'ಜೀವಂತವಾಗಿ ದೇಶಕ್ಕೆ ಬರ್ತಿನಿ ಎಂಬ ನಂಬಿಕೆನೇ ಇರ್ಲಿಲ್ಲ'
ಬೆಂಗಳೂರು, ಏ. 5: ಆಂತರಿಕ ಯುದ್ಧದಿಂದ ತ್ತತ್ತರಿಸುತ್ತಿರುವ ಯೆಮನ್ನಲ್ಲಿ ಸಿಲುಕಿಕೊಂಡಿದ್ದ ಬೆಂಗಳೂರಿನ ಉದ್ಯಮಿ ರವಿಕುಮಾರ್ ಹಾಗೂ ಮದನ್ಮೋಹನ್ರೆಡ್ಡಿ ತಾಯ್ನಾಡಿಗೆ ಆಗಮಿಸಿದ್ದಾರೆ.
ಏಪ್ರಿಲ್ 4 ರಂದು ಮುಂಜಾನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಕುಟುಂಬಸ್ಥರು ಬರಮಾಡಿಕೊಂಡರು. ರವಿಕುಮಾರ್ ಅವರ ಪತ್ನಿ, ಮಕ್ಕಳು ಹಾಗೂ ಬಂಧುಗಳು ಹಾಜರಿದ್ದರು.[ಯೆಮನ್ ನಲ್ಲಿ ಸಿಲುಕಿದ ಪೀಣ್ಯ ರವಿಗಾಗಿ ಉದ್ಯಮ ಬಂದ್]
ನಾವು ಜೀವಂತವಾಗಿ ಸ್ವದೇಶಕ್ಕೆ ಹಿಂದಿರುಗುತ್ತೇವೆ ಎಂಬ ನಂಬಿಕೆಯೇ ಮಾಯವಾಗಿತ್ತು. ನಮ್ಮ ಪಕ್ಕದಲ್ಲಿಯೇ ಬಾಂಬ್ ಸಿಡಿಯುತ್ತಿತ್ತು. ನಾವು ಜೀವಂತವಾಗಿ ಹಿಂದಿರುಗಿರುವುದು ಪವಾಡವೇ ಸರಿ, ಆ ನಂಬಿಕೆಯೂ ನಮಗಿರಲಿಲ್ಲ ಎಂದು ರವಿಕುಮಾರ್ ಅಲ್ಲಿನ ಪರಿಸ್ಥಿತಿಯನ್ನು ತೆರೆದಿಟ್ಟರು.
ಭಾರತ ಸರ್ಕಾರ ಅಲ್ಲಿಗೆ ಕಳುಹಿಸಿದ ಭಾರತೀಯ ವಾಯುಪಡೆ ಮತ್ತು ನೌಕಾಪಡೆ ಸಿಬ್ಬಂದಿ ನಮ್ಮನ್ನು ಸುರಕ್ಷಿತವಾಗಿ ಕರೆತಂದರು. ಯೆಮನ್ನಲ್ಲಿ ಇನ್ನೂ ಸಾವಿರಾರು ಜನ ಭಾರತೀಯರು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದು ಅವರನ್ನು ರಕ್ಷಿಸಬೇಕಿದೆ ಎಂದು ಹೇಳಿದರು.[ಯೆಮನ್: ಭಾರತಕ್ಕೆ ಹಿಂದಿರುಗಿದ 349 ಜನ ಸಂತ್ರಸ್ತರು]
ಕಳೆದ ಒಂದು ವಾರದಿಂದ ಯೆಮನ್ ನಲ್ಲಿ ಆಂತರಿಕ ಸಂಘರ್ಷ ಕಾಣಿಸಿಕೊಂಡಿದ್ದು ಸುಮಾರು 500ಕ್ಕೂ ಹೆಚ್ಚು ಭಾರತೀಯರನ್ನು ರಕ್ಷಿಸಿ ಕರೆತರಲಾಗಿದೆ. ಸ್ವತಃ ಕೇಂದ್ರ ಸಚಿವ ವಿಕೆ ಸಿಂಗ್ ಹಾಜರಿದ್ದು ರಕ್ಚಣಾ ಕ್ರಮ ನೋಡಿಕೊಳ್ಳುತ್ತಿದ್ದಾರೆ.