ಇಸ್ಲಾಂ ಸಾಮ್ರಾಜ್ಯ ವಿಸ್ತರಣೆ: ಉಗ್ರರ ಕಣ್ಣು ಭಾರತದತ್ತ
ಬಾಗ್ದಾದ್ ಜೂ 24: ತೈಲ ಸಂಪದ್ಭರಿತ ಇರಾಕ್ ದೇಶದ ನೆಮ್ಮದಿಯನ್ನು ಮಣ್ಣುಪಾಲು ಮಾಡಿದ ಮುಸ್ಲಿಂ ಜಿಹಾದ್ ಉಗ್ರ ಸಂಘಟನೆಗಳು, ತಮ್ಮ ಸಾಮ್ರಾಜ್ಯನ್ನು ವಿಸ್ತರಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ಉಗ್ರರ ಪಟ್ಟಿಯಲ್ಲಿರುವ ಮುಂದಿನ ಟಾರ್ಗೆಟ್ ಭಾರತ ಎನ್ನಲಾಗುತ್ತಿದೆ.
ಗುಪ್ತಚರ ಇಲಾಖೆ ಪ್ರತೀ ರಾಜ್ಯಕ್ಕೂ ಈ ಸಂಬಂಧ ಸಂದೇಶವನ್ನು ರವಾನಿಸಿದ್ದು, ಅದರಲ್ಲೂ ಪ್ರಮುಖವಾಗಿ ನಾಲ್ಕು ರಾಜ್ಯಗಳು ಹೈಅಲರ್ಟ್ ನಲ್ಲಿರಲು ಆದೇಶ ನೀಡಿದೆ. ಗುಜರಾತ್, ಪಂಜಾಬ್, ಜಮ್ಮು ಮತ್ತು ಕಾಶ್ಮೀರ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ. ಇದಕ್ಕೆ ಇರಾಕ್ ಉಗ್ರರು ಕೈಜೋಡಿಸ ಬಹುದೆಂದು ಗುಪ್ತಚರ ಇಲಾಖೆ ಎಚ್ಚರಿಸಿದೆ.
ಭಾರತದ ಮೇಲೆ ಇಸ್ಲಾಂ ಉಗ್ರ ಸಂಘಟನೆಗಳ ಕಣ್ಣು ಈ ಮೊದಲೇನಲ್ಲ. ಅದೂ ನರೇಂದ್ರ ಮೋದಿ ಪ್ರಧಾನಿಯಾದ ನಂತರ ವಿಶ್ವದ ಎಲ್ಲಾ ಪ್ರಮುಖ ಉಗ್ರ ಸಂಘಟನೆಗಳ ಮೊದಲ ಆದ್ಯತೆಯ ಟಾರ್ಗೆಟ್ ಅಂದರೆ ಭಾರತ.
ಜಿಹಾದ್ ಹೆಸರಿನಲ್ಲಿ ಮಾಡಬಾರದ ಪೈಶಾಚಿಕ ಕೃತ್ಯಗಳನ್ನು ಮಾಡುತ್ತಿರುವ ಐಎಸ್ಐಎಸ್ (Islamic State of Iraq and Syria) ಬಂಡುಕೋರ ಸಂಘಟನೆ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುವ ಮಹೋನ್ನತ ಗುರಿಯನ್ನು ಹೊಂದಿದೆ.
ಪ್ರಪಂಚವನ್ನು ಸಂಪೂರ್ಣ ಇಸ್ಲಾಂ ಮಯ ಮಾಡುವ ಮಹತ್ವಾಕಾಂಕ್ಷೆ ಹೊಂದಿರುವ ಈ ಸಂಘಟನೆಗೆ ಮೂಲಭೂತ ಧಾರ್ಮಿಕ ಮುಖಂಡರು ಬೆಂಬಲ ಸೂಚಿಸಿದ್ದಾರೆ. ಜಿಹಾದ್ ಗಾಗಿ ಯುವ ಮುಸ್ಲಿಂರನ್ನು ಮನೆಯಿಂದ ಹೊರಬನ್ನಿ ಎಂದು ಫತ್ವಾ ಹೊರಡಿಸಿದ್ದಾರೆ.
(ಫೋಟೋ: ಪಿಟಿಐ)
ಭಾರತ ಮೂಲದ ಜಿಹಾದಿಗಳು
ಇರಾಕ್ ಮತ್ತು ಸಿರಿಯಾದಲ್ಲಿ ಸರಕಾರದ ವಿರುದ್ದ ತಿರುಗಿ ಬಿದ್ದಿರುವ ಐಎಸ್ಐಎಸ್ ಸಂಘಟನೆಗಳು ಅಲ್ಲಿನ ಹೋರಾಟ ಮುಗಿದ ನಂತರ ಭಾರತವನ್ನು ಟಾರ್ಗೆಟ್ ಮಾಡಲು ಸಂಕಲ್ಪ ಮಾಡಿವೆ. ಈ ಸಂಘಟನೆಯಲ್ಲಿ ಭಾರತೀಯ ಮೂಲದ ಜಿಹಾದಿಗಳೂ ಇರುವುದು ಆತಂಕಕಾರಿ ವಿಷಯವಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ಮಾಡಿದ ವರದಿಯನ್ನು ಉಲ್ಲೇಖಿಸಿ ಫಸ್ಟ್ ಪೋಸ್ಟ್ ಅಂತರ್ಜಾಲ ವರದಿ ಮಾಡಿದೆ.
ಇಸ್ಲಾಂ ಸಾಮ್ರಾಜ್ಯದ ವಿಸ್ತರಣೆ
39 ಭಾರತೀಯ ಮೂಲದ ಕಟ್ಟಡ ಕಾರ್ಮಿಕರನ್ನು ಒತ್ತೆಯಾಳಾಗಿರಿಸಿ ಕೊಂಡಿರುವ ಈ ಸಂಘಟನೆಯ ಉಗ್ರರು ಇರಾಕ್ ದೇಶದ ಹಲವಾರು ಪಟ್ಟಣ ಮತ್ತು ನಗರಗಳನ್ನು ಈಗಾಗಲೇ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಇಸ್ಲಾಂ ಸಾಮ್ರಾಜ್ಯದ ವಿಸ್ತರಣೆಯ ಗುರಿಯನ್ನು ಹೊಂದಿರುವ ಈ ಸಂಘಟನೆಯ 'ಕನಸಿನ ಇಸ್ಲಾಂ ಸಾಮ್ರಾಜ್ಯ'ದಲ್ಲಿ ವಾಯುವ್ಯ ಭಾರತದ ನಾಲ್ಕು ರಾಜ್ಯಗಳಿವೆ ಎಂದು ಅಂತರ್ಜಾಲ ತನ್ನ ವರದಿಯಲ್ಲಿ ತಿಳಿಸಿದೆ.
ಇರಾಕ್ ಸರಕಾರ ಸಂಪೂರ್ಣ ವಿಫಲ
ಅಮೆರಿಕಾ ತನ್ನ ಪಡೆಗಳನ್ನು ಇರಾಕ್ ನಿಂದ ಹಿಂದಕ್ಕೆ ಪಡೆದುಕೊಂಡ ನಂತರ ಸಕ್ರಿಯವಾಗಿರುವ ಈ ಉಗ್ರ ಸಂಘಟನೆ ಕಳೆದ ಎರಡು ವರ್ಷಗಳಲ್ಲಿ ಇರಾಕ್ ನಲ್ಲಿ ಹರಿಸಿದ ರಕ್ತಪಾತಕ್ಕೆ ಲೆಕ್ಕವೇ ಇಲ್ಲ. ಅಧಿಕಾರದಲ್ಲಿರುವ ನೂರಿ ಅಲ್ - ಮಲಿಕಿ ಸರಕಾರ ಈ ಉಗ್ರ ಪಡೆಯನ್ನು ಹತ್ತಿಕ್ಕುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಮತ್ತೆ ಅಮೆರಿಕಾದ ಮಿಲಿಟರಿ ಸಹಾಯದ ನಿರೀಕ್ಷೆಯಲ್ಲಿದೆ.
ಇಸ್ಲಾಮೀ ಖುರಾಸನ್
ತಮ್ಮ ಸಾಮ್ರಾಜ್ಯಕ್ಕೆ 'ಇಸ್ಲಾಮೀ ಖುರಾಸನ್' ಎಂದು ನಾಮಕರಣ ಮಾಡಿರುವ ಐಎಸ್ಐಎಸ್ ಉಗ್ರರು ಇರಾಕ್ ವಶ ಪಡೆದ ನಂತರ ವಿಶ್ರಮಿಸಿ ಕೊಳ್ಳದೇ ತಮ್ಮ ಗುರಿ ಸಾಧನೆಯತ್ತ ಮುನ್ನುಗ್ಗಲಿದ್ದಾರೆ ಎಂದು ವರದಿಯಾಗಿದೆ. ಕ್ರಿಸ್ತಪೂರ್ವದ ಇತಿಹಾಸದಲ್ಲಿ ಖುರಾಸನ್ ಭಾಗದಲ್ಲಿ ಭಾರತೀಯರು ಮತ್ತು ಇರಾನಿಯರು ಜೊತೆಯಾಗಿ ನೆಲೆಸಿದ್ದರಂತೆ. ಹಾಗಾಗಿ ಭಾರತದ ಆ ಪ್ರದೇಶಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ಗುರಿಯನ್ನು ಐಎಸ್ಐಎಸ್ ಸಂಘಟನೆ ಹೊಂದಿದೆ.
ಅಲ್ ಖೈದಾಗಿಂತ ಉಗ್ರರು
ಒಸಾಮ್ ಬಿನ್ ಲಾಡೆನ್ 'ಅಲ್ ಖೈದಾ' ಉಗ್ರ ಸಂಘಟನೆಯ ನೇತೃತ್ವ ವಹಿಸಿಕೊಂಡಿದ್ದ ಸಮಯದಲ್ಲಿದ್ದ ಪ್ರಾಭ್ಯಲ್ಯಕ್ಕಿಂತ 'ಐಎಸ್ಐಎಸ್' ಸಂಘಟನೆ ಅತ್ಯಂತ ಅಪಾಯಕಾರಿಯಾಗಿ ಹೊರಹೊಮ್ಮುತ್ತಿರುವುದು ಅಪಾಯದ ಸಂಗತಿ. ಆದರೆ ಈ ಸಂಘಟನೆಗೆ ಸೈದ್ದಾಂತಿಕ ಗುರುವೇ ಅಲ್ ಖೈದಾ ಸಂಘಟನೆ.