ತಾಲಿಬಾನ್ ನಿಯಂತ್ರಣ: ಕಾಬೂಲ್ನಿಂದ ಭಾರತಕ್ಕೆ ಕೊನೆಯ ವಿಮಾನ ಪ್ರಯಾಣ
ಕಾಬೂಲ್, ಆಗಸ್ಟ್ 15: ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ನಿಂದ 129 ಮಂದಿ ಪ್ರಯಾಣಿಕರನ್ನು ಹೊತ್ತು ಹಾರಿರುವ ಎಐ-244 ಏರ್ ಇಂಡಿಯಾ ವಿಮಾನವು ಭಾನುವಾರ ರಾತ್ರಿ ವೇಳೆ ನವದೆಹಲಿಗೆ ಆಗಮಿಸಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ತಾಲಿಬಾನ್ ಉಗ್ರರು ಹಿಡಿತ ಸಾಧಿಸಿದ ಹಿನ್ನೆಲೆ ವಾರದಲ್ಲಿ ಮೂರು ಬಾರಿ ಕಾಬೂಲ್ಗೆ ಹಾರುತ್ತಿದ್ದ ವಿಮಾನ ಸಂಚಾರವೂ ಸ್ಥಗಿತಗೊಳಿಸಲಾಗುತ್ತಿದೆ. ಭಾನುವಾರ ಬೆಳಗ್ಗೆ ಕಾಬೂಲ್ಗೆ ಹಾರಬೇಕಿದ್ದ ಒಂದು ಚಾರ್ಟರ್ ವಿಮಾನವನ್ನು ರದ್ದುಗೊಳಿಸಲಾಗಿದೆ. ಕಾಬೂಲ್ ವಾಯು ನೆಲೆಯಲ್ಲಿ ಸೇನಾ ಚಟುವಟಿಕೆಗಳು ಹೆಚ್ಚಾಗುತ್ತಿರುವುದರ ಮಧ್ಯೆ ನಾಗರಿಕ ವಿಮಾನಗಳ ಸಂಚಾರ ದೊಡ್ಡ ಸವಾಲಾಗುತ್ತದೆ.
ನಿಮ್ ಸಹವಾಸವೇ ಬೇಡ; ಅಫ್ಘಾನ್ ಮತ್ತು ಭಾರತದ ಭವಿಷ್ಯ ಹೀಗಿರುತ್ತಾ!?
"ಶಾಂತಿಯುತ ಮತ್ತು ತೃಪ್ತಿದಾಯಕ ರೀತಿಯಲ್ಲಿ ಅಧಿಕಾರದ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಕಾಬೂಲ್ನ ಎಲ್ಲಾ ಪ್ರವೇಶದ್ವಾರಗಳಲ್ಲೂ ತಾಲಿಬಾನ್ ಉಗ್ರರು ಸಶಸ್ತ್ರರಾಗಿ ನಿಂತಿರುತ್ತಾರೆ," ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಸೆಪ್ಟೆಂಬರ್ 11 ದಾಳಿಯ ನಂತರ 20 ವರ್ಷಗಳ ಹಿಂದೆ ಅಮೆರಿಕದಿಂದ ಕಾಬೂಲ್ನಿಂದ ಹೊರಹಾಕಲ್ಪಟ್ಟ ತಾಲಿಬಾನ್ಗಳು ಇದೀಗ ಮತ್ತೆ ರಾಜಧಾನಿಯ ಪ್ರವೇಶಿಸಿ ಹಿಡಿತ ಸಾಧಿಸಲು ಮುಂದಾಗಿದ್ದಾರೆ.
ಒಂದೇ ವಾರದಲ್ಲಿ ಅಫ್ಘಾನ್ ಮೇಲೆ ಹಿಡಿತ ಸಾಧಿಸಿದ ತಾಲಿಬಾನ್:
ಅಫ್ಘಾನಿಸ್ತಾನದ ಕೆಲವು ಪ್ರದೇಶಗಳಲ್ಲಿ ಯುಎಸ್ ವಾಯುಸೇನೆ ಬೆಂಬಲದ ಹೊರತಾಗಿಯೂ ತಾಲಿಬಾನ್ ಶಕ್ತಿಶಾಲಿ ಆಗುತ್ತಿದೆ. ಯುಎಸ್ ಸೇನಾ ಪಡೆಯನ್ನು ಹಿಂತೆಗೆದುಕೊಂಡ ಒಂದು ವಾರದಲ್ಲೇ ಇಡೀ ದೇಶದ ಚಿತ್ರಣವೇ ಬದಲಾಗಿ ಹೋಗಿದೆ. ಅಫ್ಘಾನಿಸ್ತಾನ ಸರ್ಕಾರ ಮತ್ತು ಸೇನೆಯನ್ನು ಆಕ್ರಮಿಸಿಕೊಂಡ ತಾಲಿಬಾನ್ ದೇಶದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದೆ. ಒಂದೇ ವಾರದಲ್ಲಿ ದೇಶದ ಪ್ರಮುಖ ಪ್ರದೇಶಗಳ ಮೇಲೆ ತಾಲಿಬಾನ್ ಆಕ್ರಮಿಸಿಕೊಂಡಿದೆ. ಕೆಲವು ಪ್ರದೇಶಗಳಲ್ಲಿ ಸೇನೆಯನ್ನು ಸೋಲಿಸಿದರೆ, ಇನ್ನು ಕೆಲವು ಪ್ರದೇಶಗಳಲ್ಲಿ ಸಂಘಟನೆಗೆ ಸಹಕಾರ ನೀಡಿದ ಸರ್ಕಾರದ ಭದ್ರತಾ ಪಡೆಗಳನ್ನು ಅಲ್ಲಿಂದ ಹಿಂತಿರುಗಿ ಕಳುಹಿಸಲಾಗಿದೆ. ಆದರೆ ತಾಲಿಬಾನ್ ಬಂಡುಕೋರರಿಗೆ ಬೆದರಿ ವಾಪಸ್ಸಾದ ಅಫ್ಘಾನ್ ಸೇನೆ ಮತ್ತು ಯೋಧರ ಬಗ್ಗೆ ಹಲವು ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ. ಶತಕೋಟಿಗಳನ್ನು ಖರ್ಚು ಮಾಡಿ ಅಮೆರಿಕಾದ ಸೇನೆಗಳಿಂದ ಅಫ್ಘಾನ್ ಅದೆಂಥಾ ತರಬೇತಿಗಳನ್ನು ಪಡೆದುಕೊಂಡಿದೆ ಎಂಬು ಪ್ರಶ್ನೆ ಹುಟ್ಟಿಕೊಳ್ಳುತ್ತಿದೆ.
ಅಫ್ಘಾನ್ ರಾಜಧಾನಿ ಮೇಲೆ ತಾಲಿಬಾನ್ ನಿಯಂತ್ರಣ:
ಭಾನುವಾರ ತಾಲಿಬಾನ್ ಸಂಘಟನೆಯ ಹೋರಾಟಗಾರರು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಹೊರವಲಯವನ್ನು ಪ್ರವೇಶಿಸಿದರು. ನಾವು ಬಲವಂತವಾಗಿ ನಗರವನ್ನು ವಶಕ್ಕೆ ಪಡೆದುಕೊಳ್ಳುವುದಿಲ್ಲ ಎಂದು ಭರವಸೆ ನೀಡಿದ ನಂತರ "ಶಾಂತಿಯುತ ವರ್ಗಾವಣೆ"ಗಾಗಿ ಕಾಯುತ್ತಿದ್ದೇವೆ ಎಂದು ತಾಲಿಬಾನ್ ಹೇಳಿದೆ. ಇದರ ಮಧ್ಯೆ ಯುಎಸ್ ರಾಯಭಾರ ಕಚೇರಿಯಲ್ಲಿ ಹೆಲಿಕಾಪ್ಟರ್ಗಳು ಬಂದಿಳಿಯುತ್ತಿದ್ದಂತೆ ಅನಿಶ್ಚಿತತೆಯ ಭೀತಿಯಲ್ಲಿ ಸರ್ಕಾರಿ ಕಚೇರಿಗಳಿಂದ ಸಿಬ್ಬಂದಿಯು ಓಡಿ ಹೋಗಿದ್ದಾರೆ.
ಈ ಮಧ್ಯೆ "ನಾವು ಕಾಬೂಲ್ ನಗರದ ಅಧಿಕಾರವನ್ನು ಶಾಂತಿಯುತವಾಗಿ ವರ್ಗಾಯಿಸುವ ನಿರೀಕ್ಷೆಯಲ್ಲಿದ್ದೇವೆ," ಎಂದು ತಾಲಿಬಾನ್ ವಕ್ತಾರ ಸುಶೈಲ್ ಶಾಹೀನ್ ಹೇಳಿದ್ದಾರೆ. ಕ್ವಾತಾರ್ ಪ್ರದೇಶದಲ್ಲಿ ಜಾಗತಿಕ ಸುದ್ದಿ ಸಂಸ್ಥೆ ಅಲ್-ಜಜಿರಾಗೆ ಅವರು ಪ್ರತಿಕ್ರಿಯೆ ನೀಡಿದ್ದು, ಶಾಂತಿಯುತ ಅಧಿಕಾರ ವರ್ಗಾವಣೆಗೆ ಸಂಬಂಧಿಸಿದಂತೆ ಅಫ್ಘಾನಿಸ್ತಾನ ಸರ್ಕಾರ, ಸೇನೆ ಮತ್ತು ತಾಲಿಬಾನ್ ನಡುವಿನ ಶಾಂತಿ ಮಾತುಕತೆ ಬಗ್ಗೆ ತಿಳಿಸಲು ನಿರಾಕರಿಸಿದ್ದಾರೆ. "ಯಾರೊಬ್ಬರ ಜೀವನ, ಆಸ್ತಿ ಮತ್ತು ಘನತೆಗೆ ಹಾನಿಯಾಗುವುದಿಲ್ಲ ಮತ್ತು ಕಾಬೂಲ್ ನಾಗರಿಕರ ಜೀವಕ್ಕೆ ಅಪಾಯವಿಲ್ಲ" ಎಂದು ತಾಲಿಬಾನ್ ತನ್ನ ಹಿಂದಿನ ಹೇಳಿಕೆಯಲ್ಲಿ ತಿಳಿಸಿತ್ತು.