ಸೈನಿಕರಿಗೆ ಊಟ ಸಿಗುತ್ತಿಲ್ಲವಂತೆ! ಮನೆಯಿಂದ ರೇಷನ್ ತರಲು ಸರ್ವಾಧಿಕಾರಿ ಸೂಚನೆ..!
ಬರೀ ಅವರನ್ನು ಕೊಂದೆ, ಇವರನ್ನು ಕೊಂದೆ ಅಂತಾ ಕಾಲ ಕಳೆಯುತ್ತಿರುವ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತನ್ನ ಸೇನೆಗೆ ಊಟ ಹಾಕದಷ್ಟು ಗತಿಗೆಟ್ಟು ಹೋಗಿದ್ದಾನಾ..? ಹೌದು ಜಗತ್ತಿನಾದ್ಯಂತ ಇಂಥದ್ದೊಂದು ಪ್ರಶ್ನೆ ಎದ್ದಿದೆ. ಇದಕ್ಕೆ ಕಾರಣವಾಗಿದ್ದು ಉತ್ತರ ಕೊರಿಯಾ ಸೇನೆ ತನ್ನ ಸೈನಿಕರಿಗೆ ನೀಡಿರುವ ಅದೊಂದು ಆದೇಶ. ಅಂದಹಾಗೆ ಉ. ಕೊರಿಯಾ ಸೇನೆ ತನ್ನ ಸೈನಿಕರಿಗೆ 'ಧಾನ್ಯ ಸಂಗ್ರಹ ರಜೆ' ಕೊಟ್ಟು ಮನೆ ಕಡೆ ಕಳುಹಿಸುತ್ತಿದೆ. ಹಾಗಂತ 'ಧಾನ್ಯ ಸಂಗ್ರಹ ರಜೆ'ಯನ್ನ ಸುಗ್ಗಿ ಹಬ್ಬ ಅಂದುಕೊಳ್ಳಬೇಡಿ.
'ಧಾನ್ಯ ಸಂಗ್ರಹ ರಜೆ' ಎಂದರೆ ಸೈನಿಕರಿಂದ ವಸೂಲಿ ಎಂದರ್ಥ. ಅಚ್ಚರಿ ಎನಿಸಿದರೂ ಇದು ಸತ್ಯ. ಬರೀ ಯುದ್ಧದ ಮಾತನ್ನೇ ಆಡುತ್ತಾ, ಕಂಡ ಕಂಡವರ ಮೇಲೆ ಕ್ರೌರ್ಯ ತೋರುತ್ತಿರುವ ಸರ್ವಾಧಿಕಾರಿ ಕಿಮ್ಗೆ ಪ್ರೆಜೆಗಳ ಬಗ್ಗೆ ಅಷ್ಟೇನು ಕಾಳಜಿ ಇದ್ದಂತೆ ಕಾಣಿಸುತ್ತಿಲ್ಲ. ಪ್ರಜೆಗಳನ್ನು ಬಿಡಿ ಉತ್ತರ ಕೊರಿಯಾದ ಸೇನೆ ಕೂಡ ಇಂಥದ್ದೇ ಪರಿಸ್ಥಿತಿಯನ್ನು ಎದುರಿಸುತ್ತಿದೆ.
ಆಹಾರದ ಕೊರತೆ: ಸಾಕು ನಾಯಿಗಳನ್ನು ರೆಸ್ಟೋರೆಂಟ್ಗೆ ನೀಡಲು ಉತ್ತರ ಕೊರಿಯಾದ ಕಿಮ್ ಆದೇಶ
ಉ. ಕೊರಿಯಾ ಸೈನಿಕರು ಪೌಷ್ಠಿಕ ಆಹಾರ ಇಲ್ಲದೆ ಸೊರಗಿ ಹೋಗಿದ್ದಾರಂತೆ. ಇದು ಕಿಮ್ಗೆ ಗೊತ್ತಾಗುತ್ತಿದ್ದಂತೆ ಬೀನ್ಸ್ ಅಂದರೆ ಹುರುಳಿ ಇರುವ ಆಹಾರ ನೀಡಿ ಎಂದು ಆದೇಶಿಸಿದ್ದ. ಆದರೆ ಆರ್ಥಿಕವಾಗಿ ವಿಲವಿಲ ಒದ್ದಾಡುತ್ತಿರುವ ಉತ್ತರ ಕೊರಿಯಾ ತನ್ನ ಸೇನೆಗೂ ಸರಿಯಾದ ಅನುದಾನ ಒದಗಿಸುತ್ತಿಲ್ಲ. ಹೀಗಾಗಿ ಸೇನಾಧಿಕಾರಿಗಳು ಉತ್ತರ ಕೊರಿಯಾ ಸೈನಿಕರಿಂದಲೇ ವಸೂಲಿಗೆ ಇಳಿದಿದ್ದಾರೆ.
300 ಕೆ.ಜಿ ಹುರುಳಿ ತರಬೇಕಂತೆ..!
ಒಂದು ಕಾಲದಲ್ಲಿ 'ಕೊರಿಯಾ' ಮಾತ್ರ ಅಸ್ತಿತ್ವದಲ್ಲಿತ್ತು. ಆಗ ಉತ್ತರ-ದಕ್ಷಿಣ ಎಂದು ಡಿವೈಡ್ ಆಗಿರಲಿಲ್ಲ. ಆದರೆ ಈಗ ಎರಡೂ ದೇಶಗಳು ಒಂದೊಂದು ದಿಕ್ಕಾಗಿವೆ. ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಬಡಿದಾಡಿವೆ. ಒಂದು ಕಡೆ ದಕ್ಷಿಣ ಕೊರಿಯಾ ಸಮೃದ್ಧವಾಗಿ ಬೆಳೆದು ನಿಂತಿದ್ದರೆ, ಉತ್ತರ ಕೊರಿಯಾ ಬಡತನದ ಬೇಗೆಯಲ್ಲಿ ಬೆಂದು ಹೋಗುತ್ತಿದೆ. ಅದರಲ್ಲೂ ಉತ್ತರ ಕೊರಿಯಾ ಸೈನಿಕರು ಕೈಗೆ ಸಿಗುವ ಪುಡಿಗಾಸು ಎಣಿಸುತ್ತಾ, ಜೀವನ ಸಾಗಿಸುವ ಸ್ಥಿತಿ ಇದೆ. ಇಂಥ ಪರಿಸ್ಥಿತಿಯಲ್ಲೂ ಪ್ರತಿ ಸೈನಿಕ 300 ಕೆ.ಜಿ ಹುರುಳಿ ತರಬೇಕು ಎಂದು ಆದೇಶ ಹೊರಡಿಸಲಾಗಿದೆ. ಅಲ್ಲದೆ ಜುಲೈ 1ರಿಂದ ಆರಂಭವಾಗುವ ಮಿಲಿಟರಿ ಡ್ರಿಲ್ಗೂ ಮೊದಲು ಸೈನಿಕರು ಆಹಾರ ಧಾನ್ಯದ ಜೊತೆಗೆ ತಮ್ಮ ತಮ್ಮ ಬೆಟಾಲಿಯನ್ಗೆ ಮರಳಬೇಕೆಂದು ವಾರ್ನಿಂಗ್ ಕೊಡಲಾಗಿದೆ.
ಮನೆಗೆ ಹೋಗಿ ರೇಷನ್ ತನ್ನಿ..!
ಉತ್ತರ ಕೊರಿಯಾದಲ್ಲಿ ಈ ವ್ಯವಸ್ಥೆ ಮೊದಲಿನಿಂದಲೂ ಜಾರಿಯಲ್ಲಿ ಇತ್ತು. ಆದರೆ ಕೊರೊನಾ ಸಾಂಕ್ರಾಮಿಕ ಎದುರಾದ ಬಳಿಕ ತುತ್ತು ಅನ್ನಕ್ಕೂ ದೇಶದಲ್ಲಿ ಬಡವರು ಪರಿತಪಿಸುತ್ತಿದ್ದಾರೆ. ಹೀಗಿರುವಾಗ ಸೈನಿಕರಿಗೆ ಪೌಷ್ಟಿಕ ಆಹಾರ ಎಲ್ಲಿಂದ ತರುವುದು..? ಇದೇ ಕಾರಣಕ್ಕೆ ಉ. ಕೊರಿಯಾ ತನ್ನ ಸೇನೆಯಲ್ಲಿನ ಶ್ರೀಮಂತ ಸೈನಿಕರನ್ನು ಒತ್ತಾಯ ಮಾಡಿ ಮನೆಗೆ ಕಳುಹಿಸುತ್ತಿದೆ. ಮನೆಗೆ ಹೋಗುವ ಸೈನಿಕರು ತಮ್ಮ ಬೆಟಾಲಿಯನ್ಗೆ ಬೇಕಾದಷ್ಟು ಆಹಾರ ಪದಾರ್ಥ ಹೊಂದಿಸಿ ತರಬೇಕು. ಇದು ಸೇನಾಧಿಕಾರಿಗಳ ಕಟ್ಟಪ್ಪಣೆಯಾಗಿದ್ದು, ಆದೇಶದ ವಿರುದ್ಧ ಮಾತನಾಡಲು ಉತ್ತರ ಕೊರಿಯಾ ಸೈನಿಕರು ಧೈರ್ಯ ತೋರುತ್ತಿಲ್ಲ.
ಒಂಭತ್ತನೇ ದಳಕ್ಕೆ ಶನಿಕಾಟ..!
ಉತ್ತರ ಕೊರಿಯಾ ಸೇನೆಯ 9ನೇ ದಳದ ಸೈನಿಕರು ಏನು ತಪ್ಪು ಮಾಡಿದ್ದಾರೋ ಗೊತ್ತಿಲ್ಲ, ಸರ್ವಾಧಿಕಾರಿಯ ಹೊಸ ಆದೇಶದಿಂದ ಬೆಚ್ಚಿಬಿದ್ದಿದ್ದಾರೆ. ದಿಢೀರನೇ ಮನೆಗೆ ಹೋಗಿ ದವಸ, ಧಾನ್ಯ ತಗೊಂಡು ಬನ್ನಿ ಎಂದರೆ ಇವರು ಏನು ಮಾಡೋಕೆ ಸಾಧ್ಯ..? ಶ್ರೀಮಂತ ಅಥವಾ ಸ್ಥಿತಿವಂತ ಸೈನಿಕರು ಹಿರಿಯ ಅಧಿಕಾರಿಗಳ ಮಾತನ್ನ ಪಾಲಿಸುತ್ತಿದ್ದಾರೆ. ಆದರೆ ಬಡ ಸೈನಿಕರಿಗೂ ದವಸ, ಧಾನ್ಯ ತಗೋಂಡು ಬನ್ನಿ ಅಂತಾ ಹುಚ್ಚು ಹುಚ್ಚಾಗಿ ಆದೇಶ ಹೊರಡಿಸಲಾಗಿದೆ. ಬಡ ರಾಷ್ಟ್ರದಲ್ಲಿ ಸರ್ವಾಧಿಕಾರಿಯ ಆದೇಶ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಕಳ್ಳತನ ಮಾಡಿದರೂ ಅಚ್ಚರಿಯಿಲ್ಲ..!
ಉತ್ತರ ಕೊರಿಯಾ ಸರ್ವಾಧಿಕಾರಿಯ ರಾಷ್ಟ್ರ, ಒಳಗೆ ಏನಾಗುತ್ತದೆ ಎಂಬುದನ್ನ ಅರಿಯುವುದು ಬಹಳ ಕಷ್ಟದ ವಿಚಾರದಲ್ಲೂ. ಅದರಲ್ಲೂ ಉತ್ತರ ಕೊರಿಯಾ ಮಿಲಿಟರಿಗೆ ಸಂಬಂಧಿಸಿದ ಈ ಆಘಾತಕಾರಿ ಸುದ್ದಿ ಹೊರಬಿದ್ದು ನಗೆಪಾಟಲಿಗೆ ಈಡಾಗಿದ್ದೇ ರೋಚಕ ಸಂಗತಿ. ಅಷ್ಟಕ್ಕೂ ಅಂತಾರಾಷ್ಟ್ರೀಯ ಸಂಸ್ಥೆಯೊಂದು ಉತ್ತರ ಕೊರಿಯಾ ಸೇನೆಗೆ ಸಂಬಂಧಿಸಿದ ಮಾಹಿತಿಯನ್ನು ಹೊರಗಿನಿಂದಲೇ ಕಲೆ ಹಾಕುತ್ತದೆ, ಉತ್ತರ ಕೊರಿಯಾದ ಸೂಕ್ಷ್ಮವಾದ ವಿಚಾರಗಳ ಮೇಲೂ ಈ ಸಂಸ್ಥೆ ಕಣ್ಣಿಟ್ಟಿರುತ್ತದೆ. ಇದೇ ಸಂಸ್ಥೆಯ ವರದಿ ಆಧಾರದಲ್ಲಿ ಸೈನಿಕರಿಗೆ ಧಾನ್ಯ ತರಲು ಕಿಮ್ ಮಿಲಿಟರಿ ಟಾರ್ಚರ್ ಕೊಡುತ್ತಿರುವ ಶಾಕಿಂಗ್ ಸುದ್ದಿ ರಿವೀಲ್ ಆಗಿದೆ.