ಬಾಯಿಗೆ ಬಿತ್ತು ಲಡ್ಡು..! ಬಹುಮತ ಸಿಗದಿದ್ದರೂ ‘ಓಲಿ’ ಮತ್ತೊಮ್ಮೆ ಪ್ರಧಾನಿ..!
ಅದೃಷ್ಟ ಸರಿ ಇದ್ದರೆ ಬಹುಮತ ಕೂಡ ಬೇಕಿಲ್ಲ ಅನ್ನೋದು ಕೆ.ಪಿ. ಶರ್ಮಾ ಓಲಿ ವಿಚಾರದಲ್ಲಿ ಸಾಬೀತಾಗಿದೆ. 3 ದಿನಗಳ ಹಿಂದಷ್ಟೇ ನೇಪಾಳಿ ಸಂಸತ್ನಲ್ಲಿ ಬಹುಮತ ಕಳೆದುಕೊಂಡು, ಅಧಿಕಾರ ಕಳೆದುಕೊಂಡಿದ್ದ ಓಲಿಗೆ ಮತ್ತೊಂದು ಚಾನ್ಸ್ ಸಿಕ್ಕಿದೆ. ಹೊಸ ಸರ್ಕಾರ ರಚನೆಗೆ ನೇಪಾಳ ಅಧ್ಯಕ್ಷೆ ಬಿಡಿಯಾ ದೇವಿ ನೀಡಿದ್ದ 3 ದಿನಗಳ ಡೆಡ್ಲೈನ್ ಮುಗಿದ ಹಿನ್ನೆಲೆ ಮಹತ್ವ ನಿರ್ಧಾರ ಕೈಗೊಳ್ಳಲಾಗಿದೆ.
ನೇಪಾಳದ ವಿಪಕ್ಷಗಳು ಸರ್ಕಾರ ರಚಿಸಲು ವಿಫಲವಾದ ಹಿನ್ನೆಲೆ ಮತ್ತೊಮ್ಮೆ ಓಲಿಯನ್ನೇ ಪಿಎಂ ಪಟ್ಟಕ್ಕೆ ಆರಿಸಲಾಗಿದೆ. 10ರಂದು ವಿಶ್ವಾಸಮತ ಯಾಚನೆ ನಡೆದಿತ್ತು. ನೇಪಾಳ ಸಂಸತ್ ಕೆಳಮನೆಯಲ್ಲಿ 275 ಸದಸ್ಯರಿದ್ದು ಈ ಪೈಕಿ ನಾಲ್ವರು ಅಮಾನತುಗೊಂಡಿದ್ದರು. ಹೀಗಾಗಿ ವಿಶ್ವಾಸ ಮತಯಾಚನೆಗೆ ಮುಂದಾಗಿದ್ದ ಓಲಿಗೆ 136 ಮತ ಬೇಕಿತ್ತಾದ್ರೂ ಸಿಕ್ಕಿದ್ದು 93 ಮತ ಮಾತ್ರ.
ಈ ಮೂಲಕ ಓಲಿ ಸೋಲುಕಂಡು ಸರ್ಕಾರ ಬಿದ್ದು ಹೋಗಿತ್ತು. ನೇಪಾಳ ಸಂವಿಧಾನದ 76 (2)ನೇ ವಿಧಿಯ ಅನ್ವಯ ಹೊಸ ಸರ್ಕಾರ ರಚಿಸಲು ಅಧ್ಯಕ್ಷೆ ಬಿಡಿಯಾ ದೇವಿ 3 ದಿನ ಟೈಂ ನೀಡಿದ್ದರು. ಗಡುವು ಮುಗಿದರೂ ಯಾವುದೇ ಪಕ್ಷ ಸರ್ಕಾರ ರಚಿಸಲಿಲ್ಲ. ಹೀಗಾಗಿ ಓಲಿ ಅವರನ್ನೇ ಮತ್ತೆ ಪ್ರಧಾನಿ ಪಟ್ಟದಲ್ಲಿ ಕೂರಿಸಲಾಗಿದೆ.
ಸರ್ಕಾರ ರಚಿಸಲು ಕಾಂಗ್ರೆಸ್ ಯತ್ನ
ಹೊಸ ಸರ್ಕಾರ ರಚನೆಗೆ ನೇಪಾಳಿ ಕಾಂಗ್ರೆಸ್ಗೆ ಇತರ ವಿರೋಧ ಪಕ್ಷಗಳು ಬೆಂಬಲ ನೀಡಿದ್ದರೂ ಕಾಂಗ್ರೆಸ್ಗೆ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ. ನೇಪಾಳಿ ಕಾಂಗ್ರೆಸ್ ಸರ್ಕಾರ ರಚಿಸಲು ಮುಂದಾದರೆ ಬೆಂಬಲಿಸುತ್ತೇವೆ ಎಂದು ಜನತಾ ಸಮಾಜವಾದಿ ಪಕ್ಷ ಮತ್ತು ಸಿಪಿಎನ್ ಘೋಷಿಸಿದ್ದವು. ಆದರೂ ಕಾಂಗ್ರೆಸ್ ಹೂಡಿದ್ದ ಪ್ಲ್ಯಾನ್ ಫ್ಲಾಪ್ ಆದವು.
ಕಡೆಗೆ ಅಧ್ಯಕ್ಷರು ಕೊಟ್ಟ ಗಡುವು ಮುಗಿದು, ಸೋತರೂ ಓಲಿ ಪಾಲಿಗೆ ಮತ್ತೊಮ್ಮೆ ಪ್ರಧಾನಿ ಪಟ್ಟ ಒಲಿದು ಬಂದಿದೆ. ಓಲಿ ಸರ್ಕಾರ ಕೆಡವಲು ಯಶಸ್ವಿಯಾಗಿದ್ದ ನೇಪಾಳ ವಿಪಕ್ಷಗಳು ಸರ್ಕಾರ ರಚಿಸಲು ವಿಫಲವಾಗಿವೆ. ಈ ಮೂಲಕ ನೇಪಾಳದಲ್ಲಿ ಸೃಷ್ಟಿಯಾಗಿದ್ದ ರಾಜಕೀಯ ಅಸ್ಥಿರತೆ ಕೊನೆಗೊಂಡಿದೆ.ವಿಶ್ವಾಸ ಮತ ಏಕೆ..?
ಅಂದಹಾಗೆ ಓಲಿ ಪ್ರತಿನಿಧಿಸುತ್ತಿದ್ದ ಸಿಪಿಎನ್-ಯುಎಂಎಲ್ ಹಾಗೂ ಪುಷ್ಪಕಮಲ್ ದಹಾಲ್ (ಪ್ರಚಂಡ) ನೇತೃತ್ವದ ಸಿಪಿಎನ್ (ಮಾವೋವಾದಿ) ಮೈತ್ರಿಕೂಟ ಸರ್ಕಾರವನ್ನ ರಚಿಸಿದ್ದವು. ಆದರೆ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಪ್ರಚಂಡ ನೇತೃತ್ವದ ಪಕ್ಷ ಹಿಂಪಡೆದಿತ್ತು. ಇಷ್ಟಲ್ಲದೆ ಪ್ರಧಾನಿ ಕೆ.ಪಿ.ಶರ್ಮಾ ಓಲಿ ವಿರುದ್ಧವೇ ಸರ್ಕಾರದ ಮಿತ್ರಪಕ್ಷಗಳು ರೊಚ್ಚಿಗೆದ್ದಿದ್ದವು.
ರಾಜಕೀಯ ಬಿಕ್ಕಟ್ಟು ಎದುರಿಸುತ್ತಿರುವ ಹಿನ್ನೆಲೆ ವಿಶ್ವಾಸ ಮತ ಯಾಚನೆಗೆ ನಿರ್ಧರಿಸಲಾಗಿತ್ತು. ಪ್ರಧಾನಿ ಓಲಿ ಶಿಫಾರಸಿನ ಹಿನ್ನೆಲೆಯಲ್ಲಿ ಅಧ್ಯಕ್ಷೆ ಬಿಡಿಯಾ ದೇವಿ ಭಂಡಾರಿ ಅಧಿವೇಶನ ಕರೆದಿದ್ದರು. ಓಲಿ ಸಂಸತ್ ಕೆಳಮನೆಯಲ್ಲಿ ವಿಶ್ವಾಸ ಮತಯಾಚನೆ ಮಾಡಿ ಸೋಲು ಕಂಡಿದ್ದಾರೆ.
ಪಕ್ಷದಿಂದಲೇ ಉಚ್ಛಾಟನೆ ಆಗಿದ್ದರು
2017ರಲ್ಲಿ ನೇಪಾಳ ಚುನಾವಣೆಯಲ್ಲಿ ಎಡಪಕ್ಷಗಳ ಮೈತ್ರಿಕೂಟ ಭರ್ಜರಿ ಜಯ ಸಾಧಿಸಿತ್ತು. ಜಯದೊಂದಿಗೆ ನೇಪಾಳದಲ್ಲಿ ರಾಜಕೀಯ ಸ್ಥಿರತೆ ಆಸೆ ಮತ್ತೆ ಚಿಗುರೊಡೆದಿತ್ತು. ಆದರೆ ಆಡಳಿತರೂಢ ಎನ್ಸಿಪಿಯಲ್ಲೇ ಓಲಿ ವಿರೋಧಿಗಳು ಹೆಚ್ಚಳವಾಗಿ, ಓಲಿ ಬೆಂಬಲ ಕಳೆದುಕೊಂಡರು. ನೇಪಾಳಿ ಕಮ್ಯೂನಿಸ್ಟ್ ಪಕ್ಷ(ಎನ್ಸಿಪಿ)ವನ್ನು ಬಿಟ್ಟು, ಬಂಡಾಯಗಾರ ಮಾವೋವಾದಿಗಳ ಓಲೈಸುತ್ತಾ ಬಂದ ಆರೋಪದಡಿ ಕೆ.ಪಿ ಶರ್ಮಾ ಓಲಿ ಅವರನ್ನು ಜನವರಿಯಲ್ಲಿ ಉಚ್ಛಾಟನೆ ಮಾಡಲಾಗಿತ್ತು. ಕಮ್ಯೂನಿಸ್ಟ್ ಪಕ್ಷ ಅಧಿಕೃತವಾಗಿ ಈ ಸುದ್ದಿ ಪ್ರಕಟಿಸಿತ್ತು. ಇದಾದ ಬಳಿಕ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡವಾಗಿತ್ತು.
‘ಕೊರೊನಾ’ ಕಾರಣವೂ ಇದೆ
ಮಹಾಮಾರಿ ಕೊರೊನಾ ಜಗತ್ತನ್ನು ಕಾಡುತ್ತಿರುವಂತೆ ನೇಪಾಳವನ್ನೂ ಕಾಡುತ್ತಿದೆ. ನೇಪಾಳದಲ್ಲಿ ಸುಮಾರು 4 ಲಕ್ಷ ಕೊರೊನಾ ಸೋಂಕಿತರು ಪತ್ತೆಯಾಗಿದ್ದರೆ, ಸಾವಿರಾರು ಜನ ಪ್ರಾಣಬಿಟ್ಟಿದ್ದಾರೆ. ಆದರೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ, ಕೆ.ಪಿ.ಶರ್ಮಾ ಓಲಿ ಕೊರೊನಾ ಪರಿಸ್ಥಿತಿ ನಿಭಾಯಿಸಲು ವಿಫಲರಾಗಿದ್ದಾರೆ ಎಂಬ ಆರೋಪ ಇತ್ತು. ಓಲಿ ಕೊರೊನಾ ಮತ್ತು ಪಕ್ಷ ಎರಡನ್ನೂ ನಿಭಾಯಿಸುವಲ್ಲಿ ಸೋತಿದ್ದಾರೆಂದು ಆರೋಪಿಸಲಾಗಿತ್ತು. ಎಲ್ಲದರ ಪರಿಣಾಮ ಕೆ.ಪಿ.ಶರ್ಮಾ ಓಲಿ ಸಂಸತ್ನಲ್ಲಿ ವಿಶ್ವಾಸ ಕಳೆದುಕೊಂಡಿದ್ದಾರೆ. ನೇಪಾಳದಲ್ಲಿ ಮತ್ತೆ ರಾಜಕೀಯ ಅಸ್ಥಿರತೆ ಮೂಡಿದ್ದು, ಕೊರೊನಾ ಕಂಟಕದ ನಡುವೆ ಜನರು ಮತ್ತಷ್ಟು ಗೊಂದಲಕ್ಕೆ ಸಿಲುಕುವಂತಾಗಿದೆ.