ಇಸ್ರೇಲ್ನಲ್ಲಿ ಉಗ್ರರ ದಾಳಿಗೆ ಭಾರತದ ಮಹಿಳೆ ಬಲಿ, ಇಸ್ರೇಲ್ ಅಧ್ಯಕ್ಷರ ಸಾಂತ್ವನ
ಹಮಾಸ್ ಉಗ್ರರು ನಡೆಸಿರುವ ದಾಳಿಯಲ್ಲಿ ಇಸ್ರೇಲ್ನಲ್ಲಿ ಕೆಲಸ ಮಾಡುತ್ತಿದ್ದ ಭಾರತದ ಕೇರಳ ಮೂಲದ ಮಹಿಳೆಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಮಹಿಳೆ ಕುಟುಂಬಕ್ಕೆ ಸಾಂತ್ವನ ಹೇಳಲಾಗಿದೆ.
ಕೇರಳದ ಇಡುಕ್ಕಿ ಮೂಲದ ಸೌಮ್ಯ ಸಂತೋಷ್ ದಕ್ಷಿಣ ಇಸ್ರೇಲ್ನ ಕರಾವಳಿ ಭಾಗ ಅಶ್ಕೆಲೋನ್ನಲ್ಲಿ ವೃದ್ಧರೊಬ್ಬರಿಗೆ ಆರೈಕೆ ಮಾಡುವ ಕೆಲಸ ಮಾಡುತ್ತಿದ್ದರು. ಆದರೆ ಹಮಾಸ್ ದಾಳಿಯಲ್ಲಿ ಸೌಮ್ಯ ಮೃತಪಟ್ಟಿದ್ದರು. ಉಗ್ರರ ಗ್ಯಾಂಗ್ ದಾಳಿಯನ್ನ ಭೀಕರಗೊಳಿಸಿದ ಬಳಿಕ ಇಸ್ರೇಲ್ನಲ್ಲಿ ಹತ್ತಾರು ಮಂದಿ ಮೃತಪಟ್ಟಿದ್ದರು.
ಮೃತರ ಪೈಕಿ ಭಾರತ ಮೂಲದ ಸೌಮ್ಯ ಕೂಡ ಸೇರಿದ್ದರು. ಸೌಮ್ಯ ಸಾವಿಗೆ ಸಂತಾಪ ಸೂಚಿಸಿರುವ ಇಸ್ರೇಲ್ ಅಧ್ಯಕ್ಷ ರಿಯುವನ್ ರಿವ್ಲಿನ್, ಖುದ್ದು ಸೌಮ್ಯ ಅವರ ಮನೆಗೆ ಕರೆ ಮಾಡಿ ಸಂತಾಪ ಸೂಚಿಸಿ ಸಾಂತ್ವನ ಹೇಳಿದ್ದಾರೆ.
3ನೇ ಮಹಾಯುದ್ಧಕ್ಕೆ ರಣಕಹಳೆ..? ಇಸ್ರೇಲ್ ವಿರುದ್ಧ ಅರಬ್ ರಾಷ್ಟ್ರಗಳು ಗರಂ..?
ಮೇ 11ರಂದು ಸೌಮ್ಯ ಉಗ್ರರ ದಾಳಿಯಲ್ಲಿ ಮೃತಪಟ್ಟಿದ್ದರು. ಮೇ 14ರಂದು ಸೌಮ್ಯ ಮೃತದೇಹವನ್ನು ವಿಶೇಷ ವಿಮಾನದಲ್ಲಿ ಭಾರತಕ್ಕೆ ಕಳುಹಿಸಲಾಗಿತ್ತು. ಇದಾದ ಬಳಿಕ ರೊಚ್ಚಿಗೆದ್ದ ಇಸ್ರೇಲ್ ಮರುದಾಳಿ ಶುರು ಮಾಡಿ, ಗಾಜಾ ಪಟ್ಟಿ ಅರ್ಧ ನಾಶವಾಗುವಂತೆ ಮಾಡಿದೆ. ಇಸ್ರೇಲ್ ಸೇನೆ ಉಗ್ರರನ್ನು ಹುಡುಕಿ ಹುಡುಕಿ ಕೊಲ್ಲುತ್ತಿದೆ.
ದಾಳಿಯನ್ನ ಭಾರತ ತೀವ್ರವಾಗಿ ಖಂಡಿಸಿತ್ತು
ಹಮಾಸ್ ಉಗ್ರರು ಇಸ್ರೇಲ್ ಮೇಲೆ ನಡೆಸಿದ್ದ ದಾಳಿಯನ್ನ ಭಾರತ ತೀವ್ರವಾಗಿ ಖಂಡಿಸಿತ್ತು. ಜೆರುಸಲೇಂನ 'ಟೆಂಪಲ್ ಮೌಂಟ್' ಬಳಿ ನಡೆದ ಹಿಂಸಾಚಾರವನ್ನೂ ಖಂಡಿಸಿತ್ತು. ಹಿಂಸೆ ಬಿಟ್ಟು ಶಾಂತಿಯಿಂದ ವರ್ತಿಸಲು ಭಾರತ ಸಲಹೆ ನೀಡಿತ್ತಲ್ಲದೆ, ಶೇಕ್ ಜರಾ ಸುತ್ತಲೂ ನೆಲೆಸಿರುವವರನ್ನು ಬಲವಂತವಾಗಿ ಹೊರದಬ್ಬುತ್ತಿರುವ ಕೃತ್ಯಕ್ಕೂ ಭಾರತ ಬೇಸರ ವ್ಯಕ್ತಪಡಿಸಿತ್ತು. ಎರಡೂ ಬಣಗಳು ಯಥಾಸ್ಥಿತಿ ಕಾಪಾಡಬೇಕಿದೆ ಎಂದು ಭಾರತ ಸಲಹೆ ನೀಡಿದೆ. ಆದರೆ ಅಲ್ಲಿನ ಪರಿಸ್ಥಿತಿ ಬೇರೆಯೇ ಇದ್ದು, ಹಿಂಸೆ ಮತ್ತಷ್ಟು ತೀವ್ರಗೊಂಡಿದೆ. ಸಾವಿನ ಸಂಖ್ಯೆ ಕ್ಷಣಕ್ಷಣಕ್ಕೂ ಏರುತ್ತಲೇ ಸಾಗಿದೆ. ಗಾಜಾ ಪಟ್ಟಿ ಅಕ್ಷರಶಃ ಸ್ಮಶಾನ ರೂಪ ತಾಳಿದೆ.
ಇಸ್ರೇಲ್ ಯುದ್ಧ ನಿಲ್ಲಿಸುವುದಿಲ್ಲ
ಖಂಡಿತಾ ಇಸ್ರೇಲ್ ಯುದ್ಧ ನಿಲ್ಲಿಸುವುದಿಲ್ಲ ಮತ್ತು ತನ್ನ ಈಗಿನ ದಾಳಿಯನ್ನ ಇಸ್ರೇಲ್ ಪಡೆಗಳು ಮತ್ತಷ್ಟು ತೀವ್ರಗೊಳಿಸುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ ತಜ್ಞರು. ಏಕೆಂದರೆ ಇಸ್ರೇಲ್ ಸುಮ್ಮನಿದ್ದರೂ ಹಮಾಸ್ ಉಗ್ರ ಪಡೆ ಸುಖಾಸುಮ್ಮನೆ ಇಸ್ರೇಲ್ ಮೇಲೆ ದಾಳಿ ಮಾಡಿದೆ. ಇದರಿಂದ ಸಾಕಷ್ಟು ನಷ್ಟ ಉಂಟಾಗಿದ್ದು, ಇಸ್ರೇಲ್ ಈ ಬಾರಿ ರೊಚ್ಚಿಗೆದ್ದಿದೆ. ಹೀಗಾಗಿಯೇ ತೀವ್ರವಾಗಿ ಪ್ರತಿದಾಳಿ ನಡೆಸುತ್ತಿದೆ ಇಸ್ರೇಲ್. ಇದರ ಪರಿಣಾಮವೇ ಗಾಜಾ ಪಟ್ಟಿ ಅಕ್ಷರಶಃ ಸ್ಮಶಾನ ರೂಪ ಪಡೆದಿದೆ. ಬೈಡನ್ ಕೇಳಿಕೊಂಡರೂ ಯುದ್ಧ ನಿಲ್ಲುವುದು ಅನುಮಾನ ಎನ್ನಲಾಗುತ್ತಿದೆ. ತಕ್ಷಣಕ್ಕೆ ಯುದ್ಧ ನಿಂತರೂ ಮತ್ತೆ ಯುದ್ಧ ಆರಂಭವಾಗುವ ಅಪಾಯವೇ ಹೆಚ್ಚಾಗಿದೆ.
ಉಗ್ರರು ಹೇಡಿಗಳು
ಹಮಾಸ್ ಉಗ್ರರ ವಿರುದ್ಧ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಹಮಾಸ್ ಉಗ್ರರ ಗ್ಯಾಂಗ್ ಜನರ ಮಧ್ಯೆ ಅಡಗಿ ಕೂತು ಜನರ ಮೇಲೆಯೇ ದಾಳಿ ಮಾಡುತ್ತಿದೆ ಎಂದಿದ್ದಾರೆ. ಈ ಮೂಲಕ ಹಮಾಸ್ ಉಗ್ರ ಪಡೆಯನ್ನ ಹೇಡಿಗಳು ಎಂದು ಪರೋಕ್ಷವಾಗಿ ಟೀಕಿಸಿದ್ದಾರೆ. ಮತ್ತೊಂದ್ಕಡೆ ನಾವಿನ್ನೂ ಕಾರ್ಯಾಚರಣೆ ಮಧ್ಯದಲ್ಲಿದ್ದು, ಗುರಿ ಮುಟ್ಟಿಲ್ಲ ಎಂದು ಹೇಳಿದ್ದಾರೆ ನೆತನ್ಯಾಹು. ಹೀಗೆ ಇಸ್ರೇಲ್ ಯದ್ಧದಿಂದ ಹಿಂದೆ ಸರಿಯುವುದಿಲ್ಲ ಎಂಬ ಸಂದೇಶವನ್ನೂ ಪರೋಕ್ಷವಾಗಿ ರವಾನಿಸಿದ್ದಾರೆ ನೆತನ್ಯಾಹು.
1967 ರ ಅರಬ್-ಇಸ್ರೇಲಿ ಯುದ್ಧ
1967 ರ ಅರಬ್-ಇಸ್ರೇಲಿ ಯುದ್ಧದ ಸಮಯದಲ್ಲಿ ಇಸ್ರೇಲಿ ಪಡೆಗಳು ಭೂಪ್ರದೇಶವನ್ನು ವಶಪಡಿಸಿಕೊಂಡ ನೆನಪಿಗೆ ಮೆರವಣಿಗೆ ಆಯೋಜಿಸಲಾಗಿತ್ತು. ವಿಜಯದ ದಿನವನ್ನ ನೆನಪಿಸಿಕೊಳ್ಳುವ ಸಲುವಾಗಿ ಯಹೂದಿಗಳು ಜೆರುಸಲೇಂನ ಓಲ್ಡ್ ಸಿಟಿಯಲ್ಲಿ ಮೆರವಣಿಗೆಗೆ ಸಿದ್ಧತೆ ನಡೆಸಿದ್ದರು. ಆದರೆ ಮೆರವಣಿಗೆ ಆಯೋಜನೆ ಮಾಡಿದ್ದ ಹಿನ್ನೆಲೆಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ ಎನ್ನಲಾಗುತ್ತಿದೆ. ಹೀಗೆ ಹಿಂಸೆ ಭುಗಿಲೇಳುತ್ತಲೇ ಇಸ್ರೇಲಿ ಪೊಲೀಸರು ಬಲಪ್ರಯೋಗ ನಡೆಸಿದ್ದಾರೆ. ಇಸ್ರೇಲಿ ಪೊಲೀಸರು ಮಧ್ಯಪ್ರವೇಶ ಮಾಡಿದ್ದೇ ತಡ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು. ಇದಾದ ಬಳಿಕ ಪ್ಯಾಲೆಸ್ತೇನ್ ಹಾಗೂ ಇಸ್ರೇಲ್ ನಡುವೆ ಹಿಂಸೆ ಆರಂಭವಾಗಿ, ಗಾಜಾ ಪಟ್ಟಿ ಮೇಲೆ ನಡೆಯುತ್ತಿರುವ ದಾಳಿಗೆ 250ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ.