ಕಾಶ್ಮೀರದ ಪ್ರತ್ಯೇಕತಾವಾದಿಗಳಿಗೆ 800 ಕೋಟಿ ರು ಸುಪಾರಿ!
ಕಾಶ್ಮೀರದ ಪ್ರತ್ಯೇಕತಾವಾದಿಗಳಿಗೆ 800 ಕೋಟಿ ರು ಸುಪಾರಿ ನೀಡಲಾಗಿತ್ತಂತೆ. 2016 ರಿಂದ ಇಲ್ಲಿ ತನಕ ಈ ಭಾರಿ ಮೊತ್ತವನ್ನು ಪಾಕಿಸ್ತಾನದ ಗೂಢಚಾರಿ ಸಂಸ್ಥೆ ಐಎಸ್ ಐ ಒದಗಿಸಿದೆ. ಆದ್ರೆ, ಮೋದಿ ಇಟ್ಟ ನಡೆಯಿಂದ ಕೊಂಚ ಬ್ರೇಕ್ ಬಿದ್ದಿದೆ.
ಶ್ರೀನಗರ, ಏಪ್ರಿಲ್ 03: ಕಾಶ್ಮೀರದ ಪ್ರತ್ಯೇಕತಾವಾದಿಗಳಿಗೆ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಲು ಪಾಕಿಸ್ತಾನದ ಗೂಢಚಾರಿ ಸಂಸ್ಥೆ ಐಎಸ್ಐ ಆರ್ಥಿಕ ನೆರವು ಒದಗಿಸುತ್ತಿದೆ. 2016ರಿಂದ ಇಲ್ಲಿ ತನಕ ಸರಿ ಸುಮಾರು 800 ಕೋಟಿ ರು ಸುಪಾರಿ ನೀಡಲಾಗಿತ್ತು ಎಂದು ಗುಪ್ತಚರ ಇಲಾಖೆ ಫೈಲ್ ಹೇಳಿದೆ.
ನರೇಂದ್ರ ಮೋದಿ ಅವರು ನವೆಂಬರ್ 2016ರಲ್ಲಿ ಅಪನಗದೀಕರಣ ಯೋಜನೆ ಜಾರಿಗೆ ತಂದ ಮೇಲೆ ಈ ಹಣ ವರ್ಗಾವಣೆಗೆ ಬ್ರೇಕ್ ಬಿದ್ದಿದೆ. ಕಣಿವೆ ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಹದಗೆಡುವಂತೆ ಮಾಡಲು ಈ ಮೊತ್ತ ಬಳಸಲು ಸೂಚಿಸಲಾಗಿತ್ತು.
ಕಲ್ಲೆಸೆತ, ಪ್ರತಿಭಟನೆ, ಆತ್ಮಾಹುತಿ ದಾಳಿ, ಕಚ್ಚಾ ಬಾಂಬ್ ತಯಾರಿ ಸೇರಿದಂತೆ ಅನೇಕ ದುಷ್ಕೃತ್ಯಗಳಿಗೆ ಬಳಕೆ ಮಾಡಲು ಐಎಸ್ಐ ಸೂಚಿಸಿದೆ. ಜುಲೈ 2016ರಿಂದಲೇ ಈ ರೀತಿ ಕೃತ್ಯದಲ್ಲಿ ತೊಡಗಲು ನಿರ್ದೇಶಿಸಲಾಗಿತ್ತು.
ಆದರೆ, ಹಿಜ್ಬುಲ್ ಮುಜಾಹೀದ್ದೀನ್ ಕಮ್ಯಾಂಡರ್ ಬುರ್ಹಾನ್ ವಾನಿ ಹತ್ಯೆ ಬಳಿಕ ಪರಿಸ್ಥಿತಿ ಉದ್ವಿಗ್ನಗೊಳ್ಳಲು ಬೇಕಾದ ಎಲ್ಲಾ ದುರ್ಮಾಗಗಳನ್ನು ಬಳಸಲಾಯಿತು ಎಂದು ಐಬಿ ಕಡತ ಹೇಳಿದೆ.
ಹವಾಲ ಜಾಲದ ಮೂಲಕ ಭಾರಿ ಮೊತ್ತವನ್ನು ಭಾರತದೊಳಗೆ ಕಳಿಸಲಾಗುತ್ತಿತ್ತು. ಹಣದ ಮೂಟೆ ಹೊತ್ತ ಉಗ್ರರು ಇಲ್ಲಿ ಭೀತಿಯನ್ನಲ್ಲದೆ, ಆರ್ಥಿಕ ವ್ಯವಸ್ಥೆ ಹದಗೆಡಿಸುವ ಸಂಚನ್ನು ರೂಪಿಸಿದ್ದರು. ಗಡಿಭಾಗದಲ್ಲಿ ಪ್ರತ್ಯೇಕಾವಾದಿಗಳನ್ನು ಭೇಟಿ ಮಾಡಿ ಹಣ ರವಾನೆ ಮಾಡುತ್ತಿದ್ದರು.
ಸಾಮಾಜಿಕ ಜಾಲ ತಾಣಗಳ ಮೂಲಕ ಶಾಂತಿ ಹಾಳು ಮಾಡಲು ಸಂದೇಶ ಹರಿಸುವುದು, ಇಸ್ಲಾಮಿಕ್ ಸ್ಟೇಟ್ ಧ್ವಜ ಹಾರಿಸುವುದು ಸೇರಿದಂತೆ ಅನೇಕ ಕೃತ್ಯಗಳಿಗೆ ಈ ಹಣ ಬಳಕೆಯಾಗಿದೆ.