ಜಾಧವ್ ಗಲ್ಲುಶಿಕ್ಷೆ ಪರಾಮರ್ಶೆಗೆ ಅವಕಾಶ ಸಾಧ್ಯತೆ: ಮಸೂದೆಗೆ ಒಪ್ಪಿಗೆ ನೀಡಿದ ಪಾಕ್ ಸಮಿತಿ
ಇಸ್ಲಾಮಾಬಾದ್, ಅಕ್ಟೋಬರ್ 22: ಗೂಢಚಾರಿಕೆ ಮತ್ತು ಭಯೋತ್ಪಾದನೆ ಆರೋಪದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತದ ನೌಕಾ ಪಡೆ ಮಾಜಿ ಉದ್ಯೋಗಿ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಭಾರತಕ್ಕೆ ತುಸು ನೆಮ್ಮದಿ ದೊರಕಿದೆ.
ವಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಪಾಕಿಸ್ತಾನದ ರಾಷ್ಟ್ರೀಯ ಸಂಸತ್ನ ಕಾನೂನು ಮತ್ತು ನ್ಯಾಯ ಸ್ಥಾಯಿ ಸಮಿತಿಯು ಜಾಧವ್ ಅವರ ಗಲ್ಲು ಶಿಕ್ಷೆಯನ್ನು ಪರಾಮರ್ಶೆಗೆ ಒಳಪಡಿಸುವ ಸರ್ಕಾರದ ಮಸೂದೆಗೆ ಅನುಮೋದನೆ ನೀಡಿದೆ.
ಜಾಧವ್ ಕೇಸ್: ಪಾಕ್ ಹೈಕೋರ್ಟ್ನಿಂದ ಮಹತ್ವದ ಆದೇಶ!
ಸಮಿತಿಯಲ್ಲಿದ್ದ ಪಾಕಿಸ್ತಾನ ಮುಸ್ಲಿಂ ಲೀಗ್ (ಪಿಎಂಎಲ್-ಎನ್), ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಮತ್ತು ಜಮೈತ್ ಉಲೆಮಾ ಇ ಇಸ್ಲಾಂ (ಜೆಯುಐ-ಎಫ್) ಪಕ್ಷಗಳ ಸದಸ್ಯರು ಈ ಮಸೂದೆಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಜಾಧವ್ ಅವರಿಗೆ ಅನುಕೂಲ ಮಾಡಿಕೊಡುವ 'ಎನ್ಆರ್ಒ' ಎಂದು ಆರೋಪಿಸಿವೆ.
ರಾಷ್ಟ್ರೀಯ ಸಮನ್ವಯ ಸುಗ್ರೀವಾಜ್ಞೆ (ಎನ್ಆರ್ಒ) ಅನ್ನು ಆಗಿನ ಸೇನಾ ಸರ್ವಾಧಿಕಾರಿ ಪರ್ವೇಜ್ ಮುಷರಫ್ ಜಾರಿಗೆ ತಂದಿದ್ದರು. ಗಡಿಪಾರಾದ ರಾಜಕೀಯ ನಾಯಕರು ಮತ್ತು ರಾಜಕಾರಣಿಗಳ ವಿರುದ್ಧದ ಗಂಭೀರ ಪ್ರಕರಣಗಳನ್ನು ಕೈಬಿಡುವ ಆದೇಶವನ್ನು ನೀಡಿದ್ದರು.
ಈ ಮಸೂದೆಯನ್ನು ಅಂತಾರಾಷ್ಟ್ರೀಯ ನ್ಯಾಯಾಲಯದ ನಿರ್ದೇಶನಗಳಿಗೆ ಅನುಗುಣವಾಗಿ ಜಾರಿಗೆ ತರಲಾಗಿದೆ ಎಂದು ಕಾನೂನು ಮತ್ತು ನ್ಯಾಯಾಂಗ ಸಚಿವ ಫಾರೋಗ್ ನಸೀಮ್ 'ಅಂತಾರಾಷ್ಟ್ರೀಯ ನ್ಯಾಯಾಲಯ (ಪರಾಮರ್ಶೆ ಮತ್ತು ಮರುಪರಿಗಣನೆ) ಸುಗ್ರೀವಾಜ್ಞೆ' ಮಸೂದೆಯನ್ನು ಸಮರ್ಥಿಸಿಕೊಂಡಿದ್ದಾರೆ. ಒಂದು ವೇಳೆ ಈ ಮಸೂದೆಯನ್ನು ಸಂಸತ್ ಅಂಗೀಕರಿಸಿದೆ ಹೋದರೆ ಪಾಕಿಸ್ತಾನವು ಅಂತಾರಾಷ್ಟ್ರೀಯ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿದ ತಪ್ಪಿಗಾಗಿ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕುಲಭೂಷಣ್ ಭೇಟಿ; ಹೇಳಿದಂತೆ ನಡೆದುಕೊಳ್ಳದ ಪಾಕ್
'ಭಾರತೀಯ ಗೂಢಚಾರಿಗೆ ಅನುಕೂಲ ಮಾಡಿಕೊಡುವ ಕಾನೂನು ರೂಪಿಸಲು ನಾವು ಇಲ್ಲಿ ಕುಳಿತಿಲ್ಲ. ಸಾರ್ವಜನಿಕ ಚರ್ಚೆಗಾಗಿ ಈ ಮಸೂದೆಯನ್ನು ಸಾರ್ವಜನಿಕ ಮತ್ತು ಬಾರ್ ಅಸೋಸಿಯೇಷನ್ ಮುಂದೆ ಪ್ರಸ್ತುತಪಡಿಸಬೇಕಿದೆ. ನೀವು ದೇಶವನ್ನು ತಪ್ಪುದಾರಿಗೆ ಎಳೆಯುತ್ತಿದ್ದೀರಿ' ಎಂದು ಅವರು ಕಿಡಿಕಾರಿದ್ದಾರೆ.
ಮೇಲ್ಮನವಿ ಸಲ್ಲಿಸಲು ಕುಲಭೂಷಣ್ ಜಾಧವ್ಗೆ ಅವಕಾಶ: ಕಾಯ್ದೆಗೆ ಪಾಕಿಸ್ತಾನ ತಿದ್ದುಪಡಿ
ಸೇನಾ ನ್ಯಾಯಾಲಯ ವಿಧಿಸಿರುವ ಗಲ್ಲು ಶಿಕ್ಷೆ ವಿರುದ್ಧ ಮನವಿ ಸಲ್ಲಿಸಲು ಅವಕಾಶ ಕೊಡುವ ಶಾಸನದ ಮೂಲಕ ಜಾಧವ್ಗೆ ನಿರಾಳತೆ ನೀಡಲು ಸರ್ಕಾರ ಪ್ರಯತ್ನಿಸುತ್ತಿದೆ. ಈ ಅವಕಾಶ ಸ್ವತಃ ಪಾಕಿಸ್ತಾನದ ಪ್ರಜೆಗಳಿಗೂ ಇಲ್ಲ ಎಂದು ಪಿಪಿಪಿ ಸದಸ್ಯ ಸಯ್ಯದ್ ನವೀದ್ ಖಮರ್ ಆರೋಪಿಸಿದ್ದಾರೆ.