ಜಮ್ಮು ಕಾಶ್ಮೀರ ಕುರಿತ ಪಾಕ್ ತಗಾದೆ: ವಿಶ್ವಸಂಸ್ಥೆಯಲ್ಲಿ ಸಭೆ ಆರಂಭ
ನ್ಯೂಯಾರ್ಕ್, ಆಗಸ್ಟ್ 16: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಭಾರತದ ಕ್ರಮವನ್ನು ವಿರೋಧಿಸಿ ಪಾಕಿಸ್ತಾನ ನೀಡಿರುವ ದೂರಿನ ಕುರಿತು ವಿಶ್ವಸಂಸ್ಥೆಯಲ್ಲಿ ಮುಚ್ಚಿದ ಬಾಗಿಲಿನ ಸಭೆ ಆರಂಭವಾಗಿದೆ.
ವಿಶ್ವಸಂಸ್ಥೆಯ ಕಾಯಂ ಸದಸ್ಯತ್ವವುಳ್ಳ ದೇಶಗಳು ಮಾತ್ರ ಈ ಸಭೆಯಲ್ಲಿ ಪಾಲ್ಗೊಳ್ಳುತ್ತಿವೆ. ದೂರು ನೀಡಿದ ಪಾಕಿಸ್ತಾನ ಮತ್ತು ಭಾರತಗಳು ಸಭೆಯಲ್ಲಿ ಭಾಗವಹಿಸುವಂತಿಲ್ಲ. ಈ ರಹಸ್ಯ ಸಭೆಯಲ್ಲಿ ಯಾವ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂಬ ಕುತೂಹಲ ಮೂಡಿದೆ.
ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಮತ್ತೆ ಮುಖಭಂಗ, ಸಿಕ್ಕಿದ್ದು ಚೀನಾ ಬೆಂಬಲ ಮಾತ್ರ
ಕಾಶ್ಮೀರದ ವಿಚಾರದಲ್ಲಿ ಭಾರತ ತೆಗೆದುಕೊಂಡ ನಿರ್ಧಾರವನ್ನು ಖಂಡಿಸುವ ಮೂಲಕ ಚೀನಾ, ಪಾಕಿಸ್ತಾನಕ್ಕೆ ಬೆಂಬಲ ಸೂಚಿಸಿದೆ. ಪಾಕಿಸ್ತಾನದೊಂದಿಗೆ ಚೀನಾ ಕೂಡ ವಿಶ್ವಸಂಸ್ಥೆಗೆ ದೂರು ಕೊಂಡೊಯ್ದಿದೆ.
ಕಾಯಂ ಸದಸ್ಯತ್ವದ ದೇಶಗಳಲ್ಲಿ ಒಂದಾದ ರಷ್ಯಾ, ಕೆಲವು ದಿನಗಳ ಹಿಂದೆಯೇ ಭಾರತದ ಕ್ರಮಕ್ಕೆ ಬೆಂಬಲ ವ್ಯಕ್ತಪಡಿಸಿತ್ತು. ಇನ್ನು ಉಳಿದ ದೇಶಗಳು ಯಾವ ನಿಲುವು ವ್ಯಕ್ತಪಡಿಸಲಿವೆ ಎಂಬುದನ್ನು ಕಾದುನೋಡಬೇಕಿದೆ.ರಷ್ಯಾದ ಉಪ ಕಾಯಂ ಪ್ರತಿನಿಧಿ ಡಿಮಿಟ್ರಿ ಪೊಲಿಯನ್ಸ್ಕಿ, ಇದು ಭಾರತ ಮತ್ತು ಪಾಕಿಸ್ತಾನಗಳಿಗೆ ಸಂಬಂಧಿಸಿದ ದ್ವಿಪಕ್ಷೀಯ ವಿಚಾರವಾಗಿದೆ ಎಂಬುದು ತಮ್ಮ ದೇಶದ ನಿಲುವಾಗಿದೆ ಎಂದು ಹೇಳಿದ್ದಾರೆ.
ವಿಡಿಯೋ: ಪಾಕಿಸ್ತಾನಿ ಪತ್ರಕರ್ತರಿಗೆ 'ಸ್ನೇಹ ಹಸ್ತ' ನೀಡಿದ ಭಾರತ ರಾಯಭಾರಿ
ಈ ವಿಚಾರದ ಕುರಿತಂತೆ ವಿಶ್ವಸಂಸ್ಥೆ ಭದ್ರತಾ ಸಮಿತಿ ಅಧ್ಯಕ್ಷ ಜೊವಾನ್ನಾ ವ್ರೊನೆಕ್ಕಾ ಅವರಿಗೆ ಪಾಕಿಸ್ತಾನ ಇದಕ್ಕೂ ಮೊದಲು ಪತ್ರ ಬರೆದಿತ್ತು. ಪಾಕಿಸ್ತಾನದ ಪತ್ರಕ್ಕೆ ಸ್ಪಂದಿಸಿದ್ದ ಚೀನಾ, ಭದ್ರತಾ ಮಂಡಳಿಯಲ್ಲಿ ಮುಚ್ಚಿದ ಬಾಗಿಲಿನ ಸಭೆಗೆ ಒತ್ತಾಯಿಸಿತ್ತು. 50 ವರ್ಷಗಳಲ್ಲಿಯೇ ಇದೇ ಮೊದಲ ಬಾರಿಗೆ ಕಾಶ್ಮೀರಕ್ಕೆ ಸಂಬಂಧಿಸಿದಂತೆ ಈ ರೀತ ಸಭೆ ನಡೆಯುತ್ತಿದೆ.
1965ರಲ್ಲಿ ಈ ರೀತಿಯ ಸಭೆ ನಡೆದಿತ್ತು. ಇದು ಮುಚ್ಚಿದ ಬಾಗಿಲಿನ ಸಭೆಯಾಗಿರುವುದರಿಂದ ಇದನ್ನು ಸಂಪೂರ್ಣ ಭದ್ರತಾ ಸಭೆ ಎಂದು ಪರಿಗಣಿಸುವುದಿಲ್ಲ.