ಸಾಯುವ ಕೆಲವೇ ಕ್ಷಣ ಮೊದಲು ತೆಗೆದ 'ಮೀನಾಕ್ಷಿ'ಯ ಕಟ್ಟಕಡೆಯ ಚಿತ್ರ!
ಕ್ಯಾಲಿಫೋರ್ನಿಯಾ, ಅಕ್ಟೋಬರ್ 31: ಗುಲಾಬಿ ಬಣ್ಣದ ಕೂದಲಿನ ಮೀನಾಕ್ಷಿಯ ಕಟ್ಟಕಡೆಯ ಚಿತ್ರ ಅದು..! ಬೆಟ್ಟವೊಂದರ ತುತ್ತತುದಿಯಲ್ಲಿ ನಿಂತು ಜೋಡಿಯೊಂದು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಅವರ ಹಿಂದೆ ನಿಂತಿದ್ದ ಮೀನಾಕ್ಷಿ ಅದರಲ್ಲಿ ಸೆರೆಯಾಗಿದ್ದಾರೆ.
ಪ್ರಯಾಣಿಸುವುದನ್ನು ಅಪಾರವಾಗಿ ಮೆಚ್ಚುತ್ತಿದ್ದ ಮೀನಾಕ್ಷಿಯನ್ನು ಆಕೆಯ ಕೂದಲಿನಿಂದಲೇ ಗುರುತಿಸಬಹುದು. ಅದು ಆಕೆಯ ಕೊನೆಯ ಚಿತ್ರ... ಮತ್ತೆಂದೂ ಆಕೆ ಫೋಟೊಕ್ಕೆ ಪೋಸು ನೀಡಲಾರಳು.. ಯಾಕಂದ್ರೆ ಇನ್ನೆಂದೂ ಬಾರದ ಲೋಕಕ್ಕೆ ಆಕೆ ಪ್ರಯಾಣ ಬೆಳೆಸಿಯಾಗಿದೆ!
ಅಮೆರಿಕದ ಕ್ಯಾಲಿಫೋರ್ನಿಯಾದ ಯೂಸೆಮೈಟ್ ನ್ಯಾಶ್ನಲ್ ಪಾರ್ಕ್ ಎಂಬಲ್ಲಿ 800 ಅಡಿ ಎತ್ತರದಿಂದ ಬಿದ್ದು ಭಾರತೀಯ ದಂಪತಿ ಸಾವನ್ನಪ್ಪಿದ ಘಟನೆಗೆ ಎಲ್ಲೆಲ್ಲೂ ಸಂತಾಪ ವ್ಯಕ್ತವಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಆಕೆಯ ಕೊಟ್ಟಕೊನೆಯ ಚಿತ್ರವನ್ನು ವ್ಯಕ್ತಿಯೊಬ್ಬರು ಮಾಧ್ಯಮಕ್ಕೆ ನೀಡಿದ್ದಾರೆ. ತಾವು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಹಿಂದೆ ನಿಂತಿದ್ದ ಮೀನಾಕ್ಷಿ ಸಹ ಈ ಚಿತ್ರದಲ್ಲಿ ಕಾಣುತ್ತಾರೆ.
ಅಕ್ಟೋಬರ್ 21ರಂದು ಈ ಘಟನೆ ನಡೆದಿದ್ದರೂ, ಮೀನಾಕ್ಷಿ ಮೂರ್ತಿ ಮತ್ತು ಅವರ ಪತಿ ವಿಷ್ಣು ವಿಶ್ವನಾಥ್ ಅವರ ಶವ ಸಿಕ್ಕಿದ್ದು ಅಕ್ಟೋಬರ್ 25ರಂದು. ತಮಿಳುನಾಡಿನ ತಿರುಚ್ಚಿಯವರಾದ ಈ ದಂಪತಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಕ್ಯಾಲಿಫೋರ್ನಿಯಾದಲ್ಲಿ ಸೆಲ್ಫಿ ಹುಚ್ಚಿಗೆ ಬಲಿಯಾದರೇ ಭಾರತದ ದಂಪತಿ?
ಈ ದುರಂತದ ಸುದ್ದಿ ಒಂದೆಡೆಯಾದರೆ, ಮತ್ತೊಂದು ಸಂತಸದ ಸುದ್ದಿಯೂ ಇದೆ. ರಿಲಯನ್ಸ್ ಇಂಡಸ್ಟ್ರೀಸ್ ಚೇರ್ ಮನ್ ಮುಖೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಹೊಸಬಾಳಿಗೆ ಕಾಲಿಡುತ್ತಿದ್ದಾರೆ... ಅತ್ತ ಗುಜರಾತಿನಲ್ಲಿ ಪಟೇಲರ ವಿಶ್ವದಲ್ಲೇ ಅತೀ ಎತ್ತರದ ಏಕತಾ ಮೂರ್ತಿ ಅನಾವರಣಗೊಂಡಿದೆ.... ಒಟ್ಟಿನಲ್ಲಿ ವಿಶ್ವದ ನಾನಾ ಸುದ್ದಿಗಳ ಗುಚ್ಛ ಇಲ್ಲಿದೆ.
ಕೊಟ್ಟಕೊನೆಯ ಚಿತ್ರ
ಸೀನ್ ಮಟ್ಟೆಸನ್ ಮತ್ತು ಡ್ರೆಯಾ ರೋಸ್ ಎಂಬ ಜೋಡಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದ ಸಮಯದಲ್ಲಿ ಅವರ ಹಿಂದೆ ನಿಂತಿದ್ದ ಮೀನಾಕ್ಷಿ ಮೂರ್ತಿಯವರ ಕೊನೆಯ ಚಿತ್ರ ಇದು. ಈ ದಂಪತಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಮಟ್ಟೆಸನ್ ಈ ಚಿತ್ರವನ್ನು ಮಾಧ್ಯಮಗಳಿಗೆ ನೀಡಿದ್ದಾರೆ. ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಹುಚ್ಚಿನಿಂದಲೇ ಈ ದಂಪತಿ ಪ್ರಾಣ ಕಳೆದುಕೊಂಡರು ಎನ್ನಲಾಗುತ್ತಿದೆ.
ಅದೇ ತಮ್ಮ ಕೊನೆಯ ಪ್ರವಾಸ ಎಂಬ ಸೂಚನೆ ಆ ದಂಪತಿಗೆ ಸಿಕ್ಕೇ ಇರಲಿಲ್ಲ!
ಹೊಸ ಬದುಕಿನತ್ತ ಹೆಜ್ಜೆ
ರಿಲಯನ್ಸ್ ಇಂಡಸ್ಟ್ರೀಸ್ ನ ಚೇರ್ ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಮುಕೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ತಮ್ಮ ಭಾವಿ ಪತಿ ಆನಂದ್ ಪಿರಾಮಳ್ ಅವರೊಂದಿಗೆ ಪೋಸು ನೀಡಿದ್ದು ಹೀಗೆ. ಈ ದಂಪತಿ ಮುಂಬೈಯಲ್ಲಿ ಡಿಸೆಂಬರ್ 12 ರಂದು ಹಸೆಮಣೆ ಏರುತ್ತಿದ್ದಾರೆ.
ಕ್ಯಾಲಿಫೋರ್ನಿಯಾ: 800 ಅಡಿ ಎತ್ತರದಿಂದ ಬಿದ್ದು ಸಾವಿಗೀಡಾದ ಭಾರತೀಯ ದಂಪತಿ
ಉಪಚುನಾವಣೆ ಪ್ರಚಾರ ಜೋರು!
ನವೆಂಬರ್ 3 ರಂದು ನಡೆಯಲಿರುವ ಶಿವಮೊಗ್ಗ ಲೋಕಸಭಾ ಉಪಚುನಾವಣೆಯ ಪ್ರಚಾರ ಸಭೆಯಲ್ಲಿ ಜೆಡಿಎಸ್ ಅಧ್ಯಕ್ಷ ಎಚ್ ಡಿ ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಡಿ ಕೆ ಶಿವಕುಮಾರ್ ಮುಂತಾದ ಗಣ್ಯರು ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಪರ ಪ್ರಚಾರ ನಡೆಸಿದರು.
ಬಿಲ್ಲು ರೆಡಿ... ಬಾಣ ಯಾರಿಗೆ?!
ಮಧ್ಯಪ್ರದೇಶದ ಖಾರ್ಗೋನ್ ಪ್ರದೇಶದಲ್ಲಿ ನಡೆದ ಸಭೆಯೊಂದರಲ್ಲಿ ಬಿಲ್ಲು ಹಿಡಿದು ಪೋಸು ನೀಡಿದ ಕಾಂಗ್ರಸ್ ಅಧ್ಯಕ್ಷ ರಾಹುಲ್ ಗಾಂಧಿ. ಬಾಣ ಯಾರತ್ತ ಗುರಿ ಮಾಡಿದೆಯೋ ದೇವರೇ ಬಲ್ಲ!
ಉಕ್ಕಿನ ಮನುಷ್ಯನಿಗೆ ನಮನ
ಏಕತೆಯ ಪ್ರತಿಮೆಯನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಗುಜರಾತಿನ ಅಹ್ಮದಾಬಾದಿನಲ್ಲಿ ಉದ್ಘಾಟಿಸಿದರು. ಉಕ್ಕಿನ ಮನುಷ್ಯ ಎಂದೇ ಖ್ಯಾತರಾದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಪ್ರತಿಮೆ ಇದು. ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಅವರು ಪುರಿಯ ಬೀಚ್ ನಲ್ಲಿ ಉಕ್ಕಿನ ಮನುಷ್ಯನಿಗೆ ನಮಿಸಿದ್ದು ಹೀಗೆ.