ತೆಲಂಗಾಣದ ಇನ್ಫಿ ಟೆಕ್ಕಿ, ಸಿಡ್ನಿಯಲ್ಲಿ ಅನುಮಾನಾಸ್ಪದ ಸಾವು
ಸಿಡ್ನಿ, ಡಿಸೆಂಬರ್ 26: ತೆಲಂಗಾಣದ ನಲ್ಗೊಂಡ ಜಿಲ್ಲೆ ಮೂಲದ ಇನ್ಫೋಸಿಸ್ ಸಂಸ್ಥೆಯ ಸಾಫ್ಟ್ ವೇರ್ ಇಂಜಿನಿಯರ್ ನಿಗೂಢವಾಗಿ ಮೃತಪಟ್ಟಿದ್ದಾರೆ.
ಮೃತ ಟೆಕ್ಕಿಯನ್ನು ತೆಲಂಗಾಣದ ಮಿರ್ಯಾಲ್ಗುಡದ ವಾಸವಿನಗರ ನಿವಾಸ 33 ವರ್ಷದ ಆದಿನಾರಾಯಣ ರೆಡ್ಡಿ ಎಂದು ಗುರುತಿಸಲಾಗಿದೆ. ಪತ್ನಿ ವಸಂತ ಹಾಗೂ ಮೂರು ವರ್ಷ ವಯಸ್ಸಿನ ಅವಳಿ ಹೆಣ್ಣು ಮಕ್ಕಳನ್ನು ಆದಿ ಅಗಲಿದ್ದಾರೆ.
ಭಾನುವಾರ ರಾತ್ರಿ ಪತ್ನಿ ಜತೆ ಮಾತನಾಡಿದ್ದ ಆದಿನಾರಾಯಣ ರೆಡ್ಡಿ, ಸ್ವಲ್ಪ ಶೀತ, ಜ್ವರ, ತಲೆನೋವು ಇದೆ ಎಂದಷ್ಟೇ ಹೇಳಿದ್ದರು. ಆಂಟಿ ಬಯೋಟಿಕ್ ಮಾತ್ರೆ ತೆಗೆದುಕೊಳ್ಳುವುದಾಗಿ ಹೇಳಿದ್ದರು.
ಸ್ವಲ್ಪ ಹೊತ್ತಿನ ಬಳಿಕ ಪತ್ನಿ ವಸಂತಾ ಮತ್ತೊಮ್ಮೆಗೆ ಆದಿಗೆ ಕರೆ ಮಾಡಿದ್ದಾರೆ. ಆದರೆ, ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ನಂತರ ಮೆಲ್ಬೋರ್ನ್ ನಲ್ಲಿರುವ ಸಂಬಂಧಿಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸಿಡ್ನಿಯಲ್ಲಿದ್ದ ಸ್ನೇಹಿತರೊಬ್ಬರು ಆದಿಯನ್ನು ನೋಡಲು ಬಂದಿದ್ದಾರೆ. ಆದರೆ, ಆದಿ ಮೃತದೇಹವನ್ನು ಕಂಡಿದ್ದಾರೆ.
ಆರು ತಿಂಗಳ ಹಿಂದೆ ಆಸ್ಟ್ರೇಲಿಯಾದ ಸಿಡ್ನಿಗೆ ಬಂದಿದ್ದ ಆದಿ ನಾರಾಯಣ ರೆಡ್ಡಿ ಅವರು ಮುಂದಿನ ತಿಂಗಳು ಪತ್ನಿ ಹಾಗೂ ಮಕ್ಕಳನ್ನು ಕರೆಸಿಕೊಳ್ಳಲು ಬಯಸಿದ್ದರು.
ಆದಿನಾರಾಯಣ ರೆಡ್ಡಿ ಮೃತ ದೇಹವನ್ನು ತವರಿಗೆ ತರಲು ಸರ್ಕಾರ ಸಹಾಯ ಮಾಡಬೇಕೆಂದು ಆದಿ ಅವರ ತಂದೆ ರೈತ ವೆಂಕಟ ರೆಡ್ಡಿ ಮನವಿ ಮಾಡಿಕೊಂಡಿದ್ದಾರೆ.