ಮ್ಯಾನ್ಮಾರ್ನ 1200 ಮಂದಿ ವಲಸಿಗರನ್ನು ಗಡಿಪಾರು ಮಾಡಿದ ಮಲೇಷ್ಯಾ
ಕೌಲಾಲಂಪುರ್,ಫೆಬ್ರವರಿ 16: ಮ್ಯಾನ್ಮಾರ್ನ 1200 ಮಂದಿ ವಲಸಿಗರನ್ನು ಮಲೇಷ್ಯಾದಿಂದ ಗಡಿಪಾರು ಮಾಡಲು ಆದೇಶಿಸಲಾಗಿದೆ. ಮಿಲಿಟರಿ ದಂಗೆಯ ನಡುವೆಯೂ ತಾಯ್ನಾಡಿಗೆ ವಲಸಿಗರನ್ನು ಕಳುಹಿಸುತ್ತಿರುವ ಮಲೇಷ್ಯಾ ಇವರನ್ನು ಅಲ್ಪಸಂಖ್ಯಾತ ಮುಸ್ಲಿಂ ರೋಹಿಂಗ್ಯಾವಲಸಿಗರು ಅಥವಾ ವಿಶ್ವಸಂಸ್ಥೆಯ ವಲಸೆ ಸಂಸ್ಥೆಯಲ್ಲಿ ನೋಂದಣಿಯಾಗಿರುವ ವಲಸಿಗರೊಂದಿಗೆ ಸೇರಿಸುವುದಿಲ್ಲ ಎಂದು ಹೇಳಿದೆ.
ಪ್ರತಿ ವರ್ಷವೂ ನಮ್ಮ ದೇಶದಿಂದ ಬಂಧಿತ ವಲಸಿಗರನ್ನು ಹೀಗೆ ಗಡಿಪಾರು ಮಾಡಲಾಗುತ್ತಿದೆ. ಮ್ಯಾನ್ಮಾರ್ ವಲಸಿಗರನ್ನು ಕಳುಹಿಸುತ್ತಿರುವುದುವಲಸಿಗರ ಗಡಿಪಾರು ಪ್ರಕ್ರಿಯೆಯ ಭಾಗ ಎಂದು ಹೇಳಲಾಗಿದೆ.
ಮಲೇಷ್ಯಾದಿಂದ ವಲಸೆ ಮುಖ್ಯಸ್ಥ ಖೈರುಲ್ ಝೈಮಿ ದೌಡ ಅವರು ಈ ಹೇಳಿಕೆಯನ್ನು ನೀಡಿದ್ದು, ಬಂಧಿತ ವಲಸಿಗರನ್ನು ಫೆಬ್ರವರಿ 23 ರಂದು ಮ್ಯಾನ್ಮಾರ್ ನೌಕಾಪಡೆಯ ಹಡಗುಗಳಲ್ಲಿ ಗಡಿಪಾರು ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಈ ವಲಸಿಗರಲ್ಲಿರುವ ದುರ್ಬಲ ವರ್ಗದ ಮಹಿಳೆಯರು ಮತ್ತು ಮಕ್ಕಳ ಬಗ್ಗೆ ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆಯ ಹೈಕಮಿಷನರ್ ಕಳವಳ ವ್ಯಕ್ತಪಡಿಸಿದ್ದಾರೆ.
ಸೂಕ್ತ ಪ್ರಯಾಣದ ದಾಖಲಾತಿಗಳ ಕೊರತೆ, ಸಾಮಾಜಿಕ ಭೇಟಿಗಾಗಿ ನೀಡಿದ್ದ ಅನುಮತಿಯನ್ನು ಉಲ್ಲಂಘಿಸಿ, ದೀರ್ಘಕಾಲ ದೇಶದಲ್ಲಿ ಉಳಿದುಕೊಳ್ಳುವುದು ಸೇರಿ ವಿವಿಧ ಅಪರಾಧಗಳಿಗಾಗಿ ಮ್ಯಾನ್ಮಾರ್ನ 1200 ಮಂದಿಯನ್ನು ಬಂಧಿಸಲಾಗಿದೆ. ಅವರನ್ನು ಇದೇ 23 ರಂದು ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.