ಭೀಕರ ಸೈಬರ್ ದಾಳಿ ಬಗ್ಗೆ ಎಚ್ಚರಿಸಿದ್ದ ಭಾರತೀಯ ಮೂಲದ ವೈದ್ಯ
ಲಂಡನ್ ನ ರಾಷ್ಟ್ರೀಯ ನ್ಯೂರಾಲಜಿ ಮತ್ತು ನ್ಯೂರೋ ಸರ್ಜರಿ ಆಸ್ಪತ್ರೆಯಲ್ಲಿ ನ್ಯೂರೋಲಜಿ ರೆಜಿಸ್ಟ್ರಾರ್ ಆಗಿರುವ ಭಾರತೀಯ ಮೂಲದ ಡಾ. ಕೃಷ್ಣ ಚಿಂತಪಲ್ಲಿ ಇಂಥಹದ್ದೊಂದು ಸೈಬರ್ ದಾಳಿ ನಡೆಯಲಿದೆ ಎಂಬ ಸೂಚನೆ ನೀಡಿದ್ದರು.
ಬೆಂಗಳೂರು, ಮೇ 14: ಶನಿವಾರ ವಿಶ್ವದಾದ್ಯಂತ ಸೈಬರ್ ಲೋಕಕ್ಕೇ ಜ್ವರ ಬಂದಿತ್ತು. ವಾನ್ನಕ್ರೈ ಎಂಬ 'ರಾನ್ಸೊಮ್ಮೇರ್' ಸೈಬರ್ ದಾಳಿಯಿಂದ ಭಾರತ ಸೇರಿ ವಿಶ್ವದ ಸುಮಾರು 100ದೇಶಗಳು ತತ್ತರಿಸಿ ಹೋಗಿದ್ದವು.
ಆದರೆ ಹೀಗೊಂದು ಭೀಕರ ಸೈಬರ್ ದಾಳಿ ನಡೆಯಲಿದೆ ಎಂದು ಭಾರತೀಯ ಮೂಲದ ವೈದ್ಯರೊಬ್ಬರು ಎಚ್ಚರಿಕೆ ನೀಡಿದ್ದರು. ಬ್ರಿಟನ್ ರಾಷ್ಟ್ರೀಯ ಆರೋಗ್ಯ ಸೇವೆಯ ವೆಬ್ಸೈಟ್ ಸೈಬರ್ ಹ್ಯಾಕ್ ಗೆ ಒಳಗಾಗಲಿದೆ ಎಂದು ಭಾರತ ಮೂಲದ ವೈದ್ಯ ಡಾ ಕೃಷ್ಣ ಚಿಂತಪಲ್ಲಿ ತಿಳಿಸಿದ್ದರು.
ಅವರು ಹೇಳಿದಂತೆಯೇ ಕಂಡು ಕೇಳರಿದ ಸೈಬರ್ ದಾಳಿ ಶುಕ್ರವಾರ ನಡೆದಿದೆ. 99 ದೇಶಗಳಲ್ಲಿ 75,000 ಸಂಸ್ಥೆಗಳನ್ನು ಗುರಿಯಾಗಿಸಿ ರಾನ್ಸಮ್ಮೇರ್ ದಾಳಿಗಳು ನಡೆದಿವೆ. ಮುಖ್ಯವಾಗಿ ರಷ್ಯಾ, ಉಕ್ರೇನ್ ಹಾಗೂ ತೈವಾನ್ ಮೂಲದ ಸಂಸ್ಥೆಗಳ ಮೇಲೆ ಹೆಚ್ಚಿನ ದಾಳಿಗಳು ನಡೆದಿವೆ.
ಕಂಪ್ಯೂಟರ್ ನಲ್ಲಿದ್ದ ಎಲ್ಲಾ ಮಾಹಿತಿಗಳಿಗೂ 'ರಾನ್ಸೊಮ್ಮೇರ್' ಬೀಗ ಜಡಿದು ನಂತರ ಅದರ ಆಪರೇಟರ್ ಗಳ ಬಳಿಯಲ್ಲಿ ಪುನಃ ಕೆಲಸ ಮಾಡುವಂತಾಗಲು ಹಣ ಪಾವತಿಸುವಂತೆ ಕೇಳುತ್ತಿತ್ತು.
ವಿಂಡೋಸ್ ಕಂಪ್ಯೂಟರ್ ಆಪರೇಟಿಂಗ್ ಸಿಸ್ಟಂ ಹೊಂದಿದ್ದ ಕಂಪ್ಯೂಟರ್ ಗಳ ಮೇಲೆ ಈ ದಾಳಿ ನಡೆಸಲಾಗಿತ್ತು. ತನ್ನ ವ್ಯವಸ್ಥೆಯಲ್ಲಿ ಇಂತಹದೊಂದು ಭದ್ರತಾ ಲೋಪ ಇರುವುದನ್ನು ಪತ್ತೆ ಹಚ್ಚಿ ಮೂಕ್ರೋಸಾಫ್ಟ್ ಮಾರ್ಚಿನಲ್ಲೇ ವಿಂಡೋಸ್ ಸಿಸ್ಟಂಗಳಿಗೆ ಭದ್ರತಾ ವ್ಯವಸ್ಥೆಯ ಅಪ್ಡೇಟ್ ಬಿಡುಗಡೆ ಮಾಡಿತ್ತು.
ಆದರೆ ಅಪ್ಡೇಟ್ ಆಗದ ಕಂಪ್ಯೂಟರ್ ಗಳ ಮೇಲೆ ಈ ದಾಳಿ ನಡೆದಿದೆ. ಈ ಮೂಲಕ ವಿಂಡೋಸ್ ತಾನಾಗೇ ತೋರಿಸಿದ ಭದ್ರತಾ ಲೋಪವನ್ನು ಸೈಬರ್ ದಾಳಿಕೋರರು ಬಳಸಿಕೊಂಡಿದ್ದಾರೆ.
ಸುಳಿವು ನೀಡಿದ್ದ ಕೃಷ್ಣ ಚಿಂತಪಲ್ಲಿ
ಲಂಡನ್ ನ ರಾಷ್ಟ್ರೀಯ ನ್ಯೂರಾಲಜಿ ಮತ್ತು ನ್ಯೂರೋ ಸರ್ಜರಿ ಆಸ್ಪತ್ರೆಯಲ್ಲಿ ನ್ಯೂರೋಲಜಿ ರೆಜಿಸ್ಟ್ರಾರ್ ಆಗಿರುವ ಡಾ. ಕೃಷ್ಣ ಚಿಂತಪಲ್ಲಿ ಇಂಥಹದ್ದೊಂದು ಸೈಬರ್ ದಾಳಿ ನಡೆಯಲಿದೆ ಎಂಬ ಸೂಚನೆ ನೀಡಿದ್ದರು. ಬುಧವಾರ ಬ್ರಿಟೀಷ್ ಮೆಡಿಕಲ್ ಜರ್ನಲಿಗೆ ಬರೆದ ಲೇಖನದಲ್ಲಿ ಅವರು ರಾಷ್ಟ್ರೀಯ ಆರೋಗ್ಯ ಸೇವೆಯ ವ್ಯವಸ್ಥೆಗೆ ರಾನ್ಸೊಮ್ಮೇರ್ ದಾಳಿ ನಡೆಯಲಿದೆ ಎಂದು ಹೇಳಿದ್ದರು. ಇದಾಗಿ ಎರಡೇ ದಿನದಲ್ಲಿ ಈ ದಾಳಿ ನಡೆದಿದೆ.
ಪಾಪ್ ವರ್ತ್ ಆಸ್ಪತ್ರೆಯಲ್ಲಿ ನರ್ಸ್ ಒಬ್ಬರು ವೈರಸ್ ಇರುವ ಲಿಂಕ್ ಓಪನ್ ಮಾಡಿದ್ದರು. ಈ ಸಂದರ್ಭ ಮಾಲ್ವೇರ್ ಅವರ ಕಂಪ್ಯೂಟರ್ ಗೆ ದಾಳಿ ಮಾಡಿತ್ತು. ಮಾತ್ರವಲ್ಲ ಸೂಕ್ಷ್ಮ್ ಮಾಹಿತಿಗಳನ್ನು ಎನ್ಕ್ರಿಪ್ಟೆಡ್ ಮಾಡಲು ಆರಂಭಿಸಿತ್ತು. ಇದನ್ನು ನೋಡಿ ಭಾರತೀಯ ಮೂಲದ ವೈದ್ಯರು ಈ ಎಚ್ಚರಿಕೆ ನೀಡಿದ್ದರು. ಆದರೆ ಈ ಎಚ್ಚರಿಕೆಯನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲೇ ಇಲ್ಲ.