ಪೊಲೀಸರ ಜತೆ ಕಾದಾಟದಲ್ಲಿ ಸ್ಫೋಟಿಸಿಕೊಂಡ ಮೂವರು ಐಎಸ್ ಐಎಸ್ ಉಗ್ರರು
ಕೊಲಂಬೋ (ಶ್ರೀಲಂಕಾ), ಏಪ್ರಿಲ್ 28: ಶ್ರೀಲಂಕಾ ಪೊಲೀಸರ ಜತೆಗಿನ ಕಾದಾಟದಲ್ಲಿ ಮೂವರು ತಮ್ಮನ್ನೇ ಸ್ಫೋಟಿಸಿಕೊಂಡ ಹೊಣೆಯನ್ನು ಐಎಸ್ ಐಎಸ್ ಉಗ್ರ ಸಂಘಟನೆಯು ಹೊತ್ತುಕೊಂಡಿದೆ. ಪೊಲೀಸರ ಜತೆಗೆ ಗುಂಡಿನ ಚಕಮಕಿಯಲ್ಲಿ ತೊಡಗಿ, ಆ ನಂತರ ಸ್ಪೋಟಿಸಿಕೊಂಡಿದ್ದಾರೆ. ಶ್ರೀಲಂಕಾದ ಪೂರ್ವಕ್ಕೆ ಇರುವ ಕಲ್ಮುನೈನಲ್ಲಿ ಜಿಹಾದಿಗಳಲ್ಲಿ ಅಡಗಿಕೊಂಡಿದ್ದರು.
ಐಎಸ್ ಐಎಸ್ ನಿಂದ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, ಮೂವರು ಐಎಸ್ ಐಎಸ್ ಗುಂಪಿನವರು. ಪೊಲೀಸರ ಜತೆ ಕಾದಾಟ ನಡೆಸಿದ್ದರು. ಅವರ ಬಳಿ ಅಟೋಮೆಟಿಕ್ ಶಸ್ತ್ರಾಸ್ತ್ರಗಳಿದ್ದವು. ಶಸ್ತ್ರಾಸ್ತ್ರಗಳು ಖಾಲಿಯಾದ ಮೇಲೆ ತಮ್ಮನ್ನು ತಾವೇ ಸ್ಫೋಟಿಸಿಕೊಂಡಿದ್ದಾರೆ ಎಂದು ತಿಳಿಸಲಾಗಿದೆ.
ಶಾಕಿಂಗ್: ಶ್ರೀಲಂಕಾ ಬಾಂಬ್ ಸ್ಫೋಟಕ್ಕೆ ದಕ್ಷಿಣ ಭಾರತದ ನಂಟು
ಕಾದಾಟದ ವೇಳೆ ಹದಿನೈದು ಮಂದಿ ಸಾವನ್ನಪ್ಪಿದ್ದಾರೆ. ಅದರಲ್ಲಿ ಮೂವರು ಮಹಿಳೆಯರು ಹಾಗೂ ಆರು ಮಕ್ಕಳು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಭಾನುವಾರ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಇನ್ನೂರೈವತ್ತಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ, ಐನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಭದ್ರತಾ ಪಡೆಗಳಿಗೆ ತುರ್ತು ಪರಿಸ್ಥಿತಿ ಅಡಿ ವಿಶೇಷ ಅಧಿಕಾರ ನೀಡಿದ್ದು, ಇಸ್ಲಾಮಿಕ್ ಉಗ್ರವಾದಿಗಳಿಗಾಗಿ ಶೋಧ ಕಾರ್ಯ ಚುರುಕುಗೊಂಡಿದೆ. ಜಿಹಾದಿ ಝಹ್ರಾನ್ ಹಶೀಮ್ ನ ತವರು ಕಲ್ಮುನೈ. ಕಳೆದ ವಾರ ನಡೆದ ದಾಳಿಯ ಹೊಣೆ ಎಂದು ಭಾವಿಸಿರುವ ಗುಂಪಿನ ನಾಯಕನಾಗಿದ್ದವನು ಹಶೀಮ್.