ತಾಲಿಬಾನ್ ಜೊತೆ ಮಾತುಕತೆ ವಿಫಲವಾದರೆ ಭಾರತದ ಮಿಲಿಟರಿ ನೆರವು ಕೇಳಬಹುದು: ಅಫ್ಘಾನಿಸ್ತಾನ
ನವದೆಹಲಿ, ಜು.14: ಅಮೆರಿಕದ ಸೈನ್ಯವು ಅಫ್ಘಾನಿಸ್ತಾನದಿಂದ ತನ್ನ ಹಿಂಪಡೆಯುತ್ತಿದೆ. ಏತನ್ಮಧ್ಯೆ ತಾಲಿಬಾನ್ ಜೊತೆಗಿನ ಮಾತುಕತೆ ವಿಫಲವಾದರೆ ಅಫ್ಘಾನಿಸ್ತಾನ ಸರ್ಕಾರ ಮುಂದಿನ ದಿನಗಳಲ್ಲಿ ಭಾರತದ ಮಿಲಿಟರಿ ನೆರವು ಕೇಳಬಹುದು ಎಂದು ದೇಶದ ರಾಯಭಾರಿ ಭಾರತಕ್ಕೆ ಹೇಳಿದರು.
Recommended Video
ಆದರೆ ಇದೇ ವೇಳೆ "ಈ ನೆರವು ಸೈನ್ಯವನ್ನು ಕಳುಹಿಸಿ ಎಂದು ಕೋರುವುದಲ್ಲ. ಬದಲಾಗಿ ತರಬೇತಿ ಮತ್ತು ತಾಂತ್ರಿಕ ನೆರವಿನಂತಹ ಕ್ಷೇತ್ರಗಳಲ್ಲಿರಬಹುದು," ಎಂದು ಸ್ಪಷ್ಟಪಡಿಸಿದರು. ಏಪ್ರಿಲ್ ಮಧ್ಯದಿಂದ, ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅಫ್ಘಾನಿಸ್ತಾನದ "ಶಾಶ್ವತ ಯುದ್ಧ" ಕ್ಕೆ ಅಂತ್ಯವನ್ನು ಘೋಷಿಸಿದ್ದಾರೆ. ಸುಮಾರು ಎರಡು ದಶಕಗಳ ಬಳಿಕ ಅಫ್ಘಾನಿಸ್ತಾನದ ಬಗ್ರಾಮ್ ವಾಯುನೆಲೆಯನ್ನು ಅಮೆರಿಕ ಸೇನೆ ತೊರೆಯುತ್ತಿದೆ. ಈಗ ಆಗಸ್ಟ್ ಅಂತ್ಯದ ವೇಳೆಗೆ ಯುಎಸ್ ತನ್ನ ಯುದ್ದವನ್ನು ಮುಕ್ತಾಯಗೊಳಿಸಬಹುದು.
'ಅಫ್ಘಾನ್ನ ನಗರದೊಳಗೆ ಹೋರಾಡಲು ಬಯಸಲ್ಲ' ಎಂದ ತಾಲಿಬಾನ್ ಉಗ್ರರು
ಈ ಬೆನ್ನಲ್ಲೇ ತಾಲಿಬಾನ್ ದೇಶಾದ್ಯಂತ ದಾಳಿ ಆರಂಭಿಸಿದೆ. ಹಲವಾರು ಭಾಗಗಳನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಈ ನಡುವೆ ತಾಲಿಬಾನ್ ಮತ್ತು ಅಫ್ಘಾನಿಸ್ತಾನ ಸರ್ಕಾರದ ಪ್ರತಿನಿಧಿಗಳು ದೋಹಾದಲ್ಲಿ ಶಾಂತಿ ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಹಾಗೆಯೇ ತಾಲಿಬಾನ್ ಈಗಾಗಲೇ ಸಂಪೂರ್ಣ ಮಿಲಿಟರಿ ವಿಜಯವನ್ನು ಸಾಧಿಸಿದೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿದೆ.
ಭಾರತದ ನೆರವು ಅಗತ್ಯ
ಈ ಬಗ್ಗೆ ಅಫ್ಘಾನಿಸ್ತಾನದ ಭಾರತದ ರಾಯಭಾರಿ ಫರೀದ್ ಮಾಮುಂಡ್ಜೆ, "ನಾವು ತಾಲಿಬಾನ್ ಜೊತೆಗಿನ ಶಾಂತಿ ಪ್ರಕ್ರಿಯೆಯಲ್ಲಿ ಒಂದು ಹಂತಕ್ಕೆ ತಲುಪಬಹುದು. ಮಾತುಕತೆ ವಿಫಲವಾದರೆ ಆಗ ನಾವು ಭಾರತದ ಮಿಲಿಟರಿ ನೆರವು ಕೋರಲಿದ್ದೇವೆ. ಮುಂದಿನ ವರ್ಷಗಳಲ್ಲಿ ಹೆಚ್ಚಿನ ಮಿಲಿಟರಿ ಸಹಾಯವನ್ನು ಪಡೆಯುವ ಸಮಯ ಬರಲಿದೆ," ಎಂದು ಹೇಳುವ ಮೂಲಕ ತಾಲಿಬಾನ್ನೊಂದಿಗೆ ಯುದ್ಧದ ಮುನ್ಸೂಚನೆ ನೀಡಿದ್ದಾರೆ. "ನಾವು ಅಫ್ಘಾನಿಸ್ತಾನಕ್ಕೆ ಸೈನ್ಯವನ್ನು ಕಳುಹಿಸಲು ಭಾರತದ ನೆರವು ಪಡೆಯುತ್ತಿಲ್ಲ. ಬದಲಾಗಿ ಕೆಲವು ಸಹಾಯಗಳನ್ನು ಕೋರಲಿದ್ದೇವೆ. ಅಫ್ಘಾನಿಸ್ತಾನದಲ್ಲಿ ನಮ್ಮ ಯುದ್ಧವನ್ನು ಹೋರಾಡಲು ಭಾರತದ ಹೆಜ್ಜೆಗುರುತು ಈ ಹಂತದಲ್ಲಿ ಅಗತ್ಯವಿಲ್ಲ. ಮುಂದೆ ಬೇಕಾಗಬಹುದು," ಎಂದು ಸ್ಪಷ್ಟನೆ ನೀಡಿದ್ದಾರೆ.
ಭಾರತ ಮಿಲಿಟರಿ ತರಬೇತಿ ನೀಡಬಹುದು
ಈ ಸಂದರ್ಭದಲ್ಲೇ ದೇಶಕ್ಕೆ ವಾಯುಪಡೆಯ ಅವಶ್ಯಕತೆಯನ್ನೂ ಕೂಡಾ ವಿವರಿಸಿದರು. ಇದಕ್ಕಾಗಿ ಭಾರತ ಪೈಲಟ್ ತರಬೇತಿಯನ್ನು ನೀಡಬಹುದು. ಪೈಲಟ್ ತರಬೇತಿಗೆ ಭಾರತವು "ಸ್ವಾಭಾವಿಕವಾಗಿ ಒಂದು ಸ್ಥಳ" ವಾಗಿದೆ ಎಂದು ಉಲ್ಲೇಖ ಮಾಡಿದ್ದಾರೆ. "ಭಾರತವು ಮತ್ತೆ ಎರಡು ಪ್ರಮುಖ ಅಂಶಗಳೊಂದಿಗೆ ನಮಗೆ ಸಹಾಯ ಮಾಡುತ್ತಿದೆ. ಒಂದು ನಮ್ಮ ಸೈನಿಕರಿಗೆ ಮಿಲಿಟರಿ ತರಬೇತಿ ಮತ್ತು, ವಿದ್ಯಾರ್ಥಿವೇತನವನ್ನು ಒದಗಿಸಲು ಸಹಾಯ ಮಾಡುವುದು," ಎಂದು ಕೂಡಾ ಫರೀದ್ ಮಾಮುಂಡ್ಜೆ ಹೇಳಿದ್ದಾರೆ. ಭಾರತವು ಒದಗಿಸುವ 1,000 ವಾರ್ಷಿಕ ವಿದ್ಯಾರ್ಥಿವೇತನದಿಂದಾಗಿ, ಈಗ ಇಲ್ಲಿ ಅಧ್ಯಯನ ಮಾಡುತ್ತಿರುವ 20,000 ವಿದ್ಯಾರ್ಥಿಗಳು ಇಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಹೊಸ ಅಫಘಾನ್ ಸಂಸತ್ತಿನ ಕಟ್ಟಡ ಮತ್ತು ಅಣೆಕಟ್ಟುಗಳ ನಿರ್ಮಾಣ, ಇತರ ಮೂಲಸೌಕರ್ಯ ಯೋಜನೆಗಳನ್ನು ಕೂಡಾ ಫರೀದ್ ಮಾಮುಂಡ್ಜೆ ಪಟ್ಟಿ ಮಾಡಿದ್ದಾರೆ.
ಅಫ್ಘಾನಿಸ್ತಾನದ ಹಲವಾರು ಜಿಲ್ಲೆಗಳು ವಶಕ್ಕೆ ಪಡೆದ ತಾಲಿಬಾನ್
ಅಫ್ಘಾನ್ ಸ್ಥಿತಿ ಭೀಕರವಾಗಿದೆ
ಅಫ್ಘಾನಿಸ್ತಾನದಲ್ಲಿ ಪ್ರಸ್ತುತ ಪರಿಸ್ಥಿತಿ "ತುಂಬಾ ಭೀಕರ" ಮತ್ತು "ಬಹಳ ಸಮಸ್ಯಾತ್ಮಕವಾಗಿದೆ", 376 ಜಿಲ್ಲೆಗಳಲ್ಲಿ ಸುಮಾರು 150 ರಲ್ಲಿ ಸರ್ಕಾರಿ ಪಡೆಗಳು ತಾಲಿಬಾನ್ ವಿರುದ್ಧ ಸಕ್ರಿಯವಾಗಿ ಹೋರಾಡುತ್ತಿವೆ. ಆದ್ದರಿಂದ ದೇಶದ ಮೂರನೇ ಒಂದು ಭಾಗದಷ್ಟು ಜನರು ಸಕ್ರಿಯ ಹೋರಾಟದಲ್ಲಿದ್ದಾರೆ. ಏಪ್ರಿಲ್ 2021 ರಿಂದ ದೇಶದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜನರು ಆಂತರಿಕವಾಗಿ ಸ್ಥಳಾಂತರಗೊಂಡಿದ್ದಾರೆ, ಸುಮಾರು 4,000 ಜನರು ಸಾವನ್ನಪ್ಪಿದ್ದಾರೆ," ಎಂದು ರಾಯಭಾರಿ ಮಾಹಿತಿ ನೀಡಿದರು.
ಉಗ್ರರಿಗೆ ಹೆದರಿ ಓಡಿ ಹೋದ ಸೈನಿಕರು, ಕಣ್ಣೀರು ತರಿಸುತ್ತೆ ಯೋಧರ ಕಥೆ-ವ್ಯಥೆ
ಹಿಂಸಾಚಾರದ ಹಾದಿ ಹಿಡಿದ ತಾಲಿಬಾನ್
"ಕಳೆದ ತಿಂಗಳು ಫರಿಯಾಬ್ ಪ್ರಾಂತ್ಯದಲ್ಲಿ ನಮ್ಮ 22 ವಿಶೇಷ ಪಡೆ ಸೈನಿಕರು ತಾಲಿಬಾನ್ಗೆ ಶರಣಾಗುತ್ತಿದ್ದಂತೆ ತಾಲಿಬಾನಿಗರು ಕ್ರೂರವಾಗಿ ಹತ್ಯೆ ಮಾಡಿದ್ದಾರೆ. ನಾವು ತಾಲಿಬಾನ್ ಶಾಂತಿ ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ತಾಲಿಬಾನ್ ಅಫ್ಘಾನ್ ಸರ್ಕಾರದೊಂದಿಗೆ ಶಾಶ್ವತ ಮತ್ತು ಘನತೆಯ ಶಾಂತಿಯುತ ಮಾತುಕತೆ ನಡೆಸುತ್ತಾರೆ ಎಂಬ ಊಹೆಯಲ್ಲಿ ನಾವು ಇದ್ದೆವು. ಆದರೆ ತಾಲಿಬಾನ್ ಹಿಂಸಾಚಾರದ ಹಾದಿಯನ್ನು ಆರಿಸಿಕೊಂಡಿದ್ದಾರೆ," ಎಂದು ಹೇಳಿದರು.
(ಒನ್ಇಂಡಿಯಾ ಸುದ್ದಿ)