ಲಂಕಾ ತೊರೆದ ಮಾಜಿ ಪ್ರಧಾನಿ ಕುಟುಂಬದೊಂದಿಗೆ ನೌಕಾನೆಲೆಗೆ ಪಲಾಯನ
ಕೊಲಂಬೊ ಮೇ 10: ಶ್ರೀಲಂಕಾದ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ ಮತ್ತು ಅವರ ಕುಟುಂಬವು ದ್ವೀಪ ರಾಷ್ಟ್ರದ ಈಶಾನ್ಯ ಭಾಗದಲ್ಲಿರುವ ಟ್ರಿಂಕೋಮಲಿಯ ನೌಕಾ ನೆಲೆಯಲ್ಲಿ ಆಶ್ರಯ ಪಡೆದಿದೆ ಎಂದು ಮೂಲಗಳು ಎನ್ಡಿಟಿವಿಗೆ ತಿಳಿಸಿವೆ. ದೇಶದ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿನ ನಡುವೆ ಮಾರಣಾಂತಿಕ ಪ್ರತಿಭಟನೆಗಳು ಶ್ರೀಲಂಕಾದಲ್ಲಿ ಮುಂದುವರೆದಿವೆ. ಹೀಗಾಗಿ ನಿನ್ನೆಯಷ್ಟೇ ಮಹಿಂದಾ ರಾಜಪಕ್ಸೆ ತಮ್ಮ ಪ್ರಧಾನಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಆದರೂ ಹಿಂಸಾಚಾರ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದ್ದು ಶ್ರೀಲಂಕಾದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪ್ರಧಾನಿ ಮನೆಯ ಸುತ್ತಲೂ ಹಿಂಸಾತ್ಮಾಕ ಘಟನೆಗಳು ವರದಿಯಾಗುತ್ತಲೇ ಇವೆ.
ಹೀಗಾಗಿ ಮಾಜಿ ಪ್ರಧಾನಿ ಮತ್ತು ಅವರ ಕುಟುಂಬವನ್ನು ಹೆಲಿಕಾಪ್ಟರ್ನಲ್ಲಿ ನೌಕಾನೆಲೆಗೆ ಕೊಂಡೊಯ್ಯಲಾಯಿತು ಎಂದು ವಿಷಯದ ನೇರ ಜ್ಞಾನ ಹೊಂದಿರುವ ಜನರು ಎನ್ಡಿಟಿವಿಗೆ ತಿಳಿಸಿದ್ದಾರೆ. ರಾಜಧಾನಿ ಕೊಲಂಬೊದಿಂದ ಸುಮಾರು 270 ಕಿಮೀ ದೂರದಲ್ಲಿ ನೌಕಾ ನೆಲೆ ಇದೆ ಎಂದು ಅವರುಹೇಳಿದರು.
ಆರ್ಥಿಕ ಬಿಕ್ಕಟ್ಟಿನಿಂದಾಗಿ ಕೆಲ ವಾರಗಳಿಂದ ನಡೆದ ಪ್ರತಿಭಟನೆಯ ಭೀಕರ ಹಿಂಸಾಚಾರದಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ. ನಂತರ ಕರ್ಫ್ಯೂ ಜಾರಿಗೊಳಿಸಲು ಶ್ರೀಲಂಕಾ ಇಂದು ಸಾವಿರಾರು ಸೈನಿಕರು ಮತ್ತು ಪೊಲೀಸರನ್ನು ನಿಯೋಜಿಸಿದೆ. ನಿನ್ನೆ ಮಹಿಂದಾ ರಾಜಪಕ್ಸೆ ರಾಜೀನಾಮೆಯಿಂದ ಈ ಹಿಂಸಾಚಾರ ಮತ್ತಷ್ಟು ಉರಿಯೋ ಬೆಂಕಿಗೆ ತುಪ್ಪ ಸುರಿದಂತಾಗಿತ್ತು. ಕೊಲಂಬೊದಲ್ಲಿನ ಅವರ ಅಧಿಕೃತ ನಿವಾಸಕ್ಕೆ ರಾತ್ರೋರಾತ್ರಿ ಸಾವಿರಾರು ಸರ್ಕಾರಿ ವಿರೋಧಿ ಪ್ರತಿಭಟನಾಕಾರರು ಸುರಿದರು. ಸರ್ಕಾರದ ಪರವಾರದ ಗುಂಪು ವಿರೋಧಿ ಗುಂಪುಗಳೊಂದಿಗೆ ಸೇರಿ ಲಗಭೆ ಕೈಮೀರಿ ಹೋಗಿತ್ತು. ನಿನ್ನೆ ನಡೆದ ಈ ಹಿಂಸಾಚಾರದಲ್ಲಿ ಸುಮಾರು 200 ಮಂದಿ ಗಾಯಗೊಂಡಿದ್ದಾರೆ.
ಈ ವೇಳೆ 10 ಪೆಟ್ರೋಲ್ ಬಾಂಬ್ಗಳನ್ನು ಎಸೆಯಲಾಯಿತು. ಇದರಿಂದ ಪೊಲೀಸರು ಅಶ್ರುವಾಯು ಮತ್ತು ಎಚ್ಚರಿಕೆಯ ಗುಂಡುಗಳನ್ನು ಹೊಡೆದು ಗುಂಪನ್ನು ಹಿಮ್ಮೆಟ್ಟಿಸಿದರು. ಇಂದು ಮಿಲಿಟರಿಯ ಕಾರ್ಯಾಚರಣೆ ನೇಮಿಸಲಾಗಿದೆ.