ಚರ್ಚೆ: ಭಾರತದ ಜತೆ ನಂಟು ಗಟ್ಟಿ ಮಾಡಿಕೊಳ್ಳಲು ತಪ್ಪಿಸಿಕೊಂಡಿತೆ ಯುಕೆ?
ಇದು ಯುಕೆ- ಭಾರತ ಸಪ್ತಾಹ. ಬ್ರೆಕ್ಸಿಟ್ ನಂತರ ಭಾರತದ ಜತೆ ಬಾಂಧವ್ಯ ಬೆಳೆಸುವ ಹಾಗೂ ಹತ್ತಿರವಾಗುವ ಅವಕಾಶವನ್ನು ಬ್ರಿಟನ್ ತಪ್ಪಿಸಿಕೊಂಡು ಬಿಟ್ಟಿತಾ? ಕೋಬ್ರಾ ಬಿಯರ್ ನ ಸ್ಥಾಪಕ ಹಾಗೂ ಅಧ್ಯಕ್ಷ ಮತ್ತು ಯು.ಕೆ. ಕೌನ್ಸಿಲ್ ಫಾರ್ ಇಂಟರ್ ನ್ಯಾಷನಲ್ ಸ್ಟೂಡೆಂಟ್ ಅಫೇರ್ಸ್ ಅಧ್ಯಕ್ಷ ಲಾರ್ಡ್ ಬಿಲಿಮೊರಿಯಾ ಪ್ರಕಾರ, ಇದಕ್ಕೆ ಉತ್ತರ ಹೌದು.
ಬ್ರಿಟನ್ ನ ವಲಸೆ ನೀತಿ ವಿಚಾರವಾಗಿ ಅಲ್ಲಿನ ಸರಕಾರ ಸಕಾರಾತ್ಮಕ ಹೆಜ್ಜೆಗಳನ್ನು ಇಡದ ಪರಿಣಾಮ ಭಾರತದ ಜತೆಗೆ ಬಾಂಧವ್ಯ ಗಟ್ಟಿ ಮಾಡಿಕೊಳ್ಳುವ ಅವಕಾಶ ಕಡಿಮೆ ಮಾಡಿಕೊಂಡಿತು. ಚೀನಿಯರಿಗೆ ಹೋಲಿಸಿದರೆ ವ್ಯಾಪಾರ ಉದ್ದೇಶಕ್ಕೆ ಹಾಗೂ ಪ್ರವಾಸಿ ವೀಸಾಕ್ಕಾಗಿ ಭಾರತೀಯರು ನಾಲ್ಕು ಪಟ್ಟು ಹೆಚ್ಚು ವೀಸಾ ಶುಲ್ಕ ಪಾವತಿಸಬೇಕು. ಇದು ಎರಡು ವರ್ಷದ ಅವಧಿಯ ಮಲ್ಟಿಪಲ್ ವೀಸಾ ಎಂಟ್ರಿಗೆ.
ಯುಕೆ-ಇಂಡಿಯಾ ವೀಕ್ನಲ್ಲಿ ಭಾಗವಹಿಸಲಿದೆ ಗಣ್ಯರ ದಂಡು
ಮುಕ್ತ ವ್ಯಾಪಾರ ಒಪ್ಪಂದವೂ ಸೇರಿ ಯುಕೆ- ಭಾರತದ ಬಾಂಧವ್ಯ ಗಟ್ಟಿಯಾದರೆ ಬ್ರಿಟನ್ ಸರಕಾರದ ವಲಸೆ ನೀತಿಯಲ್ಲಿ ಭಾರೀ ಬದಲಾವಣೆಗೆ ಕಾರಣವಾಗಲಿದೆ ಎಂದು ಬಿಲಿಮೊರಿಯಾ ಅಭಿಪ್ರಾಯಪಟ್ಟಿದ್ದಾರೆ.
ಮುಕ್ತ ವ್ಯಾಪಾರ ಒಪ್ಪಂದ ಅಂದರೆ ಸುಂಕ- ತೆರಿಗೆ ಮಾತ್ರವಲ್ಲ, ಅದರಲ್ಲಿ ಜನರೂ ಸೇರಿರುತ್ತಾರೆ. ಉದ್ಯಮಿಗಳು, ನುರಿತ ಕೆಲಗಾರರು, ವಿದ್ಯಾರ್ಥಿಗಳು ಹೀಗೆ. ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಯುಕೆ ವಿವಿಗಳಲ್ಲಿ ವ್ಯಾಸಂಗಕ್ಕೆ ಕೆಲ ವಿನಾಯಿತಿ ನೀಡಬೇಕು. ಆದರೆ ಅದು ಸಾಧ್ಯವಾಗುವಂತೆ ಕಾಣುವುದಿಲ್ಲ ಎನ್ನುತ್ತಾರೆ ಅವರು.
ಇಂಡಿಯಾ ಇಂಕ್ನಿಂದ 'ಯುಕೆ-ಇಂಡಿಯಾ ವೀಕ್ 2018'
ಆದರೆ, ಇಂಡಿಯಾ ಇಂಕ್ ನ ಸ್ಥಾಪಕರಾದ ಮನೋಜ್ ಲಾಡ್ವಾ ಯುಕೆ- ಇಂಡಿಯಾ ಸಪ್ತಾಹವನ್ನು ದೊಡ್ಡ ಮಟ್ಟದ ಸಕಾರಾತ್ಮಕ ಅವಕಾಶವಾಗಿ ನೋಡುತ್ತಾರೆ. ಭಾರತದ ಪಾಲಿಗೆ ಬ್ರಿಟನ್ ಇಡೀ ಯುರೋಪಿನ ಮುಖ್ಯಬಾಗಿಲು. ಭಾರತದಲ್ಲಿ ಹೂಡಿಕೆ ಹೆಚ್ಚಲು ಲಂಡನ್ ಷೇರು ಮಾರುಕಟ್ಟೆ ಒಳ್ಳೆ ಅವಕಾಶ ಎನ್ನುತ್ತಾರೆ.
ಇದೊಂದು ಜೀವನ ಬದಲಾವಣೆಯ ಕಾಲ. ಈ ಅವಕಾಶ ಸಿಕ್ಕಿರುವುದಕ್ಕೆ ನಾವು ಅದೃಷ್ಟವಂತರು ಎನ್ನುತ್ತಾರೆ ಮನೋಜ್ ಲಾಡ್ವಾ.