ಹಿಮಾಚಲದಲ್ಲಿ ಖಾಲಿಸ್ತಾನೀ ಬಾವುಟ: ಎಸ್ಎಫ್ಜೆ ಮುಖಂಡನ ವಿರುದ್ಧ ಕೇಸ್ ದಾಖಲು; ಎಸ್ಐಟಿ ತನಿಖೆ
ಶಿಮ್ಲಾ, ಮೇ 9: ಹಿಮಾಚಲಪ್ರದೇಶದ ಧರ್ಮಶಾಲಾ ನಗರದಲ್ಲಿರುವ ರಾಜ್ಯ ವಿಧಾನಸಭೆ ಕಟ್ಟಡದ ಗೇಟ್ ಮೇಲೆ ಖಾಲಿಸ್ತಾನೀ ಬಾವುಟಗಳನ್ನ (Khalistani flags) ಪ್ರದರ್ಶಿಸಿದ ಘಟನೆಗೆ ಸಂಬಂಧ ಪಟ್ಟಂತೆ ಸಿಖ್ ಪ್ರತ್ಯೇಕತಾವಾದಿ ಸಂಘಟನೆಯೊಂದರ ಮುಖಂಡನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಿಷೇಧಿತ 'ಸಿಖ್ ಫಾರ್ ಜಸ್ಟೀಸ್' (Sikh for Justice) ಮುಖಂಡ ಗುರ್ಪತ್ವಂತ್ ಸಿಂಗ್ ಪನ್ನುನ್ ವಿರುದ್ಧ ಯುಎಪಿಎ ಕಾಯ್ದೆ ಅಡಿ ಕೇಸ್ ಬುಕ್ ಮಾಡಲಾಗಿದೆ. ಜೊತೆಗೆ ಹಿಮಾಚಲಪ್ರದೇಶದ ಎಲ್ಲಾ ಗಡಿಯನ್ನೂ ಬಂದ್ ಮಾಡಿ ಕಟ್ಟೆಚ್ಚರ ವಹಿಸಲಾಗಿದೆ.
ಘಟನೆಯ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಸಿಖ್ ಧರ್ಮೀಯರಿಗೆ ಪ್ರತ್ಯೇಕ ಖಾಲಿಸ್ತಾನ್ ರಾಷ್ಟ್ರ ಬೇಕೆಂದು (Fight for seperate Sikh country) ಹೋರಾಟ ಮಾಡುತ್ತಿರುವ ಹಲವು ಸಂಘಟನೆಗಳಲ್ಲಿ ಸಿಖ್ ಫಾರ್ ಜಸ್ಟೀಸ್ ಒಂದು. ಇದೇ ಜೂನ್ 6 ದಿನವನ್ನು ಖಾಲಿಸ್ತಾನ್ ಜನಾಭಿಮತ ದಿನ (Khalistan Referendum Day) ಎಂದು ಈ ಸಂಘಟನೆ ಘೋಷಣೆ ಮಾಡಿದೆ.
ಹಿಮಾಚಲ: ವಿಧಾನಸಭೆಯ ಮುಖ್ಯ ದ್ವಾರಕ್ಕೆ ಖಲಿಸ್ತಾನ್ ಧ್ವಜ ಹಾರಿಸಿದ ಕಿಡಿಗೇಡಿಗಳು
ಇದರ ಬೆನ್ನಲ್ಲೇ ಪಂಜಾಬ್ಗೆ ಹೊಂದಿಕೊಂಡಂತಿರುವ ಹಿಮಾಚಲಪ್ರದೇಶದಲ್ಲಿ ವಿಧಾನಸಭೆಯ ಸಮುಚ್ಚಯದ ಬಳಿಯೇ ಖಾಲಿಸ್ತಾನೀ ಧ್ವಜಗಳನ್ನ ಹಾರಿಸಲಾಗಿರುವುದು ಗಮನಾರ್ಹ. ಈ ಹಿನ್ನೆಲೆಯಲ್ಲಿ ಹಿಮಾಚಲದ ಎಲ್ಲಾ ಗಡಿಭಾಗವನ್ನು ಸೀಲ್ ಮಾಡುವಂತೆ ಆ ರಾಜ್ಯದ ಪೊಲೀಸ್ ಮುಖ್ಯಸ್ಥ ಸಂಜಯ್ ಕುಂದು ಆದೇಶ ಮಾಡಿದ್ದಾರೆ. ಹಿಮಾಚಲಪ್ರದೇಶದ ಗಡಿಯೊಳಗೆ ಹೊರಗಿನಿಂದ ಬರುವ ಎಲ್ಲಾ ವಾಹನಗಳನ್ನು ಮತ್ತು ಜನರನ್ನು ಕಟ್ಟುನಿಟ್ಟಾಗಿ ಪರಿಶೀಲಿಸುವಂತೆ ಸೂಚಿಸಿದ್ದಾರೆ.
ಖಾಲಿಸ್ತಾನ್ ಚಳವಳಿಗೆ ಬೆಂಬಲ ಆರೋಪ: ಕೇಜ್ರಿವಾಲ್ ವಿರುದ್ಧ ತನಿಖೆ ನಡೆಸಲು ಮೋದಿಗೆ ಚನ್ನಿ ಮನವಿ
ಯುಎಪಿಎ, ಐಪಿಸಿಯ ವಿವಿಧ ಸೆಕ್ಷನ್ ಅಡಿ ಕೇಸ್:
ಧರ್ಮಶಾಲಾ ನಗರದ ಕಾಣೇದ ಗ್ರಾಮದ ರಾಮ್ ಚಂದ್ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಸಿಖ್ ಫಾರ್ ಜಸ್ಟೀಸ್ ಸಂಘಟನೆ ಮುಖಂಡ ಗುರಪತ್ವಂತ್ ಸಿಂಗ್ ಪನ್ನುನ್ ಹಾಗು ಇತರ ಕೆಲವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಭಯೋತ್ಪಾದನೆ ನಿಗ್ರಹಕ್ಕೆ ರೂಪಿಸಲಾಗಿರುವ ಯುಎಪಿಎ ಕಾಯ್ದೆಯ (UAPA- Unlawful Activities Prevention Act) ಸೆಕ್ಷನ್ 13, ಐಪಿಸಿ ಸೆಕ್ಷನ್ 143A ಮತ್ತು 152B ಹಾಗು ಹಿಮಾಚಲಪ್ರದೇಶದ ಸಾರ್ವಜನಿಕ ಸ್ಥಳಗಳ ಕಾಯ್ದೆಯ ಸೆಕ್ಷನ್ ೩ ಅಡಿಯಲ್ಲಿ ದಾಖಲಾಗಿರುವ ಈ ಪ್ರಕರಣದಲ್ಲಿ ಪನ್ನುನ್ A1 ಆರೋಪಿಯಾಗಿದ್ದಾರೆ.
ಏಳು ಸದಸ್ಯರ ಎಸ್ಐಟಿಯಿಂದ ತನಿಖೆ:
ಹಿಮಾಚಲದ ವಿಧಾನಸಭೆ ಕಟ್ಟಡದ ಮುಖ್ಯ ದ್ವಾರದ ಬಳಿ ಇರುವ ಗೋಡೆಗಳ ಮೇಲೆ ಖಾಲಿಸ್ತಾನೀ ಬ್ಯಾನರ್, ಸ್ಲೋಗನ್ ಇತ್ಯಾದಿ ಪ್ರದರ್ಶನ ಮಾಡಲಾದ ಘಟನೆಯ ತನಿಖೆಗೆ ವಿಶೇಷ ತನಿಖಾ ತಂಡವೊಂದನ್ನು (SIT- Special Investigation Team) ರಚಿಸಲಾಗಿದೆ. ಏಳು ಮಂದಿ ನುರಿತ ಪೊಲೀಸ್ ಅಧಿಕಾರಿಗಳು ಈ ಎಸ್ಐಟಿಯಲ್ಲಿದ್ದಾರೆ. "ಈ ಪ್ರಕರಣದ ತನಿಖೆಯನ್ನು ತತ್ಕ್ಷಣವೇ ಆರಂಭಿಸಬೇಕು. ಬಹಳ ನಿಷ್ಪಕ್ಷಪಾತದಿಂದ ಮತ್ತು ವೃತ್ತಿಪರತೆಯಿಂದ ತನಿಖೆ ನಡೆಸಬೇಕು. ರಾಜ್ಯ ಮತ್ತು ಕೇಂದ್ರ ಗುಪ್ತಚರ ಸಂಸ್ಥೆಗಳೊಂದಿಗೆ ನೇರವಾಗಿ ಸಂಪರ್ಕದಲ್ಲಿದ್ದು ಅಂತರರಾಜ್ಯ ಮತ್ತು ಅಂತರರಾಷ್ಟ್ರೀಯ ಕೈವಾಡ ಇದ್ದರೆ ಬೆಳಕಿಗೆ ತರಬೇಕು ಎಂದು ಎಸ್ಐಟಿಗೆ ನಿರ್ದೇಶನ ನೀಡಿದ್ದೇವೆ" ಎಂದು ಸಂಜಯ್ ಕುಂಡು ಹೇಳಿದ್ದಾರೆ.
ವಿವಿಧೆಡೆಯ ಘಟನೆ ಹಿನ್ನೆಲೆಯಲ್ಲಿ ಹೈ ಅಲರ್ಟ್:
ಹಿಮಾಚಲಪ್ರದೇಶದಲ್ಲಿ ಈ ಹಿಂದೆಯೂ ಖಾಲಿಸ್ತಾನಿ ಬಾವುಟ ಪ್ರದರ್ಶನವಾದ ಘಟನೆ ನಡೆದಿತ್ತು. ಏಪ್ರಿಲ್ 11ರಂದು ಉನಾ ಜಿಲ್ಲೆಯಲ್ಲಿ ಖಾಲಿಸ್ತಾನೀ ಬ್ಯಾನರ್ವೊಂದು ಸಾರ್ವಜನಿಕ ಸ್ಥಳದಲ್ಲಿ ಪ್ರದರ್ಶನವಾಗಿತ್ತು. ಇದು ಹಾಗೂ ನಿನ್ನೆ ಧರ್ಮಶಾಲೆಯ ತಪೋವನ (ವಿಧಾನಸಭೆ ಸಂಕೀರ್ಣ) ಘಟನೆಯಷ್ಟೇ ಅಲ್ಲ ಬೇರೆ ಬೇರೆ ರಾಜ್ಯಗಳಲ್ಲಿ ಖಾಲಿಸ್ತಾನೀ ಧ್ವಜ ಹಾರಾಟದ ಘಟನೆಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಹಿಮಾಚಲದಾದ್ಯಂತ ಕಟ್ಟೆಚ್ಚರ ವಹಿಸಲಾಗುತ್ತಿದೆ.
ಕಟ್ಟೆಚ್ಚರ ಕ್ರಮಗಳೇನು?:
"ದುಷ್ಕರ್ಮಿಗಳು ಅಡಗಿಕೊಂಡಿರಬಹುದಾದ ಹೋಟೆಲ್ ಮೊದಲಾದ ಸ್ಥಳಗಳ ಮೇಲೆ ಪೊಲೀಸರು ನಿಗಾ ಇರಿಸಲಿದ್ದಾರೆ. ವಿಶೇಷ ಭದ್ರತಾ ದಳಗಳು, ಬಾಂಬ್ ನಿಷ್ಕ್ರಿಯ ತಂಡಗಳು, ಕ್ಷಿಪ್ರ ಪ್ರತಿಕ್ರಿಯೆ ತಂಡಗಳನ್ನು ಅಲರ್ಟ್ನಲ್ಲಿಟ್ಟುಕೊಂಡಿರಬೇಕು. ಅಣೆಕಟ್ಟು, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಸರಕಾರಿ ಕಟ್ಟಡಗಳು ಮತ್ತು ಸೂಕ್ಷ್ಮ ಕಟ್ಟಡಗಳಲ್ಲಿ ಕಟ್ಟೆಚ್ಚರ ವಹಿಸಬೇಕು ಎಂದು ರಾಜ್ಯದ ಪೊಲೀಸರಿಗೆ ಸೂಚಿಸಿದ್ದೇವೆ" ಎಂದು ಹಿಮಾಚಲ ಪ್ರದೇಶದ ಪೊಲೀಸ್ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.
(ಒನ್ಇಂಡಿಯಾ ಸುದ್ದಿ)