ಜೈಹೋ ಕುಲಭೂಷಣ್ ಜಾಧವ್ : ತೀರ್ಪಿನ 8 ಪ್ರಮುಖ ಸಂಗತಿಗಳು
ಹೇಗ್ (ನೆದರ್ಲೆಂಡ್), ಜುಲೈ 17 : ಅಂತಾರಾಷ್ಟ್ರೀಯ ನ್ಯಾಯದಾನ ದಿನದಂದೇ ಹೇಗ್ ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಭರ್ಜರಿ ಜಯ ದೊರೆತಿದೆ.
ಪಾಕಿಸ್ತಾನದಿಂದ ಬಂಧನಕ್ಕೊಳಗಾಗಿ ಮರಣದಂಡನೆ ಶಿಕ್ಷೆಗೊಳಗಾಗಿದ್ದ ಭಾರತದ ವಾಯುದಳದ ನಿವೃತ್ತ ಸೇನಾಧಿಕಾರಿ ಕುಲಭೂಷಣ್ ಜಾಧವ್ (49) ಅವರಿಗೆ ರಾಜತಾಂತ್ರಿಕ ಪ್ರವೇಶ ದೊರೆಯಬೇಕು, ಮರಣದಂಡನೆ ಶಿಕ್ಷೆ ಅಮಾನತಿನಲ್ಲಿಡಬೇಕು ಮತ್ತು ಶಿಕ್ಷೆಯ ಮರುಪರಿಶೀಲನೆ ಆಗಬೇಕು ಎಂದು ಹದಿನಾರು ನ್ಯಾಯಮೂರ್ತಿಗಳ ಪೀಠ ಐತಿಹಾಸಿಕ ತೀರ್ಪು ನೀಡಿದೆ.
ಕೆಲ ಸಂಗತಿಗಳಲ್ಲಿ ಭಾರತಕ್ಕೆ ನಿರೀಕ್ಷಿತ ನ್ಯಾಯ ದೊರೆಯದಿದ್ದರೂ, ಈ ತೀರ್ಪನ್ನು ಭಾರತಕ್ಕೆ ದಕ್ಕಿನದ ಅದ್ಭುತ ಜಯವೆಂದೇ ಬಣ್ಣಿಸಲಾಗುತ್ತಿದೆ. ಹದಿನೈದು ನ್ಯಾಯಮೂರ್ತಿಗಳು ಭಾರತದ ಪರವಾಗಿ ತೀರ್ಪು ನೀಡಿದರೆ, ಜಿಲ್ಲಾನಿ ಎಂಬ ನ್ಯಾಯಮೂರ್ತಿ ಮಾತ್ರ ಭಾರತದ ವಿರುದ್ಧ ತೀರ್ಪು ನೀಡಿದ್ದಾರೆ.
ಭಾರತಕ್ಕೆ ರಾಜತಾಂತ್ರಿಕ ಜಯ: ಜಾಧವ್ ಶಿಕ್ಷೆ ಅಮಾನತು
ಅವರನ್ನು ಇರಾನ್ ನಿಂದ ಅಪಹರಿಸಿ, ಬಂಧಿಸಲಾಗಿತ್ತು. ಬೇಹುಗಾರಿಕೆ ಮಾಡಿದ್ದಾರೆ ಮತ್ತು ಭಯೋತ್ಪಾದನೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ, ವಿಚಾರಣೆ ನಡೆಸಿ ಪಾಕಿಸ್ತಾನದ ಮಿಲಿಟರಿ ಕೋರ್ಟ್ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಅವರನ್ನು ಪ್ರತಿನಿಧಿಸಲು, ಕಾನೂನು ನೆರವು ನೀಡಲು ಭಾರತಕ್ಕೆ ಅವಕಾಶ ನೀಡಲಾಗಿರಲಿಲ್ಲ.
ಅಂತಾರಾಷ್ಟ್ರೀಯ ನ್ಯಾಯಾಲಯ ಗಮನಿಸಿರುವ ಪ್ರಮುಖ ಸಂಗತಿಗಳು ಕೆಳಗಿನಂತಿವೆ.
1) ಈ ಹೈಪ್ರೊಫೈಲ್ ಪ್ರಕರಣ ಅಂತಾರಾಷ್ಟ್ರೀಯ ನ್ಯಾಯಾಲಯದ ಅಧೀನದಲ್ಲಿ ಬರುತ್ತದೆ ಎಂದು ಎಲ್ಲ ನ್ಯಾಯಮೂರ್ತಿಗಳು ಸರ್ವಸಮ್ಮತದಿಂದ ಹೇಳಿದ್ದಾರೆ. 2017ರ ಮೇ 8ರಂದು ಭಾರತ ಅರ್ಜಿ ಸಲ್ಲಿಸಿತ್ತು.
2) ಭಾರತದ ಅರ್ಜಿಯನ್ನು ಸಾರಾಸಗಟಾಗಿ ತಿರಸ್ಕರಿಸಬೇಕು ಎಂಬ ಪಾಕಿಸ್ತಾನದ ವಾದವನ್ನು 15-1ರ ಮತಗಳ ಅಂತರದಿಂದ ನ್ಯಾಯಾಲಯ ತಿರಸ್ಕರಿಸಿದೆ. ಭಾರತ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಲಾಗಿದೆ ಎಂದು ಹೇಳಿದೆ.
3) ಬಂಧಿತರಾಗಿರುವ ಕುಲಭೂಷಣ್ ಜಾಧವ್ ಅವರಿಗೆ ಅವರ ಹಕ್ಕುಗಳನ್ನು ತಿಳಿಸದೆ ಪಾಕಿಸ್ತಾನ ವಿಯೆನ್ನಾ ಒಪ್ಪಂದವನ್ನು (ಅನುಚ್ಛೇದ 36, ಪ್ಯಾರಾ 1ಬಿ ಅಡಿಯಲ್ಲಿ) ಉಲ್ಲಂಘಿಸಿದೆ ಎಂದು 15-1 ಮತಗಳ ಅಂತರದಿಂದ ತೀರ್ಪು ನೀಡಲಾಗಿದೆ.
ಕುಲಭೂಷಣ್ ಜಾಧವ್ ಪ್ರಕರಣ: ಯಾವಾಗ ಏನೇನಾಯ್ತು? Timeline
4) ಕುಲಭೂಷಣ್ ಜಾಧವ್ ಅವರನ್ನು ಬಂಧಿಸಿದ ಕೂಡಲೆ ಬಂಧನದ ಬಗ್ಗೆ ಭಾರತಕ್ಕೆ ಮಾಹಿತಿ ನೀಡದೆ ಮತ್ತು ಜಾಧವ್ ಅವರಿಗೆ ಭಾರತದ ನೆರವು ನೀಡದಂತೆ ಮಾಡಿ, ಪಾಕಿಸ್ತಾನ ವಿಯೆನ್ನಾ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.
5) ಜಾಧವ್ ಅವರೊಂದಿಗೆ ಸಂಪರ್ಕ ಸಾಧಿಸುವ ಭಾರತದ ಹಕ್ಕನ್ನು ಕೂಡ ಪಾಕಿಸ್ತಾನ ನಿರಾಕರಿಸಿ ವಿಯೆನ್ನಾ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. ಜಾಧವ್ ಅವರನ್ನು ಸಂಪರ್ಕಿಸಿ ಅವರಿಗೆ ಕಾನೂನು ನೆರವು ನೀಡದಂತೆ ಪಾಕಿಸ್ತಾನ ತಡೆದಿದೆ ಎಂದು ಕೋರ್ಟ್ ತಪರಾಕಿ ಹಾಕಿದೆ.
ಕುಲಭೂಷಣ್ ಪರ ವಾದ ಮಂಡಿಸಲು ವಕೀಲ ಸಾಳ್ವೆ ಫೀಜ್ ಎಷ್ಟು?
6) ಜಾಧವ್ ಅವರಿಗೆ ಅವರ ಹಕ್ಕುಗಳನ್ನು ತಿಳಿಸಿಕೊಡುವುದಲ್ಲದೆ, ಬಂಧನದ ನಂತರ ತಡ ಮಾಡದೆ ಅವರಿಗೆ ಭಾರತದ ರಾಜತಾಂತ್ರಿಕ ನೆರವು ಸಿಗದಂತೆ ಮಾಡಿ ವಿಯೆನ್ನಾ ಒಪ್ಪಂದವನ್ನು ಉಲ್ಲಂಘಿಸಿದೆ ಎಂದೂ ನ್ಯಾಯಮೂರ್ತಿಗಳು ಹೇಳಿದ್ದಾರೆ.
7) ಕುಲಭೂಷಣ್ ಜಾಧವ್ ಅವರಿಗೆ ವಿಧಿಸಲಾಗಿದ್ದ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ಮತ್ತು ಶಿಕ್ಷೆಯ ಮರುಪರಿಶೀಲನೆ ನಡೆಸಲು ಪಾಕಿಸ್ತಾನ ಅನುಮತಿ ನೀಡಬೇಕಾಗಿತ್ತು. ಆದರೆ, ಅದನ್ನೂ ನಿರಾಕರಿಸಿ ಪಾಕಿಸ್ತಾನ ಅನ್ಯಾಯ ಎಸಗಿದೆ.
8) ಈ ತೀರ್ಪಿನ ಮೂಲಕ ಕುಲಭೂಷಣ್ ಜಾಧವ್ ಅವರಿಗೆ ವಿಧಿಸಲಾಗಿದ್ದ ಮರಣದಂಡನೆ ತೀರ್ಪನ್ನು ಅಮಾನತು ಮಾಡಿದ್ದು, ಶಿಕ್ಷೆಯ ಮರುಪರಿಶೀಲನೆಗೆ ಅವಕಾಶ ಮಾಡಕೊಡಬೇಕು ಎಂತು ನ್ಯಾಯಾಲಯ ತೀರ್ಪು ನೀಡಿದೆ.