ಕಾಶ್ಮೀರ ವಿಚಾರ ICJ ಮುಂದಿಡಲು ಸೂಕ್ತ ಸಾಕ್ಷ್ಯವಿಲ್ಲ ಎಂದ ಪಾಕ್ ವಕೀಲ
ಇಸ್ಲಾಮಾಬಾದ್, ಸೆಪ್ಟೆಂಬರ್ 3: "ಸೂಕ್ತ ಸಾಕ್ಷ್ಯ ಇಲ್ಲವಾದ್ದರಿಂದ ಕಾಶ್ಮೀರದಲ್ಲಿ ನರಮೇಧ ನಡೆದಿರುವುದನ್ನು ಸಾಬೀತು ಪಡಿಸಲು 'ವಿಪರೀತ ಕಷ್ಟ'" ಎಂದು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ (ಐಸಿಜೆ) ಪಾಕಿಸ್ತಾನ ಪರ ವಕೀಲರಾದ ಖವರ್ ಖುರೇಷಿ ಹೇಳಿದ್ದಾರೆ. ಇದರಿಂದ ಪಾಕಿಸ್ತಾನಕ್ಕೆ ಭಾರೀ ಮುಜುಗರ ಆದಂತಾಗಿದೆ.
ಭಾರತ ಸರಕಾರವು ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿರುವುದನ್ನು ಪ್ರಶ್ನಿಸಿ ಪಾಕಿಸ್ತಾನವು ಐಸಿಜೆಗೆ ತೆರಳುವುದಾಗಿ ಬೆದರಿಸುತ್ತಿತ್ತು. ಇಂಥ ಸನ್ನಿವೇಶದಲ್ಲಿ ಖವರ್ ಖುರೇಷಿ ಅವರ ಹೇಳಿಕೆ ಗಮನ ಸೆಳೆದಿದೆ.
ಕಾಶ್ಮೀರದ ಬೀದಿ ನಿಶ್ಯಬ್ದವಾಗಿದೆ ಎಂದರೆ ಸಹಜ ಸ್ಥಿತಿ ಅಂತಲ್ಲ: ಶ್ರೀನಗರ ಮೇಯರ್
ವಕೀಲ ಖುರೇಷಿ ಮಾತನಾಡಿ, ಸಾಮೂಹಿಕ ಹತ್ಯೆ ಒಪ್ಪಂದ 1948 ಎಂಬ ಒಡಂಬಡಿಕೆಯೊಂದಕ್ಕೆ ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳೂ ಸಹಿ ಹಾಕಿವೆ. ಸಾಮೂಹಿಕ ನರಮೇಧ ನಡೆಸುವುದು ಅಥವಾ ನರಮೇಧವನ್ನು ತಡೆಯಲು ವಿಫಲವಾದಲ್ಲಿ ಅಂತರರಾಷ್ಟ್ರೀಯ ಕೋರ್ಟ್ ಗೆ ಈ ವಿಚಾರವನ್ನು ಒಯ್ಯಬಹುದು ಎಂದು ಹೇಳಿದ್ದಾರೆ.
ಆದರೆ, ಯಾವುದೇ ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವು ಕಾಶ್ಮೀರ ವಿಚಾರವನ್ನು ಅಂತರರಾಷ್ಟ್ರೀಯ ಕೋರ್ಟ್ ಗೆ ಒಯ್ಯುವುದು ವಿಪರೀತ ಕಷ್ಟ ಎಂದು ಅವರು ಹೇಳಿದ್ದಾರೆ.