3ನೇ ಮಹಾಯುದ್ಧಕ್ಕೆ ರಣಕಹಳೆ..? ಇಸ್ರೇಲ್ ವಿರುದ್ಧ ಅರಬ್ ರಾಷ್ಟ್ರಗಳು ಗರಂ..?
ಎಷ್ಟೇ ಬೇಡಿದರೂ ರಕ್ತಪಾತ ನಿಲ್ಲುತ್ತಿಲ್ಲ, ಬೀದಿ ಬೀದಿಯಲ್ಲಿ ಬಾಂಬ್ ಏಟು ತಿಂದು ನರಳಾಡಿ ಸಾಯುತ್ತಿರುವ ಜನರ ಸಂಖ್ಯೆ ಏರುತ್ತಲೇ ಇದೆ. ಆದರೆ ಇಂತಹ ಹೊತ್ತಲ್ಲೇ ಮತ್ತೆ ಗಾಜಾ ಪಟ್ಟಿ ಮೇಲೆ ಇಸ್ರೇಲ್ ಡೆಡ್ಲಿ ದಾಳಿ ನಡೆಸಿದೆ. ದಾಳಿಯಲ್ಲಿ 12 ಅಮಾಯಕ ನಾಗರಿಕರು ಮೃತಪಟ್ಟಿದ್ದಾರೆಂಬ ಆರೋಪ ಕೇಳಿಬಂದಿದೆ.
ಈಗಾಗಲೇ ಪ್ಯಾಲೆಸ್ತೇನ್ ಹಾಗೂ ಇಸ್ರೇಲ್ ಕಿತ್ತಾಟಕ್ಕೆ ಬಲಿಯಾದವರ ಸಂಖ್ಯೆ 250ರ ಸಮೀಪ ಬಂದು ತಲುಪಿದೆ. ಇದು ಜಗತ್ತಿನಾದ್ಯಂತ ಅಸಮಾಧಾನ ಭುಗಿಲೇಳುವಂತೆ ಮಾಡಿದೆ. ಅಮೆರಿಕ ಅಧ್ಯಕ್ಷರು ಖುದ್ದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ಕರೆ ಮಾಡಿ ದಾಳಿ ನಿಲ್ಲಿಸಲು ಮನವಿ ಮಾಡಿದ್ದಾರೆ.
ಉಗ್ರರ ನಾಯಕನ ಹೆಣ ಉರುಳಿಸಿತು ಇಸ್ರೇಲ್ ಸೇನೆಯ ರಾಕೆಟ್..!
ಅಮಾಯಕರನ್ನ ರಕ್ಷಿಸಿ ಪ್ಲೀಸ್ ಎಂದು ಬೇಡಿದ್ದೂ ಆಗಿದೆ. ಆದರೆ ಇಸ್ರೇಲ್ ಮಾತ್ರ ದಾಳಿ ನಿಲ್ಲಿಸುತ್ತಿಲ್ಲ, ಹೀಗಾಗಿ ಸಾಲು ಸಾಲಾಗಿ ಹೆಣಗಳು ಬೀಳುತ್ತಿವೆ. ಇದು ಅರಬ್ ರಾಷ್ಟ್ರಗಳ ಕಣ್ಣು ಕೆಂಪಾಗುವಂತೆ ಮಾಡುತ್ತಿದೆ.
ಆದರೆ ಅಮೆರಿಕದ ರೀತಿ ಅರಬ್ನ ದೇಶಗಳು ಕೂಡ ನೇರವಾಗಿ ಹೇಳಲು ಆಗದ ಒತ್ತಡಕ್ಕೆ ಸಿಲುಕಿವೆ. ಏಕೆಂದರೆ ಇತ್ತೀಚೆಗಷ್ಟೇ ಇಸ್ರೇಲ್ ಜೊತೆಗೆ ಸಂಬಂಧ ವೃದ್ಧಿಯಾಗುತ್ತಿದೆ. ಹೀಗಿರುವಾಗ ಇಸ್ರೇಲ್ ಜೊತೆಗೆ ಸಂಬಂಧ ಕೆಡಿಸಿಕೊಳ್ಳಲು ಅರಬ್ ರಾಷ್ಟ್ರಗಳಿಗೆ ಇಷ್ಟವಿಲ್ಲ. ಮತ್ತೊಂದು ಕಡೆ ಗಾಜಾ ಪಟ್ಟಿ ಮೇಲಿನ ದಾಳಿಗೆ ಬ್ರೇಕ್ ಹಾಕಬೇಕಿದೆ. ಇದೇ ಕಾರಣಕ್ಕೆ ಪರೋಕ್ಷ ಪ್ರಯತ್ನ ಮುಂದುವರಿಸಿವೆ ಅರಬ್ ರಾಷ್ಟ್ರಗಳು.
3ನೇ ಮಹಾಯುದ್ಧ
ಜಗತ್ತು ಕೊರೊನಾ ಕಿಚ್ಚಿನಲ್ಲಿ ಬೇಯುತ್ತಿದ್ದರೆ ಮಧ್ಯಪ್ರಾಚ್ಯ ಕೋಮು ಘರ್ಷಣೆಯಲ್ಲಿ ತೊಡಗಿದೆ. ಮತ್ತೊಂದೆಡೆ ಇಸ್ರೇಲ್-ಪ್ಯಾಲೆಸ್ತೇನ್ ನಡುವೆ ದಾಳಿ-ಪ್ರತಿದಾಳಿ ನಡೆಯುತ್ತಿರುವುದನ್ನು ನೋಡಿದರೆ 3ನೇ ಮಹಾಯುದ್ಧದ ಭೀತಿ ಆವರಿಸುತ್ತಿದೆ. ಏಕೆಂದರೆ ಇಸ್ರೇಲ್ ಪರವಾಗಿ ಯುರೋಪ್ ಹಾಗೂ ಅಮೆರಿಕ ನಿಂತರೆ, ಪ್ಯಾಲೆಸ್ತೇನ್ನ ಪರವಾಗಿ ಇಸ್ರೇಲ್ ಶತ್ರುಗಳು ಹಾಗೂ ಅಮೆರಿಕ ಶತ್ರು ರಾಷ್ಟ್ರಗಳು ನಿಲ್ಲುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಇಸ್ರೇಲ್-ಪ್ಯಾಲೆಸ್ತೇನ್ ಕಿತ್ತಾಟ 3ನೇ ಮಹಾಯುದ್ಧದ ಆತಂಕವನ್ನು ತಂದೊಡ್ಡಿದೆ. ಪರಸ್ಪರ ರಾಕೆಟ್ ದಾಳಿಗೆ ಎರಡೂ ದೇಶಗಳು ಮುಂದಾಗಿರುವುದು ಆತಂಕವನ್ನು ಮತ್ತಷ್ಟು ಹೆಚ್ಚು ಮಾಡಿದೆ.
ಉಗ್ರರ ಕೈವಾಡ ಎದ್ದು ಕಾಣುತ್ತದೆ
ಪ್ರತಿಬಾರಿ ಗಾಜಾ ಪಟ್ಟಿ ಹಾಗೂ ಇಸ್ರೇಲ್ ನಡುವೆ ಹಿಂಸಾಚಾರ ನಡೆದಾಗಲೂ ಹಮಾಸ್ ಉಗ್ರರ ಕೈವಾಡ ಎದ್ದು ಕಾಣುತ್ತದೆ. ಆದರೆ ಮೊದಲು ಬೆಂಕಿ ಹಚ್ಚುವ ಕೆಲಸ ಮಾಡುವ ಉಗ್ರರ ಗ್ಯಾಂಗ್, ಇಸ್ರೇಲ್ ಪ್ರತಿದಾಳಿ ಆರಂಭಿಸುತ್ತಿದ್ದಂತೆ ಎಸ್ಕೇಪ್ ಆಗಿಬಿಡುತ್ತಾರೆ. ಇದೇ ರೀತಿ ಈಗಲೂ ಯುದ್ಧ ಆರಂಭವಾಗುತ್ತಿದ್ದಂತೆ ಉಗ್ರರು ಎಸ್ಕೇಪ್ ಆಗಿದ್ದಾರೆ. ಇದಕ್ಕಾಗಿ ಉಗ್ರರು ಸುರಂಗ ರಚಿಸಿಕೊಂಡು, ವ್ಯವಸ್ಥಿತವಾಗಿ ಇಸ್ರೇಲ್ ಸೇನೆ ಕೈಗೆ ಸಿಗದೆ ಓಡಿ ಹೋಗುತ್ತಾರೆ. ಆದರೆ ಈ ಬಾರಿ ಉಗ್ರರ 35 ಸ್ಥಳಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗಿದೆ.
ಇಸ್ರೇಲ್ ಕೈಯಲ್ಲಿ ಸಿಲುಕಿ ನರಳುತ್ತಿದ್ದಾರೆ
ಗಾಜಾ ಪಟ್ಟಿಯಲ್ಲಿ ಯಾವ ತಪ್ಪನ್ನೂ ಮಾಡದ ಅಮಾಯಕರು, ಹಮಾಸ್ ಉಗ್ರರ ಉಪಟಳದಿಂದಾಗಿ ಪದೇ ಪದೆ ಇಸ್ರೇಲ್ ಕೈಯಲ್ಲಿ ಸಿಲುಕಿ ನರಳುತ್ತಿದ್ದಾರೆ. ತಪ್ಪು ಮಾಡಿರುವ ಹಮಾಸ್ ಉಗ್ರರು ಎಸ್ಕೇಪ್ ಆಗಿದ್ದಾರೆ. ಆದರೆ ಅಮಾಯಕರು ಇಸ್ರೇಲ್ ದಾಳಿಗೆ ಸಿಲುಕಿ ನರಳಿ ನರಳಿ ಸಾಯುತ್ತಿದ್ದಾರೆ. ಇಸ್ರೇಲ್ ನಡೆಸಿದ ರಾಕೆಟ್ ದಾಳಿಯಲ್ಲಿ ನೂರಾರು ಜನ ಮನೆ ಕಳೆದುಕೊಂಡು ಬೀದಿಯಲ್ಲಿ ಬದುಕುತ್ತಿದ್ದಾರೆ. ಅನ್ನ, ನೀರು ಸಿಗದೆ ಕಣ್ಣೀರು ಹಾಕುವ ಪರಿಸ್ಥಿತಿ ಅಲ್ಲಿ ಎದ್ದು ಕಾಣುತ್ತಿದೆ. ಸ್ಥಳೀಯ ಆಡಳಿತ ಕೂಡ ಅಸಹಾಯಕ ಪರಿಸ್ಥಿತಿಗೆ ತಲುಪಿದೆ.
ಹಮಾಸ್ ಉಗ್ರರ ವಿರುದ್ಧ ತೀಕ್ಷ್ಣವಾಗಿ ಪ್ರತಿಕ್ರಿಯೆ
ಹಮಾಸ್ ಉಗ್ರರ ವಿರುದ್ಧ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಹಮಾಸ್ ಉಗ್ರರ ಗ್ಯಾಂಗ್ ಜನರ ಮಧ್ಯೆ ಅಡಗಿ ಕೂತು ಜನರ ಮೇಲೆಯೇ ದಾಳಿ ಮಾಡುತ್ತಿದೆ ಎಂದಿದ್ದಾರೆ. ಈ ಮೂಲಕ ಹಮಾಸ್ ಉಗ್ರ ಪಡೆಯನ್ನ ಹೇಡಿಗಳು ಎಂದು ಪರೋಕ್ಷವಾಗಿ ಟೀಕಿಸಿದ್ದಾರೆ. ಮತ್ತೊಂದ್ಕಡೆ ನಾವಿನ್ನೂ ಕಾರ್ಯಾಚರಣೆ ಮಧ್ಯದಲ್ಲಿದ್ದು, ಗುರಿ ಮುಟ್ಟಿಲ್ಲ ಎಂದು ಹೇಳಿದ್ದಾರೆ ನೆತನ್ಯಾಹು. ಹೀಗೆ ಇಸ್ರೇಲ್ ಯದ್ಧದಿಂದ ಹಿಂದೆ ಸರಿಯುವುದಿಲ್ಲ ಎಂಬ ಸಂದೇಶವನ್ನೂ ಪರೋಕ್ಷವಾಗಿ ರವಾನಿಸಿದ್ದಾರೆ ನೆತನ್ಯಾಹು.