ನೆರೆ ಸಂತ್ರಸ್ತರನ್ನು ಲೇವಡಿ ಮಾಡಿ ದುಬೈನಲ್ಲಿ ಕೆಲಸ ಕಳೆದುಕೊಂಡ ಕೇರಳಿಗ
ದುಬೈ, ಆಗಸ್ಟ್ 20: ಕೇರಳದ ಪ್ರವಾಹ ಸಂತ್ರಸ್ತರನ್ನು ಫೇಸ್ಬುಕ್ ಪೋಸ್ಟ್ನಲ್ಲಿ ಅವಹೇಳನೆ ಮಾಡಿದ್ದ ಕೇರಳ ಮೂಲದ ವ್ಯಕ್ತಿಯೊಬ್ಬನನ್ನು ದುಬೈನ ಕಂಪೆನಿಯೊಂದು ಕೆಲಸದಿಂದ ವಜಾಗೊಳಿಸಿದೆ.
ಲುಲು ಗ್ರೂಪ್ ಇಂಟರ್ನ್ಯಾಷನಲ್ ಕಂಪೆನಿಯ ಒಮನ್ ಶಾಖೆಯಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದ ರಾಹುಲ್ ಚೆರು ಪಲಯಟ್ಟು ಎಂಬುವವರನ್ನು ಉದ್ಯೋಗದಿಂದ ತೆಗೆದುಹಾಕಿದೆ.
ನಮ್ಮ ಯಶೋಗಾಥೆಯಲ್ಲಿ ಕೇರಳದ ಪಾತ್ರವೂ ಇದೆ: ಯುಎಇ
ಫೇಸ್ಬುಕ್ನಲ್ಲಿ ಕೆಲವರು ನೆರೆ ಸಂತ್ರಸ್ತರಿಗೆ ಸ್ಯಾನಿಟರಿ ನ್ಯಾಪ್ಕಿನ್ ಅವಶ್ಯಕತೆ ಇದೆ ಎಂದು ಮನವಿ ಮಾಡಿದ್ದರು. ಅದಕ್ಕೆ ರಾಹುಲ್ ಚೆರು 'ಜನರಿಗೆ ಕಾಂಡೋಮ್ಗಳು ಕೂಡ ಬೇಕಾಗಿವೆಯೇ?' ಎಂದು ಅವಹೇಳನಕಾರಿಯಾಗಿ ಕಾಮೆಂಟ್ ಮಾಡಿದ್ದರು.
ಇದರಿಂದ ಆಕ್ರೋಶಗೊಂಡಿದ್ದ ಜನರು ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದ್ದನ್ನು ಗಮನಿಸಿದ ಕಂಪೆನಿ ಅವರನ್ನು ಕೆಲಸದಿಂದ ವಜಾಗೊಳಿಸಿ ಆದೇಶ ಹೊರಡಿಸಿತು.
'ತಕ್ಷಣದಿಂದ ಜಾರಿಗೆ ಬರುವಂತೆ ನಿಮ್ಮನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಏಕೆಂದರೆ ನೀವು ಕೇರಳದ ಪ್ರಸ್ತುತದ ಪ್ರವಾಹ ಸ್ಥಿತಿಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಂವೇದನೆ ರಹಿತ ಹಾಗೂ ಅವಹೇಳನಾಕಾರಿ ಹೇಳಿಕೆ ನೀಡಿದ್ದೀರಿ' ಎಂದು ಕಂಪೆನಿಯ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕ ನಸರ್ ಮುಬಾರಕ್ ಸಲೇಂ ಅಲ್ ಮಾವಳಿ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.
ಕೇರಳ ಪ್ರವಾಹ: ಒಂದು ತಿಂಗಳ ಸಂಬಳ ದೇಣಿಗೆ ನೀಡಿದ ತೆಲಂಗಾಣ ಡಿಸಿಎಂ
'ನೀವು ನಿಮ್ಮ ಎಲ್ಲ ಅಧಿಕೃತ ಹೊಣೆಗಾರಿಕೆಗಳನ್ನು ನಿಮ್ಮ ರಿಪೋರ್ಟಿಂಗ್ ಮ್ಯಾನೇಜರ್ ಅವರಿಗೆ ಕೂಡಲೇ ಹಸ್ತಾಂತರಿಸಬೇಕು ಹಾಗೂ ನಿಮ್ಮ ಅಂತಿಮ ಲೆಕ್ಕಾಚಾರ ಪ್ರಕ್ರಿಯೆಗಾಗಿ ಅಕೌಂಟ್ಸ್ ವಿಭಾಗವನ್ನು ಸಂಪರ್ಕಿಸಬೇಕು' ಎಂದು ಪತ್ರದಲ್ಲಿ ಸೂಚಿಸಲಾಗಿದೆ.
ತಮ್ಮ ಹೇಳಿಕೆಗೆ ವ್ಯಾಪಕ ವಿರೋಧದ ಬಿಸಿ ವ್ಯಕ್ತವಾದ ಬಳಿಕ ರಾಹುಲ್, ಫೇಸ್ಬುಕ್ನಲ್ಲಿ ಕ್ಷಮಾಪಣೆ ಕೇಳುವ ವಿಡಿಯೋವನ್ನು ಪ್ರಕಟಿಸಿದ್ದಾರೆ. 'ನಾನು ಮಾಡಿದ ತಪ್ಪಿಗೆ ಕ್ಷಮೆ ಕೇಳುತ್ತೇನೆ. ಆ ಕಾಮೆಂಟ್ ಅನ್ನು ಹಾಕುವಾಗ ಮದ್ಯದ ಅಮಲಿನಲ್ಲಿದ್ದೆ. ನಾನು ಮಾಡಿರುವುದು ತಪ್ಪು ಎಂದು ಆಗ ತಿಳಿದಿರಲಿಲ್ಲ' ಎಂದು ಹೇಳಿದ್ದಾರೆ.
ಕೇರಳ, ಕರ್ನಾಟಕದ ಪ್ರವಾಹದ ನೈಜ ಕಾರಣ ಬಹಿರಂಗ
'ಅವರ ಸೇವೆಯನ್ನು ತಕ್ಷಣ ಅಂತ್ಯಗೊಳಿಸುವ ಕ್ರಮ ತೆಗೆದುಕೊಳ್ಳುವ ಮೂಲಕ ಇಂತಹ ಘಟನೆಗಳ ಕುರಿತು ಸಮಾಜಕ್ಕೆ ನಮ್ಮ ನಿಲುವನ್ನು ಸ್ಪಷ್ಟವಾಗಿ ಹಾಗೂ ಗಟ್ಟಿಯಾಗಿ ತಿಳಿಸಿದ್ದೇವೆ. ನಮ್ಮದು ಮಾನವೀಯ ಮೌಲ್ಯಗಳೊಂದಿಗೆ ನಿಲ್ಲುವ ಮತ್ತು ಉನ್ನತ ನೈತಿಕ ಚಟುವಟಿಕೆಗಳನ್ನು ನಡೆಸುವ ಸಂಸ್ಥೆಯಾಗಿದೆ' ಎಂದು ಕಂಪೆನಿಯ ಮುಖ್ಯ ಸಂವಹನಾಧಿಕಾರಿ ವಿ. ನಂದಕುಮಾರ್ ತಿಳಿಸಿದ್ದಾರೆ.
ಲುಲು ಸಮೂಹದ ಮಾಲೀಕರಾದ ಎಂ.ಎ. ಯೂಸುಫ್ ಆಲಿ ಕೂಡ ಕೇರಳದ ಮೂಲದವರಾಗಿದ್ದು, ಪ್ರವಾಹ ಪೀಡಿತ ಕೇರಳಕ್ಕೆ 9.23 ಮಿಲಿಯನ್ ಯುಎಇ ದಿರ್ಹಾಮ್ಸ್ ನೀಡಿದ್ದಾರೆ.