ಸೂರ್ಯಕಾಂತಿ ಎಣ್ಣೆ, ಕಚ್ಚಾ ಸೋಯಾಬಿನ್ ಆಮದು ಮೇಲಿನ ಸುಂಕಕ್ಕೆ ವಿನಾಯಿತಿ
ನವದೆಹಲಿ, ಮೇ 25: ಭಾರತದಲ್ಲಿ ಅಗತ್ಯ ವಸ್ತುಗಳ ಬೆಲೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮಗಳನ್ನು ತೆಗೆದುಕೊಂಡಿದೆ. ಈ ನಿಟ್ಟಿನಲ್ಲಿ ಮಂಗಳವಾರ ಕಚ್ಚಾ ಸೋಯಾಬೀನ್ ಮತ್ತು ಸೂರ್ಯಕಾಂತಿ ಎಣ್ಣೆಯ ವಾರ್ಷಿಕ ಆಮದು 20 ಲಕ್ಷ ಮೆಟ್ರಿಕ್ ಟನ್ಗಳ ಮೇಲಿನ ಕಸ್ಟಮ್ಸ್ ಸುಂಕ ಮತ್ತು ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್ ಅನ್ನು ಸರ್ಕಾರ ತೆಗೆದು ಹಾಕಿದೆ.
ಕಚ್ಚಾ ಸೋಯಾಬೀನ್ ಎಣ್ಣೆ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆಗೆ 2022-23 ಮತ್ತು 2023-24ರ ಎರಡು ಆರ್ಥಿಕ ವರ್ಷಗಳಲ್ಲಿ ಒಂದು ವರ್ಷಕ್ಕೆ 20 ಲಕ್ಷ ಮೆಟ್ರಿಕ್ ಟನ್ ಸುಂಕ ರಹಿತ ಆಮದು ಅನ್ವಯಿಸುತ್ತದೆ ಎಂದು ಹಣಕಾಸು ಸಚಿವಾಲಯ ಅಧಿಸೂಚನೆಯಲ್ಲಿ ತಿಳಿಸಿದೆ.
ಪೆಟ್ರೋಲ್, ಗ್ಯಾಸ್ ಆಯ್ತು, ಈಗ ಎಣ್ಣೆ ಬೆಲೆಗಳಲ್ಲೂ ಇಳಿಕೆ
ಭಾರತದಲ್ಲಿ ದೇಶೀಯವಾಗಿ ಬೆಲೆಗಳನ್ನು ಇಳಿಸಲು ಹಾಗೂ ಹಣದುಬ್ಬರವನ್ನು ನಿಯಂತ್ರಿಸಲು ಈ ವಿನಾಯಿತಿ ಕ್ರಮವು ಸಹಾಯವಾಗುತ್ತದೆ. "ಇದು ಗ್ರಾಹಕರಿಗೆ ಗಮನಾರ್ಹ ಪರಿಹಾರವನ್ನು ನೀಡುತ್ತದೆ," ಎಂದು ಸಿಬಿಐಸಿ ಟ್ವೀಟ್ ಮಾಡಿದೆ.
ಇಂಧನ ಮೇಲಿನ ಸುಂಕ ಕಡಿತಗೊಳಿಸಿದ ಕೇಂದ್ರ ಸರ್ಕಾರ
ಕಳೆದ ವಾರ ಬೆಲೆಗಳನ್ನು ನಿಯಂತ್ರಿಸಲು ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿತ್ತು. ಇದರ ಜೊತೆಗೆ ಉಕ್ಕು ಮತ್ತು ಪ್ಲಾಸ್ಟಿಕ್ ಉದ್ಯಮದಲ್ಲಿ ಬಳಸುವ ಕೆಲವು ಕಚ್ಚಾ ವಸ್ತುಗಳ ಮೇಲಿನ ಆಮದು ಸುಂಕವನ್ನು ಸಹ ಮನ್ನಾ ಮಾಡಿತು. ಇದಲ್ಲದೆ, ಕಬ್ಬಿಣದ ಅದಿರು ಮತ್ತು ಕಬ್ಬಿಣದ ಮೇಲಿನ ರಫ್ತು ಸುಂಕವನ್ನು ಹೆಚ್ಚಿಸಲಾಯಿತು.
ಪೆಟ್ರೋಲ್-ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತ
ದೇಶದಲ್ಲಿ ಮಾರ್ಚ್ 22ರ ನಂತರದಲ್ಲಿ ಬರೋಬ್ಬರಿ 15 ಬಾರಿ ಏರಿಕೆ ಕಂಡಿದ್ದ ಇಂಧನ ದರವನ್ನು ಕೇಂದ್ರ ಸರ್ಕಾರ ಇಳಿಸಿದೆ. ಮೇ 22ರ ಶನಿವಾರ ಪೆಟ್ರೋಲ್ ಮೇಲೆ 8 ರೂಪಾಯಿ, ಡೀಸೆಲ್ ಮೇಲೆ 6 ರೂಪಾಯಿ ಅಬಕಾರಿ ಸುಂಕವನ್ನು ಕಡಿತಗೊಳಿಸಲಾಗಿದೆ. ಇದರಿಂದ ಪೆಟ್ರೋಲ್ ಬೆಲೆಯಲ್ಲಿ 9.50 ರೂಪಾಯಿ ಹಾಗೂ ಡೀಸೆಲ್ ದರದಲ್ಲಿ 7 ರೂಪಾಯಿ ಇಳಿಕೆಯಾಗಿದೆ.
ಏಪ್ರಿಲ್ ತಿಂಗಳಿನಲ್ಲಿ ದಾಖಲೆ ಮಟ್ಟದಲ್ಲಿ ಹೆಚ್ಚಳ
ಇಂಧನದಿಂದ ತರಕಾರಿಗಳು ಮತ್ತು ಅಡುಗೆ ಎಣ್ಣೆಯವರೆಗಿನ ಎಲ್ಲಾ ವಸ್ತುಗಳ ಬೆಲೆಯ ಏರಿಕೆಯು ಸಗಟು ಬೆಲೆ ಹಣದುಬ್ಬರವನ್ನು ಏಪ್ರಿಲ್ನಲ್ಲಿ ದಾಖಲೆಯ ಗರಿಷ್ಠ ಶೇ.15.08ಕ್ಕೆ ಮತ್ತು ಚಿಲ್ಲರೆ ಹಣದುಬ್ಬರವು ಸುಮಾರು ಎಂಟು ವರ್ಷಗಳ ಗರಿಷ್ಠ ಮಟ್ಟ ಶೇ.7.79 ಶೇಕಡಾಕ್ಕೆ ಹೆಚ್ಚಿಸಿತ್ತು.
ರಿಸರ್ವ್ ಬ್ಯಾಂಕ್ ಬಡ್ಡಿದರ ಹೆಚ್ಚಿಸಲು ಪ್ರೇರಣೆ
ಅಧಿಕ ಹಣದುಬ್ಬರವು ಈ ತಿಂಗಳ ಆರಂಭದಲ್ಲಿ ಬೆಂಚ್ಮಾರ್ಕ್ ಬಡ್ಡಿದರವನ್ನು 40 ಬೇಸಿಸ್ ಪಾಯಿಂಟ್ಗಳಿಂದ ಶೇಕಡಾ 4.40 ಕ್ಕೆ ಹೆಚ್ಚಿಸಲು ಅನಿಯಂತ್ರಿತ ಸಭೆಯನ್ನು ನಡೆಸಲು ರಿಸರ್ವ್ ಬ್ಯಾಂಕ್ ಅನ್ನು ಪ್ರೇರೇಪಿಸಿತು.