ಶ್ರೀಲಂಕಾ ಅಧ್ಯಕ್ಷರ ಹತ್ಯೆಗೆ ಯತ್ನ ಆರೋಪ: ಕೇರಳದ ವ್ಯಕ್ತಿ ಖುಲಾಸೆ
ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ಹತ್ಯೆಗೆ ಸಂಚು ರೂಪಿಸಿದ್ದ ಆರೋಪ ಹೊತ್ತಿದ್ದ ಭಾರತೀಯನನ್ನು ಬುಧವಾರ ಖುಲಾಸೆಗೊಳಿಸಲಾಗಿದೆ ಎಂದು ಕೋರ್ಟ್ ಅಧಿಕಾರಿಗಳು ಹೇಳಿದ್ದಾರೆ. ಕೇರಳದ ಮರ್ಸೆಲಿ ಥಾಮಸ್ ಎಂಬುವರನ್ನು ಕಳೆದ ವರ್ಷದ ಅಕ್ಟೋಬರ್ ನಲ್ಲಿ ಬಂಧಿಸಲಾಗಿತ್ತು.
ಮೈತ್ರಿಪಾಲ ಸಿರಿಸೇನಾ ಹಾಗೂ ರಕ್ಷಣಾ ಸಚಿವಾಲಯದ ಮಾಜಿ ಹಿರಿಯ ಅಧಿಕಾರಿ ಮತ್ತು ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸೆ ಸೋದರ ಆದ ಗೊತಭಯ ರಾಜಪಕ್ಸೆ ಹತ್ಯೆಗೆ ಸಂಚು ರೂಪಿಸುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು. ಪೊಲೀಸ್ ಮಾಹಿತಿದಾರ ನಮಲ್ ಕುಮಾರ ಎಂಬಾತ ನೀಡಿದ ದೂರಿನ ಆಧಾರದಲ್ಲಿ ಬಂಧಿಸಲಾಗಿತ್ತು.
ಶ್ರೀಲಂಕಾ ಅಧ್ಯಕ್ಷ ಹತ್ಯೆ ಸಂಚು ಪ್ರಕರಣದಲ್ಲಿ ಭಾರತೀಯನ ಸೆರೆ
ಕೊಲೊಂಬೋದ ಫೋರ್ಟ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಿಂದ ಬುಧವಾರ ಪ್ರಕರಣದ ವಿಚಾರಣೆ ನಡೆಸುವ ವೇಳೆ ಥಾಮಸ್ ರನ್ನು ಖುಲಾಸೆ ಮಾಡಲಾಗಿದೆ. ಮ್ಯಾಜಿಸ್ಟ್ರೇಟ್ ರಂಗ ದಿಸ್ಸನಾಯಕೆ ಫೆಬ್ರವರಿ ಹದಿಮೂರರಂದು ಸಿಐಡಿಗೆ ಕೋರ್ಟ್ ಮುಂದೆ ಸಾಕ್ಷ್ಯ ಹಾಜರುಪಡಿಸುವಂತೆ ಎರಡು ವಾರದ ಸಮಯ ನೀಡಿತ್ತು.
ಆದರೆ, ಥಾಮಸ್ ಅವರು ಹತ್ಯೆ ಸಂಚು ರೂಪಿಸಿದ್ದಾರೆ ಎಂದು ಸಾಬೀತು ಪಡಿಸುವಂಥ ಮಹತ್ವದ ಯಾವುದೇ ಸಾಕ್ಷ್ಯ ನೀಡಲು ಸಿಐಡಿಗೆ ಸಾಧ್ಯವಾಗಿಲ್ಲ. ಜತೆಗೆ ತಾನು ನಿರಪರಾಧಿ ಎಂದು ಥಾಮಸ್ ಹೇಳಿದ್ದು, ಈ ಪ್ರಕರಣದಲ್ಲಿ ತನ್ನನ್ನ್ ಸಿಲುಕಿಸಲು ಯತ್ನಿಸಲಾಗುತ್ತಿದೆ ಎಂದಿದ್ದರು.
ಭಾರತ 'ರಾ' ಕೊಲೆ ಸಂಚು ನಡೆಸಿಲ್ಲ : ಸಿರಿಸೇನಾ ಸ್ಪಷ್ಟನೆ
ಈ ಪ್ರಕರಣದಲ್ಲಿ ವಾಸ್ತವದ ಪರಿಶೀಲನೆ ಮಾದಿದ ಮ್ಯಾಜಿಸ್ಟ್ರೇಟ್, ಯಾವುದೇ ಸಾಕ್ಷ್ಯವಿಲ್ಲದೆ ಪೊಲೀಸರ ವಶಕ್ಕೆ ಥಾಮಸ್ ರನ್ನು ಒಪ್ಪಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಆದರೆ ಅಧಿಕೃತ ವೀಸಾ ಇಲ್ಲದೆ ಶ್ರೀಲಂಕಾದಲ್ಲಿ ವಾಸವಿದ್ದ ಆರೋಪದಲ್ಲಿ ವಶಕ್ಕೆ ನೀಡಲಾಗಿದೆ.