ಯುರೋಪ್ ಸಂಸತ್ ಸಭಾಪತಿಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಪತ್ರ
ನವದೆಹಲಿ, ಜನವರಿ.27: ಭಾರತದಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಯುರೋಪ್ ಸಂಸತ್ ನಲ್ಲಿ ಐದು ನಿರ್ಣಯಗಳನ್ನು ಅಂಗೀಕರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಯುರೋಪಿಯನ್ ಸಂಸತ್ ಸಭಾಪತಿ ಅವರಿಗೆ ಪತ್ರ ಬರೆದಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸುವುದು ಭಾರತದ ಆಂತರಿಕ ವಿಚಾರವಾಗಿದೆ. ಸಾರ್ವಭೌಮ ದೇಶದ ಪ್ರಕ್ರಿಯೆ ವಿರುದ್ಧ ನಿರ್ಣಯ ಅಂಗೀಕರಿಸುವು ಸೂಕ್ತವಲ್ಲ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಯೂರೋಪ್ ಸಂಸತ್ನಲ್ಲಿ ಪೌರತ್ವ ಕಾಯ್ದೆ ವಿರುದ್ಧ ನಿರ್ಣಯ
ಯುರೋಪಿಯನ್ ಸಂಸತ್ ಸಭಾಪತಿ ದೇವಿಡ್ ಮಾರಿಯಾ ಸಸೋಲಿ ಅವರಿಗೆೆ ಈ ಪತ್ರವನ್ನು ಬರೆದಿದ್ದು, ಯುರೋಪಿಯನ್ ಸಂಸತ್ ನಿರ್ಣಯ ಅಂಗೀಕರಿಸಿರುವುದು ಸೂಕ್ತ ನಡೆಯಲ್ಲ ಎಂದು ಮನವರಿಕೆ ಮಾಡಿದ್ದಾರೆ.
ಪೌರತ್ವ ನೀಡುವ ಸದುದ್ದೇಶದಿಂದ ಕಾಯ್ದೆ ಜಾರಿ:
ನೆರೆ ರಾಷ್ಟ್ರಗಳಲ್ಲಿ ಧಾರ್ಮಿಕ ಕಾರಣಗಳಿಂದ ಹೊರದೂಡಲ್ಪಟ್ಟ ಅಸಹಾಯಕರಿಗೆ ಭಾರತದಲ್ಲಿ ನೆಲೆ ಕಲ್ಪಿಸುವ ಸದುದ್ದೇಶವನ್ನು ಪೌರತ್ವ ತಿದ್ದುಪಡಿ ಕಾಯ್ದೆಯು ಒಳಗೊಂಡಿದೆ ಎಂದು ಓಂ ಬಿರ್ಲಾ ತಿಳಿಸಿದ್ದಾರೆ. ಇತ್ತೀಚಿಗಷ್ಟೇ ಯೂರೋಪ್ ಸಂಸತ್ತಿನ 154 ಮಂದಿ ಸಂಸದರು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಮಾತನಾಡಿದ್ದು, ಸಿಎಎ ವಿರುದ್ಧ ಯೂರೋಪಿಯನ್ ಸಂಸತ್ತು ನಿರ್ಣಯ ಅಂಗೀಕರಿಸಿತ್ತು. ಈ ಕಾಯ್ದೆಯು ತಾರಮ್ಯದಿಂದ ಕೂಡಿದ್ದು, ಧರ್ಮ ಮತ್ತು ಜನ ವಿಭಜಕ ಕಾಯ್ದೆ ಎಂದು ಯೂರೋಪಿನ ಸೋಷಿಯಲಿಸ್ಟ್ ಆಂಡ್ ಡೆಮಾಕ್ರಟಿಕ್ಸ್ ಸದಸ್ಯರು ಯೂರೋಪಿಯನ್ ಸಂಸತ್ನಲ್ಲಿ ಆರೋಪಿಸಿದ್ದರು.