ಪೆಟ್ರೋಲ್, ಡೀಸೆಲ್ ಮತ್ತಷ್ಟು ದುಬಾರಿ? ಫಿಲ್ಟರ್ ಕಾಫಿ ಕೂಡ ಸಿಗೋದು ಡೌಟ್!
ಅದ್ಯಾವ ಘಳಿಗೆಯಲ್ಲಿ 'ಎವರ್ ಗ್ರೀನ್' ಹಡಗು ಸೂಯೆಜ್ ಕಾಲುವೆಗೆ ಎಂಟ್ರಿ ಕೊಟ್ಟಿತ್ತೋ ಗೊತ್ತಿಲ್ಲ. ಆಗ ಶುರುವಾದ ಸಂಕಷ್ಟಗಳು ಈಗಲೂ ತಪ್ಪುತ್ತಿಲ್ಲ. ಹೌದು ಸರಕು ಸಾಗಾಣಿಕೆ ಹಡಗು ಮಾನವ ನಿರ್ಮಿತ ಬೃಹತ್ ಕಾಲುವೆಯಲ್ಲಿ ಸಿಲುಕಿ ಹಲವು ದಿನಗಳೇ ಕಳೆದಿದೆ. ಆದರೂ ಹಡಗು ಚಲಿಸುವಂತೆ ಮಾಡಲು ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಲಕ್ಷಾಂತರ ಕೋಟಿ ಮೌಲ್ಯದ ವಸ್ತುಗಳು ಸಮುದ್ರದ ಮಧ್ಯೆ ಸಿಲುಕಿಬಿಟ್ಟಿವೆ. ಸುಮಾರು 1 ಲಕ್ಷ ಕೋಟಿ ರೂಪಾಯಿ ಮೌಲ್ಯದ ವಸ್ತುಗಳು ಅಲ್ಲೇ ಕೊಳೆಯುತ್ತಿವೆ.
ಕಚ್ಚಾ ತೈಲ, ದಿನಬಳಕೆ ವಸ್ತುಗಳು, ಅಷ್ಟೇ ಏಕೆ ಫಿಲ್ಟರ್ ಕಾಫಿಗೆ ಬಳಸುವ ವಸ್ತುಗಳು ಕೂಡ ಇದೇ ಹಡಗಿನಲ್ಲಿ ಕೊಳೆಯುತ್ತಿವೆ. ಹೀಗಾಗಿ ನೀವು ಸದ್ಯಕ್ಕೆ ಫಿಲ್ಟರ್ ಕಾಫಿ ಮರೆಯುವುದೇ ಒಳಿತು. ಅದರಲ್ಲೂ ಫಾರಿನ್ ಬ್ರ್ಯಾಂಡ್ ಫಿಲ್ಟರ್ ಕಾಫಿ ಬಳಸುತ್ತಿದ್ದರೆ ಇನ್ನಷ್ಟು ದಿನ ನಿಮ್ಮೆ ಕೈಗೆ ಸಿಗೋದು ಡೌಟ್.
'ಸೂಯೆಜ್' ಚಕ್ರವ್ಯೂಹದಲ್ಲಿ ಭಾರತೀಯರು, ನೆಪೋಲಿಯನ್ ಕಾಲದಲ್ಲೇ ಕಾಲುವೆ ಕಸರತ್ತು!
ಈ ಮೂಲಕದ ಮೊದಲೇ ಕೊರೊನಾ ಸುಳಿಯಲ್ಲಿದ್ದ ಕಾಫಿ ಉದ್ಯಮಕ್ಕೆ ಸೂಯೆಜ್ ಕಾಲುವೆ ಘಟನೆ ಗಾಯದ ಮೇಲೆ ಬರೆ ಎಳೆದಿದೆ. ಮತ್ತೊಂದ್ಕಡೆ ಹಡಗು ಮುಂದೆ ಚಲಿಸುವಂತೆ ಮಾಡಲು ಅದೆಷ್ಟೇ ಪ್ರಯತ್ನ ಮಾಡಿದರೂ ಅಧಿಕಾರಿಗಳು ಸಫಲರಾಗುತ್ತಿಲ್ಲ.
ಪೆಟ್ರೋಲ್, ಡೀಸೆಲ್ ದುಬಾರಿ..?
ಹೌದು ಈಗಾಗಲೇ ತೈಲ ಬೆಲೆ ಗಗನಕ್ಕೇರಿ ವಾಹನ ಸವಾರರು ಪರಿತಪಿಸುತ್ತಿದ್ದಾರೆ. ಇಂಥ ಹೊತ್ತಲ್ಲೇ ಕಾಲುವೆ ಬಂದ್ ಆಗಿರುವುದು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ನಾಂದಿ ಹಾಡಿದೆ. ಭಾರತಕ್ಕೆ ಹಡಗಿನ ಮೂಲಕವು ಕಚ್ಚಾ ತೈಲ ಆಮದು ಆಗುತ್ತದೆ. ಆದರೆ ಸೂಯೆಜ್ ಕಾಲುವೆಯಲ್ಲಿ ಟ್ರಾಫಿಕ್ ಉಂಟಾದ ಕಾರಣ ಕಚ್ಚಾತೈಲದ ಆಮದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಹಜವಾಗಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಆಗುವ ಸಾಧ್ಯತೆ ಇದೆ. ಒಟ್ಟಾರೆ ಒಂದೇ ಒಂದು ಕಾಲುವೆ ನೂರಾರು ಸಮಸ್ಯೆಗಳಿಗೆ ನಾಂದಿ ಹಾಡಿದೆ. ಆದಷ್ಟು ಬೇಗ ಸಮಸ್ಯೆ ಕ್ಲಿಯರ್ ಆಗಲಿ ಅಂತಾ ಜನರು ಹಾಗೂ ಉದ್ಯಮಿಗಳೂ ಪ್ರಾರ್ಥಿಸುವಂತಾಗಿದೆ.
ನೂರಾರು ಅಡಿ ಮರಳು ತೆಗೆಯಬೇಕು..!
ಸೂಯೆಜ್ ಕಾಲುವೆ ಇತಿಹಾಸಕ್ಕಿಂತ ಮೊದಲು ಈಗ ಬೋಟ್ ಸುಗಮವಾಗಿ ಸಂಚರಿಸಲು ಬೇಕಾದ ಪರಿಸ್ಥಿತಿ ತಿಳಿಯೋಣ. ಮೊದಲೇ ಹೇಳಿದಂತೆ ಸೂಯೆಜ್ ಕಾಲುವೆ ಮಾನವ ನಿರ್ಮಿತವಾಗಿದೆ. ಅದರಲ್ಲೂ ಸಮುದ್ರ-ಸಮುದ್ರದ ನಡುವೆ ಕೊಂಡಿ ಬೆಸೆದ ಜಾಗ ಇದು. ಹೀಗಾಗಿ ನೂರಾರು ಸವಾಲು ಸೂಯೆಜ್ ಕಾಲುವೆಯನ್ನು ಆವರಿಸಿದೆ. ಅದರಲ್ಲೂ ಸದ್ಯದ ಸ್ಥಿತಿಯಲ್ಲಿ ‘ಎವರ್ ಬಾಕ್ಸ್ ಗ್ರೀನ್' ಹಡಗನ್ನು ಸೂಯೆಜ್ ಕಾಲುವೆಯಿಂದ ಮುಂದಕ್ಕೆ ಸಾಗುವಂತೆ ಮಾಡಲು ಹರಸಾಹಸ ಮಾಡಬೇಕಿದೆ. ನೂರಾರು ಅಡಿ ಆಳದಲ್ಲಿ ಮರಳನ್ನು ಅಗೆದು, ಈ ಬೃಹತ್ ಹಡಗು ಸಂಚಾರ ಮಾಡಲು ದಾರಿ ಮಾಡಿಕೊಡಬೇಕಿದೆ. ಇಲ್ಲವಾದರೆ ಇನ್ನೂ ಹಲವು ವಾರಗಳ ಕಾಲ ಇದೇ ಪರಿಸ್ಥಿತಿ ಮುಂದುವರಿದು, ಲಕ್ಷಾಂತರ ಕೋಟಿ ನಷ್ಟ ಸಂಭವಿಸಲಿದೆ.
‘ಸೂಯೆಜ್ ಕಾಲುವೆ’ ನೆಪೋಲಿಯನ್ ಕನಸು
ನಿಮಗೆಲ್ಲಾ ತಿಳಿದಿರುವಂತೆ ದೇಶ ದೇಶಗಳ ನಡುವೆ ಹೆಚ್ಚಿನ ವ್ಯಾಪಾರ ಮತ್ತು ವಹಿವಾಟು ಸಮುದ್ರ ಮಾರ್ಗದ ಮೂಲಕವೇ ನಡೆಯುತ್ತದೆ. ಇದು ಪುರಾತನ ವಿಧಾನ ಕೂಡ ಆಗಿದೆ. ಹೀಗೆ ಯುರೋಪ್ ಹಾಗೂ ಏಷ್ಯಾದ ನಡುವೆ ವ್ಯಾಪಾರ ಮತ್ತು ವಹಿವಾಟು ನಡೆಯಲು ಸೂಯೆಜ್ ಕಾಲುವೆ ಅತ್ಯಗತ್ಯವಾಗಿತ್ತು. ಮೊದಲಿಗೆ ಇದರ ಕನಸು ಕಂಡವನು ಯುರೋಪಿಯನ್ನರ ಪಾಲಿಗೆ ಅನಭಿಶಕ್ತ ದೊರೆಯಾದ ನೆಪೋಲಿಯನ್ ಬೋನಾಪಾರ್ಟೆ. ಮೆಡಿಟೆರಿಯನ್ ಮತ್ತು ಕೆಂಪು ಸಮುದ್ರ ಬೆಸೆಯುವ ಕಾಲುವೆ ಎರಡು ಖಂಡಗಳನ್ನು ಒಗ್ಗೂಡಿಸುತ್ತದೆ. ಅಲ್ಲಿನ ವ್ಯಾಪಾರ ಮತ್ತು ವಹಿವಾಟಿನ ಅಗತ್ಯತೆಗಾಗಿ ಕಾಲುವೆ ನಿರ್ಮಿಸಲಾಗಿತ್ತು. ಇದೀಗ ಈಜಿಪ್ಟ್ ಸರ್ಕಾರಕ್ಕೆ ಒಟ್ಟು ವಾರ್ಷಿಕ ಆದಾಯದ ಶೇಕಡಾ 25ರಷ್ಟು ಭಾಗವನ್ನು ಇದೇ ಕಾಲುವೆ ತಂದುಕೊಡುತ್ತದೆ.
1869ರಲ್ಲಿ ಕಾಲುವೆ ನಿರ್ಮಾಣ..!
ಇಡೀ ಜಗತ್ತು ನೆಪೋಲಿಯನ್ನ ನೆನಪಿನಲ್ಲಿ ಇಡುವುದು ಕೇವಲ ಆತನ ಯುದ್ಧಗಳಿಂದ ಅಲ್ಲ. ಬದಲಾಗಿ ಆತ ತಂದ ಕ್ರಾಂತಿಕಾರಿ ಬದಲಾವಣೆಗಳಿಂದ. ಯುರೋಪ್ ಹಾಗೂ ಆಫ್ರಿಕಾ ಅಭಿವೃದ್ಧಿಗೆ ನೆಪೋಲಿಯನ್ ನೀಡಿದ ಕೊಡುಗೆ ಮಹತ್ವದ್ದಾಗಿದೆ. 1799ರಲ್ಲಿ ಈಜಿಪ್ಟ್ ವಶಪಡಿಸಿಕೊಂಡ ನೆಪೋಲಿಯನ್ ಸೂಯೆಜ್ ಕಾಲುವೆಯ ಅಧ್ಯಯನಕ್ಕೆ ಆದೇಶ ನೀಡಿದ್ದ. ಆದರೆ ಅತಿಯಾದ ವೆಚ್ಚದ ಹಿನ್ನೆಲೆ ಯೋಜನೆ ಕೈಬಿಡಲಾಯಿತು. 1840ರಲ್ಲಿ 2ನೇ ಬಾರಿ ಸಮೀಕ್ಷೆ ನಡೆಸಲಾಯಿತು. ಮೊದಲಿಗೆ ಕೈಗೊಂಡಿದ್ದ ಸಮೀಕ್ಷೆ ತಪ್ಪಾಗಿರುವುದನ್ನ ಅರಿತುಕೊಂಡು, ಮೆಡಿಟೆರಿಯನ್-ಕೆಂಪು ಸಮುದ್ರದ ಮಧ್ಯೆ ಸಂಪರ್ಕ ಕಲ್ಪಿಸಲು ಸಾಧ್ಯ ಎಂಬ ತೀರ್ಮಾನಕ್ಕೆ ಬರಲಾಯಿತು. ಸೆಪ್ಟೆಂಬರ್ 25, 1859ರಲ್ಲಿ ಕಾಲುವೆ ನಿರ್ಮಾಣ ಆರಂಭವಾಗಿ-ನವೆಂಬರ್ 17, 1869ರಲ್ಲಿ ಕಾಲುವೆ ಕೆಲಸ ಪೂರ್ಣವಾಯಿತು. ಅಂದಿನಿಂದಲೂ ಈ ಕಾಲುವೆ ಅಸ್ತಿತ್ವದಲ್ಲಿ ಇದೆ.
Recommended Video
‘ಸೂಯೆಜ್ ಕಾಲುವೆ’ಗಾಗಿ ಫೈಟಿಂಗ್..!
ಜಗತ್ತಿನಲ್ಲಿ ಜಾಗದ ಮೇಲಿನ ಹಿಡಿತಕ್ಕಾಗಿ ಎಷ್ಟೋ ಯುದ್ಧಗಳು ನಡೆದಿವೆ. ಆದರೆ ಒಂದು ಕಾಲುವೆ ವಿಚಾರಕ್ಕೆ ನಡೆದ ಹೊಡೆದಾಟವನ್ನು ‘ಸೂಯೆಜ್ ಕಾಲುವೆ' ಮೊದಲ ಸ್ಥಾನದಲ್ಲಿ ಪ್ರತಿನಿಧಿಸುತ್ತದೆ. 20 ಮೇ 1882ರಲ್ಲಿ ಈಜಿಪ್ಟ್ ಮೇಲೆ ಬ್ರಿಟನ್ ದಾಳಿ ನಡೆಸಿದ್ದು ಸೇರಿದಂತೆ ಅನೇಕ ಯುದ್ಧಗಳನ್ನ ಈ ಕಾಲುವೆ ಕಂಡಿದೆ. ಹಲವು ಸಂದರ್ಭದಲ್ಲಿ ಈ ಕಾಲುವೆಯನ್ನು ಬಂದ್ ಮಾಡಲಾಗಿದೆ. ಆದರೆ ಇದೀಗ ಹಡಗು ಅಡ್ಡನಿಂತ ಪರಿಣಾಮ ಈ ಕಾಲುವೆ ಬಂದ್ ಆಗಿದೆ. ಸಾವಿರಾರು ಕೋಟಿ ವ್ಯಾಪಾರ, ವಹಿವಾಟಿಗೆ ದೊಡ್ಡ ಕಂಟಕ ಇದೀಗ ಎದುರಾಗಿದೆ.
ವಿಶ್ವದ ಅತ್ಯಂತ ಮುಖ್ಯ ಜಲಮಾರ್ಗ "ಸೂಯೆಜ್ ಕಾಲುವೆ" ಹಿಂದಿದೆ ರೋಚಕ ಇತಿಹಾಸ