ಇರಾನ್-ಅಮೆರಿಕಾ ಕಾದಾಟ: ಭಾರತವನ್ನು ಹಾಡಿ ಹೊಗಳಿದ ಇರಾನ್ ರಾಯಭಾರಿ!
ನವದೆಹಲಿ, ಜನವರಿ.08: ಅಮೆರಿಕಾ ಮತ್ತು ಇರಾನ್ ಮಧ್ಯೆ ಯುದ್ಧದ ಕಾರ್ಮೋಡ ಕವಿದಿದೆ. ಯಾವಾಗ ಏನಾಗುತ್ತೋ ಎಂಬ ಆತಂಕ ದಿನೇ ದಿನೆ ಹೆಚ್ಚಾಗುತ್ತದೆ. ಪರಸ್ಪರ ಉಭಯ ದೇಶಗಳು ಕಾಲ್ಕೆರೆದು ನಿಂತಿರುವ ಸಂದರ್ಭದಲ್ಲಿ ಇರಾನ್ ರಾಯಭಾರಿಯು ಭಾರತವನ್ನು ಸ್ಮರಿಸಿಕೊಂಡಿದ್ದಾರೆ.
ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ ಇರಾನ್ ರಾಯಭಾರಿ ಇದೀಗ ಭಾರತವನ್ನು ಹಾಡಿ ಹೊಗಳಿದ್ದಾರೆ. ನವದೆಹಲಿಯಲ್ಲಿ ಮಾತನಾಡಿರುವ ಇರಾನ್ ರಾಯಭಾರಿ ಅಲಿ ಚೇಗೇನಿ, ಶಾಂತಿ ಸ್ಥಾಪನೆಯ ವಿಚಾರದಲ್ಲಿ ಭಾರತವೇ ನಮ್ಮ ಪಾಲಿಗೆ ಸ್ಪೂರ್ತಿ ಆಗಬೇಕು ಎಂದಿದ್ದಾರೆ.
ಅಮೆರಿಕದ ಸೇನಾ ನೆಲೆ ಮೇಲೆ ಇರಾನ್ ಕ್ಷಿಪಣಿ ದಾಳಿ
ವಿಶ್ವದಲ್ಲಿ ಎಲ್ಲ ರಾಷ್ಟ್ರಗಳ ಜೊತೆಗೆ ಶಾಂತಿ ಕಾಪಾಡಿಕೊಂಡಿರುವ ದೇಶದಲ್ಲಿ ಭಾರತವು ಪ್ರಮುಖ ಪಾತ್ರ ವಹಿಸುತ್ತಿದೆ. ಶಾಂತಿ ಸ್ಥಾಪನೆಗೆ ಎಲ್ಲ ರಾಷ್ಟ್ರಗಳೂ ನಮಗೆ ಮಾದರಿಯಾಗಬೇಕು. ಅದರಲ್ಲೂ ಭಾರತವು ನಮ್ಮ ಉತ್ತಮ ಮಿತ್ರರಾಷ್ಟ್ರವಾಗಿದ್ದು, ಶಾಂತಿ ಮಾತುಕತೆಯಲ್ಲಿ ಸಲಹೆಗಳನ್ನು ನೀಡಬೇಕು ಎಂದು ಹೇಳಿದರು.
ನಮಗೆ ಯುದ್ಧ ಬೇಕಾಗಿಲ್ಲ, ಶಾಂತಿ ಸ್ಥಾಪನೆ ಮುಖ್ಯ:
ಅಮೆರಿಕಾ ಹಾಗೂ ಇರಾನ್ ನಡುವಿನ ಸಂಬಂಧ ಇತ್ತೀಚಿನ ದಿನಗಳಲ್ಲಿ ಸಂಪೂರ್ಣ ಹಳಸಿದೆ. ಯುದ್ಧ ಪರಿಸ್ಥಿತಿ ನಿರ್ಮಾಣವಾಗಿದ್ದು, ಎರಡು ದೇಶಗಳ ನಡುವೆ ಶಾಂತಿ ಮಾತುಕತೆಗೆ ಯಾವುದೇ ರಾಷ್ಟ್ರವು ನೇತೃತ್ವ ವಹಿಸಿಕೊಂಡರೂ ನಾವು ಅದನ್ನು ಸ್ವಾಗತಿಸುತ್ತೇವೆ ಎಂದು ಇರಾನ್ ರಾಯಭಾರಿ ಅಲಿ ಚೇಗೇನಿ ತಿಳಿಸಿದ್ದಾರೆ.
ನಮಗೆ ಯುದ್ಧ ಮಾಡುವ ಅವಶ್ಯಕತೆಯಿಲ್ಲ. ಬದಲಿಗೆ ಶಾಂತಿ ಸ್ಥಾಪನೆ ಹಾಗೂ ಅಭಿವೃದ್ಧಿ ಕಡೆಗೆ ನಾವು ಲಕ್ಷ್ಯ ವಹಿಸಬೇಕಿದೆ. ಈ ನಿಟ್ಟಿನಲ್ಲಿ ಉಭಯ ರಾಷ್ಟ್ರಗಳ ನಡುವಿನ ಶಾಂತಿ ಸ್ಥಾಪನೆಗೆ ವಿಶ್ವದ ಯಾವುದೇ ದೇಶವು ನೇತೃತ್ವ ವಹಿಸಿದರೂ ಸರಿ, ನಾವು ಅದನ್ನು ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.