‘ಯಹೂದಿ’ಗಳ ನಾಡಲ್ಲಿ ಅರಾಜಕತೆ..? ಇಸ್ರೇಲ್ನಲ್ಲಿ ಭುಗಿಲೇಳುತ್ತಾ ಹಿಂಸಾಚಾರ..?
ಬಲಿಷ್ಠ ಅರಬ್ ರಾಷ್ಟ್ರಗಳಿಗೂ ಸೆಡ್ಡು ಹೊಡೆದು ದೇಶ ಕಟ್ಟಿಕೊಂಡಿದ್ದ ಇಸ್ರೇಲಿಗರಿಗೆ ಯಾಕೋ ನೆಮ್ಮದಿಯೇ ಸಿಗದಾಗಿದೆ. ಇಷ್ಟು ದಿನ ದೇಶದ ಹೊರಗೆ ಹಾಗೂ ಗಡಿಯಲ್ಲಿ ಕಿರಿಕಿರಿ ಅನುಭವಿಸುತ್ತಿದ್ದ ಇಸ್ರೇಲಿಗರಿಗೆ ಸದ್ಯ ಆಂತರಿಕ ಕಿತ್ತಾಟವೇ ತುಂಬಾ ಟಾರ್ಚರ್ ಕೊಡುತ್ತಿದೆ. ಅಷ್ಟಕ್ಕೂ ಎಲ್ಲಾ ನಾಟಕೀಯ ಬೆಳವಣಿಗೆಗೆ ಮೂಲ ಕಾರಣ ಪ್ರಧಾನಿ ಬೆಂಜಮಿನ್ ನೆತನ್ಯಾಹು ಎನ್ನಬಹುದು.
ಏಕೆಂದರೆ 7 ತಿಂಗಳ ಹಿಂದೆ ಪ್ರಮುಖ ಎದುರಾಳಿ ಬೆನ್ನಿ ಗಾಂಟ್ಜ್ ಪಕ್ಷದ ಸಹಕಾರದ ಜೊತೆ ಸರ್ಕಾರ ರಚಿಸಿದ್ದರು ಬೆಂಜಮಿನ್ ನೆತನ್ಯಾಹು. ಬಹುಮತ ಸಿಗದ ಪರಿಣಾಮ ಬೆಂಜಮಿನ್ ನೆತನ್ಯಾಹು ಇಂತಹ ಮೈತ್ರಿಗೆ ಮುಂದಾಗಿದ್ದರು. ನೆತನ್ಯಾಹು ಅವರ ಲಿಕುಡ್ ಪಾರ್ಟಿ ಹಾಗೂ ಗಾಂಟ್ಜ್ ನೇತೃತ್ವದ ಬ್ಲೂ ಆ್ಯಂಡ್ ವೈಟ್ ಪಾರ್ಟಿ ಮೈತ್ರಿ ಸರ್ಕಾರ ಈಗ ಉರುಳಿಬಿದ್ದಿದೆ. ಇಷ್ಟುದಿನ ಬೆಂಜಮಿನ್ ನೆತನ್ಯಾಹು ವಿರುದ್ಧ ಜನರು ರೊಚ್ಚಿಗೆದ್ದು ಬೀದಿಗೆ ಇಳಿದಿದ್ದರು, ನೆತನ್ಯಾಹು ವಿರುದ್ಧ ಭ್ರಷ್ಟಾಚಾರ, ಲಂಚ, ಮೋಸ ಹಾಗೂ ನಂಬಿಕೆ ದ್ರೋಹದ ಪ್ರಕರಣಗಳು ದಾಖಲಾಗಿವೆ.
ಇಸ್ರೇಲ್ ಸರ್ಕಾರ ಅವಧಿಗೂ ಮುನ್ನ ಪತನ: 2 ವರ್ಷದಲ್ಲಿ ನಾಲ್ಕನೇ ಚುನಾವಣೆ
ಇದೇ ಕಾರಣಕ್ಕಾಗಿ ನೆತನ್ಯಾಹು ವಿರುದ್ಧ ಇಸ್ರೇಲಿಗರು ಬೀದಿಗೆ ಇಳಿದಿದ್ದರು. ಇದೀಗ ಸರ್ಕಾರವೇ ಉರುಳಿಬಿದ್ದಿದ್ದು ಪ್ರತಿಭಟನೆಗಳು ಇನ್ನಷ್ಟು ಹೆಚ್ಚಾಗುವ ಸಂಭವ ಇದೆ.
ಯಾಕ್ ಹಿಂಗ್ ಆಯ್ತು ನೆತನ್ಯಾಹು..?
ಬೆಂಜಮಿನ್ ನೆತನ್ಯಾಹು ಇಸ್ರೇಲ್ನ ಪ್ರಭಾವಿ ಪ್ರಧಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದವರು. ಹಾಗೇ ನೆತನ್ಯಾಹು ಅವಧಿಯಲ್ಲಿ ಇಸ್ರೇಲ್ ಸಾಕಷ್ಟು ಬದಲಾವಣೆ ಕಂಡಿದೆ. ಹತ್ತಾರು ವರ್ಷಗಳಿಂದಲೂ ಇಸ್ರೇಲ್ನ ಶತ್ರುಗಳಂತೆ ವರ್ತಿಸುತ್ತಿದ್ದ ದೇಶಗಳು ಈಗ ಇಸ್ರೇಲ್ ಸ್ನೇಹ ಬಯಸಿವೆ. ಅಂತಾರಾಷ್ಟ್ರೀಯ ಸಂಬಂಧ ವೃದ್ಧಿಯಲ್ಲೂ ಇದೇ ನೆತನ್ಯಾಹು ಪ್ರಗತಿ ಸಾಧಿಸಿದ್ದಾರೆ. ಫೇಮಸ್ ಪ್ರಧಾನಿ ಎಂಬ ಪಟ್ಟವನ್ನೂ ಗಿಟ್ಟಿಸಿಕೊಂಡಿದ್ದಾರೆ.
ಆದರೆ ಕಳೆದ ಚುನಾವಣೆಯಲ್ಲಿ ನೆತನ್ಯಾಹು ವಿರುದ್ಧ ಕೇಳಿಬಂದ ಭ್ರಷ್ಟಾಚಾರ, ಲಂಚ, ಮೋಸ ಹಾಗೂ ನಂಬಿಕೆ ದ್ರೋಹದ ಆರೋಪಗಳು ಈಗ ಪ್ರಕರಣದ ರೂಪಪಡೆದಿವೆ. ದಿಢೀರ್ ನೆತನ್ಯಾಹು ವಿಚಾರದಲ್ಲಿ ಹೀಗೆ ಏಕಾಯ್ತು ಅನ್ನೋ ಪ್ರಶ್ನೆ ಸ್ವಪಕ್ಷೀಯರಲ್ಲಿ ಕಾಡುತ್ತಿದೆ. ಇದೀಗ ಬೆಂಜಮಿನ್ ನೆತನ್ಯಾಹು ತಮ್ಮ ವಿರುದ್ಧದ ಆರೋಪಗಳಿಗೆ ಉತ್ತರ ಕೊಡುವ ಸಮಯ ಬಂದಿದ್ದು, ಕೋರ್ಟ್ ಮೆಟ್ಟಿಲೇರಬೇಕಿದೆ. ಸರ್ಕಾರ ಉರುಳಲು ಇದು ಪ್ರಮುಖ ಕಾರಣ ಎನ್ನಲಾಗುತ್ತಿದ್ದು, ಬೆಂಜಮಿನ್ ನೆತನ್ಯಾಹುಗೆ ಸರ್ಕಾರ ಉರುಳಿಬಿದ್ದಿದ್ದು ದೊಡ್ಡ ಶಾಕ್ ನೀಡಿದೆ.
3 ತಿಂಗಳ ಒಳಗೆ ಚುನಾವಣೆ
ಮಂಗಳವಾರ ಮಧ್ಯರಾತ್ರಿ ಇಸ್ರೇಲ್ ಸಂಸತ್ತು ತಾನಾಗಿಯೇ ವಿಸರ್ಜನೆಗೊಂಡಿದೆ. ಪ್ರಧಾನಿ ನೆತನ್ಯಾಹು 7 ತಿಂಗಳ ಹಿಂದೆ ಬೆನ್ನಿ ಗಾಂಟ್ಜ್ ಪಕ್ಷದ ಸಹಕಾರದೊಂದಿಗೆ ಸರ್ಕಾರ ರಚಿಸಿದ್ದರು. ಆದರೆ 7 ತಿಂಗಳ ಒಳಗೆ ಮೈತ್ರಿ ಸರ್ಕಾರ ಪತನವಾಗಿದೆ.
ಈ ಮೂಲಕ 2 ವರ್ಷದ ಅವಧಿಯಲ್ಲಿ 4ನೇ ಬಾರಿ ಇಸ್ರೇಲ್ನಲ್ಲಿ ಚುನಾವಣೆ ನಡೆಯಬೇಕಾದ ಪರಿಸ್ಥಿತಿ ಎದುರಾಗಿದೆ. ಮುಂದಿನ 3 ತಿಂಗಳ ಒಳಗಾಗಿ ಚುನಾವಣೆ ನಡೆಸಬೇಕಿದೆ. ಹೀಗಾಗಿ ಮಾರ್ಚ್ 23ಕ್ಕೆ ಮತದಾನ ನಿಗದಿಯಾಗಿದೆ. ಆದರೆ ಜನ ಮಾತ್ರ ಫುಲ್ ಕನ್ಫ್ಯೂಷನ್ ಮೂಡ್ಗೆ ಜಾರಿದ್ದಾರೆ. ದೇಶದ ರಾಜಕೀಯ ಏರಿಳಿತ ಇಸ್ರೇಲ್ ಜನರನ್ನು ಕಂಗಾಲಾಗುವಂತೆ ಮಾಡಿದೆ.
ಕಾಯುತ್ತಿದ್ದಾರೆ ಇಸ್ರೇಲ್ ಶತ್ರುಗಳು
ಇಸ್ರೇಲ್ ಪುಟಾಣಿ ದೇಶವಾದರೂ ಅರಬ್ ಒಕ್ಕೂಟದ ಹತ್ತಾರು ದೇಶಗಳನ್ನ ಎದುರು ಹಾಕಿಕೊಂಡಿದೆ. ಅಲ್ಲಿ ತನ್ನ ನೆಲೆ ಖಚಿತ ಮಾಡಿಕೊಳ್ಳಲು ಇಸ್ರೇಲ್ಗೆ ಇದು ಅನಿವಾರ್ಯ ಕೂಡ ಆಗಿತ್ತು. ಆದರೀಗ ದೇಶದ ಒಳಗೆ ಕಿತ್ತಾಟ ಆರಂಭವಾಗಿದೆ. ಅರಾಜಕತೆಯ ಮುನ್ಸೂಚನೆ ಕೂಡ ಸಿಗುತ್ತಿದೆ. ಪ್ರಧಾನಿ ವಿರುದ್ಧವೇ ಜನರು ಬೀದಿಗೆ ಇಳಿದು ಹೋರಾಡುತ್ತಿದ್ದಾರೆ. ರೊಚ್ಚಿಗೆದ್ದು ಹಿಂಸಾಚಾರ ನಡೆಸುತ್ತಿದ್ದಾರೆ. ಅಕಸ್ಮಾತ್ ಇಸ್ರೇಲ್ನಲ್ಲಿ ಆಂತರಿಕ ಯುದ್ಧ ಮೊಳಗಿ, ಹಿಂಸಾಚಾರ ಭುಗಿಲೆದ್ದರೆ ಇಸ್ರೇಲ್ ಶತ್ರುಪಡೆ ಒಳನುಗ್ಗಿ ಹಿಡಿತ ಸಾಧಿಸಲು ಕಾಯುತ್ತಿದೆ.
ಇಸ್ರೇಲ್ ಭವಿಷ್ಯದ ಕಥೆ ಏನು..?
2020ರ ಬಜೆಟ್ ಅನುಮೋದನೆಗೆ ನೀಡಲಾಗಿದ್ದ ಕಾನೂನಾತ್ಮಕ ಗಡುವು ಮುಕ್ತಾಯವಾದ ಬೆನ್ನಲ್ಲೇ ಸಂಸತ್ ವಿಸರ್ಜನೆಯಾಗಿದೆ. ಹಣಕಾಸು ಖಾತೆಯನ್ನು ನೆತನ್ಯಾಹು ಪಕ್ಷ ನಿಭಾಯಿಸಿತ್ತು ಮತ್ತು ಬಜೆಟ್ ಮಂಡಿಸಲು ನಿರಾಕರಿಸಿತ್ತು. ಇಷ್ಟೆಲ್ಲದರ ನಡುವೆ ಸರ್ಕಾರ ಉರುಳಿ, ಇಸ್ರೇಲ್ನಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಜನ ಕೂಡ ಗೊಂದಲದಲ್ಲಿದ್ದಾರೆ. ಆದರೆ ವಿಶ್ಲೇಷಕರ ಪ್ರಕಾರ, ಮತ್ತೊಂದು ಚುನಾವಣೆಯಲ್ಲಿ ನೆತನ್ಯಾಹು ಬಲಪಂಥೀಯ ಧೋರಣೆ ಹಾಗೂ ಧಾರ್ಮಿಕ ಸರ್ಕಾರ ರಚಿಸುವ ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ಮುಂದಿನ ಅವಧಿಯಲ್ಲಿ ಸ್ಪಷ್ಟ ಬಹುಮತ ಗಿಟ್ಟಿಸುವ ತಂತ್ರ ನೆತನ್ಯಾಹು ಅವರದ್ದಾಗಿದೆ. ಮತ್ತೊಂದೆಡೆ ಚುನಾವಣೆ ಮುಗಿದು ಹೊಸ ಸರ್ಕಾರ ರಚನೆಯಾಗುವವರೆಗೂ ಇದೇ ಸರ್ಕಾರ ದೇಶವನ್ನು ಮುನ್ನಡೆಸಲಿದೆ.