ಭಾರತ 'ರಾ' ಕೊಲೆ ಸಂಚು ನಡೆಸಿಲ್ಲ : ಸಿರಿಸೇನಾ ಸ್ಪಷ್ಟನೆ
ಕೊಲಂಬೋ, ಅಕ್ಟೋಬರ್ 18: ಇಂಡಿಯನ್ ರೀಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (R &AW) ನನ್ನನ್ನು ಕೊಲ್ಲಲು ಯತ್ನಿಸುತ್ತಿದೆ ಎಂದು ಮಾಧ್ಯಮಗಳಲ್ಲಿ ಬಂದಿರುವ ವರದಿಗಳು ಸತ್ಯಕ್ಕೆ ದೂರವಾಗಿವೆ. ಭಾರತದ ಪ್ರಧಾನಿ ಮೋದಿ ಅವರು ನನ್ನ ಮತ್ರರು ಎಂದು ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಸ್ಪಷ್ಟಪಡಿಸಿದ್ದಾರೆ.
ಶ್ರೀಲಂಕಾ ಅಧ್ಯಕ್ಷರ ಕಚೇರಿ ಈ ಬಗ್ಗೆ ಸ್ಪಷ್ಟನೆ ಹೊರಡಿಸಿದ್ದು, ಮಂಗಳವಾರ ನಡೆದ ಸಭೆಯಲ್ಲಿ ಸಿರಿಸೇನಾ ಅವರು ಕೊಲೆಯತ್ನ ಸಂಚಿನ ಬಗ್ಗೆ ಚರ್ಚೆಯಾದರೂ ಯಾವುದೇ ಸಂಸ್ಥೆಯ ಹೆಸರು ಪ್ರಸ್ತಾಪಿಸಿಲ್ಲವೆಂದು ಪ್ರಕಟಣೆಯಲ್ಲಿ ಹೇಳಿದೆ.
ಭಾರತದ ಮೂವರು RAW ಅಧಿಕಾರಿಗಳ ಬಂಧನ:ಪಾಕ್ ಹೇಳಿಕೆ
ಶ್ರೀಲಂಕಾದ ಸಂಸತ್ ಸಭೆಯಲ್ಲಿ ರಾ ವಿರುದ್ಧ ಆರೋಪ ಮಾಡಲಾಗಿದೆ. ಇದೆಲ್ಲವೂ ಗೊತ್ತಿದ್ದರೂ ಭಾರತದ ಪ್ರಧಾನಿ ನರೇಂದ್ರ ಮೋದಿ ಸುಮ್ಮನಿದ್ದಾರೆ ಎಂದು ಮೈತ್ರಿಪಾಲ ಸಭೆಯಲ್ಲಿ ಹೇಳಿದರು ಎಂದು ಮಾಧ್ಯಮಗಳು ವರದಿ ಬಂದಿತ್ತು.
ಶ್ರೀಲಂಕಾದ ಪ್ರಧಾನಿ ರನಿಲ್ ವಿಕ್ರೆಮೆಸಿಂಘೆ ಅವರು ನವದೆಹಲಿಗೆ ಭೇಟಿ ನೀಡಿ, ಪ್ರಧಾನಿ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲು ಸಮಯ ನಿಗದಿಯಾಗಿದೆ. ಈಸ್ಟ್ ಥರ್ಮಲ್ ಯೋಜನೆ ಸೇರಿದಂತೆ ಬಂದರು ಹಾಗೂ ಹಿಂದೂ ಮಹಾ ಸಾಗರದ ಭಾಗಗಳ ಹಂಚಿಕೆ ಕುರಿತಂತೆ ಮಾತುಕತೆ ನಡೆಸುವ ನಿರೀಕ್ಷೆಯಿದೆ.
ಈ ಸಂದರ್ಭದಲ್ಲಿಯೇ ಸಿರಿಸೇನಾ ಅವರು ಇಂಥ ಆರೋಪ ಮಾಡಿದ್ದಾರೆ ಎಂಬ ಸುದ್ದಿ ಉಭಯ ರಾಷ್ಟ್ರಗಳ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿತ್ತು. ಆದರೆ, ಸಿರಿಸೇನಾ ಅವರ ಅಧ್ಯಕ್ಷರ ಕಚೇರಿಯಿಂದ ಸ್ಪಷ್ಟನೆಯ ಪ್ರಕಟಣೆ ಹೊರಬಿದ್ದಿದೆ.
ಸಭೆ ವೇಳೆ ಕೊಲೊಂಬೊ ಪೋರ್ಟ್ ಅಭಿವೃದ್ಧಿ ಕುರಿತ ಪತ್ರಗಳ ಕುರಿತಾಗಿ ಅಧ್ಯಕ್ಷ ಸಿರಿಸೇನಾ ಹಾಗೂ ಪ್ರಧಾನಿ ವಿಕ್ರೆಮೆಸಿಂಘೆ ಅವರ ನಡುವೆ ತೀವ್ರ ಚರ್ಚೆ ನಡೆಯುತ್ತಿದೆ.
ಪೂರ್ವದ ಕಂಟೈನರ್ಟರ್ಮಿನಲ್ ಪ್ರಾಜೆಕ್ಟ್ನಲ್ಲಿ ಭಾರತದ ಸಹಭಾಗಿತ್ವದ ಬಗ್ಗೆ ಸಿರಿಸೇನಾ ಆಕ್ಷೇಪ ವ್ಯಕ್ತಪಡಿಸಿದ್ದಾಗ, ವಿಕ್ರೆಮೆಸಿಂಘೆ ಇದನ್ನು ವಿರೋಧಿಸಿದ್ದರು. ಭಾರತ ಹಾಗೂ ಶ್ರೀಲಂಕಾ ಸಂಬಂಧ ವೃದ್ಧಿ ದೃಷ್ಟಿಯಿಂದ ಇದು ಮುಖ್ಯ ಎಂದು ಅವರು ವಾದಿಸಿದ್ದರು ಎಂದು ಸಭೆಯ ವಿವರಗಳು ಮಾಧ್ಯಮದಲ್ಲಿ ಬಂದಿತ್ತು.