21ನೇ ಶತಮಾನವನ್ನು ಭಾರತದ ಶತಮಾನವಾಗಿಸುವುದು ನಮ್ಮ ಕರ್ತವ್ಯ : ಮೋದಿ
ಮನೀಲಾ, ಸೆಪ್ಟೆಂಬರ್ 13: "21ನೇ ಶತಮಾನವನ್ನು ಏಷ್ಯಾದ ಶತಮಾನ ಎಂದು ಪರಿಗಣಿಸಿದ್ದರೆ, ಇದನ್ನು ಭಾರತದ ಶತಮಾನವಾಗಿಸುವುದು ನಮ್ಮ ಕರ್ತವ್ಯ ಮತ್ತು ಇದು ನಮ್ಮಿಂದ ಸಾಧ್ಯವಿದೆ," ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.
ಡೊನಾಲ್ಡ್ ಟ್ರಂಪ್ ಜತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಫಿಲಿಪ್ಪೀನ್ಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಅವರು ಭಾರತವನ್ನು ಪರಿವರ್ತನೆ ಮಾಡುವುದು ನಮ್ಮ ಗುರಿ. ಭಾರತವನ್ನು ನಾವು ವಿಶ್ವದರ್ಜೆಗೆ ಕೊಂಡೊಯ್ಯಲಿದ್ದೇವೆ ಎಂದು ಭರವಸೆ ನೀಡಿದರು.
ಭಾರತವನ್ನು ಬದಲಾವಣೆ ಮಾಡಲು ಅವಿರತ ಶ್ರಮ ವಹಿಸುತ್ತಿದ್ದೇವೆ. ನಾವು ಸುಲಭ, ಪರಿಣಾಮಕಾರಿ ಮತ್ತು ಪಾರದರ್ಶಕ ಆಡಳಿತಕ್ಕಾಗಿ ರಾತ್ರಿ ಹಗಲು ಶ್ರಮಿಸುತ್ತಿದ್ದೇವೆ ಎಂದು ಅವರು ಇದೇ ವೇಳೆ ತಿಳಿಸಿದರು.
"ಯಾವ ಪ್ರಜೆಗಳಿಗೆ ಸ್ವಚ್ಛತೆ ಬೇಕಾಗಿಲ್ಲ? ಎಲ್ಲಿ ಮಹತ್ಮಾ ಗಾಂಧಿ ತಮ್ಮ ಸ್ವಚ್ಛತೆಯ ಅಭಿಯಾನವನ್ನು ನಿಲ್ಲಿಸಿದ್ದರೋ ಅಲ್ಲಿಂದ ನಾವು ಆರಂಭಿಸಿದ್ದೇವೆ. ಮತ್ತು ಇಲ್ಲಿಯವರೆಗೆ 2 ಲಕ್ಷ ಗ್ರಾಮಗಳನ್ನು ನಾವು ಬಯಲು ಮುಕ್ತ ಶೌಚ ಗ್ರಾಮಗಳನ್ನಾಗಿ ಮಾಡಿದ್ದೇವೆ," ಎಂದು ಅವರು ಮಾಹಿತಿ ನೀಡಿದರು.
ಕಳೆದ ಮೂರು ವರ್ಷಗಳಲ್ಲಿ 'ಕನಿಷ್ಟ ಸರಕಾರ, ಗರಿಷ್ಟ ಆಡಳಿತದ' ಅಡಿಯಲ್ಲಿ 1200 ಹಳೆಯ ಕಾನೂನುಗಳನ್ನು ರದ್ದುಗೊಳಿಸಲಾಗಿದೆ. ಭಾರತದಲ್ಲಿ ದೊಡ್ಡ ಸಂಖ್ಯೆಯ ಜನರು ಬ್ಯಾಂಕಿಂಗ್ ಸೇವೆಗಳಿಗೆ ಪ್ರವೇಶವನ್ನು ಹೊಂದಿರಲಿಲ್ಲ. ಜನ ಧನ್ ಯೋಜನೆಯ ಮೂಲಕ ತಿಂಗಳಲ್ಲೇ ಬದಲಾವಣೆ ಮಾಡಿ ಲಕ್ಷಾಂತರ ಜನರನ್ನು ಬ್ಯಾಂಕಿಂಗ್ ಕ್ಷೇತ್ರದತ್ತ ಕರೆತರಲಾಗಿದೆ ಎಂದು ಮೋದಿ ಹೆಮ್ಮೆಯಿಂದ ಹೇಳಿದರು.