ದುಷ್ಕರ್ಮಿಗಳ ದಾಳಿಯಿಂದ ಕಾಂಗೋ ಸೇನೆಯನ್ನು ರಕ್ಷಿಸಿದ ಭಾರತೀಯ ಸೈನಿಕರು
ಕಿನ್ಶಾಸ, ಕಾಂಗೊ, ಮೇ 26: ಆಫ್ರಿಕಾ ನಾಡಿನಲ್ಲಿ ಭಾರತೀಯ ಸೈನಿಕರು ತಮ್ಮ ಶೌರ್ಯ ಪ್ರದರ್ಶನ ಮಾಡಿದ್ದಾರೆ. ಕಾಂಗೋ ದೇಶದ ಸೇನೆಯ ಮೇಲೆ ಸಶಸ್ತ್ರಧಾರಿಗಳ ಗುಂಪೊಂದು ನಡೆಸಿದ ದಾಳಿಯನ್ನು ಭಾರತೀಯ ಸೈನಿಕರು ವಿಫಲಗೊಳಿಸಿದ್ದಾರೆ. ಮೇ 22ರಂದು ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗಳ ಭಾಗವಾಗಿ ಭಾರತೀಯ ಸೈನಿಕರು ಕಾಂಗೋ ನಾಡಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕಾಂಗೋದಲ್ಲಿ ಅಂದು ನಡೆದ ದಾಳಿ ಘಟನೆಯನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿ ಗಂಭೀರವಾಗಿ ಪರಿಗಣಿಸಿದ್ದು, ಕೃತ್ಯವನ್ನು ಬಲವಾಗಿ ಖಂಡಿಸಿ ಹೇಳಿಕೆ ನೀಡಿದೆ. "ಶಾಂತಿಪಾಲಕರನ್ನು (ವಿಶ್ವಸಂಸ್ಥೆಯ) ಗುರಿಯಾಗಿಸಿ ನಡೆದ ದಾಳಿ ಖಂಡನೀಯ. ಇಂಥ ದಾಳಿಗಳು ಅಂತರರಾಷ್ಟ್ರೀಯ ಕಾನೂನಿನಲ್ಲಿ ಯುದ್ಧಾಪರಾಧ ಆಗುತ್ತದೆ" ಎಂದು ಯುಎನ್ಎಸ್ಸಿ ಎಚ್ಚರಿಕೆ ನೀಡಿದೆ.
ಬುರ್ಕಿನಾ ಫಾಸೊ ದೇಶದಲ್ಲಿ ಭೀಕರ ದಾಳಿ: 50ಕ್ಕೂ ಹೆಚ್ಚು ಮಂದಿ ಸಾವು
ಕಾಂಗೋ ದೇಶದಲ್ಲಿ ಸಾಕಷ್ಟು ನಾಗರಿಕ ಮತ್ತು ಭದ್ರತಾ ಸಮಸ್ಯೆಗಳು ಕಾಡುತ್ತಿವೆ. ಸಶಸ್ತ್ರ ಗುಂಪುಗಳು ಆಗಾಗ್ಗೆ ದಾಳಿ ಮಾಡಿ ಅಮಾಯಕ ಜನರನ್ನು ಬಲಿತೆಗೆದುಕೊಳ್ಳುತ್ತಿವೆ. ಅದರಲ್ಲೂ ಪೂರ್ವಭಾಗದ ಕಾಂಗೋ ಪ್ರದೇಶಗಳಲ್ಲಿ ಇಂಥ ಗುಂಪುಗಳು ಭಯಾನಕ ದಾಳಿಗಳನ್ನು ಮಾಡಿವೆ. ಈ ಘಟನೆಗಳ ಬಗ್ಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳು ಆತಂಕ ವ್ಯಕ್ತಪಡಿಸಿವೆ.
"ಕಾಂಗೋ ಪ್ರಜಾತಂತ್ರ ಗಣರಾಜ್ಯ ದೇಶ ಮತ್ತು ಅದರ ಜೊತೆಗಾರರಾಗಿರುವ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಮೊದಲಾದವು ಕೂಡಲೇ ಪರಿಸ್ಥಿತಿ ನಿಭಾಯಿಸಲು ಸಕಾಲದಲ್ಲಿ ಅವಶ್ಯಕ ನೆರವು ಒದಗಿಸಬೇಕೆಂದು ಭದ್ರತಾ ಮಂಡಳಿ ಸದಸ್ಯ ದೇಶಗಳು ಒತ್ತಾಯಿಸುತ್ತಿವೆ" ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕಾಂಗೋ ದೇಶದಲ್ಲಿ ವಿಶ್ವಸಂಸ್ಥೆಯ ಪೀಸ್ಕೀಪಿಂಗ್ ಪಡೆಗಳಲ್ಲಿ ಭಾರತೀಯ ಸೈನಿಕರೂ ಇದ್ದಾರೆ. ಜೊತೆಗೆ ವಿವಿಧ ದೇಶಗಳ ಸೈನಿಕರೂ ಇದ್ದಾರೆ. ಯಾವುದೇ ದೇಶದಲ್ಲಿ ಭದ್ರತಾ ಸಮಸ್ಯೆ ಎದುರಾದಾಗ ಅಗತ್ಯ ಬಿದ್ದಲ್ಲಿ ವಿಶ್ವಸಂಸ್ಥೆಯ ಈ ಶಾಂತಿಪಾಲನಾ ಪಡೆಗಳು ಧಾವಿಸುತ್ತವೆ. ಅದರಲ್ಲಿ ವಿವಿಧ ದೇಶಗಳ ಸೈನಿಕರೂ ಇರುತ್ತಾರೆ.
(ಒನ್ಇಂಡಿಯಾ ಸುದ್ದಿ)