ಬೈರುತ್ ಬ್ಲಾಸ್ಟ್: ಲೆಬನಾನ್ ಪ್ರಧಾನಿ ಹಸನ್ ತಲೆದಂಡ..!
ಬೈರುತ್, ಆ. 11: ಬೈರುತ್ ಬ್ಲಾಸ್ಟ್ ನಂತರ ಲೆಬನಾನ್ನಲ್ಲಿ ಎದ್ದಿರುವ ದಂಗೆಗೆ ತಲೆಬಾಗಿ ಪ್ರಧಾನಿ ಹಸನ್ ದಿಯಾಬ್ ಸರ್ಕಾರ ವಿಸರ್ಜಿಸಿದ್ದಾರೆ. ಆಗಸ್ಟ್ 4ರ ಮಧ್ಯಾಹ್ನ ಲೆಬನಾನ್ ರಾಜಧಾನಿ ಬೈರುತ್ ಬಂದರಿನಲ್ಲಿ ಅವಳಿ ಸ್ಫೋಟ ಸಂಭವಿಸಿತ್ತು. ಸುಮಾರು 2,750 ಟನ್ನಷ್ಟು ಅಮೋನಿಯಂ ನೈಟ್ರೇಟ್ ಸ್ಫೋಟಗೊಂಡ ಪರಿಣಾಮ ಬೈರುತ್ ಛಿದ್ರ ಛಿದ್ರವಾಗಿತ್ತು. ಘಟನೆಯಲ್ಲಿ ಈಗಾಗಲೇ 220 ಮಂದಿ ಮೃತಪಟ್ಟಿದ್ದು, 6000ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಏರುತ್ತಿರುವುದರ ಜೊತೆಗೆ, 3 ಲಕ್ಷ ಮಂದಿ ನಿರಾಶ್ರಿತರಾಗಿದ್ದಾರೆ.
ಹೀಗೆ ಮೊಳಗಿದ ಆಕ್ರೋಶದ ಬೆಂಕಿ, ಜನರನ್ನು ಬೀದಿಗಿಳಿಯುವಂತೆ ಮಾಡಿತ್ತು. ಜನರು ಲೆಬನಾನ್ನ ಹಸನ್ ದಿಯಾಬ್ ಸರ್ಕಾರದ ವಿರುದ್ಧ ರೊಚ್ಚಿಗೆದ್ದಿದ್ದರು. ಆದರೆ ಹಿಂಸಾಚಾರ ನಿಯಂತ್ರಿಸಲು ಲೆಬನಾನ್ ಸರ್ಕಾರ ಕೂಡ ಹಿಂಸೆ, ಕ್ರೌರ್ಯದ ಹಾದಿ ಹಿಡಿದಿತ್ತು. ಹೀಗಾಗಿ ಬೈರುತ್ಗೆ ಮಾತ್ರ ಸೀಮಿತವಾಗಿದ್ದ ಹಿಂಸಾಚಾರ ಲೆಬನಾನ್ಗೆ ಹಬ್ಬಿತ್ತು. ಹಸನ್ ದಿಯಾಬ್ ವಿರುದ್ಧ ಹೋರಾಟಗಾರರು ರಣಕಹಳೆ ಮೊಳಗಿಸಿದ್ದರು. ಇದನ್ನೆಲ್ಲಾ ಅರಿತಿರುವ ಹಸನ್ ದಿಯಾಬ್ ಈಗ ಜಾಗ ಖಾಲಿ ಮಾಡೋದೆ ಒಳ್ಳೆಯದು ಅಂತಾ ತಮ್ಮ ಸರ್ಕಾರ ವಿಸರ್ಜಿಸುವ ನಿರ್ಧಾರಕ್ಕೆ ಬಂದಿದ್ದಾರೆ.
ಚೆನ್ನೈನಿಂದ 740 ಟನ್ ಅಮೋನಿಯಂ ನೈಟ್ರೇಟ್ ಹೊರಕ್ಕೆ
ವಿದೇಶಿ ಕಾರ್ಮಿಕರು ನಾಪತ್ತೆ..!
ಲೆಬನಾನ್ನಲ್ಲಿ ಕೆಲಸ ಮಾಡುತ್ತಿದ್ದ ಹತ್ತಾರು ವಿದೇಶಿ ಕಾರ್ಮಿಕರು ಸ್ಫೋಟ ಸಂಭವಿಸಿದ ಬಳಿಕ ನಾಪತ್ತೆಯಾಗಿದ್ದಾರೆ ಎನ್ನಲಾಗ್ತಿದೆ. ಇನ್ನು ಸ್ಥಳೀಯರು ಸೇರಿದಂತೆ ಒಟ್ಟು 110ಕ್ಕೂ ಹೆಚ್ಚು ಮಂದಿ ಎಲ್ಲಿದ್ದಾರೆ ಅಂತಾ ತಿಳಿಯುತ್ತಲೇ ಇಲ್ಲ. ಆದರೆ ದಶಕಗಳ ಕಾಲ ಲೆಬನಾನ್ನಲ್ಲಿ ಅಧ್ಯಕ್ಷ ಆಡಳಿತವಿದೆ. ಈಗ ನಮ್ಮೆಲ್ಲರ ಬದುಕು ಬೀದಿಗೆ ಬೀಳಲು ಇದೇ ಅದಕ್ಷ ಆಡಳಿತ ಹಾಗೂ ಸರ್ಕಾರ ಕಾರಣ ಅಂತಾ ಜನರು ಬೀದಿಗಿಳಿದು ಹೋರಾಟ ನಡೆಸಿದ್ದರು. ಕಂಡ ಕಂಡಲ್ಲಿ ಬೆಂಕಿಯಿಟ್ಟು ತಮ್ಮ ಆಕ್ರೋಶ ಹೊರಹಾಕಿದ್ದರು. ಹೀಗಾಗಿ ದಿಯಾಬ್ ತಮ್ಮ ಖುರ್ಚಿ ಬಿಟ್ಟು ಎಸ್ಕೇಪ್ ಆಗಿದ್ದಾರೆ. ಆದರೆ ಬೈರುತ್ ಪರಿಸ್ಥಿತಿ ಇನ್ನೂ ಕೆಲವು ವರ್ಷಗಳ ಕಾಲ ಸುಧಾರಿಸುವ ಲಕ್ಷಣಗಳೇ ಕಾಣುತ್ತಿಲ್ಲ.
3 ಲಕ್ಷ ಮಂದಿ ನಿರಾಶ್ರಿತರು, ನರಕವಾದ ಲೆಬನಾನ್ ರಾಜಧಾನಿ ಬೈರುತ್
ಆಹಾರ ಪದಾರ್ಥಕ್ಕೂ ತಾತ್ವರ..!
ಬೈರುತ್ ಬಂದರಿನಲ್ಲಿಯೇ ಲೆಬನಾನ್ ತನ್ನ ರಾಷ್ಟ್ರಕ್ಕೆ ಅಗತ್ಯವಿದ್ದಷ್ಟು ಆಹಾರ ಸಂಗ್ರಹಣೆ ಮಾಡಿತ್ತು. ಆದರೆ ಸ್ಫೋಟದ ನಂತರ ಆಹಾರ ಪದಾರ್ಥವೆಲ್ಲಾ ಮಣ್ಣುಪಾಲಾಗಿ, ಜನರ ಹೊಟ್ಟೆಗೆ ತಣ್ಣೀರಿನ ಬಟ್ಟೆಯೇ ಗತಿ ಎಂಬಂತಾಗಿದೆ. ಒಂದ್ಕಡೆ ಸೂರು ಇಲ್ಲ, ಮತ್ತೊಂದ್ಕಡೆ ಹೊಟ್ಟೆಗೆ ಹಿಟ್ಟು ಸಿಗುತ್ತಿಲ್ಲ. ಆದರೆ ಇದೆಲ್ಲವನ್ನೂ ನಿಭಾಯಿಸುವಲ್ಲಿ ದಿಯಾಬ್ ಫ್ಲಾಪ್ ಆಗಿದ್ದಾರೆ. ಜನರ ಕಷ್ಟ ಕೇಳದೆ ಪ್ರಜೆಗಳ ಮೇಲೆಯೇ ದೌರ್ಜನ್ಯ ನಡೆಸಲು ಹೋಗಿ ದಿಯಾಬ್ ಈಗ ತಮ್ಮ ಸರ್ಕಾರವನ್ನೇ ವಿಸರ್ಜಿಸಿದ್ದಾರೆ.