ಜಾಗತಿಕ ಉಗ್ರ ಮಸೂದ್ ಅಜರ್ ನಿಗೂಢ ಸ್ಥಳಕ್ಕೆ ರವಾನೆ
ಇಸ್ಲಾಮಾಬಾದ್, ಮಾರ್ಚ್ 9: ಜಾಗತಿಕ ಭಯೋತ್ಪಾದಕ, ಜೈಷ್ ಸಂಘಟನೆ ಮುಖ್ಯಸ್ಥ ಅಜರ್ ಮಸೂದ್ಗೆ ಬಾಂಬ್ ನಿರೋಧಕ ಮನೆಯಲ್ಲಿದ್ದರೂ ಭಯ ಕಾಡುತ್ತಿದೆ. ಜೀವ ಭಯ ಹೆಚ್ಚಾಗಿದ್ದರಿಂದ ರಾವಲ್ಪಿಂಡಿಯ ಸೇಫ್ ಹೌಸ್ ಗೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಜೈಷ್ ಎ ಮೊಹಮ್ಮದ್ ಎಂಬ ಪುಟ್ಟ ಸಂಘಟನೆಯನ್ನು ಕಟ್ಟುಕೊಂಡು ಭಾರತದ ಪಾಲಿಗೆ ಕೆಟ್ಟ ಕನಸಾಗಿ ಉಳಿದಿದ್ದಾನೆ. ಸದ್ಯ ಲಭ್ಯವಿರುವ ಮಾಹಿತಿಯಂತೆ ಆತನಿಗೆ ಕಿಡ್ನಿ ವೈಫಲ್ಯವಷ್ಟೇ ಅಲ್ಲ, ಸ್ಪೈನಲ್ ಕ್ಯಾನ್ಸರ್ ಕೂಡಾ ಅವರಿಸಿಕೊಂಡಿದೆಯಂತೆ. ಮರಣಶಯ್ಯೆಯಲ್ಲಿರುವ ಆತನನ್ನು ಉಳಿಸಿಕೊಳ್ಳಲು ಪಾಕಿಸ್ತಾನ ಇನ್ನಿಲ್ಲದ ಸಾಹಸ ಪಡುತ್ತಿದೆ.
ಮರಣಶಯ್ಯೆಯಲ್ಲಿ ಮೌಲನಾ, ಮಸೂದ್ ಅಜರ್ -ಪತ್ರಕರ್ತನಿಂದ ಉಗ್ರನಾದ ತನಕ
ಜೆಇಎಂ ಉಗ್ರ ಸಂಘಟನೆ ಕೇಂದ್ರ ಸ್ಥಾನ ಬಹವಲ್ಪುರ್ ದಿಂದ ರಾವಲ್ಪಿಂಡಿಗೆ ಮಸೂದ್ ಅಜರ್ ಪರಿವಾರ ಶಿಫ್ಟ್ ಆಗಿದ್ದು, ಐಎಸ್ಐ ರಕ್ಷಣೆ ಹೊಂದಿದೆ. ಪುಲ್ವಾಮಾ ದಾಳಿ ಬಳಿಕವೂ ರಾವಲ್ಪಿಂಡಿಯ ಸೇಫ್ ಹೌಸ್ ನಲ್ಲಿ ಮಸೂದ್ ನನ್ನು ಇರಿಸಲಾಗಿತ್ತು.
ಶ್ರೀನಗರದ ಪೊಲೀಸರು ಮೊದಲಿಗೆ ಬಂಧಿಸಿದ್ದರು
ಪತ್ರಕರ್ತ ಎಂದು ತನ್ನನ್ನು ತಾನು ಕರೆದುಕೊಳ್ಳುತ್ತಿದ್ದ ವ್ಯಕ್ತಿಯೊಬ್ಬನನ್ನು 1994ನೇ ಇಸವಿಯಲ್ಲಿ ಶ್ರೀನಗರದ ಪೊಲೀಸರು ಬಂಧಿಸುತ್ತಾರೆ. ಆತನ ಬಳಿ ಆಗ ಪೋರ್ಚುಗೀಸ್ ಪಾಸ್ ಪೋರ್ಟ್ ಇರುತ್ತದೆ. ಅಂದು ಸಿಕ್ಕಿಬಿದ್ದಿದ್ದ ಆ ವ್ಯಕ್ತಿ ಇಂದು ಮೋಸ್ಟ್ ವಾಂಟೆಂಡ್ ಕ್ರಿಮಿನಲ್, ಭಯೋತ್ಪಾದಕನಾಗಿ ಬೆಳೆದಿದ್ದಾನೆ
ಗುಪ್ತಚರ ಇಲಾಖೆ ಅಜರ್ ಬಗ್ಗೆ ಮಾಹಿತಿ ನೀಡಿದ ಬಳಿಕ ಪೊಲೀಸರಿಗೂ ತಾವು ಬಂಧಿಸಿದ ವ್ಯಕ್ತಿ ಎಷ್ಟು ಮುಖ್ಯವಾದವನು ಎಂಬುದು ತಿಳಿಯಿತು.
5 ವರ್ಷಗಳ ಕಾಲ ಅಜರ್ ಭಾರತದ ವಶದಲ್ಲಿದ್ದ
5 ವರ್ಷಗಳ ಕಾಲ ಅಜರ್ ಭಾರತದ ವಶದಲ್ಲಿದ್ದ. ಆದರೆ, ಅಜರ್ನನ್ನು ಬಿಡಿಸಲೇಬೇಕು ಎಂದು ನಿರ್ಧರಿಸಿದ್ದ ಆತನ ಸಹೋದರ ಮೊಹಮದ್ ರಫಲ್ ಕಂದಹಾರ್ ವಿಮಾನ ಅಪಹರಣದ ಸಂಚು ರೂಪಿಸಿದ್ದ. ವಿಮಾನ ಅಪಹರಣವಾದಾಗ ಒತ್ತಡಕ್ಕೆ ಒಳಗಾದ ಭಾರತ ಸರ್ಕಾರ ಅಜರ್ನನ್ನು ಬಿಡುಗಡೆ ಮಾಡಿತು.
ಬಿಡುಗಡೆಗೊಂಡ ಅಜರ್ ಪಾಕಿಸ್ತಾನಕ್ಕೆ ತೆರಳಿದ ಬಳಿಕ ಜೈಷ್-ಏ-ಮೊಹಮದ್ ಉಗ್ರ ಸಂಘಟನೆಯನ್ನು ಆರಂಭಿಸಿದೆ. 2001ರಲ್ಲಿ ಇದೇ ಸಂಘಟನೆಯ ಉಗ್ರರು ದೆಹಲಿಯಲ್ಲಿನ ಸಂಸತ್ ಭವನದ ಮೇಲೆ ದಾಳಿ ಮಾಡಿದ್ದರು. ಇಂದು ಲಷ್ಕರ್-ಏ-ತೋಯ್ಬಾ ಸಂಘಟನೆ ಮುಖ್ಯಸ್ಥ ಹಫೀನ್ ಹೊರತು ಪಡಿಸಿದರೆ ಅಜರ್ ಅತ್ಯಂತ ಅಪಾಯಕಾರಿ ವ್ಯಕ್ತಿಯಾಗಿದ್ದಾನೆ ಎಂದು ಗುಪ್ತಚರ ಇಲಾಖೆ ಹೇಳಿದೆ.
ಇಂಡಿಯನ್ ಏರ್ ಲೈನ್ಸ್ ವಿಮಾನ ಅಪಹರಣ
1999ರಲ್ಲಿ ಇಂಡಿಯನ್ ಏರ್ ಲೈನ್ಸ್ ವಿಮಾನ ಅಪಹರಣ ಮಾಡಿದ ಉಗ್ರರು ಕಂದಹಾರಕ್ಕೆ ಕೊಂಡೊಯ್ದರು. ಮಸೂದ್ ಸೋದರ ಮೊಹಮ್ಮದ್ ರಾಫ್ ನಡೆಸಿದ ಈ ಕೃತ್ಯ, ಭಾರತಕ್ಕೆ ಮುಳುವಾಯಿತು. ಅಂದಿನ ವಾಜಪೇಯಿ ಸರ್ಕಾರವು ಪ್ರಯಾಣಿಕರನ್ನು ರಕ್ಷಿಸುವ ಸಲುವಾಗಿ ಮಸೂದ್ ಹಾಗೂ ಇನ್ನಿಬ್ಬರು ಉಗ್ರರು ಜೈಲಿನಿಂದ ಹೊರ ಬಿಟ್ಟರು.
ಭಾರತದ ಮೇಲೆ ಸತತ ದಾಳಿ ನಡೆಸಿರುವ ಉಗ್ರ
ಆದಾದ ಬಳಿಕ 2001ರಲ್ಲಿ ಭಾರತದ ಸಂಸತ್ ದಾಳಿ, ಪಠಾಣ್ ಕೋಟ್ ದಾಳಿ, ಇತ್ತೀಚಿನ ಪುಲ್ವಾಮಾ ದಾಳಿತನಕ ಎಲ್ಲದರಲ್ಲೂ ಮಸೂದ್ ಸಂಚು ಇತ್ತು.
ಹಿಜ್ಬುಲ್ ಹಾಗೂ ಲಷ್ಕರ್ ಪ್ರಾಬಲ್ಯ ಕಡಿಮೆಯಾಗುತ್ತಿದ್ದಂತೆ ಜೈಷ್ ಸಂಘಟನೆ ಪ್ರವರ್ಧಮಾನಕ್ಕೆ ಬಂದಿತು. ಸರಿ ಸುಮಾರು 60 ಉಗ್ರರನ್ನು ಹೊಂದಿರುವ ಜೈಷ್ , ಉರಿ, ನಗ್ರೋತಾದಲ್ಲೂ ದಾಳಿ ನಡೆಸಿತ್ತು. ಈಗ ಈ ಎಲ್ಲ ಕುಕೃತ್ಯಗಳ ಹಿಂದಿನ ಶಕ್ತಿ ಮಸೂದ್ ಸಾವಿನ ಕ್ಷಣ ಎಣಿಸುತ್ತಿದ್ದಾನೆ.