ಕಥುವಾ ಅತ್ಯಾಚಾರ ಪ್ರಕರಣ, ವಿದೇಶದಲ್ಲಿ ಭಾರತದ ಮಾನ ಹರಾಜು
ಮಂಗಳೂರು, ಏಪ್ರಿಲ್ 17:ಜಮ್ಮು ಕಾಶ್ಮೀರದ ಕಥುವಾದಲ್ಲಿ ನಡೆದ ಬಾಲಕಿಯ ಸಾಮೂಹಿಕ ಆತ್ಯಾಚಾರ, ಕೊಲೆ ಹಾಗೂ ಉತ್ತರ ಪ್ರದೇಶದ ಉನ್ನಾವ್ ನಲ್ಲಿ ಯುವತಿ ಮೇಲಿನ ಅತ್ಯಾಚಾರ ಪ್ರಕರಣದ ವಿರುದ್ಧ ದೇಶದೆಲ್ಲೆಡೆ ಆಕ್ರೋಶ ಭುಗಿಲೆದ್ದಿದೆ. ದೇಶದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಈ ಬರ್ಬರ ಕೃತ್ಯದ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲೂ ಕಥುವಾ ಹಾಗು ಉನ್ನಾವ್ ಘಟನೆ ಗಮನ ಸೆಳೆದಿದೆ.
ಈ ಘಟನೆ ಖಂಡಿಸಿ ಬಾಲಿವುಡ್ ತಾರೆಯರು ಒಂದೆಡೆ ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಇನ್ನೊಂದೆಡೆ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನ ಹರಾಜು ಹಾಕಲಾಗುತ್ತಿದೆ.
ಕತುವಾ ಅತ್ಯಾಚಾರ ಖಂಡಿಸಿ ದೇಶ್ಯಾದ್ಯಂತ ತೀವ್ರಗೊಂಡ ಹೋರಾಟ:ಚಿತ್ರಗಳು
ಕಾಶ್ಮೀರದ ಕಥುವಾದಲ್ಲಿ ಜನವರಿ 11 ರಂದು ನಡೆದ 8 ವರ್ಷ ಪ್ರಾಯದ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣ ಇದೀಗ ವಿಶ್ವಮಟ್ಟದಲ್ಲೂ ಸುದ್ಧಿ ಮಾಡಿದೆ. ಇದೇ ವಿಚಾರವನ್ನಿಟ್ಟುಕೊಂಡು ದೇಶದ ಕೆಲವು ರಾಜಕೀಯ ಪಕ್ಷಗಳು, ಕೆಲವು ಎನ್.ಜಿ.ಒ ಗಳ ಕಾರ್ಯಕರ್ತರು ಕೇಂದ್ರದಲ್ಲಿ ಆಡಳಿತದಲ್ಲಿರುವ ನರೇಂದ್ರ ಮೋದಿ ಸರಕಾರದ ತಿರುಗಿ ಬಿದ್ದಿವೆ.
ದೇಶದಲ್ಲಿ ನರೇಂದ್ರ ಮೋದಿ ನೇತ್ರತ್ವದ ಸರಕಾರ ಆಡಳಿತಕ್ಕೆ ಬಂದ ಬಳಿಕ ಮಹಿಳೆಯರ ಹಾಗೂ ಮಕ್ಕಳ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆ ಎನ್ನುವ ಕೂಗು ಎದ್ದಿದೆ. ಘಟನೆಯನ್ನು ಖಂಡಿಸಿ ಪ್ರತಿದಿನ ದೇಶದಾದ್ಯಂತ ಪ್ರತಿಭಟನೆಗಳು, ಕ್ಯಾಂಡಲ್ ಮಾರ್ಚ್ ಗಳು ನಡೆಯುತ್ತಿವೆ. ದೇಶದಲ್ಲಿ ಈವರೆಗೆ ನಡೆದಿರುವ ಎಲ್ಲಾ ಅತ್ಯಾಚಾರ ಪ್ರಕರಣಗಳಿಗಿಂತ ಕೊಂಚ ಹೆಚ್ಚಿನ ಪ್ರಚಾರ ಕಾಶ್ಮೀರದಲ್ಲಿ ನಡೆದ ಬಾಲಕಿಯ ಅತ್ಯಾಚಾರಕ್ಕೆ ದೊರೆತಿದೆ.
ಕತುವಾ ಅತ್ಯಾಚಾರ-ಕೊಲೆಯ ಸುತ್ತ ಹುಟ್ಟುವ ವಿಲಕ್ಷಣ ಅನುಮಾನ!
ಕೇವಲ ಭಾರತದಲ್ಲಿ ಮಾತ್ರವಲ್ಲದೇ ಇದೀಗ ವಿದೇಶದ ನೆಲೆದ ಮೇಲೂ ಈ ಘಟನೆಗೆ ಸಂಬಂಧಿಸಿದಂತೆ ಭಾರತದ ಮಾನ ಕಳೆಯುವ ಯತ್ನ ನಡೆದಿದೆ. ಟರ್ಕಿ ದೇಶದ ರಾಜಧಾನಿ ಇಸ್ತಾಂಬೂಲ್ ನ ವಿಮಾನ ನಿಲ್ದಾಣದಲ್ಲಿ ಜಸ್ಟಿಸ್ ಫಾರ್ ಆಸಿಫಾ ಎಂದು ಬರೆದ ಟೀಶರ್ಟ್ ಧಾರಿಗಳು ಸುತ್ತಾಡುವ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ತಮ್ಮ ಟೀಶರ್ಟ್ ಮೇಲೆ "ನಿಮ್ಮ ಮಹಿಳೆಯರನ್ನು ಭಾರತಕ್ಕೆ ಕಳುಹಿಸುವ ಮೊದಲು ಮತ್ತೊಮ್ಮೆ ಯೋಚಿಸಿ" ಎಂದು ಬರೆಯಲಾಗಿದೆ. " ಭಾರತ ಮಹಿಳೆಯರಿಗೆ ಸುರಕ್ಷಿತ ದೇಶವಲ್ಲ", "ಭಾರತದಲ್ಲಿ ಗೋವುಗಳಿಗಿರುವ ಬೆಲೆ ಮಹಿಳೆಯರಿಗಿಲ್ಲ" ಎನ್ನುವ ಬರಹಗಳನ್ನು ಟೀಶರ್ಟ್ ಗಳಲ್ಲಿ ಪ್ರದರ್ಶಿಸುವ ಮೂಲಕ ವಿದೇಶದ ನೆಲೆದ ಮೇಲೆ ಭಾರತದ ಮಾನ ಹರಾಜು ಹಾಕಲಾಗುತ್ತಿದೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ರಾಜಕೀಯ ಪಕ್ಷಗಳು ತಮ್ಮ ಸ್ವಂತ ಸ್ವಾರ್ಥಕ್ಕಾಗಿ ದೇಶದ ಮಾನ ಹರಾಜು ಹಾಕುವಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಲಾಗಿದೆ. ಐಎಸ್ಐಎಸ್ ನಡೆಸಿದ ಪೈಶಾಚಿಕ ಕೃತ್ಯ ಹಾಗು ಸಿರಿಯಾದ ಮೇಲೆ ರಾಸಾಯನಿಕ ಅಸ್ತ್ರ ಬಳಸಿ ಸಾವಿರಾರು ಕಂದಮ್ಮಗಳನ್ನು ಬಲಿ ಪಡೆದ ಧಾರುಣ ಘಟನೆಯನ್ನು ಖಂಡಿಸಿ ಬೀದಿಗಿಳಿಯದವರಿಗೆ ಈಗ ಏಕಾಏಕಿ ಜ್ಞಾನೋದಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.