ಜಾಧವ್ ನೇಣು ತಡೆ : ಕೋರ್ಟಿನ 10 ಪ್ರಮುಖ ಹೇಳಿಕೆ
ನವದೆಹಲಿ, ಮೇ 18 : ಭಾರತದ ಕುಲಭೂಷಣ್ ಜಾಧವ್ ಅವರಿಗೆ ನೇಣು ಶಿಕ್ಷೆ ನೀಡಿದ ತೀರ್ಪಿಗೆ ತಡೆಯಾಜ್ಞೆ ನೀಡಿ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ನ್ಯಾಯಾಲಯ ಭಾರೀ ಹೊಡೆತವನ್ನು ನೀಡಿದೆ. ಅಂತಿಮ ತೀರ್ಪು ಬರುವವರೆಗೆ ಜಾಧವ್ ಅವರನ್ನು ಗಲ್ಲಿಗೇರಿಸುವಂತಿಲ್ಲ ಎಂದು ಸ್ಪಷ್ಟವಾಗಿ ಮಧ್ಯಂತರ ಆಜ್ಞೆ ನೀಡಿದೆ.
ಕುಲಭೂಷಣ್ ಅವರು ಪಾಕಿಸ್ತಾನದ ವಿರುದ್ಧ ಬೇಹುಗಾರಿಕೆ ಮಾಡಿದ್ದಾರೆ ಎಂದು ಆರೋಪಿಸಿ ಪಾಕಿಸ್ತಾನ ಅವರನ್ನು ಬಂಧಿಸಿ, ಅವರ ವಿರುದ್ಧ ಪಾಕ್ ಮಿಲಿಟರಿ ಕೋರ್ಟ್ ಗಲ್ಲು ಶಿಕ್ಷೆಯನ್ನು ನೀಡಿತ್ತು. ಇದನ್ನು ಪ್ರಶ್ನಿಸಿ ಭಾರತ ಅಂತಾರಾಷ್ಟ್ರೀಯ ಕೋರ್ಟಿನ ಮೆಟ್ಟಿಲೇರಿತ್ತು. ಜಾಧವ್ ಅವರ ನೇಣು ಶಿಕ್ಷೆ ತಡೆಯಾಗಿರುವುದು ಭಾರತಕ್ಕೆ ಸಿಕ್ಕ ಅಭೂತಪೂರ್ವ ಜಯವಾಗಿದೆ.[ಜಾಧವ್ ಗಲ್ಲು ಶಿಕ್ಷೆಗೆ ತಡೆ; ಅಂತಾರಾಷ್ಟ್ರೀಯ ಕೋರ್ಟ್ ಐತಿಹಾಸಿಕ ತೀರ್ಪು]
ಕುಲಭೂಷಣ್ ಜಾಧವ್ ಅವರನ್ನ ಸಂಪರ್ಕಿಸಲು ಭಾರತದ ರಾಯಭಾರ ಕಚೇರಿಗೆ ಸಂಪೂರ್ಣ ಅನುಮತಿ ನೀಡಬೇಕು ಎಂದು ನ್ಯಾಯಮೂರ್ತಿ ರಾನಿ ಅಬ್ರಹಾಂ ಅವರು ಹೇಳಿರುವುದು, ಜಾಧವ್ ಅವರನ್ನು ಸಂಪರ್ಕಿಸಲು ಅವಕಾಶ ನೀಡದ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದಂತಾಗಿದೆ.[ಜಾಧವ್ ಗೆ ಜಯ ತಂದಿತ್ತ ವಕೀಲ ಹರೀಶ್ ಸಾಳ್ವೆ ಪರಿಚಯ]
ನ್ಯಾಯಮೂರ್ತಿ ರಾನಿ ಅಬ್ರಹಾಂ ಅವರು ಓದಿದ ತೀರ್ಪಿನ ಪ್ರಮುಖ ಅಂಶಗಳು ಕೆಳಗಿನಂತಿವೆ.
1. ಜಾಧವ್ ಅವರನ್ನು ಸಂಪರ್ಕಿಸಲು ಅನುಮತಿ ನಿರಾಕರಿಸಿರುವುದು ಅಂತಾರಾಷ್ಟ್ರೀಯ ನ್ಯಾಯಾಲಯದ ಪರಿಧಿಯಲ್ಲಿಯೇ ಬರುತ್ತದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಈ ಪ್ರಕರಣ ಪರಿಗಣಿಸಲು ನ್ಯಾಯಾಲಯಕ್ಕೆ ಯಾವುದೇ ಮಿತಿಯಿಲ್ಲ.
2. ನ್ಯಾಯಾಲಯದ ಗಮನಕ್ಕೆ ಬಂದಂತೆ ಕುಲಭೂಷಣ್ ಜಾಧವ್ ಅವರಿಗೆ ವಿಧಿಸಲಾಗಿರುವ ಗಲ್ಲು ಶಿಕ್ಷೆ ಯಾವ ಕ್ಷಣದಲ್ಲಾದರೂ ನೆರವೇರಬಹುದು.
3. ಕುಲಭೂಷಣ್ ಜಾಧವ್ ಅವರನ್ನು ನೇಣಿಗೇರಿಸುವುದಿಲ್ಲ ಎಂದು ಪಾಕಿಸ್ತಾನ ನ್ಯಾಯಾಲಯಕ್ಕೆ (ಅಂತಿಮ ತೀರ್ಪು ಪ್ರಕಟವಾಗುವವರೆಗೆ) ಯಾವುದೇ ಭರವಸೆ ನೀಡಿಲ್ಲ.
4. ಈ ಸಂಗತಿಯನ್ನು ಪರಿಗಣಿಸಿದರೆ, ಈ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯ ತ್ವರಿತವಾಗಿ ತೀರ್ಪು ಪ್ರಕಟಿಸಬೇಕಾಗಿದೆ. (ಈ ಹಿನ್ನೆಲೆಯಲ್ಲಿ ನೇಣು ಶಿಕ್ಷೆಗೆ ತಡೆಯಾಜ್ಞೆ ನೀಡಲಾಗಿದೆ.)
5. ಕೋರ್ಟ್ ಅಂತಿಮವಾಗಿ ವಿಚಾರಣೆ ಮುಗಿಸುವವರೆಗೆ ಮತ್ತು ಅಂತಿಮ ತೀರ್ಪು ಪ್ರಕಟಿಸುವವರೆಗೆ ಜಾಧವ್ ಅವರನ್ನು ನೇಣಿಗೇರಿಸದಂತೆ ಪಾಕಿಸ್ತಾನ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳತಕ್ಕದ್ದು.
6. ಈ ಮಧ್ಯಂತರ ತೀರ್ಪನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪಾಕಿಸ್ತಾನ ಸರಕಾರ ಪಾಕಿಸ್ತಾನದ (ಮಿಲಿಟರಿ) ನ್ಯಾಯಾಲಯಕ್ಕೆ ಆದೇಶ ನೀಡತಕ್ಕದ್ದು.
7. ಜಾಧವ್ ಅವರ ಸುರಕ್ಷತೆಗೆ ಸಂಬಂಧಿಸಿದಂತೆ ಭಾರತ ತೋರಿದ್ದ ಕಾಳಜಿ ಸಿಂಧುವಾಗಿದೆ. ಜಾಧವ್ ಅವರನ್ನು ಕಾಪಾಡಲು ಭಾರತದ ಹಕ್ಕುಮಂಡನೆ ಸಕಾರಣವಾದದ್ದು.
8. ಕುಲಭೂಷಣ್ ಜಾಧವ್ ಅವರನ್ನು ಬಂಧಿಸಿದಾಗ ಇದ್ದಂತಹ ಸಂದರ್ಭ ವಾದಮಂಡನೆಗೆ ಯೋಗ್ಯವಾಗಿದೆ.
9. ಗೂಢಚಾರ ಅಥವಾ ಭಯೋತ್ಪಾದನೆಯ ಆರೋಪ ಹೊತ್ತ ವ್ಯಕ್ತಿಗಳ ವಿಚಾರಣೆ ನ್ಯಾಯಾಲಯದ ಪರಿಧಿಯಲ್ಲಿ ಬರುವುದಿಲ್ಲ ಎಂಬುದು ವಿಯೆನ್ನಾ ಒಪ್ಪಂದ ತಿಳಿಸಿಲ್ಲ.
10. ವಿಯೆನ್ನಾ ಒಪ್ಪಂದದ ಪ್ರಕಾರ, ಪಾಕಿಸ್ತಾನದ ಜೈಲಿನಲ್ಲಿರುವ ಕುಲಭೂಷಣ್ ಜಾಧವ್ ಅವರನ್ನು ಸಂಪರ್ಕಿಸಲು ಪಾಕಿಸ್ತಾನ ಭಾರತಕ್ಕೆ ಅವಕಾಶ ನೀಡಬೇಕಿತ್ತು.