ಖಶೋಗಿ ಬರ್ಬರ ಹತ್ಯೆ : ಸೌದಿ ಪ್ರಿನ್ಸ್ ಸಲ್ಮಾನ್ ವಿರುದ್ಧ ಪ್ರಬಲ ಸಾಕ್ಷ್ಯ?
ಸೌದಿ ಅರೇಬಿಯಾದ ಹಿರಿಯ ಪತ್ರಕರ್ತ 59 ವರ್ಷದ ಜಮಾಲ್ ಖಶೋಗಿ ಅವರ ಕಗ್ಗೊಲೆಯ ಹಿಂದೆ ಸೌದಿಯ ಯುವರಾಜ ಸಲ್ಮಾನ್ ಅವರ ಕೈವಾಡವಿದೆ. ಅವರ ವಿರುದ್ಧ ಬಲವಾದ ಸಾಕ್ಷ್ಯಗಳಿದ್ದು ಅವರನ್ನು ವಿಚಾರಣೆಗೆ ಗುರಿಪಡಿಸಬೇಕು ಎಂದು ವಿಶ್ವಸಂಸ್ಥೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇಸ್ತಾನ್ ಬುಲ್ ನಲ್ಲಿರುವ ಸೌದಿ ಅರೇಬಿಯಾದ ಕನ್ಸುಲೇಟ್ ಕಚೇರಿಗೆ 2018ರ ಅಕ್ಟೋಬರ್ 2ರಂದು ತೆರಳಿದ್ದಾಗ, ಜಮಾಲ್ ಖಶೋಗಿ ಮೇಲೆ ಹಲ್ಲೆ ಮಾಡಲಾಗಿತ್ತು. ಜಮಾಲ್ ಅವರ ದೇಹವನ್ನು ತುಂಡುತುಂಡು ಮಾಡಿ, ಆಸಿಡ್ ನಲ್ಲಿ ಕರಗಿಸಿ ಚರಂಡಿಗೆ ಎಸೆಯಲಾಗಿತ್ತು. ಅವರ ಹತ್ಯೆಯನ್ನು ಸೌದಿ ನಿರಾಕರಿಸಿದ್ದರೂ ನಂತರ ಒಪ್ಪಿಕೊಂಡಿತ್ತು.
ಈ ಪ್ರಕರಣದ ತನಿಖೆಗೆಂದು ವಿಶ್ವಸಂಸ್ಥೆಯಿಂದ ವಿಶೇಷವಾಗಿ ನೇಮಕವಾಗಿದ್ದ ಆಗ್ನೇಸ್ ಕಲ್ಲಾಮರ್ಡ್ ಎಂಬ ಮಹಿಳಾಧಿಕಾರಿ 100 ಪುಟಗಳ ವರದಿ ಸಲ್ಲಿಸಿದ್ದು, ಖಶೋಗಿ ಅವರನ್ನು ಉದ್ದೇಶಪೂರ್ವಕವಾಗಿ, ಯೋಜನಾಬದ್ಧವಾಗಿ ಹತ್ಯೆ ಮಾಡಲಾಗಿದೆ. ಅಂತಾರಾಷ್ಟ್ರೀಯ ಮಾನವ ಹಕ್ಕು ಕಾಯ್ದೆಯಡಿಯಲ್ಲಿ ಸೌದಿ ಅರೇಬಿಯಾ ಈ ಕಗ್ಗೊಲೆಗೆ ಜವಾಬ್ದಾರಿಯಾಗಿದೆ ಎಂದು ಅವರು ವರದಿ ಸಲ್ಲಿಸಿದ್ದಾರೆ.
ಜಮಾಲ್ ದೇಹವನ್ನು ಆಸಿಡ್ ನಲ್ಲಿ ಮುಳುಗಿಸಿ ಚರಂಡಿಗೆ ಎಸೆಯಲಾಗಿತ್ತು
ಇಸ್ತಾನ್ ಬುಲ್ ನಲ್ಲಿರುವ ಸೌದಿ ಅರೇಬಿಯಾದ ರಾಯಭಾರಿ ಕಚೇರಿಯಲ್ಲಿ ನಡೆದ ಮಾತುಕತೆಯ ಆಧಾರದ ಮೇಲೆ, ಖಶೋಗಿ ಅವರ ಕಡೆಯ ಕ್ಷಣಗಳು ಹೇಗಿದ್ದವು, ಸೌದಿ ಅಧಿಕಾರಿಗಳು ಅವರನ್ನೇ ಹೇಗೆ ಅಟಕಾಯಿಸಿಕೊಂಡರು ಎಂಬುದನ್ನು ಅವರು ವರದಿಯಲ್ಲಿ ಸವಿವರವಾಗಿ ವಿವರಿಸಿದ್ದಾರೆ. "ನಾವು ನಿನ್ನನ್ನು ಮುಗಿಸುತ್ತೇವೆ" ಎಂದು ಸೌದಿ ಅಧಿಕಾರಿಯೊಬ್ಬರು ಹೇಳಿರುವುದು ಕೂಡ ರೆಕಾರ್ಡಿಂಗ್ ಗಳಲ್ಲಿ ದಾಖಲಾಗಿದೆ.
ರಾಯಭಾರಿ ಕಚೇರಿಗೆ ಬಂದಾಗ ಕಗ್ಗೊಲೆ
ಜಮಾಲ್ ಖಶೋಗಿ ಅವರು ತಮ್ಮ ಮದುವೆಗಾಗಿ ಕೆಲ ದಾಖಲೆಗಳನ್ನು ಕಲೆಹಾಕಲು ಸೌದಿ ರಾಯಭಾರಿ ಕಚೇರಿಗೆ ಹೋಗಿದ್ದರು. ಆಗ, ಖಶೋಗಿ ಅವರು ಅಧಿಕಾರಿಗಳೊಂದಿಗೆ ಸಹಕರಿಸಲು ನಿರಾಕರಿಸಿದ್ದಾರೆ. ಮಾತಿನ ಚಕಮಕಿ ನಡೆದು, ಅವರ ಮೇಲೆ ಹಲ್ಲೆ ಮಾಡಿದ್ದು ಆ ರೆಕಾರ್ಡಿಂಗ್ ಗಳಲ್ಲಿ ದಾಖಲಾಗಿದೆ. ಟರ್ಕಿಯ ಗುಪ್ತಚರ ಅಧಿಕಾರಿಗಳು ಆರೋಪಿಸಿದಂತೆ, ಖಶೋಗಿ ಅವರಿಗೆ ಮೊದಲು ಮತ್ತು ಬರಿಸುವ ಚುಚ್ಚುಮದ್ದು ನೀಡಲಾಗಿದೆ. ಅವರು ಪ್ರಜ್ಞೆ ಕಳೆದುಕೊಂಡ ನಂತರ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ನಂತರ ದೇಹವನ್ನು ತುಂಡು ತುಂಡು ಮಾಡಿ ಆಸಿಡ್ ನಲ್ಲಿ ಕರಗಿಸಿ ಚರಂಡಿಗೆ ಎಸೆಯಲಾಗಿದೆ. ತನಿಖೆಯ ಸಮಯದಲ್ಲಿ ಚರಂಡಿಯಲ್ಲಿ ಖಶೋಗಿ ದೇಹದ ಕೆಲ ಮೂಳೆಗಳು ಮತ್ತು ಆಸಿಡ್ ಅಂಶ ಇರುವುದು ಪತ್ತೆಯಾಗಿತ್ತು.
ಪತ್ರಕರ್ತನ ನಿಗೂಢ ನಾಪತ್ತೆ, ರಾಯಭಾರ ಕಚೇರಿಯಲ್ಲೊಂದು ಥ್ರಿಲ್ಲರ್ ಘಟನೆ!
ಪ್ರಿನ್ಸ್ ಸಲ್ಮಾನ್ ಗೆ ಭಾರೀ ಸಂಕಷ್ಟ
ಈ ಸಂಗತಿಗಳು ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಸಲ್ಮಾನ್ ಗೆ ಭಾರೀ ಸಂಕಷ್ಟ ತರುವ ಸಾಧ್ಯತೆಯಿದೆ. ಈ ಕೊಲೆಯ ಬಗ್ಗೆ ತಮಗೆ ಏನೇನು ಗೊತ್ತಿದೆ ಎಂಬುದನ್ನು ಅವರು ಅಂತಾರಾಷ್ಟ್ರೀಯ ತನಿಖಾ ಸಂಸ್ಥೆಯ ಎದುರಿಗೆ ವಿವರಿಸಬೇಕಾಗುತ್ತದೆ. ಟರ್ಕಿಯ ಅಧ್ಯಕ್ಷ ರಿಸೆಪ್ ತೈಯಿಪ್ ಎರಡೋಗನ್ ಅವರು ಕೂಡ, ತಮ್ಮ ಬೆರಳನ್ನು ಮೊಹಮ್ಮದ್ ಬಿನ್ ಸಲ್ಮಾನ್ ಅವರತ್ತ ತೋರಿಸಿದ್ದರು. ಜಮಾಲ್ ಅವರ ದೇಹವನ್ನು ಆಸಿಡ್ ನಲ್ಲಿ ಮುಳುಗಿಸಿ ಚರಂಡಿಯಲ್ಲಿ ಎಸೆಯಲಾಗಿದೆ ಎಂಬ ಸುದ್ದಿಯನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಜಮಾಲ್ ಖಶೋಗಿ ಅವರ ಟರ್ಕಿಯ ಪ್ರಿಯತಮೆ ಹಟೀಸ್ ಕೆಂಗಿಜ್ ಅವರು ದುಃಖ ತೋಡಿಕೊಂಡಿದ್ದರು.
ಸೌದಿಯಿಂದ ಸರಿಯಾಗಿ ತನಿಖೆ ನಡೆದಿಲ್ಲ
ಆಗ್ನೇಸ್ ಅವರ ವರದಿಯ ಹೊರತಾಗಿ, ಇನ್ನೂ ಹಲವಾರು ಸಂಗತಿಗಳು ಸೌದಿ ಅರೇಬಿಯಾದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡುತ್ತಿವೆ. ಖಶೋಗಿ ಅವರ ಅಪಹರಣ ಮಾಡಿದ್ದು, ಅವರನ್ನು ಚಿತ್ರಹಿಂಸೆಗೆ ಗುರಿಪಡಿಸಿದ್ದು ಅಂತಾರಾಷ್ಟ್ರೀಯ ಮಾನವ ಹಕ್ಕು ಕಾಯ್ದೆಯನ್ನು ಉಲ್ಲಂಘಿಸುತ್ತದೆ. ಸೌದಿ ಅರೇಬಿಯಾದ ಅಧಿಕಾರಿಗಳು ನಡೆಸಿದ್ದ ತನಿಖೆಯನ್ನು ಸದ್ಬಾವನೆಯಿಂದ ಮಾಡಲಾಗಿಲ್ಲ ಮತ್ತು ನ್ಯಾಯಕ್ಕೆ ಅಡ್ಡಿಪಡಿಸಿದ ಎಂಬ ಆರೋಪವೂ ಇದೆ. ಈ ಪ್ರಕರಣದಲ್ಲಿ ಮೊಹಮ್ಮದ್ ಬಿನ್ ಸಲ್ಮಾನ್ ಸೇರಿದಂತೆ 11 ಜನ ಆರೋಪಿಗಳನ್ನು ಹೆಸರಿಸಲಾಗಿದ್ದು, ಅವರನ್ನೆಲ್ಲ ತನಿಖೆ ಮುಗಿಯುವವರೆಗೆ ಅಮಾನತು ಮಾಡಬೇಕು ಎಂದು ಆಗ್ರಹ ಮಾಡಲಾಗಿದೆ.
ಮುಷ್ಠಿಯುದ್ಧದಲ್ಲಿ ಖಶೋಗಿ ಹತರಾದರು: ಸೌದಿ ಅರೆಬಿಯಾ
ಕೊಲೆಯ ಬಗ್ಗೆ ಸಾಂತ್ವನ, ಕ್ಷಮೆ ಕೇಳಿಲ್ಲ
ಈ ಹತ್ಯೆ ಭಾರೀ ಅಲ್ಲೋಲಕಲ್ಲೋಲ ಎಬ್ಬಿಸಿತ್ತು. ಹಲವಾರು ದೇಶಗಳು ಮಾಡಿರುವ ಕೊಲೆಯನ್ನು ಒಪ್ಪಿಕೊಳ್ಳುವಂತೆ ಸೌದಿ ಅರೇಬಿಯಾದ ಮೇಲೆ ಒತ್ತಡ ಹೇರಿದ್ದವು. ಒತ್ತಡಕ್ಕೆ ಮಣಿದು ಕೊಲೆ ನಡೆದಿರುವುದನ್ನು ಸೌದಿ ಅರೇಬಿಯಾ ಒಪ್ಪಿಕೊಂಡಿತಾದರೂ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗಲಿಲ್ಲ. ಅಲ್ಲದೆ, ಖಶೋಗಿ ಅವರನ್ನು ಹತ್ಯೆ ಮಾಡಿರುವ ಬಗ್ಗೆ ಅವರ ಕುಟುಂಬಕ್ಕಾಗಲಿ, ಸ್ನೇಹಿತರಿಗಾಗಲಿ ಸಾಂತ್ವನ ಹೇಳುವುದಾಗಲಿ, ಕ್ಷಮೆ ಕೇಳುವುದಾಗಲಿ ಮಾಡಿಲ್ಲ. ಖಶೋಗಿ ಅವರ ಮಕ್ಕಳಿಗೆ ಹಣಕಾಸಿನ ನೆರವು ನೀಡಲಾಗಿದೆಯಾದರೂ, ಅದನ್ನು ಅಂತಾರಾಷ್ಟ್ರೀಯ ಮಾನವ ಹಕ್ಕು ಕಾಯ್ದೆಯಡಿ ಪರಿಹಾರ ಎಂದು ಪರಿಗಣಿಸಲಾಗುವುದಿಲ್ಲ.
ಲಾಡೆನ್ ಸಂದರ್ಶನ ಮಾಡಿದ್ದ ಖಶೋಗ್ಗಿ
ಸೌದಿ ಅರೇಬಿಯಾದ ಮದೀನಾದಲ್ಲಿ ಹುಟ್ಟಿದ್ದ ಹಿರಿಯ ಪತ್ರಕರ್ತ ಜಮಾಲ್ ಖಶೋಗಿ ಅವರು ಉಗ್ರ ಒಸಾಮಾ ಬಿನ್ ಲಾಡೆನ್ ಅವರ ಸಂದರ್ಶನ ಮಾಡಿ ಭಾರೀ ಖ್ಯಾತಿ ಗಳಿಸಿದ್ದರು. ಮೂವತ್ತು ವರ್ಷಕ್ಕೂ ಹೆಚ್ಚು ಅನುಭವವಿರುವ ಖಶೋಗಿ ಅವರು ಅಫಘಾನಿಸ್ತಾನ, ಅಲ್ಜೀರಿಯಾ ಮತ್ತು ಕುವೈತ್ ದೇಶಗಳ ಬಗ್ಗೆ ಮಾಡಿದ್ದ ವರದಿಗಳು ಚರ್ಚೆಗೆ ಗ್ರಾಸವಾಗಿದ್ದವು. ಖಶೋಗಿ ಅವರು ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರ ವಿರುದ್ಧ ಸಾಕಷ್ಟು ವರದಿಗಳನ್ನು ಬರೆದಿದ್ದರು. ಇದರಿಂದಾಗಿ ಅವರ ಮೇಲೆ ಸೌದಿ ಅರೇಬಿಯಾದ ಅಧಿಕಾರಿಗಳು ಒಂದು ಕಣ್ಣಿಟ್ಟಿದ್ದರು. ಇಸ್ತಾನ್ ಬುಲ್ ನ ರಾಯಭಾರಿ ಕಚೇರಿಯಲ್ಲಿ ಅವರು ಬಂದಿದ್ದಾಗ ಮುಗಿಸಿಹಾಕುವ ಷಡ್ಯಂತ್ರ ನಡೆಸಿ, ಅತ್ಯಂತ ವ್ಯವಸ್ಥಿತವಾಗಿ ಹತ್ಯೆ ಮಾಡಲಾಗಿತ್ತು. ಇದರಲ್ಲಿ ಸುಮಾರು 15 ಜನರು ಭಾಗಿಯಾಗಿದ್ದರು. ಹತ್ಯೆ ಮಾಡಿದ ನಂತರ ಅವರ ದೇಹದ ತುಕುಡಿಗಳನ್ನು ಚೀಲದಲ್ಲಿ ಹೊತ್ತೊಯ್ಯಲಾಗಿತ್ತು.