ಸೇನಾ ಚಟುವಟಿಕೆ ನಿಲ್ಲಿಸುತ್ತಿರೋ ಇಲ್ವೋ; ಚೀನಾಗೆ ಭಾರತದ ಎಚ್ಚರಿಕೆ!
ನವದೆಹಲಿ, ಜೂನ್.07: ಭಾರತ-ಚೀನಾ ನಡುವಿನ ಲಡಾಖ್ ಗಡಿ ಪ್ರದೇಶಕ್ಕೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳ ಹಿರಿಯ ಕಮಾಂಡಜರ್ಸ್ ನಡೆಸಿದ ರಾಜತಾಂತ್ರಿಕ ಮಾತುಕತೆ ಫಲಿಸಿದೆ. ಉಭಯ ರಾಷ್ಟ್ರಗಳು ಅಂತಾರಾಷ್ಟ್ರೀಯ ಗಡಿಯಲ್ಲಿ ಶಾಂತಿಸ್ಥಾಪನೆಗೆ ಸಮ್ಮತಿ ಸೂಚಿಸಿವೆ.
ಜೂನ್.06ರ ಶನಿವಾರ ಬೆಳಗ್ಗೆ 11 ಗಂಟೆ ವೇಳೆಯಲ್ಲಿ ಪೂರ್ವ ಲಡಾಖ್ ನ ಚುಶುಲ್ ಸೆಕ್ಟರ್ ನಲ್ಲಿರುವ ಮೊಲ್ಡೋ ಪ್ರದೇಶದ ಗಡಿ ಸುರಕ್ಷತಾ ಚರ್ಚೆಯ ಕೇಂದ್ರದಲ್ಲಿ ಉಭಯ ರಾಷ್ಟ್ರಗಳ ಮಿಲಿಟರಿ ಕಮಾಂಡರ್ಸ್ ಶಾಂತಿ ಮಾತುಕತೆ ನಡೆಸಿದರು.
ಭಾರತ-ಚೀನಾ ಕಮಾಂಡರ್ಸ್ ಸಭೆ ಬಗ್ಗೆ ಸೇನಾ ವಕ್ತಾರರು ಹೇಳಿದ್ದೇನು?
ಚೀನಾದ ದಕ್ಷಿಣ ಕ್ಸಿನ್ ಜಿಯಾಂಗ್ ಜಿಲ್ಲೆಯ ಕಮಾಂಡರ್ ಆಗಿರುವ ಮೇಜರ್ ಜನರಲ್ ಲಿಯು ಲಿನ್ ಅವರು ಭಾರತದ ಕಾರ್ಪ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ನೇತೃತ್ವದ ನಿಯೋಗದ ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಲಡಾಖ್ ಗಡಿಯಲ್ಲಿ ಶಾಂತಿಸ್ಥಾಪನೆಗೆ ಸಮ್ಮತಿ
ಭಾರತ-ಚೀನಾದ ಪೂರ್ವ ಭಾಗದ ಲಡಾಖ್ ಗಡಿ ಪ್ರದೇಶದಲ್ಲಿ ಎರಡು ರಾಷ್ಟ್ರಗಳ ಸೇನಾ ಸಂಘರ್ಷದಿಂದ ಆತಂಕಕಾರಿ ವಾತಾವರಣ ಸೃಷ್ಟಿಯಾಗಿದೆ. ಕಳೆದ 28 ದಿನಗಳಿಂದ ಗಡಿ ಪ್ರದೇಶವು ಬೂದಿ ಮುಚ್ಚಿದ ಕೆಂಡದಂತೆ ಮಾರ್ಪಟ್ಟಿದೆ. ಇದನ್ನು ಬಗೆಹರಿಸಿ ಗಡಿಯಲ್ಲಿ ಸೌಹಾರ್ದಯುತ ವಾತಾವರಣ ಹುಟ್ಟು ಹಾಕುವುದಕ್ಕೆ ಎರಡು ರಾಷ್ಟ್ರಗಳ ಹಿರಿಯ ಕಮಾಂಡರ್ಸ್ ಸಮ್ಮತಿ ಸೂಚಿಸಿದ್ದಾರೆ. ಚೀನಾ ಕಮಾಂಡರ್ ಕೂಡಾ ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಮೂರು ಗಂಟೆ, ಎರಡು ವಿಚಾರಗಳ ಬಗ್ಗೆ ಚರ್ಚೆ
ಶನಿವಾರ ಚೀನಾ ಮತ್ತು ಭಾರತದ ಹಿರಿಯ ಕಮಾಂಡರ್ಸ್ ನಡುವೆ ಕನಿಷ್ಠ 3 ಗಂಟೆಗಳ ಕಾಲ ಚರ್ಚೆ ನಡೆಸಲಾಯಿತು. ಈ ವೇಳೆ ಗಲ್ವಾನ್ ಗಡಿ ಪ್ರದೇಶದಲ್ಲಿ ಚೀನಾ ಸೇನೆಯು ಕಾರ್ಯಚಟುವಟಿಕೆಗಳನ್ನು ನಿಲ್ಲಿಸಬೇಕು. ಮರಳಿ ಮೊದಲಿದ್ದ ಪ್ರದೇಶಕ್ಕೆ ವಾಪಸ್ ತೆರಳಬೇಕು ಎಂದು ಭಾರತವು ಆಗ್ರಹಿಸಿದೆ. ಗಡಿ ಪ್ರದೇಶದಲ್ಲಿ ಭಾರತ ನಡೆಸುತ್ತಿರುವ ರಸ್ತೆ ಕಾಮಗಾರಿಯನ್ನು ನಿಲ್ಲಿಸಬೇಕೆಂದು ಚೀನಾ ಕಮಾಂಡರ್ಸ್ ಆಗ್ರಹಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಭಾರತವು ದೇಶದ ಗಡಿ ನಿಯಂತ್ರಣ ರೇಖೆಯೊಳಗೆ ರಸ್ತೆ ಕಾಮಗಾರಿಯನ್ನು ನಡೆಸಲಾಗುತ್ತಿದೆ ಎಂದು ಉತ್ತರಿಸಿದೆ ಎಂದು ತಿಳಿದು ಬಂದಿದೆ.
ಶಾಂತಿಯುತ ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ
ಚೀನಾ-ಭಾರತ ಗಡಿ ಸಮಸ್ಯೆಯನ್ನು ಶಾಂತಿಯುತ ಮಾರ್ಗದಲ್ಲಿ ಬಗೆಹರಿಸಿಕೊಳ್ಳುವುದಕ್ಕೆ ಎರಡು ರಾಷ್ಟ್ರಗಳು ಸಮ್ಮತಿ ಸೂಚಿಸಿವೆ. ಈ ಮೊದಲು ಉಭಯ ರಾಷ್ಟ್ರಗಳ ನಡುವೆ ಮಾಡಿಕೊಂಡಿರುವ ರಾಜತಾಂತ್ರಿಕ ಒಪ್ಪಂದಗಳನ್ನು ಗಮನದಲ್ಲಿ ಇಟ್ಟುಕೊಳ್ಳುವುದು. ನಿಯಮಗಳನ್ನು ಮೊದಲಿನಂತೆ ಪಾಲಿಸುವುದರಿಂದ ಗಡಿ ಪ್ರದೇಶದಲ್ಲಿ ಶಾಂತಿಯುತ ವಾತಾವರಣವನ್ನು ಕಾಪಾಡಿಕೊಳ್ಳುವುದಕ್ಕೆ ಹಿರಿಯ ಕಮಾಂಡರ್ಸ್ ನೇತೃತ್ವದ ಸಭೆಯಲ್ಲಿ ಸಮ್ಮತಿ ಸೂಚಿಸಲಾಗಿದೆ.
ಉಭಯ ಸೇನಾ ಹಾಗೂ ರಾಜತಾಂತ್ರಿಕ ಸಂಬಂಧ ವೃದ್ಧಿ
ಎರಡು ರಾಷ್ಟ್ರಗಳ ನಡುವಿನ ಸೇನಾ ಸಂಬಂಧ ಹಾಗೂ ರಾಜತಾಂತ್ರಿಕ ಸಂಬಂಧವನ್ನು ಮುಂದುವರಿಸಿಕೊಂಡು ಹೋಗಬೇಕಿದೆ. ಸೌಹಾರ್ದಯುತ ಸಂಬಂಧ ವೃದ್ಧಿಸಿಕೊಳ್ಳುವುದರಿಂದ ಭಾರತ-ಚೀನಾ ನಡುವಿನ ಗಡಿ ಪ್ರದೇಶದಲ್ಲಿ ಶಾಂತಿಸ್ಥಾಪನೆ ಸಾಧ್ಯವಾಗಲಿದೆ. ಕಮಾಂಡರ್ಸ್ ನೇತೃತ್ವದ ಸಭೆಯಲ್ಲಿ ಯಾವುದೇ ರೀತಿ ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಲಿಲ್ಲ. ಆದರೆ ಮುಂದಿನ ಹಂತದ ಮಾತುಕತೆಯ ಹಾದಿಯನ್ನು ಸುಗಮಗೊಳಿಸಿದೆ.
ಲಡಾಖ್ ಗಡಿ ವಿವಾದಕ್ಕೆ ಕಾರಣವಾಗಿರುವುದು ಏನು?
ಭಾರತ ಮತ್ತು ಚೀನಾ ಗಡಿಯ ಪಂಗೊಂಗ್ ಸೋ, ಗಲ್ವಾನ್ ವ್ಯಾಲಿ ಪ್ರದೇಶದಲ್ಲಿ 2,500 ಯೋಧರು ಶಸ್ತ್ರಸಜ್ಜಿತರಾಗಿ ನಿಂತಿದ್ದಾರೆ. ಪಂಗೊಂಗ್ ಸೋ ಸುತ್ತಮುತ್ತಲು 180 ಕಿ.ಮೀ ವ್ಯಾಪ್ತಿಯಲ್ಲಿ ರಕ್ಷಣಾ ಮೂಲಸೌಕರ್ಯಗಳ ಕಾಮಗಾರಿ ಚಟುವಟಿಕೆ ನಡೆಸುತ್ತಿರುವುದು ಉಪಗ್ರಹ ಸೆರೆ ಹಿಡಿದ ಫೋಟೋಗಳಲ್ಲಿ ಸಾಬೀತಾಗಿದೆ. ಇದಕ್ಕೂ ಮೊದಲು ದರ್ಬಕ್-ಶಯೊಕ್ ನಿಂದ ದೌಲತ್ ಬೆಗ್ ಒಲ್ಡಿಯೆಗೆ ಗಲ್ವಾನ್ ವ್ಯಾಲಿಯಲ್ಲಿ ರಸ್ತೆ ನಿರ್ಮಿಸುವುದಕ್ಕೆ ಭಾರತವು ಮುಂದಾಗಿತ್ತು. ಪಂಗೊಂಗ್ ಸೋ ತುದಿಯಲ್ಲಿರುವ ಪ್ರದೇಶದಲ್ಲಿ ರಸ್ತೆ ಕಾಮಗಾರಿಗೆ ಚೀನಾ ವಿರೋಧಿಸಿತ್ತು. ಪಂಗೊಂಗ್ ಸೋ ಪ್ರದೇಶ ತೀರಾ ಮಹತ್ವವಾಗಿದ್ದು ಎಂದು ಭಾರತ ಕೂಡಾ ಪರಿಗಣಿಸಿತ್ತು. ಆದರೆ ಚೀನಾ ವಿರೋಧದ ಹಿನ್ನೆಲೆ ಗಡಿಯಲ್ಲಿ ಯಾವುದೇ ರೀತಿ ಸೇನೆ ನಿಯೋಜಿಸದಿರಲು ಭಾರತವು ತೀರ್ಮಾನಿಸಿತು.