ಭಕ್ತರಿಗಾಗಿ ಮತ್ತೆ ತೆರೆದ ಕರ್ತಾರ್ಪುರ ಸಾಹಿಬ್ ಕಾರಿಡಾರ್
ಲಾಹೋರ್, ನವೆಂಬರ್ 17: ಇಂದಿನಿಂದ ಕರ್ತಾರ್ಪುರ ಕಾರಿಡಾರ್ ಪುನಾರಂಭಗೊಳ್ಳಲಿದೆ.
ಕರ್ತಾರ್ಪುರ ಕಾರಿಡಾರ್ನ್ನು ಮತ್ತೆ ತೆರೆಯುವ ಭಾರತ ಸರ್ಕಾರದ ನಿರ್ಧಾರವನ್ನು ಪಾಕಿಸ್ತಾನದ ಉನ್ನತ ಸಿಖ್ ಸಂಸ್ಥೆ ಮತ್ತು ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ (ಇಟಿಪಿಬಿ) ಮಂಗಳವಾರ ಸ್ವಾಗತಿಸಿದೆ, ಇದು ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ದೇವ್ ಅವರ ಕೊನೆಯ ನಿವಾಸಕ್ಕೆ ಯಾವುದೇ ಅಡೆತಡೆಯಿಲ್ಲದೆ ಭೇಟಿ ನೀಡಲು ಭಾರತೀಯ ಸಿಖ್ಖರಿಗೆ ಸಹಾಯ ಮಾಡುತ್ತದೆ ಎಂದು ಹೇಳಿದೆ.
ಕರ್ತಾರ್ ಪುರ ಕಾರಿಡಾರ್ ಒಪ್ಪಂದಕ್ಕೆ ಭಾರತ-ಪಾಕ್ ಸಹಿ: ಏನೆಲ್ಲಾ ಉಪಯೋಗ?
ಕಾರಿಡಾರ್ ಪಾಕಿಸ್ತಾನದ ಗುರುದ್ವಾರ ದರ್ಬಾರ್ ಸಾಹಿಬ್, ಗುರುನಾನಕ್ ದೇವ್ ಅವರ ಅಂತಿಮ ವಿಶ್ರಾಂತಿ ಸ್ಥಳವನ್ನು ಪಂಜಾಬ್ನ ಗುರುದಾಸ್ಪುರ ಜಿಲ್ಲೆಯ ಡೇರಾ ಬಾಬಾ ನಾನಕ್ ದೇಗುಲಕ್ಕೆ ಸಂಪರ್ಕಿಸುತ್ತದೆ.
ಗುರುನಾನಕ್ ಜನ್ಮ ದಿನಾಚರಣೆಗೆ ಇನ್ನೂ ಮೂರು ದಿನಗಳು ಬಾಕಿಯಿರುವಂತೆಯೇ ಈ ಕಾರಿಡಾರ್ ಪುನರಾರಂಭಿಸುವ ಭಾರತ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಇದರಿಂದ ಭಾರತದ ಪಂಜಾಬ್ ನಿಂದ ಸಿಖ್ಖರು ಕರ್ತಾರ್ ಪುರ ಗುರುದ್ವಾರಕ್ಕೆ ಬರಲು ಅವಕಾಶವಾಗುತ್ತದೆ ಎಂದು ಪಾಕಿಸ್ತಾನ ಸಿಖ್ ಗುರುದ್ವಾರ ಪ್ರಬಂಧಕ ಸಮಿತಿ ಅಧ್ಯಕ್ಷ ಸರ್ದಾರ್ ಅಮೀರ್ ಸಿಂಗ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಕರ್ತಾರ್ಪುರ ಕಾರಿಡಾರ್ ಅನ್ನು ಬುಧವಾರದಿಂದ ಪುನರಾರಂಭಿಸುವುದಾಗಿ ಭಾರತ ಮಂಗಳವಾರ ಘೋಷಿಸಿದೆ. ಸಿಖ್ ಧರ್ಮದ ಸ್ಥಾಪಕ ಗುರುನಾನಕ್ ದೇವ್ ಅವರು ಅಂತಿಮ ಕ್ಷಣಗಳನ್ನು ಕಳೆದ ಪಾಕಿಸ್ತಾನದ ಗುರುದ್ವಾರ ದರ್ಬಾರ್ ಸಾಹಿಬ್ ನಿಂದ ಗುರುದಾಸ್ ಪುರ ಜಿಲ್ಲೆಯ ದೇರಾ ಬಾಬಾ ನಾನಕ್ ದೇಗುಲಕ್ಕೆ ಈ ಕರ್ತಾರ್ ಪುರ್ ಕಾರಿಡಾರ್ ಸಂಪರ್ಕ ಕಲ್ಪಿಸುತ್ತದೆ.
ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , 'ನವೆಂಬರ್ 17 ರಿಂದ ಕರ್ತಾರ್ಪುರ ಸಾಹಿಬ್ ಕಾರಿಡಾರ್ ಅನ್ನು ಮತ್ತೆ ತೆರೆಯಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅನುಮತಿ ನೀಡಿದೆ. ಇದರಿಂದ ಹೆಚ್ಚಿನ ಸಂಖ್ಯೆಯ ಸಿಖ್ ಯಾತ್ರಾರ್ಥಿಗಳಿಗೆ ಅನುಕೂಲವಾಗಲಿದೆ. ಈ ನಿರ್ಧಾರವು ಶ್ರೀ ಗುರುನಾನಕ್ ದೇವ್ ಜಿ ಮತ್ತು ನಮ್ಮ ಸಿಖ್ ಸಮುದಾಯದ ಬಗ್ಗೆ ಮೋದಿ ಸರ್ಕಾರದ ಅಪಾರ ಗೌರವವನ್ನು ತೋರಿಸುತ್ತದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಗುರುಪರ್ವ್ ನವೆಂಬರ್ 19 ರ ಶುಕ್ರವಾರದಂದು ಆರಂಭವಾಗಲಿದೆ. ಅದಕ್ಕೂ ಮೊದಲು ಪಂಜಾಬ್ ಬಿಜೆಪಿ ನಾಯಕರೊಬ್ಬರು ಕರ್ತಾರ್ಪುರ ಸಾಹಿಬ್ ಕಾರಿಡಾರ್ ಅನ್ನು ನವೆಂಬರ್ 18 ರಂದು ತೆರೆಯಬಹುದು ಎಂದು ಹೇಳಿದ್ದರು.
ಆದರೆ, ಅದಕ್ಕಿಂತ ಒಂದು ದಿನ ಮುಂಚಿತವಾಗಿ ಅಂದರೆ ನವೆಂಬರ್ 17ರಂದು ಕರ್ತಾರ್ಪುರ ಕಾರಿಡಾರ್ ಅನ್ನು ಮತ್ತೆ ತೆರೆದಿರುವುದು ಭಕ್ತರಲ್ಲಿ ಹರ್ಷ ಮೂಡಿಸಿದೆ. ಮೊದಲ ಬ್ಯಾಚ್ನಲ್ಲಿ 250 ಭಕ್ತರು ಕರ್ತಾರ್ಪುರ ಗುರುದ್ವಾರಕ್ಕೆ ಹೋಗಬಹುದು ಎಂದು ಬಿಜೆಪಿ ಮುಖಂಡ ಹರ್ಜಿತ್ ಗ್ರೀವನ್ ಹೇಳಿದ್ದರು.
ಈ ಹಿಂದೆ ಪಂಜಾಬ್ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಕೂಡ ಕರ್ತಾರ್ಪುರ ಕಾರಿಡಾರ್ ಅನ್ನು ಪುನರಾರಂಭಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದರು. ಸಿಖ್ ಸಂಗತ್ನ ಭಾವನೆಗಳನ್ನು ಗೌರವಿಸಿ ನವೆಂಬರ್ 19 ರ ಮೊದಲು ಕರ್ತಾರ್ಪುರ ಕಾರಿಡಾರ್ ಅನ್ನು ತೆರೆಯುವಂತೆ ಅವರು ಪ್ರಧಾನಿ ಮೋದಿಯವರನ್ನು ಕೇಳಿದ್ದರು. ಪ್ರಧಾನಿ ಮತ್ತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ ಪಂಜಾಬ್ ಬಿಜೆಪಿ ನಾಯಕರು ಕೂಡ ಇದೇ ಬೇಡಿಕೆಯನ್ನು ಸಲ್ಲಿಸಿದ್ದರು.
ಕರ್ತಾರ್ಪುರ ಕಾರಿಡಾರ್ ಡೇರಾ ಬಾಬಾ ನಾನಕ್ ಭಾರತದ ಪಂಜಾಬ್ನ ಗುರುದಾಸ್ಪುರ ಜಿಲ್ಲೆಯಲ್ಲಿದೆ, ಕರ್ತಾರ್ಪುರ ಕಾರಿಡಾರ್ ಮೂಲಕ ಪಾಕಿಸ್ತಾನದ ಕರ್ತಾರ್ಪುರ ಪಟ್ಟಣದೊಂದಿಗೆ ಸಂಪರ್ಕ ಹೊಂದಿದೆ.
ಸಿಖ್ಖರ ಪವಿತ್ರ ಯಾತ್ರಾಸ್ಥಳವಾದ ಶ್ರೀ ಕರ್ತಾರ್ಪುರ ಸಾಹಿಬ್ ಗುರುದ್ವಾರವು ಭಾರತ-ಪಾಕಿಸ್ತಾನ ಗಡಿಯಿಂದ ಕೇವಲ ನಾಲ್ಕು ಕಿಲೋಮೀಟರ್ ದೂರದಲ್ಲಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಾವಿ ನದಿಯ ದಡದಲ್ಲಿದೆ. ಲಾಹೋರ್ನಿಂದ ಇದರ ದೂರ 120 ಕಿ.ಮೀ. ಗುರುನಾನಕ್ ಅವರ ಪೋಷಕರು ಈ ಸ್ಥಳದಲ್ಲಿ ನಿಧನರಾದರು.
ಬಾಬಾ ನಾನಕ್ ಅವರು ತಮ್ಮ ಜೀವನದ ಕೊನೆಯ ಸಮಯವನ್ನು ಇಲ್ಲಿಯೇ ಕಳೆದರು. ಇಲ್ಲಿ 17 ವರ್ಷಕ್ಕೂ ಹೆಚ್ಚು ಕಾಲ ಸ್ವತಃ ಕೃಷಿ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ.
ಇಲ್ಲಿ ಭಾರತದಲ್ಲಿ, ಶ್ರೀ ಗುರುನಾನಕ್ ದೇವ್ ಜಿ ಅವರ ನೆನಪಿಗಾಗಿ ನಿರ್ಮಿಸಲಾದ ಡೇರಾ ಬಾಬಾ ನಾನಕ್, ರಾವಿ ನದಿಯ ದಡದಲ್ಲಿದೆ. ಡೇರಾ ಬಾಬಾ ನಾನಕ್ ಗುರುದಾಸ್ಪುರ ಜಿಲ್ಲೆಯಲ್ಲಿ ಬರುವ ಎರಡೂ ದೇಶಗಳ ಗಡಿ ರೇಖೆಯಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿದೆ. ಬಾಬಾ ನಾನಕ್ 12 ವರ್ಷಗಳ ಕಾಲ ಇಲ್ಲಿ ತಂಗಿದ್ದರು ಎಂದು ನಂಬಲಾಗಿದೆ.
ಕರ್ತಾರ್ಪುರ ಸಾಹಿಬ್ ಕಾರಿಡಾರ್ ಅನ್ನು 2019ರ ನವೆಂಬರ್ 19ರಂದು ಉದ್ಘಾಟಿಸಲಾಯಿತು. ಈ ಬಾರಿ ಅದರ ಎರಡನೇ ವಾರ್ಷಿಕೋತ್ಸವವಾಗಿದ್ದು, ಗುರುನಾನಕ್ ದೇವ್ ಅವರ 550 ನೇ ಜನ್ಮ ವಾರ್ಷಿಕೋತ್ಸವಕ್ಕೂ ಮುನ್ನ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಕಾರಿಡಾರ್ ಅನ್ನು ಉದ್ಘಾಟಿಸಿದ್ದಾರೆ.
ಕರ್ತಾರ್ಪುರ ಗ್ರಾಮವು ರವಿ ನದಿಯ ಪಶ್ಚಿಮ ದಂಡೆಯಲ್ಲಿದೆ. ಇಲ್ಲಿ ಶ್ರೀ ಗುರುನಾನಕ್ ದೇವ್ ತಮ್ಮ ಜೀವನದ ಕೊನೆಯ 18 ವರ್ಷಗಳನ್ನು ಕಳೆದರು. ಗುರುದ್ವಾರ ಶ್ರೀ ಕರ್ತಾರ್ಪುರ್ ಸಾಹಿಬ್ ಪಾಕಿಸ್ತಾನದ ನರೋವಾಲ್ ಜಿಲ್ಲೆಯಲ್ಲಿ ಸುಮಾರು 4.5 ಕಿಮೀ ದೂರದಲ್ಲಿದೆ.