ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಪಾಕಿಸ್ತಾನಕ್ಕೆ ಮುಖಭಂಗ
ದಿ ಹೇಗ್, ಜುಲೈ 17: ತೀವ್ರ ಕುತೂಹಲ ಕೆರಳಿಸಿದ್ದ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಭಾರತಕ್ಕೆ ರಾಜತಾಂತ್ರಿಕ ಗೆಲುವು ದೊರೆತಿದ್ದು, ಪಾಕಿಸ್ತಾನಕ್ಕೆ ಮುಖಭಂಗವಾಗಿದೆ.
ಪಾಕಿಸ್ತಾನದೊಳಗೆ ನುಗ್ಗಿ ಬೇಹುಗಾರಿಕೆ ಮತ್ತು ಭಯೋತ್ಪಾದನೆಯ ಸಂಚು ನಡೆಸಿದ್ದ ಆರೋಪದಲ್ಲಿ ಭಾರತದ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ಅಲ್ಲಿನ ಸೇನಾ ನ್ಯಾಯಾಲಯ ವಿಧಿಸಿದ್ದ ಗಲ್ಲುಶಿಕ್ಷೆಯನ್ನು ಅಂತಾರಾಷ್ಟ್ರೀಯ ನ್ಯಾಯಾಲಯ ಅಮಾನತು ಮಾಡಿದೆ. ಅಲ್ಲದೆ, ಪಾಕಿಸ್ತಾನವು ತನ್ನ ತೀರ್ಪನ್ನು ಮರುಪರಿಶೀಲಿಸುವಂತೆ ಸೂಚಿಸಿದೆ.
ಜಾಧವ್ ಅವರನ್ನು ಗಲ್ಲುಶಿಕ್ಷೆಗೆ ಗುರಿಪಡಿಸಿಯೇ ಸಿದ್ಧ ಎಂದು ಹೇಳಿದ್ದ ಪಾಕಿಸ್ತಾನಕ್ಕೆ ಇದರಿಂದ ಹಿನ್ನಡೆಯಾಗಿದೆ. ಆದರೆ, ಜಾಧವ್ ಅವರ ಗಲ್ಲುಶಿಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿ ಅವರನ್ನು ಬಿಡುಗಡೆ ಮಾಡಬೇಕೆಂಬ ಭಾರತದ ಬೇಡಿಕೆಯನ್ನು ಅಂತಾರಾಷ್ಟ್ರೀಯ ನ್ಯಾಯಾಲಯ ಪುರಸ್ಕರಿಸಿಲ್ಲ ಎನ್ನುವುದು ಕೂಡ ಗಮನಿಸಬೇಕಾದ ಸಂಗತಿ.
ಭಾರತಕ್ಕೆ ರಾಜತಾಂತ್ರಿಕ ಜಯ: ಜಾಧವ್ ಗಲ್ಲುಶಿಕ್ಷೆ ಅಮಾನತು
ಜಾಧವ್ ಅವರಿಗೆ ರಾಜತಾಂತ್ರಿಕ ಭೇಟಿ ಅವಕಾಶ ನೀಡದೆ ವಿಯೆನ್ನಾ ಒಪ್ಪಂದ ಉಲ್ಲಂಘಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ರಾಜತಾಂತ್ರಿಕ ಅವಕಾಶವು ವಿಯೆನ್ನಾ ಒಪ್ಪಂದ ಮೂಲ ತತ್ವವಾಗಿದೆ. ಇದನ್ನು ಪಾಕಿಸ್ತಾನ ಉಲ್ಲಂಘನೆ ಮಾಡಿರುವುದು ಅಲ್ಲದೆ, ಜಾಧವ್ ಅವರ ತಾಯಿ ಮತ್ತು ಪತ್ನಿಯನ್ನು ಅಲ್ಲಿನ ಸೇನೆ ಕೆಟ್ಟದಾಗಿ ನಡೆಸಿಕೊಂಡಿತ್ತು ಎಂದು ಭಾರತ ಆರೋಪಿಸಿತ್ತು.
ಗಲ್ಲುಶಿಕ್ಷೆ ತೀರ್ಪು ಅಮಾನತು
ಜಾಧವ್ಗೆ ವಿಧಿಸಿರುವ ಗಲ್ಲುಶಿಕ್ಷೆ ತೀರ್ಪನ್ನು ಅಮಾನತು ಮಾಡಿದ ಅಂತಾರಾಷ್ಟ್ರೀಯ ನ್ಯಾಯಾಲಯವು, ಜಾಧವ್ ಅವರನ್ನು ಭೇಟಿ ಮಾಡಲು ಮತ್ತು ಅವರು ಕಾನೂನಾತ್ಮಕ ನೆರವು ಒದಗಿಸಲು ಭಾರತದ ರಾಜತಾಂತ್ರಿಕರಿಗೆ ಅವಕಾಶ ನೀಡುವಂತೆ ಆದೇಶ ಹೊರಡಿಸಿದೆ.
ಕುಲಭೂಷಣ್ ಸುಧೀರ್ ಜಾಧವ್ ಅವರ ಶಿಕ್ಷೆ ಮತ್ತು ಮರಣದಂಡನೆಯನ್ನು ಪರಿಣಾಮಕಾರಿಯಾಗಿ ಮರುಪರಿಗಣಿಸಲು ಹಾಗೂ ಮರುಪರಿಶೀಲಿಸಲು ಶಿಕ್ಷೆ ಜಾರಿ ಮೇಲಿನ ತಡೆಯನ್ನು ಮುಂದುವರಿಸುವುದು ಅಗತ್ಯವಾಗಿದೆ ಎಂದು ಐಸಿಜೆ ಹೇಳಿದೆ.
ಆರ್ಟಿಕಲ್ 36ರ ಉಲ್ಲಂಘನೆ
ಪಾಕಿಸ್ತಾನವು ಕಾನ್ಸುಲರ್ ಭೇಟಿ ನಿರಾಕರಿಸುವ ಮೂಲಕ ಆರ್ಟಿಕಲ್ 36 (1)ಅನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಜಾಧವ್ ಅವರ ಗಲ್ಲುಶಿಕ್ಷೆಯ ತೀರ್ಪನ್ನು ಪರಿಣಾಮಕಾರಿಯಾಗಿ ಮರುಪರಿಶೀಲನೆ ಮತ್ತು ಮರುಪರಿಗಣನೆಗೆ ಒಳಪಡಿಸಬೇಕು ಎಂದು ಹೇಳಿದೆ. ಬೇಹುಗಾರಿಕೆಯ ಪ್ರಕರಣಗಳಲ್ಲಿ ವಿಯೆನ್ನಾ ಒಪ್ಪಂದದ ಆರ್ಟಿಕಲ್ 36 ಅನ್ವಯವಾಗುವುದಿಲ್ಲ ಎಂದು ವಾದಿಸಿದ ಪಾಕಿಸ್ತಾನ. 2008ರಲ್ಲಿ ಭಾರತ ಮತ್ತು ಪಾಕಿಸ್ತಾನ ಮಾಡಿಕೊಂಡ ಒಪ್ಪಂದ ಈ ಪ್ರಕರಣದಲ್ಲಿ ಮುಖ್ಯವಾಗುತ್ತದೆ ಎಂದು ವಾದ.
ಜೈಹೋ ಕುಲಭೂಷಣ್ ಜಾಧವ್ : ತೀರ್ಪಿನ 8 ಪ್ರಮುಖ ಸಂಗತಿಗಳು
ಭಾರತದ ಕೆಲ ಮನವಿಗಳ ತಿರಸ್ಕಾರ
ಜಾಧವ್ ಅವರಿಗೆ ವಿಧಿಸಿರುವ ಗಲ್ಲುಶಿಕ್ಷೆಯನ್ನು ರದ್ದುಗೊಳಿಸಬೇಕು, ಅವರನ್ನು ಬಿಡುಗಡೆ ಮಾಡಿ ಭಾರತಕ್ಕೆ ಸುರಕ್ಷಿತವಾಗಿ ಕಳುಹಿಸಬೇಕು ಎಂಬುದು ಸೇರಿದಂತೆ ಭಾರತದ ಬಹುತೇಕ ಬೇಡಿಕೆಗಳನ್ನು ನ್ಯಾಯಾಲಯ ತಿರಸ್ಕರಿಸಿದೆ.
ಭಾರತದ ಪರ 15 ನ್ಯಾಯಾಧೀಶರು
ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ 16 ನ್ಯಾಯಾಧೀಶರ ಪೈಕಿ ಭಾರತದ ಪರ 15 ನ್ಯಾಯಾಧೀಶರು ಮತ ಚಲಾಯಿಸಿದರೆ, ಭಾರತದ ವಿರುದ್ಧ ಒಬ್ಬ ನ್ಯಾಯಾಧೀಶರು ಮಾತ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನ ಸೇರಿದಂತೆ ವಿವಿಧ ದೇಶಗಳ ನ್ಯಾಯಾಧೀಶರು ಈ ವಿಚಾರಣೆಯಲ್ಲಿ ಭಾಗವಹಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಲು ಸಿಐಜೆಗೆ ಅಧಿಕಾರವಿದೆ ಎನ್ನುವುದಕ್ಕೆ ಎಲ್ಲ 16 ನ್ಯಾಯಾಧೀಶರು ಅವಿರೋಧವಾಗಿ ಒಪ್ಪಿಕೊಂಡಿದ್ದರು. ಉಳಿದಂತೆ ಭಾರತದ ಎಲ್ಲ ವಾದಗಳಿಗೂ ಪಾಕಿಸ್ತಾನದ ನ್ಯಾಯಾಧೀಶರನ್ನು ಹೊರತುಪಡಿಸಿ ಉಳಿದ ಎಲ್ಲ ನ್ಯಾಯಾಧೀಶರೂ ಅನುಮೋದನೆ ನೀಡಿದರು.