಾಲ್ವರು ಮುಂಬೈ ನಿವಾಸಿಗಳು ಸೇರಿದಂತೆ 22 ಮಂದಿ ಪ್ರಯಾಣಿಕರ ಕುರುಹುಗಳು ಇನ್ನೂ ಪತ್ತೆಯಾಗಿಲ್ಲ. ಇವರಿಗಾಗಿ ನೇಪಾಳ ಸೇನೆ ಶೋಧ ಕಾರ್ಯಾಚರಣೆ ಕೈಗೊಂಡಿದೆ. ವಿಮಾನವು ಭಾನುವಾರ ನೇಪಾಳದ ಪ್ರವಾಸಿ ತಾಣ ಪೋಖರಾ ನಗರದಿಂದ ಜೋಮ್ ಸಮ್ ನಗರಕ್ಕೆ ಹೊರಟಿತ್ತು.
ನಾಪತ್ತೆಯಾಗಿದ್ದ ನೇಪಾಳ ತಾರಾ ಏರ್ ಸಂಸ್ಥೆ ವಿಮಾನ ಪತ್ತೆ!
"ಲೆಫ್ಟಿನೆಂಟ್ ಮಂಗಲ್ ಶ್ರೇಷ್ಠ, ಸ್ಥಳೀಯ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಗೈಡ್ ಗಳು ಈಗಾಗಲೇ ವಿಮಾನದ ಅವಶೇಷ ಪತ್ತೆಯಾದ ಸ್ಥಳವನ್ನು ತಲುಪಿದ್ದಾರೆ. ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ರಕ್ಷಣಾ ತಂಡದ ಸದಸ್ಯರು ಚಿಕ್ಕ ಹೆಲಿಕಾಪ್ಟರುಗಳ ಮೂಲಕ ಸ್ಥಳಕ್ಕೆ ತಲುಪಲು ಪ್ರಯತ್ನ ನಡೆಸಿದ್ದಾರೆ. ಸ್ಥಳಕ್ಕೆ ತಲುಪಸಲು ಸಾಧ್ಯವಿರುವ ಎಲ್ಲಾ ವಿಧಾನಗಳನ್ನು ಪರಿಗಣಿಸಲಾಗುತ್ತಿದೆ,'' ಎಂದು ಬ್ರಿಗೇಡಿಯರ್ ಜನರಲ್ ನಾರಾಯಣ್ ಸಿಲ್ವಾಲ್ ಟ್ವೀಟ್ ಮಾಡಿದ್ದಾರೆ.
"ರಕ್ಷಣಾ ಕಾರ್ಯಾಚರಣೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಠ್ಮಂಡು ವಿಮಾನ ನಿಲ್ದಾಣದಲ್ಲಿರುವ ಪಾರುಗಾಣಿಕಾ ಸಮನ್ವಯ ಕೇಂದ್ರದಿಂದ(ಆರ್ ಸಿಸಿ) ಪಡೆಯಬಹುದು. ತುರ್ತು ಸಹಾಯವಾಣಿಗೆ ಸಂಪರ್ಕಿಸಿ: 01-4113000,'' ಎಂದು ಅವರು ಮಾಹಿತಿ ನೀಡಿದ್ದಾರೆ.
Crash site: Sanosware, Thasang-2, Mustang pic.twitter.com/OcN93N1Qyb
— NASpokesperson (@NaSpokesperson) May 30, 2022
ಮೌಂಟ್ ಧೌಲಗಿರಿ ಕಡೆಗೆ ವಿಮಾನ ಪ್ರಯಾಣ
ಪೋಖರಾ ನಗರದ ವಿಮಾನ ನಿಲ್ದಾಣದಿಂದ ತಾರಾ ಏರ್ ಸಂಸ್ಥೆಗೆ ಸೇರಿದ 9ಎನ್-ಎಇಟಿ ವಿಮಾನವು ಭಾನುವಾರ ಬೆಳಗ್ಗೆ 9.50ಕ್ಕೆ ಟೇಕಾಫ್ ಆಯಿತು. ವಿಮಾನವು ಎರಡು ಎಂಜಿನ್ಗಳನ್ನು ಹೊಂದಿದೆ. ನಂತರ ಕಣಿವೆಗಳಿಂದ ಕೂಡಿದ ಮುಸ್ತಾಂಗ್ ಪ್ರದೇಶದಲ್ಲಿ ವಿಮಾನ ಹಾರಾಟ ನಡೆಸುತ್ತಿದ್ದ ಸಂದರ್ಭದಲ್ಲೇ ಸಂಪರ್ಕ ಕಡಿತಗೊಂಡಿದೆ. ವಿಮಾನ ಟೇಕ್ ಆಫ್ ಆದ 15 ನಿಮಿಷದಲ್ಲೇ ನಿಯಂತ್ರಣಾ ಕೊಠಡಿಯೊಂದಿಗೆ ಸಂಪರ್ಕ ಕಡಿತಗೊಂಡಿದೆ.
"ವಿಮಾನವು ಮುಸ್ತಾಂಗ್ ಜಿಲ್ಲೆಯ ಜೋಮ್ ಸಮ್ ನ ಆಕಾಶದಲ್ಲಿ ಕಾಣಿಸಿಕೊಂಡಿದೆ. ನಂತರ ಅದು ಮೌಂಟ್ ಧೌಲಗಿರಿ ಕಡೆಗೆ ಹೊರಟಿದೆ. ಬಳಿಕ ವಿಮಾನವು ಸಂಪರ್ಕಕ್ಕೆ ಸಿಗಲಿಲ್ಲ,'' ಎಂದು ಮುಸ್ತಾಂಗ್ ನ ಮುಖ್ಯ ಜಿಲ್ಲಾಧಿಕಾರಿ ನೇತ್ರಾ ಪ್ರಸಾದ್ ಶರ್ಮಾ ತಿಳಿಸಿದ್ದಾರೆ.
Breaking; ನೇಪಾಳದಲ್ಲಿ 19 ಜನರಿದ್ದ ವಿಮಾನ ನಾಪತ್ತೆ
ಎರಡು ಖಾಸಗಿ ಹೆಲಿಕಾಪ್ಟರುಗಳ ನಿಯೋಜನೆ
ಮುಂಬೈನ ಥಾಣೆಯ ನಿವಾಸಿಗಳಾದ ಅಶೋಕ್ ತ್ರಿಪಾಠಿ, ಧನುಶ್ ತ್ರಿಪಾಠಿ, ರಿತಿಕಾ ತ್ರಿಪಾಠಿ ಮತ್ತು ವೈಭವಿ ತ್ರಿಪಾಠಿ ಸೇರಿದಂತೆ ಒಂದೇ ಕುಟುಂಬದ ನಾಲ್ವರು ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಅಲ್ಲದೇ ಇಬ್ಬರು ಜರ್ಮನ್ ಪ್ರಜೆಗಳು ಮತ್ತು 13 ಮಂದಿ ನೇಪಾಳಿ ಪ್ರಯಾಣಿಕರು ಹಾಗೂ ಮೂವರು ನೇಪಾಳಿ ವಿಮಾನ ಸಿಬ್ಬಂದಿ ವಿಮಾನದಲ್ಲಿದ್ದರು.
ಶೋಧ ಕಾರ್ಯಾಚರಣೆಗಾಗಿ ನೇಪಾಳ ಗೃಹ ಸಚಿವಾಲಯವು ಎರಡು ಖಾಸಗಿ ಹೆಲಿಕಾಪ್ಟರುಗಳನ್ನು ನಿಯೋಜಿಸಿದೆ. ಮೌಂಟ್ ಧೌಲಗಿರಿ ಪ್ರದೇಶದಲ್ಲಿ ಭದ್ರತಾ ಪಡೆಗಳು, ಗಸ್ತು ಪಡೆ ಮತ್ತು ಸ್ಥಳೀಯರು ಶೋಧ ನಡೆಸುತ್ತಿದ್ದಾರೆ ಎಂದು ಸ್ಥಳೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಭಾರತೀಯ ರಾಯಭಾರ ಕಚೇರಿಯ ಸಹಾಯವಾಣಿ
"ನಾಲ್ವರು ಭಾರತೀಯರು ಸೇರಿದಂತೆ 22 ಮಂದಿ ಇದ್ದ ನೇಪಾಳದ ತಾರಾ ಏರ್ ವಿಮಾನ ಸಂಸ್ಥೆಗೆ ಸೇರಿದ ವಿಮಾನವು ಭಾನುವಾರ ಬೆಳಗ್ಗೆ 9.55 ಕ್ಕೆ ಟೇಕ್ ಆಫ್ ಆಗಿದೆ. ಆದರೆ ಕೆಲವೇ ನಿಮಿಷಗಳಲ್ಲಿ ಸಂಪರ್ಕ ಕಡಿತಗೊಂಡಿದೆ. ಪತ್ತೆ ಕಾರ್ಯ ಹಾಗೂ ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ. ರಾಯಭಾರ ಕಚೇರಿಯು ವಿಮಾನದಲ್ಲಿದ್ದ ಭಾರತೀಯ ಕುಟುಂಬದ ಸಂಪರ್ಕದಲ್ಲಿದೆ. ತುರ್ತು ಕರೆಗಾಗಿ ಸಂಪರ್ಕಿಸಿ: 977-9851107021,'' ಎಂದು ನೇಪಾಳದ ಭಾರತೀಯ ರಾಯಭಾರ ಕಚೇರಿಯು ಟ್ವೀಟ್ ಮಾಡಿದೆ.
ವಿಮಾನ ಅಪಘಾತಗಳ ಸಂಖ್ಯೆ ಅಧಿಕ
ಮೌಂಟ್ ಎವರೆಸ್ಟ್ ಸೇರಿದಂತೆ ವಿಶ್ವದ 14 ಅತಿ ಎತ್ತರದ ಪರ್ವತಗಳ ಪೈಕಿ ಎಂಟು ಪರ್ವತಗಳು ನೇಪಾಳದಲ್ಲಿದೆ. ಹೀಗಾಗಿ ವಿಮಾನ ಅಪಘಾತಗಳ ಸಂಖ್ಯೆ ಕೂಡ ಇಲ್ಲಿ ಅಧಿಕವಾಗಿದೆ. 2016ರಲ್ಲಿ ಇದೇ ಮಾರ್ಗ, ಇದೇ ಏರ್ ಲೈನ್ ಪೋಖರಾ-ಜೋಮ್ ಸಮ್ ನಡುವೆ ಸಂಚರಿಸುತ್ತಿದ್ದ ತಾರಾ ಏರ್ ಗೆ ಸೇರಿದ ವಿಮಾನ ಪತನಗೊಂಡು ಅದರಲ್ಲಿದ್ದ 23 ಪ್ರಯಾಣಿಕರು ಮೃತಪಟ್ಟಿದ್ದರು.
2018 ರ ಮಾರ್ಚ್ ನಲ್ಲಿ ಕಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕ-ಬಾಂಗ್ಲಾ ವಿಮಾನ ಅಪಘಾತ ಸಂಭವಿಸಿ, ಅದರಲ್ಲಿದ್ದ 51 ಪ್ರಯಾಣಿಕರು ಸಾವನ್ನಪ್ಪಿದರು.
Recommended Video